ದಸರಾ ವೇಷ
Team Udayavani, Nov 2, 2018, 6:00 AM IST
ಮಂಗಳೂರಿನಲ್ಲಿ ದಸರಾ ಅಂತಂದ್ರೆ ಒಂಥರಾ ಸಂಭ್ರಮ.ವಿಶ್ವವಿಖ್ಯಾತ ಕುದ್ರೋಳಿ ದಸರಾ. ಅಲ್ಲಲ್ಲಿ ಆಚರಿಸಲ್ಪಡುವ ಶಾರದೋತ್ಸವಗಳು ಮತ್ತು ಮಕ್ಕಳಿಗೆ ಶಾಲೆಗೆ ರಜೆ.
ದಸರಾದ ಖುಷಿಗೆ ಬಹಳ ಮುಖ್ಯ ಕಾರಣ ವೇಷ. ಮೈಗೆಲ್ಲ ಹುಲಿಯಂತೆ ಬಣ್ಣ ಬಳಿದುಕೊಂಡು ತಾಸೆಯ ಪೆಟ್ಟಿಗೆ ಕುಣಿಯೋ ನಮ್ಮೂರ ಹುಲಿವೇಷದಿಂದ ಹಿಡಿದು ಅನಾರ್ಕಲಿ, ಯಕ್ಷಗಾನದ ರಕ್ಕಸರ ವೇಷದವರೆಗೆ ಅಲ್ಲಲ್ಲಿ ಒಂದೊಂದು ರೀತಿಯ ವೇಷಗಳು ಕಾಣಸಿಗುತ್ತವೆ. ಹೀಗೆ ಪದೇ ಪದೇ ಬರೋ ವೇಷಗಳಿಗೆ ಕೆಲವೊಮ್ಮೆ ಹಣ ಕೊಟ್ಟು ಕೊಟ್ಟು ಸುಸ್ತಾಗುತ್ತದೆ. ಇನ್ನು ರಸ್ತೆ ಬದಿ ಅಂಗಡಿಯವರ ಕಥೆಯಂತೂ ಕೇಳ್ಳೋದೇ ಬೇಡ. ದಿನಕ್ಕೆ ಕಮ್ಮಿ ಅಂದ್ರೂ ಮೂರ್ನಾಲ್ಕು ವೇಷಗಳು ಬಂದು ಹೋಗುತ್ತವೆ. ಆದರೆ, ಈ ವೇಷಗಳು ಸಂಸ್ಕೃತಿಯ ಒಂದು ಭಾಗವಾಗಿ ಬಿಟ್ಟಿವೆ. ಇವು ದಸರಾಕ್ಕೆ ಒಂದು ವಿಶೇಷ ಮೆರುಗು. ನಮ್ಮ ಬಾಲ್ಯದ ನೆನಪುಗಳಿಗೆ ಒಂದು ವಿಶೇಷ ಸೊಬಗನ್ನು ನೀಡಿದ ಈ ವೇಷಗಳು ವಿಶೇಷವಾಗಿ ದಸರಾ ಸಮಯದಲ್ಲಿ ನಮ್ಮ ಬದುಕಿನ ಅವಿಭಾಜ್ಯ ಅಂಗವೆಂದೇ ಹೇಳಬಹುದು. ನಾವು ಚಿಕ್ಕವರಾಗಿದ್ದಾಗ ಎಲ್ಲೋ ದೂರದಲ್ಲಿ ತಾಸೆಯ ಸದ್ದು ಕೇಳಿತು ಅಂತಂದ್ರೆ ನಮಗೆಲ್ಲ ಏನೋ ಒಂಥರಾ ಖುಷಿ. ಯಾವಾಗ ನಮ್ಮ ಮನೆಗೆ ವೇಷ ಬರುತ್ತೋ ಅಂತ ಕಾಯುತ್ತಿದ್ದೆವು. ಆದರೆ, ನಮ್ಮ ಮನೆಗೆ ವೇಷ ಬರುತ್ತಿದ್ದುದು ತುಂಬ ಕಡಿಮೆ. ಅಪ್ಪ-ಅಮ್ಮ ಕೆಲಸಕ್ಕೆ ಹೋಗ್ತಾ ಇದ್ದ ಕಾರಣ ಮನೆಯಲ್ಲಿ ಯಾರೂ ಇರ್ತಾ ಇರ್ಲಿಲ್ಲ. ಆದರೆ, ನಮ್ಮ ಗೆಳೆಯರ ಮನೆಗೆ ಬರುತ್ತಿದ್ದ ವೇಷಗಳನ್ನು ನೋಡ್ತಾ ಇದ್ದೆವು. ಅಷ್ಟೇ ಅಲ್ಲ , ಹುಲಿವೇಷ ಊರಿಗೆ ಬಂದ ಕ್ಷಣದಿಂದ ಊರು ಬಿಟ್ಟು ಹೋಗುವವರೆಗೆ ಅದರ ಹಿಂದೆಯೇ ಸುತ್ತುತ್ತ ಇದ್ದ ಮಕ್ಕಳ ಗುಂಪೂ ಇತ್ತು. ಹಸಿವು, ಸುಸ್ತು ಇವು ಯಾವುದೂ ಅರಿವಿಗೆ ಬರುತ್ತಿರಲಿಲ್ಲ. ಆಗ ನಮಗಿದ್ದ ವೇಷದ ಕ್ರೇಜ್ ಅಂಥದ್ದು. ಒಂದು ದಿನ ನಮ್ಮ ಮನೆಗೂ ಹುಲಿವೇಷ ಬಂದು ಅಪ್ಪ ಐವತ್ತರ ನೋಟೊಂದನ್ನು ಅವರಿಗೆ ನೀಡಿದಾಗ ನನಗಾಗಿದ್ದ ಹೆಮ್ಮೆ ಅಷ್ಟಿಷ್ಟಲ್ಲ.
