ಕನ್ನಡ ಮಾಧ್ಯಮದಲ್ಲಿ ಇಂಗ್ಲಿಷ್ ಕಲಿಸಲಿ: ಡಾ| ಕೆ. ಚಿನ್ನಪ್ಪ ಗೌಡ
Team Udayavani, Jan 28, 2017, 1:59 AM IST
ಬೆಳ್ತಂಗಡಿ: ಪ್ರೌಢಶಿಕ್ಷಣದವರೆಗೆ ಕನ್ನಡ ಕಡ್ಡಾಯವಾಗಲಿ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷನ್ನು ಸಮರ್ಥವಾಗಿ ಕಲಿಸಬೇಕು. ಆಗ ಆಂಗ್ಲ ಮಾಧ್ಯಮದೆಡೆಗೆ ವ್ಯಾಮೋಹ ಕಡಿಮೆಯಾಗುತ್ತದೆ. ಬಡವರಿಗೊಂದು ಶಿಕ್ಷಣ ಉಳ್ಳವರಿಗೊಂದು ಶಿಕ್ಷಣ ಎಂಬ ಸ್ಥಿತಿ ಹೋಗಿ ಸರಕಾರಿ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಹೆಚ್ಚಿ ಗುಣಮಟ್ಟ ಕಾಯುವ ಕೆಲಸವಾಗಬೇಕು. ಆಗ ಕನ್ನಡಕ್ಕೆ ಶಕ್ತಿ ಬರುತ್ತದೆ ಎಂದು ಹಾವೇರಿ ಜನಪದ ವಿ.ವಿ. ಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಹೇಳಿದರು. ಅವರು ಶುಕ್ರವಾರ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆವರಣದಲ್ಲಿ ಆರಂಭಗೊಂಡ 21ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಹುತ್ವದ ಹರಿವು
ಕರಾವಳಿಗರ ಕನ್ನಡಾಭಿಮಾನ ಕನ್ನಡಪರ ಹೋರಾಟಗಳಲ್ಲಷ್ಟೇ ಬಿಂಬಿತವಾಗಿಲ್ಲ. ಸಂಸ್ಕೃತ ವಾಙ್ಮಯ, ತುಳು, ಕೊಂಕಣಿ, ಬ್ಯಾರಿ, ಹವ್ಯಕ, ಗೌಡ, ಮರಾಠಿ, ಮಲಯಾಳಿ ಮನೆ ಮಾತಿನವರು ತಮ್ಮ ಭಾಷಾ ಜ್ಞಾನ ಪರಂಪರೆಯನ್ನು ಶೈಕ್ಷಣಿಕ ವಲಯದೊಳಗೆ ಅಧಿಕೃತವಾಗಿ ತಂದು ನಿಲ್ಲಿಸಿ ಬಹುತ್ವದ ಹರಿವಿನ ಹಾದಿಯಲ್ಲಿ ಬಹುಕಾಲ ಉಳಿಯಬಲ್ಲ ಕೊಡುಗೆ ನೀಡಿದ್ದಾರೆ ಎಂದರು.
ನೇತ್ರಾವತಿ ರಾಜಕೀಯ ಲಾಭ
ನೇತ್ರಾವತಿ ತಿರುವು ಎತ್ತಿನಹೊಳೆಯಾಗಿ ಅನಂತರ ಕುಡಿಯುವ ನೀರಿನ ಯೋಜನೆಯಾಗಿ ಸ್ವರೂಪ ಬದಲಿಸಿಕೊಳ್ಳುತ್ತಿದೆ. ನೆಲ ಜಲ ಪರಿಸರ ಕುರಿತ ಹೋರಾಟಗಳು ರಾಜಕೀಯ ಪಕ್ಷಗಳ ಪ್ರತಿಷ್ಠೆಯಾಗುವ ಬದಲು ಜನರ ಹಿತ ಮುಖ್ಯ ವಾಗಬೇಕು ಎಂದರು.
ಶಿಕ್ಷಣ ನೀತಿ ಬೇಕು
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ| ಎನ್. ಸುಕುಮಾರ ಗೌಡ, ಸ್ವಚ್ಛ ಭಾಷೆಯ ಜತೆಗೆ ಸ್ವತ್ಛ ಮನಸುಗಳ ನಿರ್ಮಾಣವೂ ಆಗಬೇಕು. ಭಾಷೆಯನ್ನು ಸ್ವಚ್ಛವಾಗಿಸಿ ಊರ್ಜಿತದಲ್ಲಿ ಇರಿಸುವುದು ತರಗತಿ ಕೊಠಡಿಗಳೇ ವಿನಾ ಸಮ್ಮೇಳನಗಳಷ್ಟೇ ಅಲ್ಲ. ರಾಜ್ಯಕ್ಕೆ ಭಾಷಾ ನೀತಿ, ಶಿಕ್ಷಣ ನೀತಿ ಬೇಕು. ತಾಲೂಕಿಗೊಂದು ಮಾದರಿ ಶಾಲೆ ಬೇಕು ಎಂದರು.
