ನಿನ್ನನ್ನು ನಾನು ಅಕ್ಕಿಕಾಳಿನಷ್ಟು ಪ್ರೀತಿಸುತ್ತೇನೆ!
Team Udayavani, Aug 28, 2018, 6:00 AM IST
ಪದೇ ಪದೆ ನಿನ್ನಲ್ಲಿ ಏಳುವ ಅನುಮಾನಗಳೇ ನನ್ನನ್ನು ಕ್ಷಣಕ್ಷಣಕ್ಕೂ ಚುಚ್ಚಿ ಚುಚ್ಚಿ ಕೊಲ್ಲುತ್ತಿವೆ. ನನ್ನನ್ನು ಹೀಗೆ ವಿಪರೀತ ಒತ್ತಡಕ್ಕೆ ಒಳಪಡಿಸಿ ಸಿಗುವುದಾದರೂ ಏನು? ನಾನು ಇನ್ನಷ್ಟು ದುಃಖಪಡುವುದು ನಿನಗಿಷ್ಟವೇ?
ಹೃದಯ ದೇಗುಲದೊಡತಿಯೇ,
ನಮ್ಮಿಬ್ಬರ ಪ್ರೀತಿಯ ದೋಣಿ ಯಾವಾಗ ದಡ ಸೇರುತ್ತೋ ಗೊತ್ತಿಲ್ಲ! ಕಾರಣ; ಆಗಾಗ ಏಳುವ ಸಂಶಯ, ಅನುಮಾನವೆಂಬ ಬಿರುಗಾಳಿ ದೋಣಿಯನ್ನು ಮುಳುಗಿಸಿ, ತೇಲಿಸಿ ಹೊಯ್ದಾಡಿಸುತ್ತಲೇ ಇದೆ. ನಮ್ಮ ಮಧ್ಯೆ ಎಷ್ಟೆಲ್ಲ ನಡೆದಿದ್ದರೂ, ನೀನು ನಿಜದ ಪ್ರೀತಿಯ ಕುರಿತು ಪುರಾವೆ ಕೇಳುವುದು ಹಾಸ್ಯಾಸ್ಪದವೆನಿಸುತ್ತದೆ. “ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀ?’ ಎಂದು ಕೇಳಿದರೆ ಏನು ಹೇಳಲಿ? ಅನಂತ ಸಾಗರದಷ್ಟು, ವಿಶಾಲ ಆಗಸದಷ್ಟು, ಸೂರ್ಯ-ಚಂದ್ರ ಇರುವವರೆಗೂ, ಅಸಂಖ್ಯ ತಾರೆಗಳು ಹೊಳಪು ನೀಡುವವರೆಗೆ.. ಎಂದೆಲ್ಲಾ ಆಗದ ಹೋಗದ ಸಂಗತಿಗಳಿಗೆ ನನ್ನ ಪ್ರೀತಿಯನ್ನು ಹೋಲಿಸಲಾರೆ. ಆದರೆ ಇಷ್ಟು ಮಾತ್ರ ಹೇಳಬಲ್ಲೆ; ನಾನು ನಿನ್ನನ್ನು ಅಕ್ಕಿಕಾಳಿನಷ್ಟು ಪ್ರೀತಿಸುತ್ತೇನೆ. ಅನ್ನವಿಲ್ಲದೇ ಬದುಕಿಲ್ಲ ಅಲ್ಲವೇ? ನನ್ನ ಎದೆಯಲ್ಲಿ ಎಳೆದೆಳೆದು ಹಿಂಡುವ ಹಿತವಾದ ನೋವಿನ ಮಿಡಿತ ನೀನಾಗಿರುವಾಗ ಬೇರೆ ಉಪಮೆ, ರೂಪಕ ಬೇಕಿಲ್ಲ ಎನಿಸುತ್ತೆ.
