ಬಹುಮುಖ್ಯ ನಿಯಮ
Team Udayavani, Jun 22, 2020, 4:56 AM IST
ಸುಧೀರ್ ಕೆಲಸಕ್ಕೆ ಸೇರಿ ಆರು ತಿಂಗಳ ಮೇಲಾಗಿತ್ತು. ಅವನಿನ್ನೂ ಕೆಲಸ ಸಿಕ್ಕ ಸಂತಸದಲ್ಲೇ ಇದ್ದ. ಕೆಲಸಕ್ಕೆ ಸೇರುವ ಮುಂಚೆಯೇ, ಸಂಬಳದ ಹಣದಲ್ಲಿ ಏನೆಲ್ಲಾ ಖರೀದಿಸಬೇಕು ಎನ್ನುವುದರ ಪಟ್ಟಿಯನ್ನು ತಯಾರಿಸಿಟ್ಟುಕೊಂಡಿದ್ದ. ಪ್ರತಿ ತಿಂಗಳು ಕೈಗೆ ಸಂಬಳ ಬರುವುದೇ ತಡ; ಅದನ್ನು ಬಿಂದಾಸ್ ಆಗಿ ಖರ್ಚು ಮಾಡತೊಡಗಿದ. ಇದು ಎಲ್ಲಿಗೆ ಮುಟ್ಟಿತು ಎಂದರೆ, ಸಂಬಳದ ಹಣ ಅವನ ಖರ್ಚಿಗೆ ಸಾಲದಾಯಿತು.
ಆಡಂಬರದ ಜೀವನಶೈಲಿಗೆ ಒಗ್ಗಿಹೋಗಿದ್ದ ಆತ, ಖರ್ಚು ಸರಿತೂಗಿಸಲು ಸಾಲ ಮಾಡತೊಡಗಿದ. ಇದ ರಿಂದ, ಸ್ನೇಹಿತರು ದೂರ ಉಳಿಯತೊಡಗಿ ದರು. ಅವನನ್ನು ನಂಬುವ ಜನ ಕಡಿಮೆಯಾದರು. ಈ ಸಮಯದಲ್ಲೇ ಲಾಕ್ಡೌನ್ ಬಂದು, ಸುಧೀರನನ್ನೂ ಒಳಗೊಂಡು ಹಲವರನ್ನು ಕೆಲಸದಿಂದ ತೆಗೆಯಲಾಯಿತು. ಇದ ರಿಂದ ಸುಧೀರನಿಗೆ ಆಕಾಶವೇ ತಲೆಮೇಲೆ ಬಿದ್ದಂತಾಯಿತು.
ಅವನ ಸಹೋದ್ಯೋಗಿಗಳು ಕೆಲಸ ಕಳೆದುಕೊಂಡರೂ, ಅವರ ಬಳಿ ಉಳಿತಾಯದ ಹಣವಿತ್ತು. ಹೀಗಾಗಿ, ಕೆಲಸವಿಲ್ಲದೆಯೂ ಸ್ವಲ್ಪ ಕಾಲ ನೆಮ್ಮದಿಯಾಗಿ ಜೀವನ ಸಾಗಿಸಬಲ್ಲ ಸಾಮರ್ಥ್ಯ ಅವರಿಗಿತ್ತು. ಆದರೆ ಸುಧೀರ ಉಳಿತಾಯ ಖಾತೆಯನ್ನೇ ಮಾಡಿಸಿರಲಿಲ್ಲ. ಅದರ ಮೇಲೆ ಸಾಲವನ್ನೂ ಉಳಿಸಿಕೊಂಡಿದ್ದ. ಅದಕ್ಕಿಂತ ಮುಖ್ಯವಾಗಿ, ಆದಾಯಕ್ಕಿಂತ ಹೆಚ್ಚು ಹಣವನ್ನು ಖರ್ಚು ಮಾಡಬಾರದು ಎಂಬ ಅತೀಮುಖ್ಯ ಸಂಗತಿಯನ್ನೇ ಮರೆತಿದ್ದ.