ಮಾನವತೆಯ ಮಹತ್ವ ಸಾರುವ ದೀವಳಿಗೆ..
Team Udayavani, Oct 25, 2019, 5:27 PM IST
ಮಾನವತೆಯ ಮಹತ್ವ ಸಾರುವ ದೀವಳಿಗೆ..
ಅಜ್ಞಾನದ ಕತ್ತಲೆ ಸರಿದು
ಸುಜ್ಞಾನದ ಬೆಳಕು ಹರಿದು
ಸ್ನೇಹ ಸಂಬಂಧದ ಸೇತುವೆ ಹುರಿಗೊಳುವ ಘಳಿಗೆಯಾಗಲೀ
ದೀವಳಿಗೆ..!
ಕಾಮ ಕ್ರೋಧದ ಕೊಳೆ ತೊಳೆದು
ನೀತಿ ನೇಮಗಳ ಬೆಳೆ ಬೆಳೆದು
ಶಾಂತಿ ನೆಮ್ಮದಿ ಫಸಲು ಕೊಯ್ಯುವ
ಘಳಿಗೆಯಾಗಲೀ ದೀವಳಿಗೆ..!
ಜಾತಿ ಮತಗಳ ಗೋಡೆ ಒಡೆದು
ಧರ್ಮಾಂಧತೆಯ ಪೀಡೆ ಸಿಗಿದು
ಭಾವೈಕ್ಯತೆಯ ಬತ್ತಿಯ ಹೊಸೆಯುವ
ಘಳಿಗೆಯಾಗಲೀ ದೀವಳಿಗೆ..!
ಎಡ ಬಲ ಪಂಥದ ಪರದೆ ಹರಿದು
ಸಮಬಲ ಚಿಂತನೆ ತೈಲ ಎರೆದು
ಮಾನವತೆಯ ಮಹತ್ವ ಸಾರುವ
ಘಳಿಗೆಯಾಗಲೀ ದೀವಳಿಗೆ..!
ನಾನು ನನ್ನದು ಸ್ವಾರ್ಥವ ಒಗೆದು
ಧ್ವೇಷಾಸೂಯೆ ಈರ್ಷೆ ತೊರೆದು
ಸರ್ವಜನಾಂಗದ ಶಾಂತಿಯ ಬಯಸುವ
ಘಳಿಗೆಯಾಗಲೀ ದೀವಳಿಗೆ..!
ದೇವರಾಜ್ ನಿಸರ್ಗತನಯ ,ಬಂಗಾರಪೇಟೆ