“ನಾನು ನಿನಗೆ ಏನಾಗಬೇಕು?’ ಎಂಬ ಪ್ರಶ್ನೆಯೇ ಬಾಲಿಶವೆನಿಸುತ್ತದೆ. ಹೌದು! ಒಪ್ಪಿಕೊಳ್ಳುವೆ. ಇಲ್ಲಿಯವರೆಗೂ ನಾನು ನಿನಗೆ ಪುಟ್ಟ ಉಡುಗೊರೆಯನ್ನೂ ಕೊಟ್ಟಿಲ್ಲ. ನೀನು ಕೇಳಿದ ದುಡ್ಡಿನ ವ್ಯವಸ್ಥೆಯನ್ನು ಮಾಡಲಾಗಲಿಲ್ಲ. ಖಂಡಿತ ಆ ಕೊರಗು ನನ್ನನ್ನು ಇಂದಿಗೂ ಕಾಡುತ್ತಿದೆ. ನನ್ನ ಅಸಹಾಯಕ ಪರಿಸ್ಥಿತಿ, ಹತಾಶ ಸ್ಥಿತಿಯ ಕುರಿತು ನನಗೆ ಖೇದವಿದೆ. ಹಾಗಂತ ಎಲ್ಲರೆದುರು ಕೈಯೊಡ್ಡುವ ಜಾಯಮಾನದವನಲ್ಲ ನಾನು. ಉಡುಗೊರೆಗಳೇ ಪ್ರೀತಿಯನ್ನು ಗಟ್ಟಿಗೊಳಿಸುತ್ತವೆ ಎನ್ನುವುದಾದರೆ ಅದಕ್ಕೆ ನನ್ನ ಸಮ್ಮತಿಯಿದೆ. ಖಂಡಿತ ಕೊಡಿಸುವೆ. ಎಷ್ಟೋ ವರ್ಷಗಳ ನಿರಂತರ ಪ್ರೀತಿ ನಮ್ಮದು. ನನಗಾಗಿ ನೀನು ಹಗಲಿರುಳು ಕಾದದ್ದಿದೆ. ಹಾಗೆಯೇ ನಿನ್ನ ಒಂದು ಕರೆಗೋಸ್ಕರ ನಾನು ಚಡಪಡಿಸಿ ಪರಿತಪಿಸಿದ್ದಿದೆ. ನಮ್ಮಿಬ್ಬರ ಪ್ರೀತಿ ಅದೆಷ್ಟೋ ಅಗ್ನಿಕುಂಡಗಳ ಪರೀಕ್ಷೆಯನ್ನೂ ದಾಟಿ ಬಂದಿರುವುದುಂಟು. ಹಾಗೆಂದ ಮೇಲೆ ನಾನು ನಿನಗೆ ಏನಾಗಬೇಕು, ನೀನು ನನಗೆ ಏನಾಗಬೇಕು ಎಂದು ಇಬ್ಬರಿಗೂ ಚೆನ್ನಾಗಿ ಗೊತ್ತಿರುವಂಥದ್ದೇ ಆಗಿದೆ.
ಪದೇ ಪದೆ ನಿನ್ನಲ್ಲಿ ಏಳುವ ಅನುಮಾನಗಳೇ ನನ್ನನ್ನು ಕ್ಷಣಕ್ಷಣಕ್ಕೂ ಚುಚ್ಚಿ ಚುಚ್ಚಿ ಕೊಲ್ಲುತ್ತಿವೆ. ನನ್ನನ್ನು ಹೀಗೆ ವಿಪರೀತ ಒತ್ತಡಕ್ಕೆ ಒಳಪಡಿಸಿ ಸಿಗುವುದಾದರೂ ಏನು? ನಾನು ಇನ್ನಷ್ಟು ದುಃಖಪಡುವುದು ನಿನಗಿಷ್ಟವೇ? ಒಂದು ಖುಷಿಯಾದರೂ ನನ್ನ ಜೊತೆಯಿದೆಯಲ್ಲ, ನನ್ನ ನೋವಿಗೆ ಸ್ಪಂದಿಸುತ್ತಿದೆಯಲ್ಲ ಎನ್ನುವ ಸಂತಸದಲ್ಲಿ ಬರವಣಿಗೆ, ಬದುಕನ್ನು ಇಷ್ಟಪಟ್ಟು ಅಪ್ಪಿಕೊಳ್ಳುತ್ತಿದ್ದೇನೆ. ಹೇಳು ಒಲವೇ… ನಾನು ಏನು ಮಾಡಲಿ?
ನಾಗೇಶ್ ಜೆ. ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