ರೈತರಿಗಾಗಿ ಪ್ರಾಯೋಗಿಕ ಮಾರುಕಟೆ ವವ್ಯವಸ್ಥೆ
ಮಾರಾಟಗಾರರೊಂದಿಗೆ ಸಂಪರ್ಕ ಕಲಿಸಲು ಸಿದ್ಧತೆ: ಜಿಲ್ಲಾಧಿಕಾರಿ ರವೀಂದ್ರ
Team Udayavani, Apr 18, 2020, 1:45 PM IST
ಸಾಂದರ್ಭಿಕ ಚಿತ್ರ
ದೇವನಹಳ್ಳಿ: ಲಾಕ್ಡೌನ್ನಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ಮಾರುಕಟ್ಟೆಯಿಲ್ಲದೆ ಸಂಕಷ್ಟದಲ್ಲಿದ್ದು, ವರ್ತಕರು ಹಾಗೂ ರೈತರ ನಡುವೆ ಸಂಪರ್ಕ ಕಲ್ಪಿಸಿ, ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇವನಹಳ್ಳಿ ಹಾಗೂ
ದೊಡ್ಡಬಳ್ಳಾಪುರ ತಾಲೂಕಿನ ರೈತರು ಬೆಳೆದಿರುವ ತರಕಾರಿ ಬೆಳೆಗಳನ್ನು ಹೋಬಳಿ ಮಟ್ಟದಲ್ಲಿ ಒಟ್ಟುಗೂಡಿಸಿ ವಾಹನಗಳಲ್ಲಿ ಬೆಂಗಳೂರಿನ
ಪದ್ಮನಾಭನಗರ ವಿಧಾನಸಭೆ ಕ್ಷೇತ್ರದ ಮೈದಾನಕ್ಕೆ ತರಕಾರಿ ಸರಬರಾಜು ಮಾಡಿದರೆ, ನೇರವಾಗಿ ವರ್ತಕರಿಗೆ ಮಾರಾಟ ಮಾಡಲು ಸೂಕ್ತ ಅವಕಾಶ
ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಈಗಾಗಲೇ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ತರಕಾರಿ ಮಾರಾಟ ಮಾಡುವ ರೈತರಿಗೆ ಸೂಕ್ತ ಭದ್ರತೆ ಹಾಗೂ ವ್ಯವಸ್ಥೆ ಕಲ್ಪಿಸುವ ಪ್ರಾಯೋಗಿಕ ಮಾರುಕಟ್ಟೆ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದು, ಅವರ ಆದೇಶದ ಮೇರೆಗೆ ಪ್ರಾಯೋಗಿಕ ಮಾರುಕಟ್ಟೆಯನ್ನು ರೈತರಿಗೆ
ಒದಗಿಸಲು ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಪ್ರಾಯೋಗಿಕವಾಗಿ ಬೆಂಗಳೂರು ನಗರದ ಪದ್ಮನಾಭನಗರ ವಿಧಾನಸಭೆ ವ್ಯಾಪ್ತಿಯಲ್ಲಿ ವೇದಿಕೆ ಕಲ್ಪಿಸಲಾಗುವುದು. ಈ ಪ್ರಯತ್ನದಲ್ಲಿ ಯಶಸ್ಸು ಕಂಡರೆ, ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳಿಗೂ ವಿಸ್ತರಿಸಲು ಸರ್ಕಾರಕ್ಕೆ ಸಲಹೆ ನೀಡಲಾಗುವುದು ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಜಿಪಂ ಸಿಇಒ ಎಂ.ಎನ್.ನಾಗರಾಜ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಸೇರಿದಂತೆ
ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತರು ಮುಖಂಡರು ಉಪಸ್ಥಿತರಿದ್ದರು.