ರೈತರ ಬೆಳೆಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧ
Team Udayavani, May 4, 2020, 1:50 PM IST
ಮುಧೋಳ: ಹಾಪ್ಕಾಮ್ಸ್ ಮಳಿಗೆಗೆ ಡಿಸಿಎಂ ಚಾಲನೆ ನೀಡಿದರು
ಮುಧೋಳ: ಲಾಕ್ಡೌನ್ ಸಂದರ್ಭದಲ್ಲಿ ತಾಲೂಕಿನ ರೈತರ ಹಿತ ಕಾಯಲು ಸರ್ಕಾರದ ವತಿಯಿಂದ ರೈತರ ತೋಟಗಾರಿಕೆ ಬೆಳೆ ಖರೀದಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಹಾಪ್ಕಾಮ್ಸ್ ವತಿಯಿಂದ ರೈತರ ಬೆಳೆ ಖರೀದಿಸುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿದಂತಾಗುತ್ತದೆ. ಇದರಿಂದ ಲಾಕ್ಡೌನ್ ಅವಧಿಯಲ್ಲಿ ರೈತರಿಗೆ ಹೆಚ್ಚಿನ ನೆರವು ನೀಡಿದಂತಾಗುತ್ತದೆ ಎಂದರು.
ರಾಜ್ಯದ 22 ಜಿಲ್ಲೆಗಳಲ್ಲಿ ಒಟ್ಟು 458 ವ್ಯಾಪಾರ ಮಳಿಗೆಯನ್ನು ತೆರೆಯಲಾಗಿದೆ. ಈ ಮಳಿಗೆ ಮೂಲಕ ವ್ಯಾಪಾರಿಗಳು ಹಣ್ಣುಗಳನ್ನು ಖರೀದಿಸಿ ವಾರ್ಡ್ಗಳಲ್ಲಿ ತಳ್ಳುವ ಗಾಡಿಯ ಮೂಲಕ ಮಾರಾಟ ಮಾಡಬಹುದು ಎಂದರು. ಪೌರಾಯುಕ್ತ ಸುನೀಲ ಪಾಟೀಲ ಮಾತನಾಡಿ, ನಗರದ ಕಂಟೈನ್ಮೆಂಟ್ ಪ್ರದೇಶದಲ್ಲಿ ಪ್ರತಿದಿನ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ನಗರದ ಸ್ವತ್ಛತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಇದಕ್ಕೂ ಮುನ್ನ ನಗರದ ಎಪಿಎಂಸಿ ಬಳಿ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಯುನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಉದ್ಘಾಟಿಸಿದರು. ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷ ಹನಮಂತ ತುಳಸಿಗೇರಿ, ಕೆ.ಆರ್. ಮಾಚಪ್ಪನ್ನವರ, ಬಿಜೆಪಿ ಮುಖಂಡ ಅರುಣ ಕಾರಜೋಳ, ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ್ ಎಸ್.ಬಿ. ಬಾಡಗಿ, ಡಿವೈಎಸ್ಪಿ ಆರ್.ಕೆ. ಪಾಟೀಲ, ಸಿಪಿಐ ಎಚ್. ಆರ್. ಪಾಟೀಲ, ಪಿಎಸ್ಐ ಮಲ್ಲಿಕಾರ್ಜುನ ಬಿರಾದಾರ ಉಪಸ್ಥಿತರಿದ್ದರು.