ಭಾಷೆ, ಸಾಹಿತ್ಯ ಜಾಗೃತಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳು ಪೂರಕ
ಕಡಬ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾರಾಯಣ ಭಟ್; ಫೆ. 28, 29ರಂದು ಆಯೋಜನೆ
Team Udayavani, Feb 27, 2020, 5:31 AM IST
ಕಡಬ: ನೂತನ ಕಡಬ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ಫೆ. 28 ಮತ್ತು 29ರಂದು ರಾಮಕುಂಜದಲ್ಲಿ ನಡೆಯಲಿದ್ದು, ಸಮ್ಮೇಳನದ ಪೂರ್ವಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಸಾಹಿತಿ, ಅಂಕಣಕಾರ ಟಿ. ನಾರಾಯಣ ಭಟ್ ಅವರು ವಹಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ “ಉದಯವಾಣಿ’ ಸುದಿನ ಸಮ್ಮೇಳನಾಧ್ಯಕ್ಷರ ಜತೆ ನಡೆಸಿದ ಕಿರು ಸಂದರ್ಶನ ಇಲ್ಲಿದೆ.
ಸಾಹಿತ್ಯ ಕೃಷಿಗೆ ನಿಮಗೆ ಪ್ರೇರಣೆಯಾದ ಸಂಗತಿಗಳು ಯಾವುವು?
ಒಬ್ಬ ಶಿಕ್ಷಕ, ಅದರಲ್ಲಿಯೂ ಪ್ರಾಥಮಿಕ ಶಾಲಾ ಶಿಕ್ಷಕ ತನ್ನ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕಿದ್ದರೆ ಸಾಹಿತ್ಯ ಅಭಿರುಚಿ ಹಾಗೂ ಪುಸ್ತಕ ಪ್ರೀತಿ ಅಗತ್ಯವಾಗಿ ಬೇಕು. ಸಹಜವಾಗಿಯೇ ನಾನು ಸಾಹಿತ್ಯದತ್ತ ಆಕರ್ಷಿತನಾದೆ. ಹರಿಕೃಷ್ಣ ಪುನರೂರು, ಪ್ರದೀಪಕುಮಾರ್ ಕಲ್ಕೂರ, ಕೆ. ಅನಂತರಾಮ ರಾವ್ ಮುಂತಾದವರು ನನ್ನನ್ನು ಸಾಹಿತ್ಯ ಕ್ಷೇತ್ರದತ್ತ ಎಳೆದುತಂದರು. ಸಾಕಷ್ಟು ಮಹನೀಯರು ನನ್ನ ಸಾಹಿತ್ಯಾಸಕ್ತಿಗೆ ನೀರೆರೆದು ಪೋಷಿಸಿದರು.
ಯುವ ಪೀಳಿಗೆಯಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ ಎನ್ನುವ ಬಗ್ಗೆ ನಿಮ್ಮ ಅಭಿಪ್ರಾಯ?
ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಾಹಿತ್ಯದಲ್ಲಿ ಆಸಕ್ತಿ ಮೂಡಿಸುವಲ್ಲಿ ಶೈಕ್ಷಣಿಕ ವ್ಯವಸ್ಥೆ ಪೂರಕವಾಗಿಲ್ಲ. ಆದರೂ ಕೆಲವು ಸಾಹಿತ್ಯಾಸಕ್ತ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕುರಿತು ಆಸಕ್ತಿ ಹುಟ್ಟಿಸುತ್ತಿರುವುದು ಆಶಾದಾಯಕ ಸಂಗತಿಯಾಗಿದೆ. ಸಾಹಿತ್ಯ ಸಮ್ಮೇಳನಗಳು ಯುವ ಸಾಹಿತಿಗಳಿಗೆ ಪ್ರೇರಣೆ ನೀಡುತ್ತಿದೆ.
ಸಾಹಿತ್ಯ ಸಮ್ಮೇಳನಗಳಿಂದ ಕನ್ನಡ ಬೆಳವಣಿಗೆಗೆ ಕೊಡುಗೆ ಏನು?
