ಗುರು ಎಂಬ ನದಿ ಹರೀತಾ ಇರ್ಬೇಕು
Team Udayavani, Sep 5, 2017, 11:20 AM IST
ಗುರುವಾಗೋದು ಯಾವಾಗ? ಶಿಷ್ಯರನ್ನು ತಯಾರು ಮಾಡಿದಾಗ. ಗುರುವಾದವನಿಗೆ ಸಹನೆ ಇರಬೇಕು. ಕಲಿಸುತ್ತಿರಬೇಕು, ಸಹಾಯ ಮಾಡುತ್ತಲೇ ಇರಬೇಕು. ಗುರು ಒಂಥರಾ ನದಿಯಿದ್ದಂತೆ. ನದಿ ನೋಡಿ, ತನ್ನೊಳಗಿನ ನೀರನ್ನು ಕೊಡುತ್ತಲೇ ಇರುತ್ತದೆ. ಹಾಗೇನೇ ಗುರು ಕೂಡ.
ಶಿಷ್ಯರಿಗೆ ಕೊಡುತ್ತಿರಬೇಕು. ಶಿಷ್ಯರು ನಾವು ಹಾಕಿಕೊಟ್ಟ ಹಾದಿಯಲ್ಲಿ ನಡೆದು ಯಶಸ್ಸು ಗಳಿಸುವುದು ಗುರುಗಳಿಗೆ ಒಂಥರಾ ಮಧುರ ಅನುಭೂತಿ. ನನ್ನ ಶಿಷ್ಯರು ಇಂಥವರು, ಹೀಗೆ ಯಶಸ್ಸು ಗಳಿಸಿದಾಗ “ಗುರು ಆಗಿದ್ದಕ್ಕೂ ಸಾರ್ಥಕ ಆಯ್ತು’ ಅಂತ ಹೇಳ್ಳೋಕೆ ನನಗೆ ಆಗೋದೇ ಇಲ್ಲ.
ಗುರುವಿನದ್ದು ಒಂಥರಾ ಹುಲಿ ಕತೆ. ಹುಲಿ ಮಕ್ಕಳಿಗೆ ಹಾಲು ಕೊಡಲ್ಲ.
ಬೇಕಾದರೆ ಕುಡಿ ಅನ್ನುತ್ತೆ. ಊಟ ಕೊಡಲ್ಲ; ಬೇಕಾದರೆ ಕಿತ್ತುಕೋ ಅನ್ನುತ್ತೆ. ಬೇರೆ ಪ್ರಾಣಿ ಬಂದು ತೊಂದರೆ ಕೊಟ್ಟರೆ ಮೊದಲು ನೀನೇ ಹೋರಾಡು ಅನ್ನುತ್ತೆ, ತೀರಾ ಅಪಾಯ ಬಂದರೆ ಮಾತ್ರ ಬಾಯಲ್ಲಿ ಎತ್ಕೊಂಡು ಹೋಗಿ ಆ ಕಡೆ ಹಾಕುತ್ತೆ. ಹುಲಿ ಗ್ರೇಟೆಸ್ಟ್ ಟೀಚರ್. ಗುರು ಕೂಡಾ ಎಷ್ಟೋ
ಸಲ ಏನನ್ನೂ ಹೇಳದೆ, ಏನನ್ನೋ ಹೇಳಿ ಕೊಟ್ಟಿರುತ್ತಾನೆ. ಯಾರಿಗೇ ಆಗಲಿ, ಸಹಾಯ ಮಾಡದೇ ಇರೋನು ಗುರುವಲ್ಲ. ಗುರು ಸಹಾಯ ಮಾಡ್ತಲೇ ಇರಬೇಕು. ಕೊನೆಗೆ ಶಿಷ್ಯ ಏನೂ ಕೃತಜ್ಞತೆ ತೋರಿಸದೇ ಹೋಗುತ್ತಲೇ ಇರಬೇಕು. ಇದೊಂಥರಾ ಚೈನ್ಲಿಂಕ್ ಇದ್ದಂಗೆ. ಶಿಷ್ಯ ಎಲ್ಲೋ ಒಂದು ಕಡೆ ಬೆಳೀತಾ ಇರ್ತಾನೆ.
ಇವನೇ ನಮ್ಮ ಗುರು ಅಂತ ಪರದೆಯ ಹಿಂದೆ ಹೇಳುತ್ತಲೇ ಇರ್ತಾನೆ. ಹೀಗೆ ಹೇಳುತ್ತಲೇ ಗುರುವಿಗೆ ಕೊಟ್ಟ ನೋವನ್ನೂ ಮರೆತೇ ಬಿಟ್ಟಿರುತ್ತಾನೆ. ಕೊನೆಗೆ ಶಿಷ್ಯನ ಏಳಿಗೆಯಲ್ಲಿ ಗುರು ತನಗಾದ ನೋವನ್ನು ಮರೆತುಬಿಡುತ್ತಾನೆ. ಆಗಲೇ, ಸಾರ್ಥಕ ಕ್ಷಣ ಹುಟ್ಟೋದು.
ಹಂಸಲೇಖ, ಸಂಗೀತ ನಿರ್ದೇಶಕ