ಕನಸುಗಳೇ ನಿನ್ನ ಕೈ ಹಿಡಿದು ನಡೆಸಲಿ
Team Udayavani, Apr 24, 2018, 2:32 PM IST
ಪರಿಸ್ಥಿತಿ ನನ್ನ ನಿನ್ನ ನಡುವೆ ಖಳನಾಯಕನಂತೆ ವರ್ತಿಸಿಬಿಟ್ಟಿತು. ಇವೆಲ್ಲವನ್ನೂ ನಿಂಗೆ ಹೇಗೆ ಹೇಳಲಿ. ನೀನು ಒಮ್ಮೆಯಾದರೂ, ಮೋಸ ಮಾಡಿದೆ ಅನ್ನುವಂತೆ ನನ್ನತ್ತ ನೋಡಿದ್ದರೆ, ಇವೆಲ್ಲವನ್ನು ನಿಂಗೆ ಹೇಳಿ ಹಗುರಾಗುತ್ತಿದ್ದೆ. ವಿಧಿ ಅದಕ್ಕೂ ಅವಕಾಶ ಕೊಡಲಿಲ್ಲ ನನಗೆ.
ಕಣ್ಣಲ್ಲೇ ಉಳಿದ ಹನಿಯೇ, ನನ್ನಂಥ ಮುಳ್ಳಿಗೆ ಮರುಳಾದ ಹೂವಂಥ ಹುಡುಗನೇ, ನಾನಿಲ್ಲಿ ಕ್ಷೇಮ ಕಣೋ. ಹೇಗಿದ್ದಿಯಾ ನೀನು? ಇನ್ನೂ ನನ್ನ ನೆನಪಲ್ಲೇ ಜೀವ ಸವೆಸುತ್ತಿದ್ದೀಯೇನೋ? ನಂಗೆಲ್ಲಾ ಗೊತ್ತುಂಟೋ. ಸದಾ ನನ್ನ ಹೆಸರನ್ನೇ ಕನವರಿಸುವ ನೀನು, ನಿನ್ನ ನಿಷ್ಕಲ್ಮಷ ಪ್ರೀತಿ, ನಿನ್ನ ಗಾಯಗೊಂಡ ಹೃದಯ, ಛಿದ್ರಗೊಂಡ ಬದುಕು, ಚೂರು ಚೂರಾದ ಕನಸುಗಳು, ಅದೆಲ್ಲದರ ಸಮೇತ ನರಳುತ್ತಿದ್ದೀಯ. ಅದಕ್ಕೆಲ್ಲಾ ಕಾರಣಳಾದವಳು ನಾನು.
ಎದುರಿಗೆ ಸಿಕ್ಕರೆ ಏನೂ ಆಗೇ ಇಲ್ಲ ಅನ್ನೋ ಥರ ನಕ್ಕು, ಸುಮ್ಮನೇ ನನ್ನ ದಾಟಿ ಹೋಗಿಬಿಡುತ್ತಿಯಲ್ಲ ಯಾಕೆ? ಆಗೆಲ್ಲಾ ನಂಗೆ ಎಷ್ಟೊಂದು ಸಂಕಟವಾಗುತ್ತೆ ಗೊತ್ತಾ? ಕೊನೇಪಕ್ಷ ನೀನು ಕೋಪದ ಮುಖ ಮಾಡಿಯಾದರೂ ನನ್ನ ನೋಡಬೇಕಿತ್ತು. ನಿನ್ನ ಕಣ್ಣಲ್ಲಿ ದ್ವೇಷದ ಕಿಡಿಯನ್ನಾದರೂ ಕಾಣಬೇಕಿತ್ತು. ಕೊನೆಗೆ ನನ್ನೆಡೆಗೆ ಒಂದು ತಿರಸ್ಕಾರವನ್ನಾದರೂ ನೀನು ಎಸೆದು ಹೋಗಬೇಕಿತ್ತು. ಆಗ ನನ್ನೊಳಗೊಂದು ಸಮಾಧಾನವಾದರೂ ನೆಲೆಗೊಳ್ಳುತ್ತಿತ್ತು.
ಆದರೆ ನೀನು ಮಾಡಿದ್ದಾದರೂ ಏನು? ಯಾಕೆ ನನ್ನ ಮೇಲೆ ನಿಂಗೆ ಇಂಗಲಾರದ ಪ್ರೀತಿ. ಬತ್ತಲಾರದ ಪ್ರೇಮ, ಮುಗಿಯದ ಒಲವು, ಅಳಿಸಲಾಗದ ಅನುರಾಗ? ಹೌದು ಕಣೋ, ನಂಗೆ ನೀನೇ ಸರಿಯಾದ ಜೋಡಿ. ಆದರೆ, ಅಪ್ಪ ಅಮ್ಮ ಎಷ್ಟೊಂದು ಪ್ರೀತಿ ಧಾರೆಯೆರೆದು ನನ್ನನ್ನು ಸಾಕಿದ್ದಾರೆ ಗೊತ್ತೇನೋ. ನನ್ನ ಬದುಕನ್ನು ರೂಪಿಸಲು ಅಪ್ಪ ಅದೆಷ್ಟು ರಾತ್ರಿಗಳನ್ನು ನಿದ್ದೆಗೆಟ್ಟು,
ಫ್ಯಾಕ್ಟರಿಯಲ್ಲಿ ಓವರ್ ಟೈಂ ದುಡಿದು ಬಂದು, ನನ್ನ ಕೆನ್ನೆ ಸವರಿ “ಮಗಳೇ ಊಟವಾಯಿತಾ?’ ಅಂತ ಕೇಳುತ್ತಿದ್ದ. “ಓದೊRà ಹೋಗು. ನಿದ್ದೆ ಬಂದಾಗ ಹೇಳು’ ಅಂತ ಹಾಸಿಗೆ ಹಾಸಿ ಚಕ್ಕುತಟ್ಟಿ ಮಲಗಿಸುತ್ತಿದ್ದ. ಅಪ್ಪನೇ ಅಮ್ಮನಂತಿದ್ದ. ಇನ್ನು ಅಮ್ಮನ ಬಗ್ಗೆ ಏನು ಹೇಳಲಿ? ಅವಳಂತೂ ಮುಗೆœ, ಕರುಣಾಮಯಿ. ಪ್ರೀತಿಯ ಒರತೆಯನ್ನೇ ಒಡಲ ತುಂಬಾ ತುಂಬಿಕೊಂಡವಳು. ಇಷ್ಟೆಲ್ಲಾ ಪ್ರೀತಿಯ ನಡುವೆ ನೀನು ಬಂದೆ.