ಕನ್ನಡ ಭಾಷಾ ಪ್ರೀತಿ, ಭಾಷೆಯ ಸತ್ವ, ಮಹತ್ವ, ಹಿರಿಮೆಗಳ ಕುರಿತು ಸಾಹಿತ್ಯ ಸಮ್ಮೇಳನಗಳು ಜಾಗೃತಿ ಮೂಡಿಸುತ್ತಿವೆ. ಅದರಿಂದಾಗಿ ಜನರಲ್ಲಿಯೂ ಭಾಷೆ ಹಾಗೂ ಸಾಹಿತ್ಯದ ಕುರಿತು ಸೆಳೆತ ಉಂಟಾಗುತ್ತದೆ. ಜಾತ್ರೆಗಳಿಂದ ಧಾರ್ಮಿಕ ನಂಬುಗೆಗಳು ಜಾಗೃತವಾಗುವಂತೆಯೇ ಸಾಹಿತ್ಯದ ಉತ್ಸವಗಳು ಪುಸ್ತಕ ಪ್ರೀತಿ ಹೆಚ್ಚಿಸುವಲ್ಲಿ ದೊಡ್ಡ ಕೊಡುಗೆ ನೀಡುತ್ತಿವೆ.
ಪರಭಾಷೆಗಳ ಪ್ರಭಾವದಿಂದ ನಲುಗುತ್ತಿರುವ ಕನ್ನಡವನ್ನು ರಕ್ಷಿಸುವ ಮಾರ್ಗೋಪಾಯಗಳೇನು?
ಕನ್ನಡವನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿ. ಕನ್ನಡವನ್ನು ಹೆಚ್ಚೆಚ್ಚು ಮಾತನಾಡುವುದು, ಕನ್ನಡ ಪುಸ್ತಕಗಳನ್ನು ಓದುವುದು ಮತ್ತು ದಿನನಿತ್ಯದ ಬಳಕೆಯಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯ ನೀಡುವುದರಿಂದ ಪರಭಾಷೆಗಳ ದಾಳಿಯಿಂದ ಕನ್ನಡವನ್ನು ರಕ್ಷಣೆ ಮಾಡಬಹುದು. ನಮ್ಮತನದ ಕುರಿತು ಕೀಳರಿಮೆ ಹೋದರೆ ಎಲ್ಲವೂ ಸರಿಯಾಗುತ್ತದೆ.
ಕನ್ನಡದ ಬೆಳವಣಿಗೆಯಲ್ಲಿ ಸಾಹಿತಿಗಳ ಜವಾಬ್ದಾರಿಗಳೇನು?
ಸಾಹಿತಿಗಳು ಅಹಂಭಾವ ತೋರದೆ ಜನರನ್ನು ಸುಲಭವಾಗಿ ತಲುಪುವ ಸರಳ ಭಾಷೆಯ ಸಾಹಿತ್ಯವನ್ನು ರಚಿಸಬೇಕು. ಜನರಿಗೆ ಅರ್ಥವಾಗದ ಸಾಹಿತ್ಯ ರಚಿಸಿ ಅದೇ ತಮ್ಮ ಪಾಂಡಿತ್ಯ ಎನ್ನುವ ಭಾವನೆಯಿಂದ ಸಾಹಿತಿಗಳು ಹೊರಬರಬೇಕು. ಸರಳ ಭಾಷೆಯಲ್ಲಿ ನಾನು ರಚಿಸಿದ ಅನೇಕ ಕೃತಿಗಳು ರಾಜ್ಯಾದ್ಯಂತ ಮಾರಾಟವಾಗಿ ಜನಸಾಮಾನ್ಯರಿಂದ ಮೆಚ್ಚುಗೆ ಗಳಿಸಿರುವುದು ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ.
ಕನ್ನಡ ಶಾಲೆ ಉಳಿವಿಗೆ ಮಾರ್ಗೋಪಾಯಗಳ ಕುರಿತು ನಿಮ್ಮ ಅಭಿಪ್ರಾಯ?
