ಜನರ ಜತೆ ಮೋದಿ ಮಾತಾಡಿದ್ದು ಹೇಗೆ?

ಸಂವಹನ ಕಲೆ ಕರಗತ ಮಾಡಿಕೊಂಡಿರುವ ಜನಪ್ರಿಯ ಜನನಾಯಕ

Team Udayavani, May 28, 2019, 6:00 AM IST

Modi

ರಾಜಕೀಯ ಸಂವಹನ ತುಂಬ ಸಂಕೀರ್ಣವಾದದ್ದು. ಅದು ಕೇವಲ ಸ್ಮೈಲ್ ಅಥವಾ ವಿಧಾನದ ಮೇಲೆ ಅವಲಂಬಿಸಿರುವುದಿಲ್ಲ. ಇಲ್ಲಿ ಪ್ರಮುಖವಾದ ವಿಚಾರ ಏನೆಂದರೆ ನಾಯಕ ಎತ್ತಿಹಿಡಿಯುವ ತತ್ವಗಳು ಮತ್ತು ಐಡಿಯಾಗಳು. ಗಾಂಧಿಯವರ ಸತ್ಯಾಗ್ರಹ, ಉಪವಾಸ, ನೂಲುವಿಕೆ ಇತ್ಯಾದಿ ಕ್ರಿಯೆಗಳೆಲ್ಲವೂ ಸಂಕೇತಗಳಾಗಿ ರೂಪಕಗಳಾಗಿ ಹೋಗಿ ಮನೆ ಮನೆಗೂ ಗಾಂಧೀಜಿಯವರ ಕುರಿತಾಗಿ ಹೇಳಿದವು. ಈ ಮೂಲಕ ಅವರ ಚಳವಳಿ ಯಶಸ್ಸು ಪಡೆಯಿತು.

ವಿವಾದಾತೀತ ವಿಷಯವೆಂದರೆ ಬಿ.ಜೆ.ಪಿಯ ಹಾಗೂ ಎನ್‌.ಡಿ.ಎದ ಐತಿಹಾಸಿಕ ಗೆಲುವಿನ ಹಿಂದೆ ಇರುವ ದೊಡ್ಡ ಬಲ ಮೋದಿಯವರ ಸಂವಹನ ಶಕ್ತಿಯೇ! ಚುನಾವಣೆಗೆ ಸಂಬಂಧಿಸಿದ ಬೇರೆಲ್ಲ ಶಕ್ತಿಗಳಿಗೆ ಜೀವ ತುಂಬಿದ್ದು ಮೋದಿಯವರ ಮಾಂತ್ರಿಕ ಸಂವಹನ. ಇಲ್ಲಿ ತುಂಬ ಕುತೂಹಲದ, ಅಧ್ಯಯನದ ವಿಷಯಗಳಿವೆ. ಮೋದಿಯವರು ಇಷ್ಟೊಂದು ವೈವಿಧ್ಯತೆ ಇರುವ ದೇಶಕ್ಕೆ ಹೇಗೆ ಸಂವಹಿಸಿಕೊಂಡರು? ವೈವಿಧ್ಯಮಯ ಭಾಷೆಗಳ ಜನರೊಂದಿಗೂ ಹೇಗೆ ಮಾತನಾಡಿಕೊಂಡರು? ಯಾವ ಸಂಕೇತಗಳನ್ನು ಬಳಸಿದರು? ಯಾವ ರೀತಿ ಜನರ ಮನಸ್ಸನ್ನು ಗೆದ್ದರು? ಇತ್ಯಾದಿ. ಈ ಪ್ರಶ್ನೆಗಳಿಗೆ ಉತ್ತರಗಳು ರಾಜಕೀಯ ಇತಿಹಾಸದಲ್ಲಿ ದಾಖಲೆಯಾಗುವಂತಹ ವಿಷಯಗಳು.

