ಈರುಳ್ಳಿಯಿಂದ ಕಣ್ಣೀರಿಲ್ಲ ಪನ್ನೀರು ಪನ್ನೀರು
Team Udayavani, Oct 15, 2018, 6:00 AM IST
ಈರುಳ್ಳಿ ಬೆಳೆದವರಿಗೆ ಕಣ್ಣೀರೇ ಗತಿ ಎಂಬ ಮಾತಿತ್ತು. ಅದನ್ನು ಸುಳ್ಳು ಮಾಡುವಂಥ ಸಂಗತಿಯೊಂದು ಕುಷ್ಟಗಿ ತಾಲೂಕಿನಲ್ಲಿ ಕಾಣಸಿಗುತ್ತದೆ. ಇಲ್ಲಿನ ಕೃಷಿಕ ಈರಣ್ಣ ಇಂದೂವಾರ, ಈರುಳ್ಳಿ ಬೆಳೆದು ಲಾಭ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಗರಜನಾಳ ಗ್ರಾಮದ ಈರಣ್ಣ ಇಂದೂವಾರ, ಈರುಳ್ಳಿ ಬೀಜೋತ್ಪಾದನೆ ಮಾಡುತ್ತಿದ್ದಾರೆ. ಈ ಕೃಷಿ ಇವರಿಗೆ ಕಣ್ಣೀರು ತರಿಸಿಲ್ಲ. ಬದಲಾಗಿ ಸಂತೋಷ ಕೊಟ್ಟಿದೆ. ಕುಷ್ಟಗಿ ಅಂದರೆ ಬರದ ನಾಡು ಎಂದೇ ಹೆಸರುವಾಸಿ. ಇಂಥ ಪ್ರದೇಶದಲ್ಲಿ ಈಹುಳ್ಳಿ ಬೆಳೆದದ್ದಲ್ಲದೆ, ಅದರಿಂದ ಲಾಭವನ್ನು ಕಂಡಿರುವ ಈರಣ್ಣನ ಪ್ರಯತ್ನ ಎಲ್ಲರಿಗೂ ಆಶ್ಚರ್ಯವನ್ನು ಉಂಟು ಮಾಡಿದೆ. 4 ಎಕರೆಯಲ್ಲಿ 3 ಎಕರೆ ಶೇಂಗಾ(ನೆಲ ಕಡಲೆ) 25 ಗುಂಟೆ ಹಲಸಂದಿ ಬೆಳೆಯ ಜೊತೆಗೆ 15 ಗುಂಟೆಯಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡುತ್ತಿದ್ದಾರೆ. ಶೇಂಗಾ, ಹಲಸಂದಿ ಫಸಲು ಕೈಗೆ ಬರುವ ಮುನ್ನ ಸ್ವಲ್ಪ ಆದಾಯ ಬರಲಿ ಎನ್ನುವ ಉದ್ದೇಶದಿಂದ ಈರುಳ್ಳಿ ಬೀಜೋತ್ಪಾದನೆಗೆ ಕೈ ಹಾಕಿದ್ದು. ಈರುಳ್ಳಿ, ಇಂದೂವಾರ ದಂಪತಿಯ ಕೈ ಬಿಡಲಿಲ್ಲ, ಸಾಕಷ್ಟು ಆದಾಯವನ್ನು ತಂದು ಕೊಟ್ಟಿದೆ.
10 ಸಾವಿರ ರೂ. ಬಂಡವಾಳ
ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ತಗೆಯುವ ಉದ್ದೇಶದಿಂದ ಭೂಮಿಯನ್ನು ಚೆನ್ನಾಗಿ ಹಸನುಗೊಳಿಸಿ ನೀರು ಉಣಿಸಿ, ಹದ ಮಾಡಿದರು. ನಂತರ, 50 ಕೆ.ಜಿಯ 10 ಪಾಕೆಟ್ ಈರುಳ್ಳಿಯನ್ನು ತಂದರು. ಅದರ ಅರ್ಧ ಭಾಗವನ್ನು ಕತ್ತರಿಸಿ, ಮೇಲಿನ ಅರ್ಧ ಭಾಗವನ್ನು ಬಿಟ್ಟು, ಇನ್ನುಳಿದ ಅರ್ಧ ಭಾಗದಲ್ಲಿ ನಾಟಿ ಮಾಡಿದರು. ನಾಟಿ ಮಾಡಿದ ದಿನದಿಂದ ಪ್ರತಿ 3-4 ದಿನಕೊಮ್ಮೆ ನೀರು ಉಣಿಸುತ್ತಾ ಬಂದರು. ಈರುಳ್ಳಿಯ ಸಸಿಗೆ ಯಾವುದೇ ತರಹದ ರೋಗ, ಕೀಟಗಳ ಬಾಧೆ ತಗಲು ಬಾರದೆಂದು ಡಿಎಪಿ, ಯೂರಿಯಾ, ಪೊಟ್ಯಾಷಿಯ್ಂ, ಕಾಂಪೊಸ್ ರಸ ಗೊಬ್ಬರವನ್ನು ಸಸಿಗಳಿಗೆ ನೀಡಿದ್ದಾರೆ. ಒಟ್ಟಾರೆ ಖರ್ಚು ಕೆಲಸಕ್ಕೆ ಅವರಿಗೆ ತಗುಲಿದ ಹತ್ತು ಸಾವಿರ ರುಪಾಯಿ.
ಬಿತ್ತನೆ ಮಾಡಿ 3 ತಿಂಗಳಿಗೆ ಫಸಲು ಕೊಡುವ ಈರುಳ್ಳಿ ಬೀಜೋತ್ಪಾದನೆ, 1 ಕೆ.ಜಿ ಬೀಜಕ್ಕೆ ಮಾರುಕಟ್ಟೆಯಲ್ಲಿ 900ರೂ. ನಿಂತ ಸಾವಿರ ರೂ. ಬೆಲೆ ಇದೆ. ಕಳೆದ ವರ್ಷ 70 ಕೆ.ಜಿ ಅಧಿಕ ಇಳುವರಿ ಕೊಟ್ಟಿರುವುದರಿಂದ ಹೆಚ್ಚು ಕಮ್ಮಿ 75ಸಾವಿರ ಲಾಭ ಗ್ಯಾರಂಟಿ. ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದುಕೊಡುವ ಈ ಬೆಳೆ, 1 ಕ್ವಿಂಟಾಲ್ ಗಿಂತ ಅಧಿಕ ಇಳುವರಿ ಬಂದಿರುವುದರಿಂದ ಲಾಭ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಾರೆ ಇಂದೂವಾರ ದಂಪತಿ.
ಎನ್. ಶಾಮೀದ್ ತಾವರಗೇರಾ