ಆದರೆ, ಬೆಳೆಯುತ್ತ ಹೋದಂತೆ ಬದುಕು ಸಪ್ಪೆಯಾಗುತ್ತ ಹೋಗುತ್ತದೆ. ಚಿಕ್ಕ ಚಿಕ್ಕ ವಿಷಯಗಳಲ್ಲಿ ನಮಗಿರುತ್ತಿದ್ದ ತಲ್ಲೀನತೆ ನಮಗೆ ಸಿಗುತ್ತಿದ್ದ ಖುಷಿ ಕ್ರಮೇಣ ಮರೆಯಾಗುತ್ತ ಹೋಗುತ್ತದೆ. ಹಿಂದೆ ವೇಷ ಅಂದ್ರೆ ಮನದೊಳಗೇ ಕುಣಿದು ಕುಪ್ಪಳಿಸುತ್ತಿದ್ದ ನನಗೆ, ಈಗ ಅದನ್ನು ಕಂಡಾಗ ಏನೂ ಅನಿಸೋದಿಲ್ಲ. ಒಮ್ಮೊಮ್ಮೆ ಕಿರಿಕಿರಿ ಆಗೋದು ಕೂಡ ಉಂಟು. ಇಡೀ ದಿನ ಅನ್ನ-ನೀರು ಮರೆತು ವೇಷದ ಹಿಂದೆ ಸುತ್ತುತ್ತಿದ್ದ ನಾನು ಈಗ ಕಿರಿಕಿರಿ ಆಗೋವಷ್ಟು ಬೆಳೆದು ಬಿಟ್ಟಿದ್ದೇನೆ. ಅಂತಂದ್ರೆ ನಾನು ಮಗುವಾಗಿದ್ದರೇ ಚೆನ್ನಾಗಿತ್ತು ಅಂತ ಎಷ್ಟೋ ಸಲ ಅನ್ನಿಸಿದ್ದುಂಟು. ಕೆಲವೊಮ್ಮೆ ವಯಸ್ಸು ನಮ್ಮ ಚಿಕ್ಕ ಚಿಕ್ಕ ಖುಷಿಯನ್ನು ನಮ್ಮಿಂದ ಕಸಿದುಕೊಳ್ಳುತ್ತದೆ.
ಆವತ್ತು ಬಸ್ಸ್ಟ್ಯಾಂಡಿನಲ್ಲಿ ಮೊಬೈಲ್ ನೋಡುತ್ತ ಸುಮ್ಮನೆ ಕುಳಿತಿ¨ªೆ. ಏನೋ ಸ¨ªಾಗಿ ಅತ್ತ ನೋಡಿದ್ದೇ ಇಬ್ಬರು ಚಿಕ್ಕ ಹುಡುಗರು, ಒಬ್ಟಾಕೆ ಚಿಕ್ಕ ಹುಡುಗಿ. ಮುಖಕ್ಕೆ ವಿಚಿತ್ರವಾಗಿ ಬಣ್ಣ ಬಳಿದುಕೊಂಡಿದ್ದರು. ಚಿಕ್ಕವನ ಕೈಯಲ್ಲಿ ಮಕ್ಕಳು ಆಡುವ ಒಂದು ಪ್ಲಾಸ್ಟಿಕ್ ಗದೆ ಇತ್ತು. ಅದರೊಳಗೆ ಬಹುಶಃ ಕೆಲ ನಾಣ್ಯಗಳನ್ನ ಅದ್ಹೇಗೋ ಹಾಕಿದ್ದ.
