ರೈತರಿಗೆ ಪ್ಯಾಕೇಜ್ ನಿರೀಕ್ಷೆ ಹುಸಿಯಾಗಿದೆ
Team Udayavani, Apr 18, 2020, 1:50 PM IST
ದೇವನಹಳ್ಳಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ರೈತರಿಗೆ ಪ್ಯಾಕೇಜ್ ಘೋಷಿಸಬಹುದು ಎಂದುಕೊಂಡಿದ್ದೆವು. ಆದರೆ ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.
ತಾಲೂಕಿನ ದ್ಯಾವರಹಳ್ಳಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ನೇತೃತ್ವದಲ್ಲಿ ಲಾಕ್ಡೌನ್ ಹಿನ್ನಲೆಯಲ್ಲಿ ಕಡು ಬಡವರಿಗೆ ಅಕ್ಕಿ ಮೂಟೆ ವಿತರಿಸಿ ಮಾತನಾಡಿದರು. ಸರ್ಕಾರದ ಹೇಳಿಕೆಗಳಿಗೂ, ಅಧಿಕಾರಿಗಳ ಪರಿಹಾರಾತ್ಮಕ ಆದೇಶಗಳಿಗೂ ತಾಳ, ಮೇಳವಿಲ್ಲ. ಸಚಿವರು ಬಹಳ ನಾಜೂಕಾಗಿ ಹೇಳಿಕೆ ನೀಡಿ,
ಸಮಸ್ಯೆ ಬಗೆ ಹರಿಯಿತೇನೋ ಎನ್ನುವಷ್ಟರ ಮಟ್ಟಿಗೆ ಮಾತನಾಡುತ್ತಾರೆ. ಇಲ್ಲಿಗೆ ಬಂದು ರೈತರು ಬೆಳೆದ ಬೆಳೆ ಪರಿಶೀಲಿಸಿದರೆ ಗೊತ್ತಾಗುತ್ತದೆ. ಕಾಂಗ್ರೆಸ್ ಮುಖಂಡ ಶಾಂತಕುಮಾರ್ ಬಡವರು ಹಸಿವಿಂದ ಇರಬಾರದು ಎಂದು ಅಕ್ಕಿ ಮೂಟೆ ನೀಡಿ, ನೆರವಾಗಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ಈಗಾಗಲೇ ಬಡವರಿಗೆ, ಕೂಲಿಕಾರ್ಮಿಕರಿಗೆ, ನಿರ್ಗತಿಕರಿಗೆ ಹಲವು ರೀತಿಯಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಅಕ್ಕಿ, ತರಕಾರಿ, ಊಟದ ವ್ಯವಸ್ಥೆ ಸೇರಿದಂತೆ ವಿವಿಧ ರೀತಿಯಲ್ಲಿ ಸಹಕಾರ ಮಾಡಲಾಗುತ್ತಿದೆ. ಗ್ರಾಮದ 110 ಕುಟುಂಬಗಳಿಗೆ
25 ಕೆ.ಜಿ. ಅಕ್ಕಿ ಮೂಟೆ ನೀಡಲಾಗುತ್ತಿದೆ. ಈ ಗ್ರಾಮದಲ್ಲಿ ಎಸ್.ಸಿ., ಎಸ್.ಟಿ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಎಂದರು. ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀ ನಾರಾಯಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರಸನ್ನ
ಕುಮಾರ್, ಉಪಾಧ್ಯಕ್ಷ ಎಸ್.ಜಿ.ಮಂಜುನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಆರ್.ನಾಗೇಶ್, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಮುಖಂಡ ವೆಂಕಟಪ್ಪ,
ಚಂದ್ರು ಇದ್ದರು.