ಜೀವನದ ಉದ್ದೇಶ ಪರಸ್ಪರರ ಸಂತೋಷ
Team Udayavani, May 18, 2018, 6:00 AM IST
ಪ್ರೀತಿಸುವುದು ಸುಲಭದ ಕೆಲಸವಲ್ಲ, ಇದು ಪ್ರತಿಯೊಬ್ಬರಿಗೂ ಕರಗತವಾದ ಕಲೆಯೂ ಅಲ್ಲ. ಎಲ್ಲರಲ್ಲೂ ಪ್ರೀತಿ ಎನ್ನುವುದು ಮೂಡುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಏಕಾಂಗಿಯಾಗಿರುವಾಗ ಎಲ್ಲವೂ ಒಳ್ಳೆಯದು ಎಂದೆನಿಸುತ್ತದೆ. ಆದರೆ ಏಕಾಂಗಿಯಾಗಿರುವಾಗ ಯಾರಾದರೂ ಸಂಗಾತಿ ಬೇಕೆಂದು ಅನಿಸುವುದು ಉಂಟು. ಹೆಚ್ಚು ಸಮಯ ಏಕಾಂಗಿಯಾಗಿರುವುದು ತುಂಬಾ ಕಷ್ಟವೆನಿಸುತ್ತದೆ. ಒಂಟಿಯಾಗಿರುವುದು ನಮ್ಮ ಸಹನೆಯ ಪರೀಕ್ಷೆಯಾದರೆ, ಸಂಗಾತಿಯೊಂದಿಗೆ ಇರುವುದು ಕೂಡ ಒಂದು ರೀತಿಯಲ್ಲಿ ಜೀವನದ ಪಾಠವಾಗಿರುತ್ತದೆ. ಸಂಗಾತಿಯೊಂದಿಗೆ ಹೊಂದಿಕೊಳ್ಳುವುದು, ಪರಸ್ಪರ ಅರಿತುಕೊಂಡು ಸಾಗುವುದು ಮುಖ್ಯವಾಗುತ್ತದೆ.
ಇದು ಪ್ರತಿಯೊಬ್ಬರಿಗೂ ಸಾಧ್ಯವಾಗದೆ ಇರುವ ಕಾರಣದಿಂದ ಕೆಲವೊಂದು ಸಂಬಂಧಗಳಲ್ಲಿ ವೈಮನಸ್ಸು ಉಂಟಾಗಿ ಸಂಗಾತಿಗಳು ದೂರವಾಗುತ್ತಾರೆ. ಸುಖ ಸಂಸಾರಕ್ಕೆ ಸರಳ ಸೂತ್ರಗಳನ್ನು ಪಾಲಿಸಿದರೆ ಜೀವನ ಹಾಲುಜೇನಿನಂತೆ ಇರುತ್ತದೆ.
ಸಂಪೂರ್ಣವಾಗಿ ಒಬ್ಬರನ್ನೊಬ್ಬರು ಸ್ವೀಕರಿಸಬೇಕು. ಆಕೆ ಅಥವಾ ಅವನಲ್ಲಿ ತಪ್ಪುಗಳನ್ನು ಹುಡುಕಬೇಡಿ. ಅಭಿಪ್ರಾಯಗಳನ್ನು ಪರಸ್ಪರ ಹಂಚಿಕೊಳ್ಳಿ. ಆದರೆ ಒಬ್ಬರನ್ನೊಬ್ಬರು ಬದಲಾಯಿಸಲು ಪ್ರಯತ್ನಿಸಬೇಡಿ.
ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿಯ ಗುಣಗಳಿರುತ್ತವೆ. ಈ ಗುಣಗಳಿಂದಲೇ ಸಮಾಜವು ಜನರನ್ನು ಒಳ್ಳೆಯವರು-ಕೆಟ್ಟವರು ಎಂದು ಪರಿಗಣಿಸುತ್ತದೆ. ಆದರೆ ನೀವು ನಿಮ್ಮ ಸಂಗಾತಿಯ ಬಗ್ಗೆ ತೀರ್ಪು ನೀಡುವಂತಿಲ್ಲ. ಪರಸ್ಪರ ಪ್ರೀತಿಸಬೇಕಷ್ಟೆ.
