“ಲೇಪಾಕ್ಷಿ” ಲೋಕ ಸಂಚಾರ
ಪ್ರತಿ ಕೆತ್ತನೆಯಲ್ಲೂ ಒಂದೊಂದು ಕತೆ
Team Udayavani, Jul 27, 2019, 5:00 AM IST
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು ಚಿಕ್ಕ ಗ್ರಾಮ, ಲೇಪಾಕ್ಷಿ. ವಿಜಯನಗರ ಅರಸರ ಕಾಲದಲ್ಲಿ ಕಟ್ಟಲಾದ, ವೀರಭದ್ರೇಶ್ವರ ದೇಗುಲವು ಶಿಲ್ಪ ಹಾಗೂ ಚಿತ್ರಕಲೆಗಳಿಂದಲೇ ಕಣ್ಮನ ಸೆಳೆಯುತ್ತದೆ. ದಕ್ಷಿಣ ಭಾರತದ ಎಲ್ಲೆಡೆಯಿಂದ ಭಕ್ತರು ಇಲ್ಲಿಗೆ ಆಗಮಿಸಿ, ವಾಸ್ತುಶಿಲ್ಪದ ವಿಸ್ಮಯಕ್ಕೆ ಸಾಕ್ಷಿ ಆಗುತ್ತಾರೆ.
ರಾವಣನು ಸೀತೆಯನ್ನು ಅಪಹರಿಸಿಕೊಂಡು ಈ ಪ್ರದೇಶದಲ್ಲಿ ಹೋಗುತ್ತಿರುವಾಗ ಬೆಟ್ಟದ ಮೇಲೆ ಜಟಾಯು ಪಕ್ಷಿಯು ಅಡ್ಡಿ ಮಾಡುತ್ತದೆ. ರಾವಣನು ಸಿಟ್ಟಿನಿಂದ ಪಕ್ಷಿಯ ರೆಕ್ಕೆಗಳನ್ನು ತುಂಡರಿಸಿ, ಮುಂದೆ ಹೋಗುತ್ತಾನೆ. ಶ್ರೀರಾಮನು ಸೀತಾನ್ವೇಷಣೆ ಮಾಡುತ್ತಾ ಈ ಸ್ಥಳಕ್ಕೆ ಬಂದಾಗ ಜಟಾಯು ಕೆಳಗೆ ಬಿದ್ದಿರುವುದನ್ನು ನೋಡುತ್ತಾನೆ. ನಂತರ ಪಕ್ಷಿಗೆ ಮೋಕ್ಷ ಕೊಟ್ಟು “ಲೇ-ಪಕ್ಷಿ’ ಎಂದು ಹೇಳುತ್ತಾನೆ. “ಲೇ-ಪಕ್ಷಿ’ ಎಂಬ ಪದವೇ ಕಾಲಕ್ರಮೇಣವಾಗಿ ಲೇಪಾಕ್ಷಿ ಆಗಿದೆ. ಲೇಪಾಕ್ಷಿ ಗ್ರಾಮವನ್ನು ಪ್ರವೇಶಿಸಿದ ಕೂಡಲೇ ಬೆಟ್ಟದಲ್ಲಿ, “ಜಟಾಯು ಪಕ್ಷಿ’ಯು ಸ್ವಾಗತಿಸುತ್ತದೆ. ಅಲ್ಲದೆ, ರಸ್ತೆಯ ಬಲಗಡೆಗೆ ಒಂದೇ ಬಂಡೆಯಲ್ಲಿ ಕೆತ್ತನೆ ಮಾಡಿದ ಸುಂದರವಾದ ನಂದಿ ವಿಗ್ರಹ ಸೆಳೆಯುತ್ತದೆ. 15 ಅಡಿಗಳ ಎತ್ತರ, 27 ಅಡಿ ಉದ್ದವಿರುವ ನಂದಿಯು ಎದ್ದು ಬರಲು ಸಜ್ಜಾಗಿರುವಂತೆ ತೋರುತ್ತದೆ. ನಂದಿಯ ಶರೀರ ಭಾಗದಲ್ಲಿ ಅಲಂಕರಿಸಿದ ಗೆಜ್ಜೆಗಳು, ಘಂಟೆಗಳ ಕೆತ್ತನೆಯ ಕುಸುರಿ ಚೆಂದವೋ ಚೆಂದ. ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹವಿದು.