ಮಕ್ಕಳನ್ನು ಓದುವ ಮನುಷ್ಯರಾಗಿಸಿ
ಸಮ್ಮೇಳನ ಉದ್ಘಾಟಿಸಿದ ಸಾಹಿತಿ ಕೆ.ಟಿ. ಗಟ್ಟಿ, ಕನ್ನಡ ಸಾಯಲಿಲ್ಲ. ಆದರೆ ಕನ್ನಡ ಓದುವ ಸಂಸ್ಕೃತಿ ಮರೆಯಾಗುತ್ತಿದೆ. ಮಕ್ಕಳನ್ನು ಓದುವ ಮನುಷ್ಯರಾಗಿ ರೂಪಿಸಿದರೆ ಉತ್ತಮ ಸಂಸ್ಕಾರವಂತ ಕನ್ನಡ ಉಳಿಸುವ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾವಿಸಿ, ಸ್ವಚ್ಛ ಭಾಷೆಯ ಮೂಲಕ ಸ್ವಸ್ಥ ಮನಸ್ಸುಗಳ ನಿರ್ಮಾಣ ನಡೆಯಲಿ ಎಂದರು. ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನಗೈದರು.ರಾಜ್ಯ ಅರಣ್ಯ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಶಾಸಕ, ರಾಜ್ಯ ಸಣ್ಣ ಕೈಗಾರಿಕಾ ನಿಗಮ ಅಧ್ಯಕ್ಷ ಕೆ. ವಸಂತ ಬಂಗೇರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಪುಸ್ತಕ ಮಾರಾಟ ಮಳಿಗೆಯನ್ನು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ತಾ.ಪಂ. ಸದಸ್ಯ ಶಶಿಧರ ಕಲ್ಮಂಜ ಮೆರವಣಿಗೆ ಉದ್ಘಾಟಿಸಿದರು. ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ವಿದ್ವತ್ ಸಮ್ಮಾನ, ಸಂಸ್ಥೆ, ಯೋಧ ಗೌರವಾರ್ಪಣೆ, ಸಮ್ಮಾನ ನೆರವೇರಿಸಿದರು. ಇದನ್ನು ಪ್ರೊ| ಎ. ಕೃಷ್ಣಪ್ಪ ಪೂಜಾರಿ, ಅಜಿತ್ ಕೊಕ್ರಾಡಿ ನಿರ್ವಹಿಸಿದರು.
ರಾಜ್ಯ ಗೇರು ನಿಗಮ ಅಧ್ಯಕ್ಷ ಬಿ.ಎಚ್. ಖಾದರ್, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಶ್ರೀಧರ ಜಿ. ಭಿಡೆ, ಧ್ವಜಾರೋಹಣ – ಉದ್ಘಾಟನೆ ನೆರವೇರಿಸಿದ ಅಬುಸುಫಿಯಾನ್ ಇಬ್ರಾಹಿಂ ಮದನಿ, ಫಾ| ಜೋಸೆಫ್ ಮಸ್ಕರೇನಸ್, ದೇವಿಪ್ರಸಾದ್, ಉಡುಪಿ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಪದಾಧಿಕಾರಿಗಳಾದ ಮೋಹನ್ ರಾವ್, ತಮ್ಮಯ್ಯ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ, ಸ್ವಾಗತ ಸಮಿತಿ ಅಧ್ಯಕ್ಷ ವಿಜಯರಾಘವ ಪಡ್ವೆಟ್ನಾಯ, ಕಾರ್ಯಾಧ್ಯಕ್ಷ ಪ್ರತಾಪಸಿಂಹ ನಾಯಕ್, ಡಾ| ಎಂ.ಎಂ. ದಯಾಕರ್ ಉಪಸ್ಥಿತರಿದ್ದರು. ಕಸಾಪ ತಾಲೂಕು ಅಧ್ಯಕ್ಷ ಡಾ| ಬಿ. ಯಶೋವರ್ಮ ಸ್ವಾಗತಿಸಿ, ಡಾ| ಬಿ.ಪಿ. ಸಂಪತ್ ಕುಮಾರ್, ಡಾ| ಬಿ.ಎ. ಕುಮಾರ ಹೆಗ್ಡೆ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road mishap ಕಾರುಗಳ ಢಿಕ್ಕಿ; ಹನ್ನೆರಡು ಮಂದಿಗೆ ಗಾಯ
Kadaba ಜಾಗಕ್ಕೆ ಅಕ್ರಮ ಪ್ರವೇಶ, ಜೀವ ಬೆದರಿಕೆ: ಐವರ ವಿರುದ್ಧ ಪ್ರಕರಣ ದಾಖಲು
ಕಲ್ಮಂಜ ಅಡಿಕೆ ವ್ಯಾಪಾರಿ ಮನೆ ದರೋಡೆ ಪ್ರಕರಣ; ಆರೋಪಿಗಳ ಸಹಿತ 8.42 ಲಕ್ಷ ರೂ. ಸೊತ್ತು ವಶ
Belthangady; ಮುಂದುವರೆದ ರೇವಣ್ಣ ಟೆಂಪಲ್ ರನ್: ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ
Ujire: ವಿದ್ಯಾರ್ಥಿಯ ಖಾತೆಯಿಂದ 3.14 ಲಕ್ಷ ರೂ. ನಗದು ಅಪಹರಣ