ಜೀವನವೆಂದರೆ ಪರಸ್ಪರರನ್ನು ಸಂತೋಷವಾಗಿಡುವುದು. ಹೀಗಾಗಿ, ಇಬ್ಬರ ಇಷ್ಟಕಷ್ಟಗಳನ್ನು ಅರಿತುಕೊಂಡು ಆನಂದವಾಗಿಡುವ ಉದ್ದೇಶ ನಿಮ್ಮದಾಗಿರಬೇಕು. ತಮ್ಮ ತಮ್ಮ ಸಂಗಾತಿಯ ಮುಖದಲ್ಲಿ ನಗುವಿರುವಂತೆ ನೋಡಿಕೊಳ್ಳಿ.
ನಿಮ್ಮ ಗುಣ ಅಥವಾ ನಡತೆ ಬಗ್ಗೆ ಆಕೆಗೆ ಅಥವಾ ಅವನಿಗೆ ತೊಂದರೆ ಇದ್ದರೆ ಅದನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಿ. ತಪ್ಪು ಹುಡುಕಿ ಹೇಳುವ ತನಕ ಕಾಯಬೇಡಿ.
ಕೆಲವೊಮ್ಮೆ ಮೌನವಾಗಿರುವುದು ಲಾಭವನ್ನು ನೀಡುತ್ತದೆ. ಯಾವಾಗಲೂ ನಾನೇ ಸರಿ ಎಂಬ ಅಹಂಕಾರ ಬೇಡ. ನಿಮ್ಮ ಜೊತೆಗಾರನಿಗೂ ಅವಕಾಶ ನೀಡಿ. ವಾದವನ್ನು ಗೆಲ್ಲಲು ಪ್ರಯತ್ನಿಸಬೇಡಿ. ನಿಮ್ಮ ಸಂಗಾತಿಯಿಂದ ಯಾವುದೇ ರೀತಿಯ ನೆರವು ಬಂದಾಗ ಮನದಾಳದಿಂದ ಧನ್ಯವಾದಗಳನ್ನು ಅರ್ಪಿಸಿ. ಸಾಧ್ಯವಾಷ್ಟು ಒಬ್ಬರಿಗೊಬ್ಬರು ನೆರವಾಗಿ.
ಪ್ರತೀ ಮನುಷ್ಯರಲ್ಲಿಯೂ ಇರುವಂತೆ ನಿಮ್ಮ ಸಂಗಾತಿಯಲ್ಲಿಯೂ ಹಲವು ಉತ್ತಮ ಗುಣಗಳಿರುತ್ತದೆ. ಅವುಗಳನ್ನು ಪ್ರಸ್ತಾಪಿಸಿ ನಿಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿ.
ಒಂದು ವಿಷಯದ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯವೂ ಭಿನ್ನವಾಗಿರುತ್ತದೆ, ನಿಮ್ಮ ಸಂಗಾತಿಯ ಅಭಿಪ್ರಾಯವೂ ನಿಮ್ಮ ಅಭಿಪ್ರಾಯಕ್ಕೆ ಪೂರಕವಾಗಿರಬಹುದು. ವಿರುದ್ಧವೂ ಆಗಿರಬಹುದಯ. ಒಂದು ವೇಳೆ ವಿರುದ್ಧವಾಗಿದ್ದರೆ ತಕ್ಷಣ ಪ್ರತಿಕ್ರಯಿಸಬೇಡಿ. ಇಬ್ಬರ ಅಭಿಪ್ರಾಯನ್ನು ಪರಿಶೀಲಿಸಿ ಸಾಧಕ-ಬಾಧಕಗಳನ್ನು ಪರಾಮರ್ಶಿಸಿ ನಿರ್ಧಾರವನ್ನು ತೆಗದುಕೊಳ್ಳಿ.
ನೀವು ಸಂಪೂರ್ಣವಾಗಿ ಪರಿಪೂರ್ಣವಾಗಿರುವುದಿಲ್ಲ. ಹಾಗಾಗಿ ಇದರಿಂದ ಯಾವುದೇ ತಪ್ಪು ಮಾಡಿದರೆ ಅದನ್ನು ಅರ್ಥಮಾಡಿಕೊಂಡು ಕ್ಷಮೆ ಕೇಳಲು ಹಿಂಜರಿಯಬೇಡಿ.
ಸುಲಭಾ ಆರ್. ಭಟ್