ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ,ಸಿಸಿರ್ ಅಧಿಕಾರಿ ಭೇಟಿ.! ಬಿಜೆಪಿ ಸೇರ್ಪಡೆಗೆ ಸಿಸಿರ್ ಒಲವು.?
Team Udayavani, Mar 14, 2021, 1:03 PM IST
ನಂದಿಗ್ರಾಮ(ಪಶ್ಚಿಮ ಬಂಗಾಳ) : ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ, ತೃಣಮೂಲ ಕಾಂಗ್ರೆಸ್ ನ ಲೋಕ ಸಭಾ ಸದಸ್ಯ ಸಿಸಿರ್ ಅಧಿಕಾರಿ ಅವರನ್ನು ಭೇಟಿ ಮಾಡಿದ್ದಾರೆ.
ಸಿಸಿರ್ ಅಧಿಕಾರಿ, ಬಿಜೆಪಿಯ ಪ್ರಭಾವಿ ನಾಯಕ ಹಾಗೂ ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ತಂದೆ.
ಸಿಸಿರ್ ಅಧಿಕಾರಿ ಅವರ ಕಾಂಟೈ ನಿವಾಸದಲ್ಲಿ ಊಟ ಮಾಡಿದ ಚಟರ್ಜಿ, ಇದೊಂದು ಸೌಜನ್ಯದ ಭೇಟಿ ಎಂದು ಒತ್ತಿ ಹೇಳಿದ್ದಾರೆ. ಅಧಿಕಾರಿಯವರ ಮುಂದಿನ ರಾಜಕೀಯ ಬೆಳವಣಿಗೆಯ ಬಗ್ಗೆ ಮಾತುಕತರಯನ್ನು ನಡೆಸಿಲ್ಲ. ಆದಾಗ್ಯೂ, ರಾಜಕೀಯ ವಲಯದಲ್ಲಿ ಅಧಿಕಾರಿ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಮಾತುಗಳು ಹರಿದಾಡುತ್ತಿವೆ ಎಂದು ಹೇಳಿದ್ದಾರೆ.
ಓದಿ : ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗ್ಲಿ ಬಿಡಿ: ಸಿಡಿ ಪ್ರಕರಣದ ಬಗ್ಗೆ ಸಿದ್ದರಾಮಯ್ಯ
ಇದೊಂದು ಸೌಜನ್ಯದ ಭೇಟಿ. ಸಿಸಿರ್ ಅಧಿಕಾರಿ ಅವರು ಹಿರಿಯ ರಾಜಕೀಯ ನಾಯಕರು. ಅವರು ಒಮ್ಮೆ ನನ್ನ ಲೋಕ ಸಭಾ ಭಾಷಣವನ್ನು ಶ್ಲಾಘಿಸಿದ್ದರು. ನನ್ನನ್ನ ಮತ್ತೆ ಭೇಟಿ ಮಾಡುವಂತೆ ಅಧಿಕಾರಿ ವಿನಂತಿಸಿಕೊಂಡಿದ್ದಾರೆ ಎಂದು ಚಟರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇನ್ನು, ಒಂದು ವೇಳೆ ಅವರು(ಸಿಸಿರ್ ಅಧಿಕಾರಿ) ಬಿಜೆಪಿಗೆ ಸೇರ್ಪಡೆಗೊಳ್ಳಲು ಇಚ್ಛಿಸಿದರೇ, ಬಿಜೆಪಿ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳುತ್ತದೆ ಎಂದು ಕೂಡ ಚಟರ್ಜಿ ಹೇಳಿದ್ದಾರೆ.
ನನ್ನ ಇಬ್ಬರು ಪುತ್ರು ಬಿಜೆಪಿ ಸದಸ್ಯರು. ಚಟರ್ಜಿ ಭೇಟಿ ಯಾರಿಗೂ ಆಶ್ಚರ್ಯ ತರುವಂತಹ ವಿಷಯವಲ್ಲ. ಒಂದು ಸೌಜನ್ಯದ ಭೇಟಿಗೆ ಯಾಕಿಷ್ಟು ಆಶ್ಚರ್ಯ ಪಡಬೇಕು ಎಂದು ಸಿಸಿರ್ ಅಧಿಕಾರಿ ವರದಿಗಾರರನ್ನು ಪ್ರಶ್ನಿಸಿದ್ದಾರೆ.
ಹಿರಿಯ ಟಿ ಎಮ್ ಸಿ ನಾಯಕ ಸೌಗತಾ ರಾಯ್ ಅವರನ್ನು ಸಂಪರ್ಕಿಸಿದಾಗ, “ಸಿಸಿರ್ ಇತ್ತೀಚಿನ ದಿನಗಳಲ್ಲಿ ಚಟುವಟಿಕೆಯಿಂದಿಲ್ಲ … ಅವರ ವಯಸ್ಸು ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು “ದಲ್ ಬದಲ್ “(ಪಕ್ಷವನ್ನು ಬದಲಾಯಿಸುವ) ಆಟಕ್ಕೆ ಒಳಗಾಗಬಾರದೆಂದು ನಾವು ಅವರನ್ನು ಒತ್ತಾಯಿಸುತ್ತೇವೆ. ಎಂದಿದ್ದಾರೆ.
ಸಿಸಿರ್ ಬಿಜೆಪಿಗೆ ಸೇರಬೇಕೆಂದು ಪುರ್ಬಾ ಮೇದಿನಿಪುರದ ಎಲ್ಲರೂ ಬಯಸುತ್ತಾರೆ ಎಂದು ಬಿಜೆಪಿ ವಕ್ತಾರ ಶಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ. ವಿಶೇಷವೆಂದರೆ, ಬಿಜೆಪಿ ಸಂಸದೆ ಚಟರ್ಜಿ ತಮ್ಮ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿ ಮನೆಯಲ್ಲಿ ಇರಲಿಲ್ಲ. ಅವರ ಇನ್ನೊಬ್ಬ ಸಹೋದರ ದಿಬೈಂದು ಉಪಸ್ಥಿತರಿದ್ದರು.