ಮೊದಲೇ ಹೇಳಿಕೊಳ್ಳಬೇಕಾದ ವಿಷಯ: ಮೋದಿ ವೈಯಕ್ತಿಕವಾಗಿ ಓರ್ವ ಶ್ರೇಷ್ಠ ಓರೇಟರ್‌. ಪ್ರಚಂಡ ಮಾತುಗಾರ. ಸಿಸೆರೋ, ಚರ್ಚಿಲ್‌, ನೆಲ್ಸನ್‌ ಮಂಡೇಲಾ ಮತ್ತಿತರ ಜಾಗತಿಕ ಮಟ್ಟದ ಶ್ರೇಷ್ಠ ಮಾತುಗಾರರ ಸಾಲಿನಲ್ಲಿ ಸಲ್ಲುವವರು. ಸಂವಹನ ಕಲೆಯನ್ನು ಅರಿತವರು. ಒಂದು ಶ್ರೇಷ್ಟ ಸಂವಹಕ ಏನು ಗುಣಗಳನ್ನು ಹೊಂದಿರಬೇಕಾಗಿರುತ್ತದೆಯೋ ಅವೆಲ್ಲವನ್ನೂ ತುಂಬಿಕೊಂಡು ಸಿದ್ಧಿ ಪಡೆದವರು. ಒಬ್ಬ ನಾಯಕನಿಗಿರುವ ಶಕ್ತಿಯುತ, ವಿಕಿರಣ ಸೂಸುವ ರೀತಿಯ ಆಕರ್ಷಕ ವ್ಯಕ್ತಿತ್ವ ಮೋದಿಯವರಿಗಿದೆ. ಅವರ ವ್ಯಕ್ತಿತ್ವಕ್ಕೇ ಒಂದು ಸಂವಹನಶೀಲತೆ ಇದೆ. ಅವರು ಧರಿಸುವ ಬಟ್ಟೆಗಳು, ಅವರು ತಮ್ಮನ್ನು ಇಟ್ಟುಕೊಳ್ಳುವ ರೀತಿ ಈತ ನಾಯಕ ಎನ್ನುವುದನ್ನು ಹೇಳುತ್ತವೆ. ಜನ ಸಾಮಾನ್ಯನೊಬ್ಬ ಈತ ದೊಡ್ಡ ನಾಯಕ ಎಂದು ಸುಲಭವಾಗಿಯೇ ಗ್ರಹಿಸಬಲ್ಲ ಕಳೆ ಮೋದಿಯವರಿಗಿದೆ. ಇನ್ನೊಂದು ವಿಷಯ ಅವರ ಕಂಠ ಸ್ವರ. ಅದಕ್ಕೆ ಶಕ್ತಿ ಇದೆ. ಸಾವಿರಾರು ಜನರೊಂದಿಗೆ ಬಹುಶಃ ಮೈಕ್‌ ಇಲ್ಲದೆಯೂ ಮಾತನಾಡಬಲ್ಲ ಸಾಮರ್ಥ್ಯ ಅವರಿಗಿದೆ. ಇನ್ನೂ ಅವರ ವಾಗ್ಝರಿಯ ಕುರಿತಂತೂ ಹೇಳುವುದು ಬೇಡ. ಶಬ್ದಗಳು ಅವರಿಗೆ ಒದಗಿ ಚಿಮ್ಮಿ ಬರುತ್ತವೆ. ಮಾತುಗಳಲ್ಲಿ ಹಾಸ್ಯ, ವಿನೋದ, ವ್ಯಂಗ್ಯಗಳ ರಸ ಗಂಗೆ ಉಕ್ಕಿಹರಿಯುತ್ತದೆ. ಶಬ್ದಗಳು ಮೋದಿಯವರನ್ನು ಹುಡುಕಿಕೊಂಡು ಬರುತ್ತವೆ ಎಂದೇ ಅನಿಸುತ್ತದೆ. ರೈಮ್‌ಗಳೊಂದಿಗೆ ಆಟವಾಡಬಲ್ಲವರು ಅವರು. ಉದಾಹರಣೆಗೆ ಅವರ ಹೇಳಿಕೆ ಮಜಬೂತ್‌ ಸರ್ಕಾರ್‌/ ಮಜಬೂರ್‌ ಸರ್ಕಾರ್‌ ಇತ್ಯಾದಿ ಹೇಳಿಕೆಗಳು. ಇಂತಹ ಮಾತುಗಳ ಹೊಳೆಯೇ ಅವರ ಭಾಷಣಗಳಲ್ಲಿ ಹರಿದಿರುತ್ತದೆ. ಇನ್ನೊಂದು ವಿಷಯ ಅವರ ಬಾಡಿಲ್ಯಾಂಗ್‌ವೇಜ್‌: ಚಹರೆಗಳು, ಕಣ್ಣಿನ ಸಂಪರ್ಕ, ಕೈಗಳನ್ನು ಬಳಸುವ ರೀತಿ ಇನ್ನಿತರ ದೇಹ ಸಂವಹನ ಚಟುವಟಿಕೆಗಳಿಗೆ ಅಪಾರ ಶಕ್ತಿ ಇದೆ. ಹಾಗೆಯೇ ಅವರ ಮಾತುಗಳಿಗೆ ಬಲ ತುಂಬುವವುಗಳು ಅವರ ಪಾಸ್‌ಗಳು. ಮಾತಿನ ಓಘದ ನಡುವೆ ಎಲ್ಲಿ ನಿಂತು ನಿಂತು ಮಾತನಾಡಬೇಕೆನ್ನುವುದು ಮೋದಿಯವರಿಗೆ ಗೊತ್ತಿದೆ. ಉದಾಹರಣೆಗೆ, ಮೋದಿ ಮೋದಿ ಮೋದಿ ಮೋದಿ ಎಂದು ಜನ ಕೂಗುತ್ತಿದ್ದಾಗ ಎಷ್ಟು ಹೊತ್ತು ಭಾಷಣಕ್ಕೆ ನಿಲುವು ಕೊಡಬೇಕೆಂಬುದು ಅವರಿಗೆ ಗೊತ್ತಿದೆ. ಎಲ್ಲ ಚಪ್ಪಾಳೆ ಹೊಡೆದು ಒತ್ತಿ ಹೇಳಬೇಕೆನ್ನುವುದೂ ಅವರಿಗೆ ಗೊತ್ತಿದೆ. ಯಾವ ಮಾತನ್ನು ಒತ್ತಿ ಹೇಳಬೇಕು, ಯಾವ ಮಾತನ್ನು ತೇಲಿಸಿ ಹೇಳಬೇಕು ಎನ್ನುವ ಕಲೆಯಲ್ಲಿ ನಿಷ್ಣಾತರು ಮೋದಿ.