ಅದನ್ನು ಅಲ್ಲಾಡಿಸಿದಾಗ ವಿಚಿತ್ರ ಸದ್ದು ಮಾಡುತ್ತಿತ್ತು. ಆ ಸದ್ದಿಗೆ ಇನ್ನೊಬ್ಬ ಅವನಿಗೆ ಗೊತ್ತಿದ್ದ ಮಟ್ಟಿಗೆ ಹೆಜ್ಜೆ ಹಾಕುತ್ತಿದ್ದ. ಕೊಡುವವರು ಚಿಲ್ಲರೆ ಹಣ ಕೊಡುತ್ತಿದ್ದರು. ಕೆಲವರು ಬೈದು ಕಳಿಸುತ್ತಿದ್ದರು. ಆ ಹುಡುಗರು ಅದರಿಂದೇನೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಮತ್ತೂಬ್ಬನತ್ತ ಸಾಗುತ್ತಿದ್ದರು. ಅವರಿಗಿದ್ದ ಆತ್ಮವಿಶ್ವಾಸ ಕಂಡು ಅಚ್ಚರಿಯಾಯಿತು.ಒಂದೊಳ್ಳೆ ಸೇಲ್ಸ್ಮನ್ ಆಗೋ ಎಲ್ಲ ಗುಣಗಳೂ ಆ ಹುಡುಗರಿಗಿದೆ ಅಂದುಕೊಂಡೆ.
ಆ ಹುಡುಗರು ನನ್ನತ್ತ ಬಂದರು. ಆ ಗದೆ ಹಿಡಿದಿದ್ದ ಹುಡುಗ ಗದೆ ಆಡಿಸುತ್ತ ವಿಚಿತ್ರ ಸದ್ದು ಮಾಡಲಾರಂಭಿಸಿದ. ಇನ್ನೊಬ್ಬ ವಿಚಿತ್ರವಾಗಿ ಕುಣಿಯಲಾರಂಭಿಸಿದ. ನಾನು ಪರ್ಸ್ ತೆಗೆದು ಹತ್ತರ ನೋಟು ಹೊರಗೆ ತೆಗೆದಿ¨ªೆ ಅಷ್ಟೇ. ಕೊಡುವ ಮೊದಲೇ ಕೈಯಿಂದ ಎಳೆದುಕೊಂಡು ಓಡಿದ್ದರು.
ತುಸು ಹೊತ್ತಿನ ನಂತರ ನಾನು ಕಾಯ್ತಾ ಇದ್ದವರೆಲ್ಲ ಅಲ್ಲಿಗೆ ಬಂದರು. ನಾವು ಹೋಗಬೇಕಿದ್ದ ಕಡೆ ಹೊರಡಲು ಅಣಿಯಾದೆವು.ಅಷ್ಟರಲ್ಲಿ ರಕ್ಕಸನ ವೇಷ ಹಾಕಿದ್ದ ಇನ್ನೊಬ್ಬ ಹುಡುಗ ಸಿಕ್ಕ. ಜೊತೆಗಿದ್ದ ಸಂಪತ್ ಅಣ್ಣ ಅವನ ಜೊತೆ ಮಾತಿಗಿಳಿದರು. ಅವರ ಸಂಭಾಷಣೆ ಈ ರೀತಿ ಇತ್ತು.
“”ಮನೆ ಎಲ್ಲಿ ನಿಂದು?”
“”ಉಡುಪಿ”
“”ಅಲ್ಲಿಂದ ಇಲ್ಲಿಗೆ ಬಂದ¨ದ್ದಾ”
“”ಹಾ”
“”ಶಾಲೆಗೆ ಹೋಗ್ತಿàಯಾ?”
“”ಹೌದು”
“”ಯಾವ ಶಾಲೆ?”
ಆ ಹುಡುಗ ಯಾವುದೋ ಸರಕಾರಿ ಶಾಲೆಯ ಹೆಸರು ಹೇಳಿದ್ದ.
“”ಶಾಲೆಗೆ ಹೋಗುದಾದ್ರೆ ವೇಷ ಹಾಕಿದ್ರೆ ಪರವಾಗಿಲ್ಲ ಬಿಡು” ಸಂಪತ್ ಅಣ್ಣ ನಗುನಗುತ್ತಾ ಅವನಿಗೊಂದು ಹತ್ತರ ನೋಟು ಕೊಟ್ಟರು.
ವೇಷ ಹಾಕಿದ್ದ ಆ ಆಂಧ್ರದ ಹುಡುಗಿಗೂ ಹತ್ತರ ನೋಟೊಂದನ್ನು ಕೊಟ್ಟು ಅವಳ ಫೋಟೋ ತೆಗೆದುಕೊಂಡರು.
ವೇಷ ಹಾಕಿ ತಮ್ಮ ಖರ್ಚಿಗೊಂದಿಷ್ಟು ಹಣ ಮಾಡಿಕೊಳ್ಳುವ ಆ ಮಕ್ಕಳನ್ನ ಕಂಡಾಗ ನನ್ನ ಬಾಲ್ಯದ ವೇಷಗಳ ನೆನಪು ಒತ್ತರಿಸಿ ಬಂತು.
ಅಥಿಕ್ ಕುಮಾರ್
ವಾಣಿಜ್ಯ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