ಮಳೆ-ಬಿಸಿಲಿನಾಟಕ್ಕೆ ಉದುರುತ್ತಿದೆ ಎಳೆ ಅಡಿಕೆ
Team Udayavani, Apr 29, 2018, 6:30 AM IST
ಸುಳ್ಯ: ಕಳೆದ ಬೇಸಿಗೆಯಲ್ಲಿ ನೀರಿಲ್ಲದೆ ಹಲವರ ಅಡಿಕೆ ತೋಟಗಳು ಒಣಗಿ ಭಾರಿ ನಷ್ಟ ಕಂಡುಬಂದಿತ್ತು. ಈಗ ಹವಾಮಾನ ವೈಪರೀತ್ಯದಿಂದ ಅಡಿಕೆ ಬೆಳೆಗೆ ರೋಗ ತಗುಲಿದೆ. ಕೃಷಿಕರಲ್ಲಿ ಇದು ಭೀತಿ ಮೂಡಿಸಿದೆ, ಮಳೆ-ಬಿಸಿಲಿನಾಟಕ್ಕೆ ಅಡಿಕೆ ತೋಟಗಳಿಗೆ ರೋಗ ನುಸುಳಿ ಅಡಿಕೆ ಮಿಡಿ ಉದುರುತ್ತಿವೆ. ಹಿಂಗಾರಕ್ಕೂ ಹಾನಿಯುಂಟಾಗಿದೆ. ಇದು ಕೃಷಿ ಅವಲಂಬಿತ ಸುಳ್ಯ ತಾಲೂಕಿನ ಜನತೆ ಯನ್ನು ಆತಂಕಕ್ಕೆ ದೂಡಿದೆ.
ತಾಲೂಕಿನ ಕೆಲ ಗ್ರಾಮೀಣ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಆಗಿದ್ದರೆ ಮತ್ತೆ ಕೆಲವು ದಿನಗಳಲ್ಲಿ ಮಳೆ ಆಗದೆ ಬಿಸಿಲಿನ ವಾತಾ ವರಣವಿತ್ತು. ಸಂಜೆ ಹೊತ್ತಿಗೆ ವಿಪರೀತ ಮಳೆ, ಹಗಲಿನಲ್ಲಿ ಬಿಸಿಲ ತಾಪವಿತ್ತು. ಈ ರೀತಿ ಮಳೆ-ಬಿಸಿಲಿನ ಆಟಕ್ಕೆ ತೋಟಗಳಲ್ಲಿ ಅಡಿಕೆಗೆ ರೋಗ ತಗುಲಿದೆ. ಅಡಿಕೆ ಸಸಿಗಳು ಫಲ ಬಿಡಲು ಸಿದ್ಧವಾಗಿದ್ದವು. ಕೆಲವು ಕಡೆ ಹಿಂಗಾರ ಅರಳಿ ನಿಂತರೆ ಇನ್ನು ಕೆಲವು ಮಿಡಿ ಬಲಿತು ನಿಂತಿತ್ತು. ಹಿಂಗಾರ ಅರಳಿ ನಿಂತ ಹೊತ್ತಲ್ಲೇ ಮಳೆ ವ್ಯಾಪಕವಾಗಿ ಸುರಿದಿದ್ದರಿಂದ ಹಿಂಗಾರ ನಡುವೆ ನೀರು ನಿಂತು,ಹಗಲಲ್ಲಿ ಬಿಸಿಲಿನ ಧಗೆಗೆ ಹಿಂಗಾರ ಧರಾ ಶಾಹಿಯಾಗಿದೆ. ಜತೆಗೆ,ಮಿಡಿ ಅಡಿಕೆ ನಳ್ಳಿ ಬೀಳುತ್ತಿವೆ. ಈ ರೀತಿ ಎಳೆ ಅಡಿಕೆ ಉದುರುವುದು ಈಗಲೂ ನಿಂತಿಲ್ಲ. ಅರ ಣ್ಯದ ಅಂಚಿನ ಗ್ರಾಮಗಳಲ್ಲಿ ಸಂಜೆ ವೇಳೆಗೆ ಮೋಡ ಕವಿ ಯುತ್ತಿದೆ. ಆಗಾಗ ಹಗುರ ಮಳೆಯೂ ಬೀಳುತ್ತಿದೆ.