ಮೋದಿಯವರಿಗೆ ಸಿದ್ಧಿಸಿ ಹೋಗಿರುವ ಇನ್ನೊಂದು ಕಲೆ ಪ್ರೇಕ್ಷಕ ವರ್ಗವನ್ನು ತಮ್ಮ ಮಾತುಗಳೊಳಗೆ ಹೇಗೆ ಜೀವಂತವಾಗಿ, ಸಂಪೂರ್ಣವಾಗಿ ಸೆಳೆದುಕೊಳ್ಳಬೇಕು ಎನ್ನುವುದು. ಉದಾಹರಣೆಗೆ ಇರುವುದು ಅವರ ರೆಟರಿಕಲ್‌ ಪ್ರಶ್ನೆಗಳು: “”ಕರ್ನಾ ಹೈ? ನಹೀ ಕರ್ನಾ ಹೈ?” ಇತ್ಯಾದಿ ಪ್ರೇಕ್ಷಕರಿಗೆ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತ ಅವರನ್ನು ಮಾತಿನ ರೋಮಾಂಚನದಲ್ಲಿ ಸಿಲುಕಿಸುವ ಕಲೆ. ಹೀಗೆ ಪ್ರೇಕ್ಷಕರಿಗೆ ಎಲ್ಲ ಪ್ರಶ್ನೆ ಕೇಳಬೇಕು? ಅವರನ್ನು ಎಲ್ಲಿ ಕುಣಿಸಬೇಕು? ಎಲ್ಲಿ ಮಣಿಸಬೇಕು? ಹೇಗೆ ಮಣಿಸಬೇಕು? ಎನ್ನುವ ಚತುರ ಮಾತುಗಾರನೊಬ್ಬನ ಕೌಶಲಗಳು ಮೋದಿಯವರಿಗೆ ಸಿದ್ಧಿಸಿ ಹೋಗಿವೆ. ಹಾಗೆಯೇ ಮೋದಿ ಅವರಿಗೆ ತಿಳಿದಿರುವುದು ಭಾಷಣವನ್ನು ಶಕ್ತಿಯುತವಾಗಿ ಹೇಗೆ ಮುಗಿಸಬೇಕು ಎನ್ನುವುದು. ಅವರು ಮುಕ್ತಾಯದಲ್ಲಿ ಬಳಸುವ ಸ್ಲೋಗನ್‌ “”ವಂದೇ ಮಾತರಂ” ಕ್ರಮೇಣ ಮೋದಿಯವರ ಬಾಯಿಯಲ್ಲಿ ವೇಗ ಪಡೆದುಕೊಳ್ಳುತ್ತ ಹೋಗುತ್ತದೆ. ಹಾಗೆಯೇ ಜನರ ಬಾಯಿಯಲ್ಲಿ ಕೂಡ. ಯಾವ ವೇಗದ ಲಯದಲ್ಲಿ ಅವರ ಮಾತುಗಳು ಮುಕ್ತಾಯವಾಗುತ್ತವೆಂದರೆ ಸೇರಿರುವ ಜನರ ಮನಸ್ಸುಗಳು ಮತ್ತು ಬಂದು ತಿರುಗುತ್ತಲೇ ಹೋಗುತ್ತವೆ. ಹೀಗೆ ಮಾತಿನ ಪರಿಣಾಮವನ್ನು ಅದರ ತುರೀಯ ಸ್ಥಿತಿಗೆ ತೆಗೆದುಕೊಂಡು ಹೋಗಿ ನಿಲ್ಲಿಸುವವರು ಮೋದಿ. ಇಂತಹ ಮಾತಿನ ತಂತ್ರ ಜನರ ಮನಸ್ಸಿನ ಮೇಲೆ ಮಾತುಗಳ ಸಂಪೂರ್ಣ ಪರಿಣಾಮವನ್ನು ಬೀರಿಬಿಡುತ್ತದೆ. ಮೋದಿಯವರ ವಂದೇ ಮಾತರಂಗಳು ಲಕ್ಷಾಂತರ ಜನರಿಗೆ ಹುಚ್ಚು ಹಿಡಿಸುವುದನ್ನು ನೋಡಿಯೇ ಅನುಭವಿಸಬೇಕು. ಸಂಶಯವೇ ಇಲ್ಲ. ಮೋದಿ ಅವರು ಮಾತಿನ ಮಲ್ಲ. ಸಂವಹನ ತಜ್ಞರು. ಸಂವಹನದಲ್ಲಿ ಸಿದ್ಧ ಹಸ್ತರು ಮೋದಿ.

