National Tourism Day: ಸಂತಾನ ಪ್ರಾಪ್ತಿ ಮಾಡುವ ಕೋಟದ ಹಲವು ಮಕ್ಕಳ ತಾಯಿ ಅಮೃತೇಶ್ವರಿ
Team Udayavani, Jan 25, 2024, 11:19 AM IST
ಭಾರತ ಹಿಂದೂ ಪ್ರಧಾನ ದೇಶವಾಗಿದ್ರೂ ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್ ಸೇರಿದಂತೆ ಎಲ್ಲಾ ಧರ್ಮದ ಜನರಿಗೂ ಪ್ರಮುಖ ಸ್ಥಾನವಿದೆ. ಹಾಗೆಯೇ ಜನ ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಲು ದೇವಸ್ಥಾನಗಳಿಗೆ, ಗುರುದ್ವಾರಗಳಿಗೆ, ಚರ್ಚ್ ಗಳಿಗೆ, ಮಸೀದಿಗಳಿಗೆ ಹರಕೆಯನ್ನು ಹೇಳಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಿದಾಗ ಆ ಹರಕೆಯನ್ನು ತೀರಿಸುತ್ತಾರೆ. ಇಂತಹದಕ್ಕೆ ಒಂದು ಉದಾಹರಣೆ ಕೋಟದ ಹಲವು ಮಕ್ಕಳ ತಾಯಿ ಎಂದೇ ಪ್ರಸಿದ್ಧಿಯನ್ನು ಪಡೆದಿರುವ ಅಮೃತೇಶ್ವರಿ ದೇವಸ್ಥಾನ.
ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಕೋಟ ಶ್ರೀ ಅಮೃತೇಶ್ವರಿ ಅಮ್ಮ ಭಕ್ತರ ಇಷ್ಟಾರ್ಥಗಳ ಜೊತೆ ಕಷ್ಟಗಳನ್ನೂ ನಿವಾರಿಸುತ್ತಾಳೆ ಎಂಬ ನಂಬಿಕೆ ಜನರಲ್ಲಿದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಹಿಂದೂಗಳು ಮಾತ್ರ ಹರಕೆ ಹೊರುತ್ತಾರೆ. ಆದರೆ ಈ ದೇವಸ್ಥಾನಕ್ಕೆ ಮುಸ್ಲಿಂ ಸೇರಿದಂತೆ ಬೇರೆ ಧರ್ಮದ ಮಹಿಳೆಯರೂ ಬಂದು ಸಂತಾನ ಸಿದ್ಧಿಗಾಗಿ ಹರಕೆಯನ್ನು ಹೊತ್ತ ನಿದರ್ಶನಗಳೂ ಇವೆ. ಕೋಟದ ಈ ದೇವಸ್ಥಾನ ಧಾರ್ಮಿಕ ಸೌಹಾರ್ದತೆಯ ಉಳಿವಿಗೂ ಕಾರಣವಾಗಿದೆ.
ಕರ್ನಾಟಕದ ಉಡುಪಿ ಜಿಲ್ಲೆಯ ಕೋಟ ಎಂಬ ಗ್ರಾಮದಲ್ಲಿ ಅಮೃತೇಶ್ವರಿ ನೆಲೆಯಾಗಿದ್ದಾಳೆ. ಈ ಪುಣ್ಯ ಕ್ಷೇತ್ರ ಉಡುಪಿಯಿಂದ 26 ಕಿಲೋ ಮೀಟರ್ ದೂರದಲ್ಲಿದ್ದರೆ, ಕುಂದಾಪುರದಿಂದ 12 ಕಿಲೋಮೀಟರ್ ದೂರದಲ್ಲಿದೆ.
ಕೋಟ ಅಮೃತೇಶ್ವರಿ ಎಂದಾಕ್ಷಣ ಭಕ್ತರ ಮನಸಿನಲ್ಲಿ ಏನೋ ಒಂದು ರೀತಿಯ ಭಕ್ತಿ ಭಾವ ಮೂಡುತ್ತದೆ. ಅಂತಹ ಒಂದು ದಿವ್ಯ ಶಕ್ತಿ ಆ ತಾಯಿಗಿದೆ. ಕಲಿಯುಗದಲ್ಲೂ ಭಕ್ತರು ನೋಡಬಹುದಾದ ಪವಾಡಗಳನ್ನು ಆ ತಾಯಿ ನಡೆಸುತ್ತಿದ್ದಾಳೆ. ದೇವಾಲಯದ ಗರ್ಭಗುಡಿಯ ಹೊರಾಂಗಣದಲ್ಲಿ ಮೂರು ವರ್ಷಕೊಮ್ಮೆ ಒಂದೊಂದು ಲಿಂಗಗಳು ಉದ್ಭವಿಸುವುದು ಇಲ್ಲಿನ ವಿಶೇಷ.