ಈ ಮಳೆ – ಬಿಸಿಲಿನ ಆಟ ಕೃಷಿಗೆ ಮಾರಕ ಎಂಬ ಅಳಲು ಕೃಷಿಕರದು. ಎರಡು ತಿಂಗಳಿಂದ ಅಡಿಕೆ ಉದುರುತ್ತಿದ್ದು, ಚಿಕ್ಕ ಗಿಡಗಳಲ್ಲಿ ಇದರ ಪ್ರಮಾಣ ಜಾಸ್ತಿ ಇದೆ. ತೋಟಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಎಳೆ ಅಡಿಕೆ ಉದುರಿವೆ, ಹಿಂಗಾರಗಳಿಗೂ ವ್ಯಾಪಕ ಹಾನಿಯಾಗಿದೆ. ಹೀಗಾಗಿ,ಮುಂದಿನ ಸಲ ಸಾಧಾ ರಣ ಫಸಲನ್ನೂ ನಿರೀಕ್ಷಿಸುವಂತಿಲ್ಲ ಎಂದು ಕೃಷಿಕರು ನೋವು ವ್ಯಕ್ತಪಡಿಸುತ್ತಿದ್ದಾರೆ.
ವ್ಯಾಪಕವಾಗಿ ಅಲ್ಲದಿದ್ದರೂ ಅಲ್ಲಲ್ಲಿ ಸುರಿಯುತ್ತಿದೆ.ಹವಾಮಾನ ವೈಪರೀತ್ಯ ಹೀಗೆಯೇ ಮುಂದುವರಿದರೆ ಇದು ಎಲ್ಲೆಡೆ ಪಸರಿಸಿ ಮತ್ತಷ್ಟು ನಷ್ಟ ಉಂಟು ಮಾಡುವ ಆತಂಕ ಕೃಷಿಕರನ್ನು ಕಾಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಕೊಳೆ ರೋಗ ಬಾಧಿಸಿ, ಭಾರಿ ಪ್ರಮಾಣದಲ್ಲಿ ಅಡಿಕೆ ಕೃಷಿ ನಾಶ ವಾ ಗಿತ್ತು. 2014-15ರ ಅವಧಿಯಲ್ಲಿ ಶೇ. 90ರಷ್ಟು ನಾಶವಾಗಿ ಸುಳ್ಯ ತಾಲೂಕಿನ ಬಹುತೇಕ ಅಡಿಕೆ ಕೃಷಿ ನಾಶಗೊಂಡಿತ್ತು. ಹೀಗಾಗಿ ಈ ಬಾರಿಯೂ ಕೃಷಿಕರಲ್ಲಿ ಭಯ ಮೂಡಿದೆ. ನಿರಾ ಶೆಯೂ ಆವರಿಸಿದೆ. ಕಾಡು ಪ್ರಾಣಿಗಳ ಉಪಟಳದಿಂದ ಮೊದಲೇ ಕಂಗೆ ಟ್ಟಿದ್ದ ಗ್ರಾಮೀಣ ಭಾಗದ ಕೃಷಿಕರಿಗೆ ಇದೀಗ ಅಡಕೆ ರೋಗ ಬರ ಸಿಡಿಲಿನಂತೆ ಎರಗಿದೆ. ಬದುಕು ದುಸ್ತ ರವಾಗಿದೆ.
ಬೆಳೆಹಾನಿಯಿಂದಾಗಿ ತೋಟಗಳ ನಿರ್ವಹಣೆ ಸಮಸ್ಯೆ ಎದುರಾ ಗಿದ್ದು,ಅಗಾಧ ಸಾಲದ ಹೊರೆಯೂ ಎಲ್ಲ ಕೃಷಿಕರನ್ನು ಕಾಡು ತ್ತಿದೆ.ಎಕರೆಗಟ್ಟಲೆ ಕೃಷಿ ಹೊಂದಿರುವವರು ಮಾತ್ರ ವಲ್ಲದೆ, ಅತ್ಯಲ್ಪ ಪ್ರಮಾಣದ ತೋಟ ಇದ್ದವರನ್ನೂ ಈ ಸಮಸ್ಯೆ ಬಿಡದೆ ಕಾಡುತ್ತಿದೆ.
ಡೆಂಗ್ಯೂ ಭೀತಿ!