ನಾವು ಗಮನಿಸಿಕೊಳ್ಳಬೇಕು. ರಾಜಕೀಯ ಸಂವಹನವೆಂದರೆ ಕೇವಲ ಭಾಷಣ ಸ್ಪರ್ಧೆ ಇರುವುದಿಲ್ಲ. ಅಲ್ಲಿ ಕೇವಲ ಮಾತಿನ ಶ್ರೇಷ್ಟತೆ, ಓರೇಟರಿ ಅಥವಾ ಡೆಮಗಾಗಿ ಎಲ್ಲ ಕೆಲಸವನ್ನು ಮಾಡುವುದಿಲ್ಲ. ಅಲ್ಲಿ ಭಾಷಣವೇ ಎಲ್ಲವೂ ಅಲ್ಲ. ಉದಾಹರಣೆ ಗಾಂಧಿಗೂ ಮುನ್ನ ನಾಯಕರು ಶ್ರೇಷ್ಟ ಮಾತುಗಾರರೇ ಇದ್ದರೂ ಕೂಡ ಅವರ ಮಾತುಗಳು ಜನರ ಹೃದಯಗಳನ್ನು ತಲುಪುತ್ತಿರಲಿಲ್ಲ. ರಾಜಕೀಯ ಸಂವಹನ ಹೇಗಿರುತ್ತದೆಂದರೆ ಜನರ ಹೃದಯವನ್ನು ತಲುಪುವುದು ಮುಖ್ಯ. ಇಲ್ಲವಾದರೆ ಸಾಂಪ್ರದಾಯಿಕ ಭಾಷಣ ಕಲೆಯ ತಂತ್ರಗಳು ವಿಫ‌ಲವಾಗಿ ಹೋಗುತ್ತವೆ. ಹಲವು ಶ್ರೇಷ್ಟ ಮಾತುಗಾರರು ನಾಯಕರಾಗದಿರುವುದನ್ನು ಇಲ್ಲಿ ನಾವು ಗಮನಿಸಬೇಕು. ಏಕೆಂದರೆ ರಾಜಕೀಯ ಸಂವಹನ ಕೇವಲ ಸ್ಮೈಲ್ ಅಥವಾ ವಿಧಾನದ ಮೇಲೆ ಎಲ್ಲವೂ ಅವಲಂಬಿಸಿರುವುದಿಲ್ಲ.

