8 ತಿಂಗಳ ಬಳಿಕ ಬೇಬಿ ಮನೆಗೆ ‘ಬೆಳಕು’
Team Udayavani, Nov 10, 2018, 11:15 AM IST
ಉಪ್ಪಿನಂಗಡಿ: ಕೇಂದ್ರ ಸರಕಾರದ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಮಂಜೂರಾದ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿ ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಪೇರಳಿಕೆ ನಿವಾಸಿ ಬೇಬಿ ಮಂಚ ಎಂಬವರ ಮನೆಗೆ ಎಂಟು ತಿಂಗಳ ಬಳಿಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ವೈರಿಂಗ್ ಕಾರ್ಯ ಮುಗಿಸಿದ್ದರೂ ಗುತ್ತಿಗೆದಾರರು ಮೆಸ್ಕಾಂಗೆ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ವಿಳಂಬವಾಗಿತ್ತು. ಈ ಕುರಿತು ಉದಯವಾಣಿ ಸುದಿನ ವಿಶೇಷ ವರದಿ ಪ್ರಕಟಿಸಿದ ಬೆನ್ನಲ್ಲೇ ಗುತ್ತಿಗೆದಾರರು ಹಾಗೂ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಲ್ಪಿಸಿ, ದೀಪಾವಳಿ ಸಂದರ್ಭದಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯ ಮನೆಯನ್ನು ಬೆಳಗಿಸಿದ್ದಾರೆ.
ಮಕ್ಕಳಿಲ್ಲದ ಬೇಬಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು, ಅವರಿಗೆ ಕೇಂದ್ರ ಸರಕಾರದ ದೀನದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ಮಂಜೂರಾಗಿತ್ತು. ಗುತ್ತಿಗೆದಾರರು ಎಂಟು ತಿಂಗಳ ಹಿಂದೆಯೇ ವೈರಿಂಗ್ ಪೂರ್ಣಗೊಳಿಸಿ, ಮೀಟರ್ ಕೂಡ ಅಳವಡಿಸಿದ್ದರು. ದಾಖಲೆಗಳನ್ನು ಮೆಸ್ಕಾಂ ಕಚೇರಿಗೆ ಸಲ್ಲಿಸದ ಕಾರಣ ವಿದ್ಯುತ್ ಸಂಪರ್ಕ ಕಲ್ಪಿಸುವುದು ವಿಳಂಬವಾಗಿತ್ತು.
ಫಲಾನುಭವಿ ವಿರುದ್ಧ ಗರಂ!
8 ತಿಂಗಳಿಂದ ವಿದ್ಯುತ್ ಸಂಪರ್ಕ ನೀಡದೆ ಸತಾಯಿಸುತ್ತಿರುವ ಪ್ರಕರಣವನ್ನು ಪತ್ರಿಕೆಗೆ ತಿಳಿಸಿದ್ದೇಕೆ? ಮಾಹಿತಿ ನೀಡಿದ್ದು ಯಾರು ಎಂದು ಗುತ್ತಿಗೆದಾರರು ಹಾಗೂ ಮೆಸ್ಕಾಂ ಸಿಬಂದಿ ಬೇಬಿ ಅವರನ್ನು ಪ್ರಶ್ನಿಸಿದ್ದಾರೆ. ನನಗೇನೂ ತಿಳಿಯದು ಎಂದು ಬೇಬಿ ಅವರು ಉತ್ತರಿಸಿದ ಬಳಿಕ ಗುರುವಾರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ನೆರವಾದ ಉದಯವಾಣಿಗೆ ಬೇಬಿ ಅವರ ಸಹೋದರ ಸುರೇಶ್ ಧನ್ಯವಾದ ತಿಳಿಸಿದ್ದಾರೆ.