ಪ್ರತಿಭಾವಂತ ಶಿಕ್ಷಕರು, ಎಲ್ಲ ರೀತಿಯ ಸವಲತ್ತು ಗಳಿದ್ದರೂ ಸರಕಾರಿ ಶಾಲೆಗಳು ಸೊರಗುತ್ತಿರುವುದಕ್ಕೆ ಇಂದಿನ ಶಿಕ್ಷಣ ನೀತಿಯೇ ಕಾರಣ. ಕನ್ನಡ ಶಾಲೆಗಳು ಉಳಿಯಬೇಕು ಎನ್ನುತ್ತಾ ಪಕ್ಕದಲ್ಲಿಯೇ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವ ವೈರುಧ್ಯಗಳ ನಡುವೆ ಕನ್ನಡ ಶಾಲೆಗಳನ್ನು ರಕ್ಷಿಸುವವರು ಯಾರು? ಅದಕ್ಕಾಗಿ ಕನ್ನಡ ಶಾಲೆಗಳು ಉಳಿಯಬೇಕಾದರೆ ನಮ್ಮ ಶಿಕ್ಷಣ ನೀತಿಯಲ್ಲಿ ಆಮೂಲಾಗ್ರ ಬದಲಾವಣೆಗಳಾಗಬೇಕು.
ಭಾಷಾ ಶುದ್ಧಿ ಕಾಪಾಡಿಕೊಳ್ಳಲು ನಿಮ್ಮ ಸಲಹೆಗಳೇನು?
ಸಾಹಿತ್ಯ ಪ್ರೇಮದಿಂದ ಮಾತ್ರ ಭಾಷಾ ಶುದ್ಧಿ ಉಳಿಯಲು ಸಾಧ್ಯ. ಜನರನ್ನು ಹೆಚ್ಚು ಆಕರ್ಷಿಸುವ ದೃಶ್ಯ ಸಹಿತ ಎಲ್ಲ ಮಾಧ್ಯಮಗಳಲ್ಲಿ ಭಾಷೆ ಕಲುಷಿತಗೊಂಡಿರುವುದು ದುರಂತ. ಸಾಹಿತ್ಯದ ಕುರಿತು ಆಸಕ್ತಿ ಮೂಡಿದಾಗ ಕನ್ನಡ ಮಾತ್ರವಲ್ಲ ಪ್ರತಿಯೊಂದು ಭಾಷೆಗಳೂ ಶುದ್ಧತೆಯನ್ನು ಉಳಿಸಿಕೊಳ್ಳಲು ಸಾಧ್ಯ. ಸಾಹಿತ್ಯ ಸಮ್ಮೇಳನಗಳು ಅದಕ್ಕೆ ಪೂರಕ.
ಇಂದಿನ ಮಕ್ಕಳಲ್ಲಿ ಓದುವ ಹವ್ಯಾಸ ಮೂಡಿಸುವ ಜವಾಬ್ದಾರಿ ಯಾರದ್ದು?
ಓದುವ ಅಭಿರುಚಿಯೇ ಇಲ್ಲವಾದರೆ ಸಾಹಿತ್ಯ ರಚನೆ ಮಾಡಿ ಯಾವುದೇ ಪ್ರಯೋಜನವಿಲ್ಲ. ಮಕ್ಕಳಲ್ಲಿ ಓದುವ ಹವ್ಯಾಸಕ್ಕೆ ನೀರೆರೆಯುವ ಕೆಲಸ ಎಳೆವೆಯಿಂದಲೇ ಆಗಬೇಕು. ಮಕ್ಕಳ ಹೆತ್ತವರು ಮತ್ತು ಶಿಕ್ಷಕರ ಪಾತ್ರ ಇಲ್ಲಿ ಅತ್ಯಂತ ಮಹತ್ವದ್ದು. ಬಾಲ್ಯದಲ್ಲಿ ಸಿಗುವ ಸಾಹಿತ್ಯದ ಪಾಠ ಹೆಚ್ಚು ಪ್ರಭಾವ ಬೀರುತ್ತದೆ.
ನಾಗರಾಜ್ ಎನ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್