ಒಂದು ಕಡೆ ಮಳೆ, ಇನ್ನೊಂದು ಕಡೆ ದಿನವಿಡೀ ಬಿಸಿಲು ಕಾಯುವ ವಾತಾವರಣ. ಈ ಹವಾಮಾನ ವೈಪ ರೀತ್ಯ ಮನುಷ್ಯರಿಗೂ ರೋಗಗಳನ್ನು ತರುತ್ತಿದೆ. ಹಠಾತ್ತನೆ ಮಳೆ ಬಂದರೆ ನೀರು ಸಂಗ್ರಹಗೊಂಡು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಮಳೆ ಹೋಗಿ ಬಿಸಿಲು ಬಿದ್ದೊಡನೆ ಸೊಳ್ಳೆ ಗಳು ಸಮೃದ್ಧವಾಗುತ್ತವೆ. ಈ ಮಳೆ – ಬಿಸಿಲಿನಾಟ ಜ್ವರ, ಡೆಂಗ್ಯೂ ಇತ್ಯಾದಿ ರೋಗ – ರುಜಿನಗಳಿಗೂ ಕಾರಣವಾಗಿ ಅಪಾಯ ತಂದೊಡ್ಡುವ ಭೀತಿ ಇದೆ.
ಅಡಿಕೆ ಬೀಳ್ತಿದೆ
ಆಡಿಕೆ ತೋಟಗಳಲ್ಲಿ ನಳ್ಳಿ ಬೀಳುತ್ತಿದೆ.ಮಿಡಿ ಅಡಿಕೆ ಉದುರುವುದರಿಂದ ನಷ್ಟ. ಇದು ವ್ಯಾಪಕವಾಗಿ ಹರಡಿಲ್ಲ. ಹವಾ ಮಾನ ವ್ಯತ್ಯಾಸ ಮುಂದುವರೆದಲ್ಲಿ ಇನ್ನೂ ಕಷ್ಟ. ಮೋಡ ಕೂಡ ಈಗಿನ ಸ್ಥಿತಿಯಲ್ಲಿ ಫಸಲಿಗೆ ಹಾನಿಕಾರಕ.
– ಚಂದ್ರಕಾಂತ ಮಾತಾವು
ಕೃಷಿಕ, ಬಳ್ಪ ಮಳೆ-ಬಿಸಿಲು
ಮಳೆ ಬಂದಿದ್ದು ಒಳ್ಳೆಯದು. ಮಿಡಿ ಕಟ್ಟುವ ಸಂದರ್ಭ ಮಳೆ ಬಂದು ಮತ್ತೆ ಬಿಸಿಲು ಬಂದರೆ ಒಳ್ಳೆಯದೆ. ಮಳೆ ಬಿಸಿಲಿನ ವಾತಾವರಣದಿಂದ ಸಣ್ಣ ಸಸಿಗಳ ಕಾಯಿಗಳಿಗೆ ಸಮಸ್ಯೆ.
– ಎಂ.ಡಿ. ವಿಜಯಕುಮಾರ
ಕೃಷಿಕ, ಮಡಪ್ಪಾಡಿ, ಸುಳ್ಯ.
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
C.T. Ravi; ಪರಿಶಿಷ್ಟರ ಹಣ ಲೂಟಿ ಹೊಡೆದು ಚುನಾವಣೆಗೆ ಬಳಸಿದ ಕಾಂಗ್ರೆಸ್
Kalaburagi: ಹಣ ಡಬಲ್ ಮಾಡಿ ಬಹುಕೋಟಿ ವಂಚನೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು
Jharkhand;ಒಳನುಸುಳುವಿಕೆಯಿಂದ ಬುಡಕಟ್ಟು ಜನಸಂಖ್ಯೆಯು ಕಡಿಮೆಯಾಗುತ್ತಿದೆ: ಮೋದಿ ಕಳವಳ
Bidar: ಅಕ್ರಮ ಆಸ್ತಿ: 4 ವರ್ಷ ಶಿಕ್ಷೆ, 25 ಲಕ್ಷ ದಂಡ
Election Campaign; ಜಾತಿ ರಾಜಕಾರಣದಿಂದ ನನಗೆ ಟಿಕೆಟ್ ಕೈ ತಪ್ಪಿತು: ರಘುಪತಿ ಭಟ್