ಅಷ್ಟೇ ಅಲ್ಲದೆ ಉದ್ಭವಿಸಿದ ಲಿಂಗಗಳು ದಿನಕಳೆದಂತೆ ದೊಡ್ಡದಾಗುತ್ತಾ ಹೋಗುತ್ತವೆ. ಈ ರೀತಿಯ ವಿಶೇಷತೆ ದೇಶದ ಇತರ ದೇವಾಲಯಗಳಲ್ಲಿ ಕಾಣಲಸಾಧ್ಯ. ಸಂತಾನ ಪ್ರಾಪ್ತಿಗಾಗಿ ಇತರೆ ದೇಶದಿಂದ ಭಕ್ತರು ಇಲ್ಲಿಗೆ ಬರುತ್ತಾರೆ. ಯಕ್ಷಗಾನ ಬಯಲಾಟ ಇಲ್ಲಿನ ವಿಶೇಷ ಸೇವೆ.
ಸಂತಾನ ಇಲ್ಲದ ಭಕ್ತರು ಇಲ್ಲಿ ಉದ್ಭವಿಸಿದ ಲಿಂಗಗಳಿಗೆ ಎಣ್ಣೆ ಹಚ್ಚಿ ಅದರ ಮೇಲೆ ಹುರುಳಿ ಕಾಳುಗಳನ್ನು ಇಟ್ಟು ಹಿಂಗಾರವನ್ನು ಹಿಡಿದು ಸಂಕಲ್ಪ ಮಾಡಿಕೊಂಡರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಪಂಚಾಮೃತಾಭಿಷೇಕ, ತುಲಾಭಾರ, ತೊಟ್ಟಿಲು ಸೇವೆ ಇತ್ಯಾದಿಗಳು ಪ್ರಮುಖ ಸೇವೆಗಳು.
ದೇವಸ್ಥಾನದ ಮುಂಭಾಗದಲ್ಲಿ ವರುಣ ತೀರ್ಥ ಎಂಬ ವಿಶಾಲ ಕೆರೆ ಇದೆ. ಈ ಕೆರೆಯ ನೀರನ್ನೇ ಅಮ್ಮನ ಅಭಿಷೇಕಕ್ಕೆ ನಿತ್ಯವೂ ಬಳಸಲಾಗುತ್ತದೆ. ಈ ದೇವಸ್ಥಾನದಲ್ಲಿ ಸೇವೆಯನ್ನು ಜೋಗಿ ಸಮುದಾಯದವರು ನಡೆಸಿಕೊಂಡು ಬರುತ್ತಿದ್ದಾರೆ. ಅಮೃತೇಶ್ವರಿ ದೇವಿಯು ಸುತ್ತಲ 14 ಗ್ರಾಮಗಳಿಗೂ ಗ್ರಾಮದೇವತೆ. ಈ ಎಲ್ಲಾ ಗ್ರಾಮದವರು ಮನೆಯಲ್ಲಿ ಜನಿಸಿದ ಮಗುವನ್ನು ಮೊದಲಾಗಿ ಹಲವು ಮಕ್ಕಳ ತಾಯಿಯಾದ ಅಮೃತೇಶ್ವರಿ ದೇವಸ್ಥಾನಕ್ಕೆ ಕರೆತಂದು ತದನಂತರ ಬೇರೆ ಪುಣ್ಯಕ್ಷೇತ್ರಗಳಿಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಅಲ್ಲದೆ ಮನೆಯಲ್ಲಿ ತೊಂದರೆ, ಮಕ್ಕಳ ವಿದ್ಯೆ, ಅರೋಗ್ಯ, ಅಭಿವೃದ್ಧಿಯ ಕುರಿತು ಯಾವುದೇ ತೊಂದರೆ ಇದ್ದರೂ ತಾಯಿಯ ಬಳಿ ಕೇಳಿಕೊಂಡರೆ ಪರಿಹರಿಸುತ್ತಾಳೆ.
ದೇವಾಲಯದ ಹೊರಾಂಗಣದಲ್ಲಿ ವೀರಭದ್ರ ಹಾಗೂ ನಾಗನ ಗುಡಿಯಿದೆ. ಒಳಾಂಗಣದಲ್ಲಿ ಪಂಜುರ್ಲಿ, ಬೊಬ್ಬರ್ಯ, ಚಿಕ್ಕು ಎಂಬ ತುಳುನಾಡಿನ ದೈವಗಳಿವೆ. ಈ ದೇವಾಲಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಒಂದು “ಪಾಸಿಟಿವ್ ವೈಬ್ ” ನಮ್ಮಲ್ಲಿ ಮೂಡುತ್ತದೆ. ಭಕ್ತಿಯಿಂದ ಏನೇ ಕೇಳಿಕೊಂಡರೂ ತಾಯಿ ದಯ ಪಾಲಿಸುತ್ತಾಳೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ದೇವಾಲಯದ ಪಕ್ಕದಲ್ಲೇ ಕೋಟ ಬೀಚ್ ಸಹ ಇದ್ದು, ಇದು ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
-ಲಾವಣ್ಯ. ಎಸ್
ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯ ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