ಬೃಹತ್ ಶಿಲೆಗಳಿಂದ ಕೂಡಿದ ವೀರಭದ್ರೇಶ್ವರ ದೇಗುಲದ ಹೆಬ್ಟಾಗಿಲೂ ಅಷ್ಟೇ ಅದ್ಭುತ. ಇದನ್ನು ಪ್ರವೇಶಿಸಿದಾಗ ಸಿಗುವ ನಾಟ್ಯಮಂಟಪವು 70 ಸ್ತಂಬಗಳಿಂದ ಕೂಡಿದೆ. ಮಂಟಪದ ನಡುವೆ ಮೇಲ್ಭಾಗದ 12 ಕಲ್ಲುಗಳಲ್ಲಿ ನೂರು ಪತ್ರದ ಕಮಲವನ್ನು ಕೆತ್ತಿದ್ದಾರೆ. ಅಲ್ಲದೆ, ಮಂಟಪದಲ್ಲಿನ 12 ಕಂಬಗಳಲ್ಲಿ ದತ್ತಾತ್ರೇಯ, ಶಿವ, ಪಾರ್ವತಿ, ಸೂರ್ಯ, ತುಂಬರ, ರಿಠೇಶ್ವರ, ನಂದಿಬ್ರಹ್ಮ, ನಟರಾಜ, ಚಂದ್ರ, ಸನಾತನಾದಿ ವಿದ್ವಾಂಸರು ವಿವಿಧ ಸಂಗೀತ, ವಾದ್ಯಗಳಿಂದ ನಿಂತಿರುವಂತೆ ಕೆತ್ತಿದ್ದಾರೆ. ಒಂದು ಕಂಬದಲ್ಲಿ ಭಿಕ್ಷಾಟನೆ ಮಾಡುವ ಶಿವನ ಶಿಲ್ಪವನ್ನು ಕಾಣಬಹುದು.
ವೀರಭದ್ರಸ್ವಾಮಿಯ ಗರ್ಭಗುಡಿ ಮೇಲ್ಭಾಗದ ಬೃಹತ್ ವರ್ಣಚಿತ್ರಗಳ ಅಂದ ಬಣ್ಣನೆಗೆ ನಿಲುಕದ್ದು. ವಿಷ್ಣುವಿನ ಆಲಯದ ಮೇಲ್ಭಾಗದಲ್ಲೂ ದಶಾವತಾರದ ವರ್ಣಚಿತ್ರಗಳನ್ನು ನೋಡಬಹುದು. ದೇವಸ್ಥಾನದ ಹಿಂದುಗಡೆ, ಒಂದು ದೊಡ್ಡ ಬಂಡೆಯ ಮೇಲೆ, ಏಳು ತಲೆಗಳ ನಾಗಲಿಂಗವು ಸರ್ಪದಿಂದ ಸುತ್ತುವರಿದು, ಮಧ್ಯಭಾಗದಲ್ಲಿ ಶಿವಲಿಂಗವು ಇರುವುದರಿಂದ ಯಾತ್ರಿಕರನ್ನು ಆಕರ್ಷಿಸುತ್ತದೆ.
ರೂಪ ಕೊಟ್ಟ ರೂಪಣ್ಣ
ಈ ಸುಂದರ ದೇಗುಲವನ್ನು ವಿಜಯನಗರದ ಅಚ್ಯುತರಾಯರ ಕಾಲದಲ್ಲಿ ಪೆನುಗೊಂಡ ಸಂಸ್ಥಾನದಲ್ಲಿ ಕೋಶಾಧಿಕಾರಿಯಾಗಿದ್ದ ರೂಪಣ್ಣನು ನಿರ್ಮಿಸಿದನೆಂದು ಪ್ರತೀತಿ. ಇಲ್ಲಿ ಶ್ರೀ ವೀರಭದ್ರನಿಗೆ ನಿತ್ಯ ಪೂಜೆಗಳು ನಡೆಯುತ್ತವೆ. ಶಿವರಾತ್ರಿ ಪೂಜೆಯಂತೂ ಬಹಳ ಪ್ರಸಿದ್ಧ.
ದರುಶನಕೆ ದಾರಿ…
ಬೆಂಗಳೂರಿನಿಂದ ಕೇವಲ 120 ಕಿ.ಮೀ. ದೂರದಲ್ಲಿದೆ. ಹಿಂದುಪುರ ರೈಲ್ವೆ ಸ್ಟೇಷನ್ನಿಂದ 10 ಕಿ.ಮೀ. ದೂರದಲ್ಲಿದೆ.
– ಸುರೇಶ ಗುದಗನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಹುಲಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಶಕ್ಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
Extortion: ಆನ್ಲೈನ್ ಗೇಮ್; ಬಾಲಕನ ಬೆದರಿಸಿ ಸುಲಿಗೆ
Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ
Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