ಡೆಡ್ ಬಾಡಿ ಇದ್ದ ವಾಹನ ಡ್ರಾಪ್ ಕೊಟ್ಟಿತು!
Team Udayavani, Jul 24, 2018, 6:00 AM IST
ಅಂದು ನನ್ನ ಅಪ್ಪನಿಗೆ ಹುಷಾರಿರಲಿಲ್ಲ. ಆ ಸುದ್ದಿ ನನಗೆ ಗೊತ್ತಾಗುವ ಹೊತ್ತಿಗೆ ಗಂಟೆ ರಾತ್ರಿ 12 ಗಂಟೆ ದಾಟಿತ್ತು. ಕೂಡಲೇ ರೂಮಿನಿಂದ ಹೊರಟು, ಪೀಣ್ಯದ ತುಮಕೂರು ರಸ್ತೆ ತಲುಪುವ ಹೊತ್ತಿಗೆ ರಾತ್ರಿ 1 ಆಗಿತ್ತು. ಆದರೆ, ಎಷ್ಟು ಹೊತ್ತು ಕಾದರೂ ಒಂದೂ ರೆಡ್ಬಸ್ ಬರಲಿಲ್ಲ. ಅವತ್ತು ಭಾನುವಾರವೂ ಆಗಿದ್ದರಿಂದ, ಬಸ್ಸುಗಳ ಸಂಖ್ಯೆ ಕಮ್ಮಿ ಅಂತ ಅಲ್ಲೇ ಯಾರೋ ಹೇಳಿದರು. ಈಗ ಹೇಗೆ ಊರು ತಲುಪೋದು ಅನ್ನೋದೇ ದೊಡ್ಡ ಚಿಂತೆಯಾಗಿತ್ತು. ಬೆಂಗಳೂರಿನಿಂದ ಬಹುದೂರ ಪ್ರಯಾಣ ಆಗಿದ್ದಿದ್ದರೆ, ಬೇರೆ ಖಾಸಗಿ ಬಸ್ಸುಗಳು ನನ್ನನ್ನು ಹತ್ತಿಸಿಕೊಳ್ಳುತ್ತಿದ್ದವೋ ಏನೋ! ಆದರೆ, ಸಮೀಪದ ಗುಬ್ಬಿ ಆಗಿದ್ದರಿಂದ ಒಂದೆರಡು ಬಸ್ಸುಗಳು ನನ್ನನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ್ದವು.
ಅಲ್ಲಾéವುದೋ ಬಸ್ಸು ಬಂದ್ದಾಗೆ ಆಯ್ತು ಅಂತಂದುಕೊಂಡು ಕೈ ಅಡ್ಡಹಾಕಿದೆ. ಆದರೆ, ಆ ಬಸ್ಸಿನ ಮುಂದಿದ್ದಿದ್ದು, ಆ್ಯಂಬುಲೆನ್ಸ್ ರೀತಿಯ ವ್ಯಾನ್. ಒಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೃದ್ಧನ ಪಾರ್ಥೀವ ಶರೀರ ಅದರಲ್ಲಿತ್ತು. ಆ ಶರೀರ, ಕಡೂರನ್ನು ತಲುಪಬೇಕಿತ್ತು. ಅದು ಅಂಬ್ಯುಬುಲೆನ್ಸ್ ಅನ್ನೋದಷ್ಟೇ ಗೊತ್ತಿದ್ದಿದ್ದ ನನಗೆ, ಡ್ರೈವರ್ ಗಾಡಿ ನಿಲ್ಲಿಸಿ, ನನ್ನನ್ನು ಮೇಲಕ್ಕೆ ಹತ್ತಿಸಿಕೊಂಡಾಗಲೇ, ನನಗೆ ಅದರೊಳಗೆ ಪಾರ್ಥಿವ ಶರೀರ ಇದ್ದ ವಿಚಾರ ಗೊತ್ತಾಗಿದ್ದು. ಡ್ರೈವರ್ನ ಪಕ್ಕದಲ್ಲಿ ಗಂಡನನ್ನು ಕಳೆದುಕೊಂಡ ಅಜ್ಜಿ ಕುಳಿತಿದ್ದಳು. ತುಂಬಾ ದುಃಖದಲ್ಲಿದ್ದರು. ಆ ಅಜ್ಜಿಗೆ ಒಂದಿಷ್ಟು ಸಮಾಧಾನ ಹೇಳಲು ಯಾರೂ ಇಲ್ಲವೆಂಬ ಕಾರಣಕ್ಕೆ, ತನ್ನನ್ನು ಹತ್ತಿಸಿಕೊಂಡೆ ಎಂದು ಡ್ರೈವರ್ ಪಿಸುಮಾತಿನಲ್ಲಿ ಹೇಳಿದ. ನಾನು ನನ್ನೂರು ಗುಬ್ಬಿ ಬರುವ ತನಕವೂ ಆ ಅಜ್ಜಿಯ ದುಃಖಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೆ. ಗುಬ್ಬಿ ಬಂದಾಗ, ನಾನು ಇಳಿದೆ. ಆದರೆ, ಇವತ್ತಿಗೂ ಆ ಡ್ರೈವರ್, ಆ ಅಜ್ಜಿ ನನಗೆ ಕಾಡುತ್ತಲೇ ಇದ್ದಾರೆ. ಕೆಲವೊಮ್ಮೆ ಯಾಕಾದರೂ, ಆ ವಾಹನವನ್ನು ಹತ್ತಿದೆನೋ ಅಂತಲೂ ಅನ್ನಿಸಿದೆ.
ಮಯೂರ್ ಗೌಡ, ಗುಬ್ಬಿ