ರಾಜಕೀಯ ಸಂವಹನ ತುಂಬ ಸಂಕೀರ್ಣವಾದುದು. ಸಂವಹನ ಅಲ್ಲಿ ನಾಯಕ ಮತ್ತು ಹಿಂಬಾಲಕನ ನಡುವೆ ಹಲವು ರೀತಿಯ ಸಂಕೇತಗಳ ಮೂಲಕ ನಡೆಯುತ್ತದೆ. ಅಲ್ಲದೆ ರಾಜಕೀಯ ಸಂವಹನದಲ್ಲಿ ಪ್ರಮುಖವಾದವು ನಾಯಕ ಎತ್ತಿ ಹಿಡಿಯುವ ಐಡಿಯಾಗಳು ಮತ್ತು ತತ್ವಗಳು. ತಮ್ಮ ಸಮಯವನ್ನು ಕಂಡುಕೊಂಡಿರುವ ಇಂತಹ ಐಡಿಯಾಗಳು ಮತ್ತು ತತ್ವಗಳು ರಾಮಾಯಣ ಅಥವಾ ಮಹಾಭಾರತದಲ್ಲಿ ಬರುವ ಶಸ್ತ್ರಗಳಂತೆ ತಮ್ಮ ಗುರಿಗಳನ್ನು ತಾವೇ ಕಂಡುಕೊಳ್ಳುತ್ತವೆ. ತತ್ವಗಳೇ ಮಲ್ಲಿಗೆ ಹೂಗಳಾಗಿ ಪರಿಮಳ ಬೀರುತ್ತವೆ. ಅಥವಾ ಖಡ್ಗಗಳಾಗಿ ತಮ್ಮ ಗುರಿಗಳನ್ನು ಕಂಡುಕೊಳ್ಳುತ್ತವೆ. ಅವು ಜನರನ್ನು ತಮ್ಮ ಪರವಾಗಿ ನಿಲ್ಲಲು ಓಲೈಸುತ್ತವೆ ಅಥವಾ ತಮ್ಮ ವಿರೋಧವಾಗಿ ನಿಲ್ಲದಂತೆ ಬೆದರಿಸುತ್ತವೆ. ಮಾತನಾಡುವುದು ತತ್ವಗಳು. ಗಾಂಧಿ ಚಳವಳಿಯನ್ನು ಗಮನಿಸಿಕೊಳ್ಳಬೇಕು. ಅಲ್ಲಿ ಗಾಂಧಿಯವರ ಸತ್ಯಾಗ್ರಹ, ಉಪವಾಸ, ನೂಲುವಿಕೆ ಇತ್ಯಾದಿ ಕ್ರಿಯೆಗಳೆಲ್ಲವೂ ಸಂಕೇತಗಳಾಗಿ, ರೂಪಕಗಳಾಗಿ ಹೋಗಿ ಮನೆ ಮನೆಗೂ ಗಾಂಧೀಜಿಯವರ ಕುರಿತಾಗಿ ಹೇಳಿದವು. ಗಾಂಧಿ ಚಳವಳಿಯನ್ನು ಯಶಸ್ಸುಗೊಳಿಸಿದ್ದು ಹೀಗೆ ಅವರು ಸೃಷ್ಟಿಸಿದ ಸಂವಹನ ಸಂಕೇತಗಳು. ಹಾಗೆಯೇ ಮೋದಿಯವರ ಪ್ರಚಂಡ ಸಂವಹನ ಯಶಸ್ವಿಗೂ ಕಾರಣವಾದದ್ದು ಅವರು ಎತ್ತಿ ಹಿಡಿದ ಮೌಲ್ಯಗಳು, ತತ್ವಗಳು. ಮೋದಿಯವರ ಸಂವಹನದ ಭಾರೀ ಯಶಸ್ಸಿನಲ್ಲಿ ನಿಜಕ್ಕೂ ಬಹಳ ದೊಡ್ಡ ಪಾತ್ರ ವಹಿಸಿದವು ಮೋದಿ ಎತ್ತಿ ಹಿಡಿದ ಮೌಲ್ಯಗಳು ಮತ್ತು ರಾಜಕೀಯ ತತ್ವಗಳು.

