40 ವರ್ಷಗಳ ಬಳಿಕ ಸಿದ್ಧವಾಯಿತು ಅಣೆಕಟ್ಟು ರಕ್ಷಣೆ ಮಸೂದೆ
Team Udayavani, Dec 6, 2021, 6:00 AM IST
ಅದು 1979 ಆ.11. ಗುಜರಾತ್ನ ಮೊರ್ಬಿ ಜಿಲ್ಲೆಯ ಮಚ್ಚು ನದಿಗೆ ಕಟ್ಟಲಾಗಿದ್ದ ಅಣೆಕಟ್ಟು ಒಡೆದು ಹೋದ ದಿನ. ದುರಂತದಲ್ಲಿ 25 ಸಾವಿರದಷ್ಟು ಮಂದಿ ಅಸುನೀಗಿದ್ದರು. ನಿರಂ ತರ ಮಳೆಯಿಂದ ಅಣೆಕಟ್ಟು ಒಡೆದು ಮೊರ್ಬಿ ಪಟ್ಟಣವನ್ನೇ ಮುಳುಗಿಸಿಬಿಟ್ಟಿತ್ತು. ಇದಾದ ಬಳಿಕ ಅಣೆಕಟ್ಟುಗಳ ಸುರಕ್ಷತೆ ಬಗ್ಗೆ ಏಕ ರೂಪದ ನಿಯಮಗಳು ಬೇಕು ಎಂಬ ಆಗ್ರಹ ಗಳು ಕೇಳಿಬಂದಿತ್ತು. 42 ವರ್ಷಗಳ ಬಳಿಕ ಈಗ ಅಣೆಕಟ್ಟು ಭದ್ರತಾ ಮಸೂದೆ 2021 ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿದೆ.
ಮಸೂದೆಯ ಪ್ರಮುಖ ಅಂಶಗಳು?
-ಅದರಲ್ಲಿ 2 ರಾಷ್ಟ್ರೀಯ ಮಂಡಳಿಗಳು ಇರಲಿವೆ. ಅಣೆಕಟ್ಟು ಭದ್ರತೆಗಾಗಿ ರಾಷ್ಟ್ರೀಯ ಸಮಿತಿ, ರಾಷ್ಟ್ರೀಯ ಅಣೆಕಟ್ಟು ಸುರಕ್ಷತ ಪ್ರಾಧಿಕಾರ. ಅವುಗಳ ಮೂಲಕ ಅಣೆಕಟ್ಟುಗಳ ಮೇಲೆ ಕಣ್ಗಾವಲು, ತಪಾಸಣೆ, ನಿರ್ವಹಣೆ, ಉಸ್ತುವಾರಿ ನಡೆಸಲಾಗುತ್ತದೆ.
-ರಾಜ್ಯಗಳ ವ್ಯಾಪ್ತಿಯಲ್ಲೂ ರಾಜ್ಯ ಅಣೆಕಟ್ಟು ಪ್ರಾಧಿಕಾರ, ರಾಜ್ಯ ಅಣೆಕಟ್ಟು ಸುರಕ್ಷತ ಪ್ರಾಧಿಕಾರ ಎಂಬ 2 ಸಂಸ್ಥೆಗಳನ್ನು ಸ್ಥಾಪಿಸಬೇಕು. ರಾಜ್ಯ ಮಟ್ಟದ ಅಣೆಕಟ್ಟುಗಳ ಉಸ್ತುವಾರಿ ಈ ಸಮಿತಿಗಳ ಮೇಲಿರುತ್ತದೆ.
ಎನ್ಸಿಡಿಎಸ್ನಲ್ಲಿ 10 ಸದಸ್ಯರು ಕೇಂದ್ರದ ಪರ, 7 ಮಂದಿ ರಾಜ್ಯಗಳ ಪರ ಇರಲಿದ್ದಾರೆ.
ಉದ್ದೇಶವೇನು?
-ಅಣೆಕಟ್ಟುಗಳ ನಿಯಮಿತ ಪರಿಶೀಲನೆ, ನಿರ್ವಹಣೆ, ಬಾಳಿಕೆ ಅವಧಿ ಮೀರಿ ಹೋದರೆ ಕೈಗೊಳ್ಳಬೇಕಾದ ಮಾರ್ಗೊಪಾಯ ಜಾರಿ.
ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್ನಲ್ಲಿ ಘಟನೆ
ಯಾವ ಅಣೆಕಟ್ಟುಗಳಿಗೆ ಅನ್ವಯ?
15 ಮೀಟರ್ಗಿಂತ ಎತ್ತರ ಇದ್ದರೆ
-ಅಣೆಕಟ್ಟಿನ ಮೇಲ್ಭಾಗದ ಉದ್ದ ಕನಿಷ್ಠ 500 ಮೀಟರ್, 10 ಮೀ.ನಿಂದ 15 ಮೀ. ಎತ್ತರ, ಕನಿಷ್ಠ 1 ಮಿಲಿಯ ಕ್ಯೂಬಿಕ್ ಮೀಟರ್ ನೀರು ಸಂಗ್ರಹ ಸಾಮರ್ಥ್ಯ ಇರುವ ಅಣೆಕಟ್ಟಿಗೆ.
ವಿರೋಧ ಏಕೆ?
– ಹಾಲಿ ಇರುವಂತೆಯೇ ಮಸೂದೆಗೆ ಅಂಗೀಕಾರ ದೊರೆತರೆ ನೀರಿನ ಮೇಲೆ ಸಂವಿಧಾನದತ್ತವಾಗಿ ಇರುವ ರಾಜ್ಯಗಳ ಅಧಿಕಾರಕ್ಕೆ ಧಕ್ಕೆಯಾಗುತ್ತದೆ ಎಂದು 2019ರಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಒಡಿಶಾ, ಪಶ್ಚಿಮ ಬಂಗಾಲ ಈ ಮಸೂದೆಯನ್ನು ವಿರೋಧಿಸಿದ್ದವು.
ಸಾಂವಿಧಾನಿಕವಾಗಿ ಹೇಗೆ?
-ರಾಜ್ಯಪಟ್ಟಿಯ ಎಂಟ್ರಿ 17ರ ಪ್ರಕಾರ ಜಲಸಂಪನ್ಮೂಲ, ನೀರು ಪೂರೈಕೆ, ಕಾಲುವೆ, ಒಡ್ಡು ನಿರ್ಮಿಸುವುದು, ಒಳಚರಂಡಿ, ನೀರಿನ ಸಂಗ್ರಹಗಳ ಬಗ್ಗೆ ನಿಯಮ ರೂಪಿಸಲು ರಾಜ್ಯಗಳಿಗೆ ಅಧಿಕಾರವಿದೆ.
-ನದಿ ಕಣಿವೆ ಪ್ರದೇಶಗಳು, ಅಂತಾ ರಾಜ್ಯಗಳಲ್ಲಿ ಹರಿಯುವ ನದಿಗಳಿಗೆ ಅನ್ವಯವಾಗುವಂತೆ ನಿಯಮ- ಕಾಯ್ದೆಗಳನ್ನು ರೂಪಿಸಲು ಕೇಂದ್ರಕ್ಕೆ ಅಧಿಕಾರ ಇದೆ.