ಎಂತಹ ಮೌಲ್ಯಗಳು ಮತ್ತು ತತ್ವಗಳು? ಗಮನಿಸೋಣ. ಮೊದಲನೆಯ ಪೀಳಿಗೆಯ ಮತದಾರನಿಗೆ/ಳಿಗೆ ಸಂವಹಿಸಿದ್ದು ಮೋದಿಯವರ ವೈಯಕ್ತಿಕ ಗ್ಲಾಮರ್‌, ಸ್ಮಾರ್ಟ್‌ನೆಸ್‌ ಮತ್ತು ನೀಷ್‌ನೆಸ್‌ ಎಂದೇ ಭಾವನೆ. ಮುಖ್ಯವಾಗಿ ಯುವಜನತೆಯ ಹೃದಯ ಕಟ್ಟಿದ್ದು, ಮೀಟಿದ್ದು, ಮಿಡಿದಿದ್ದು ಮೋದಿ ಪ್ರಾಮಾಣಿಕ ಎನ್ನುವ ಭಾವನೆ ಭವ್ಯ ದೇಶದ ಕನಸು. ಆದರೆ ಇಡೀ ದೇಶದ ವೈವಿಧ್ಯಪೂರ್ಣ ಹಿನ್ನೆಲೆಗಳ, ಸಂಸ್ಕೃತಿಗಳ, ಭೂಭಾಗಗಳ ಜನತೆಯ ಹೃದಯಗಳ ಬಾಗಿಲನ್ನು ಮೋದಿ ತೆರೆದಿದ್ದು ಒಂದು ಬಲವಾದ ಮಾತಿನ ಮೂಲಕ. ಮೋದಿ ಮುಂದಿಟ್ಟ ಈ ಬಲಿಷ್ಟ ಭವ್ಯ ಭಾರತದ ಪರಿಕಲ್ಪನೆ ವಿವಿಧ ಅಂಶಗಳನ್ನು ಹೊಂದಿದೆ. ಒಂದನೆಯ ಅಂಶ ತನ್ನ ದೇಶದ ಸಂಸ್ಕೃತಿಯ, ಸನಾತನತೆಯ, ಧಾರ್ಮಿಕತೆಯ ಗರ್ವವನ್ನು ಮೋದಿ ಎತ್ತಿ ಹಿಡಿದ ರೀತಿ. ಮೋದಿ ವಿಜೃಂಭಿಸಿದ ಈ ಅಂಶ ದೇಶದಲ್ಲಿ ಒಂದು ಸಾಂಸ್ಕೃತಿಕ ಕ್ರಾಂತಿಯನ್ನು ಸೃಷ್ಟಿಸಿ, ಒಂದು ಏಕತೆಯ ಭಾವನೆಯನ್ನು ಸೃಷ್ಟಿಸಿದೆ. ಇಂತಹ ಭಾವನೆಯೇ ದೇಶದ ಲಕ್ಷಾಂತರ ಹಳ್ಳಿಗಳನ್ನು ಮತ್ತು ಸಾಮಾನ್ಯರ ಹೃದಯಗಳನ್ನು ತಟ್ಟಿದ್ದು. ಇದರಿಂದಾಗಿಯೇ ಮೋದಿ ಎಲ್ಲರ ಮತ ಪಡೆಯುವುದರಲ್ಲಿ ಭಾರಿ ಯಶಸ್ವಿಯಾಗಿದ್ದು.

ಕುತೂಹಲದ ವಿಷಯವೆಂದರೆ ಇಂತಹ ಒಂದು ರಾಷ್ಟ್ರೀಯ ಏಕತೆಯ ಪರಿಕಲ್ಪನೆಯನ್ನು ಮೋದಿ ಕೇವಲ ಹಿಂದುತ್ವವನ್ನಾಗಿ ಬಲವಾಗಿ ಸಮೀಕರಿಸಿದಂತಿಲ್ಲ. ಕೇಂದ್ರಪ್ರಜ್ಞೆಯಲ್ಲಿ ಹಿಂದುತ್ವವಿತ್ತೇನೋ ಸರಿ. ಪಕ್ಷದ ಪ್ರಚಾರದಲ್ಲಿ ಹಿಂದುತ್ವದ ಸಂಕೇತಗಳು ಬಲವಾಗಿದ್ದವೇನೋ ನಿಜ. ಮೋದಿ ಸ್ಪರ್ಧಿಸಿದ್ದು ವಾರಣಾಸಿಯಿಂದ. ಅಲ್ಲದೆ ಪಕ್ಷ ಹಾರ್ಡಲೈನ್‌ ಹಿಂದುತ್ವವಾದಿಗಳಿಗೆ ಟಿಕೆಟ್‌ ನೀಡಿದ್ದು ಹೌದು. ಆದರೂ ಕೂಡ ತಮ್ಮ ಬಹಿರಂಗ ಭಾಷಣಗಳಲ್ಲಿ ಮೋದಿ ತಮ್ಮ ಬಲವಾದ ಭಾರತ ಪರಿಕಲ್ಪನೆಯನ್ನು ತುಸು ಸೂಕ್ಷ್ಮವಾಗಿ ಹಿಂದುತ್ವಕ್ಕಿಂತಲೂ ಮುಂದೆ ಹೋಗಿ ಬಳಸಿಕೊಂಡರು ಎಂದೇ ಭಾವನೆ. ಬಲವಾದ ರಾಷ್ಟ್ರೀಯತೆಯ ಭಾವನೆಗೆ ಇನ್ನೂ ಎರಡು ಆಯಾಮಗಳಿವೆ. ಅವೆಂದರೆ ಆರ್ಥಿಕವಾಗಿ ಬಲಾಡ್ಯವಾದ ಭವ್ಯ ಭಾರತ. ಹಾಗೆಯೇ ಮಿಲಿಟರಿ ದೃಷ್ಟಿಯಿಂದ ಬಲಿಷ್ಟವಾದ ಭಾರತದ ಪರಿಕಲ್ಪನೆ. ಮೋದಿ ಇಡೀ ದೇಶದ ನರನರಗಳನ್ನು ಮುಟ್ಟಿದ್ದು ಇಲ್ಲಿ. ಗಮನಿಸಿಕೊಳ್ಳಬೇಕು, ಏನೆಂದರೆ ಪಾಕಿಸ್ತಾನದ ಆಟಗಳ ವಿರುದ್ಧ ದೇಶದ ಜನತೆ ರೋಸಿ ಹೋಗಿತ್ತು. ತನ್ನ ಸಹನೆ ಕಳೆದುಕೊಳ್ಳುವ ಸ್ಥಿತಿ ತಲುಪಿತ್ತು. ಇಂತಹ ಪಾಕಿಸ್ತಾನದ ವಿರುದ್ಧ ಕ್ರಮ ತೆಗೆದುಕೊಳ್ಳಲು ನಮಗೆ ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆ ಎಲ್ಲರ ಮನಸ್ಸನ್ನೂ ಕಾಡುತ್ತಿತ್ತು. ಸೇಡು ತೀರಿಸಿಕೊಳ್ಳಬೇಕು ಎಂದು ದೇಶ ಬಯಸುತ್ತಿತ್ತು. ಇಂತಹ ಪಾಕಿಸ್ತಾನವನ್ನು ನಾಚಿಗೆಗೇಡು ಮಾಡಿ ಬಂದಿದ್ದ ಮೋದಿ ಭವ್ಯ ಭಾರತದ ಶಕ್ತಿಯ ರೂಪಕವಾಗಿ ದೇಶದ ಜನರ ಮುಂದೆ ನಿಂತಿದ್ದು ಹೌದು.

ಮೋದಿಯವರ ಪ್ರಚಂಡ ಆಕರ್ಷಣೆಯ ಹಿಂದೆ ಇದ್ದಿದ್ದು, ಈ ಚುನಾವಣೆಯ ಪ್ರಮುಖ ರೂಪಕವಾಗಿ ಸಂವಹನಗೊಂಡಿದ್ದು ಶಕ್ತಿಯುತ ಭಾರತದ ಮೋದಿ ಕನಸು. ಜನರ ಮನಸ್ಸುಗಳೊಳಗಿದ್ದ ಇಂತಹ ಕನಸುಗಳನ್ನು ಸಾಕ್ಷಾತ್‌ಕರಿಸಿ ನಿಂತಿದ್ದ ಮೋದಿ ಹೀಗಾಗಿಯೇ ಒಂದು ಸೂಪರ್‌ ಮ್ಯಾನ್‌ ಆಗಿ ದೇಶದ ಜನತೆಗೆ ಕಂಡು ಬಂದರು. ಆರಾಧ್ಯ ದೈವವಾಗಿ ಹೋದರು. ಮೋದಿ ಜನರೊಡನೆ ಸಂವಹಿಸಿಕೊಂಡಿದ್ದು ಹೀಗೆ. ಈ ಐಡಿಯಾದ ಪ್ರತಿಮೆಯಾಗಿ. ಹೀಗೆ ಬಲವಾದ ರಾಷ್ಟ್ರೀಯತೆಯ ಪರಿಕಲ್ಪನೆಯ ಮೂಲಕ ಜನರ ಮನಸೆಳೆದ ಮೋದಿ ಒಂದು ಹೊಸ ರಾಜಕೀಯದ ರೂಪಕವಾಗಿ ಹೋಗಿದ್ದೇ ಅವರ ಸಂವಹನ ಯಶಸ್ಸಿಗೆ ಕಾರಣ.. ಮೋದಿ ಗೆದ್ದಿದ್ದು ಇಲ್ಲಿ.

– ಡಾ. ಆರ್‌.ಜಿ. ಹೆಗಡೆ

ಟಾಪ್ ನ್ಯೂಸ್

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.