ಅವತ್ತೂಂದು ದಿನ ಅಪ್ಪ ತುಂಬಾ ಖುಷಿಯಲ್ಲಿದ್ದ. ನಿನ್ನ ನನ್ನ ಪ್ರೀತಿಯ ವಿಷಯವನ್ನ ಅಪ್ಪನಿಗೆ ಹೇಳ್ಳೋಣ ಅಂದುಕೊಳ್ಳುತ್ತಲೇ ಮನೆಗೆ ಬಂದೆ. ಅಪ್ಪ ಬಾಗಿಲಲ್ಲೇ ಸಿಕ್ಕಿ ಕಣ್ತುಂಬಿಕೊಂಡು ನನ್ನನ್ನ ಅಪ್ಪಿಕೊಂಡ. ಅದೆಂಥಾ ಅಪ್ಪುಗೆ ಗೊತ್ತಾ ಹುಡುಗ?! ಯಾವುದೋ ತಂತು ಕಡಿದುಹೋಗುವುದು ಖಚಿತವಾದಂಥ ಅಪ್ಪುಗೆ. ಆದರೂ ಅಪ್ಪನ ಕಣ್ಣಲ್ಲಿನ ಹೊಳಪು ಯಾವುದೋ ನೆಮ್ಮದಿಯ ಸುದ್ದಿಯನ್ನು ಬಿತ್ತ ರಿಸುತ್ತಿತ್ತು.
ಮಗಳೇ, ಅನ್ನುತ್ತಲೇ ಸಿಹಿಯನ್ನು ಬಾಯಿಗಿಟ್ಟ. ನಿನ್ನ ಬದುಕು ಬಂಗಾರವಾಯ್ತು. ನನ್ನ ಕನಸು ಈಡೇರಿತು ಅನ್ನುತ್ತಲೇ ಮದುವೆಯ ವಿಚಾರ ಹೇಳಿದ. ನನ್ನ ಕಂಗಳಲ್ಲಿ ನೀರಿತ್ತು. ನೀನು ನೆನಪಾದೆ. ಆಗ ನಾನು ಏನು ಮಾಡಬೇಕಿತ್ತು? ನೀನೇ ಹೇಳು… ಅಪ್ಪ-ಅಮ್ಮನ ನಂಬಿಕೆ ನನ್ನ ಬಾಯಿ ಕಟ್ಟಿಹಾಕಿತು. ಅವರ ಪ್ರೀತಿ ನಿನ್ನಿಂದ ದೂರವಾಗುವಂತೆ ಮಾಡಿತು. ಈಗ ಹೇಳು, ನನ್ನದು ಕ್ಷಮಿಸಲಾರದ ತಪ್ಪಾ?
ಮನ್ನಿಸಲಾರದ ಮೋಸವಾ? ಕಡೆ ತನಕ ಕಾಡುವ ವಂಚನೆಯಾ? ಬಿಡುಗಡೆಯೇ ಇಲ್ಲದ ನೋವಾ? ಪರಿಸ್ಥಿತಿ ನನ್ನ ನಿನ್ನ ನಡುವೆ ಖಳನಾಯಕನಂತೆ ವರ್ತಿಸಿಬಿಟ್ಟಿತು. ಇವೆಲ್ಲವನ್ನೂ ನಿಂಗೆ ಹೇಗೆ ಹೇಳಲಿ. ನೀನು ಒಮ್ಮೆಯಾದರೂ, ಮೋಸ ಮಾಡಿದೆ ಅನ್ನುವಂತೆ ನನ್ನತ್ತ ನೋಡಿದ್ದರೆ, ಇವೆಲ್ಲವನ್ನು ನಿಂಗೆ ಹೇಳಿ ಹಗುರಾಗುತ್ತಿದ್ದೆ. ವಿಧಿ ಅದಕ್ಕೂ ಅವಕಾಶ ಕೊಡಲಿಲ್ಲ ನನಗೆ.
ನಿಂಗೆ ಇದೆಲ್ಲ ಯಾವಾಗ ಅರ್ಥವಾಗುತ್ತೋ ಗೊತ್ತಿಲ್ಲ? ನಿಂಗೂ ಒಂದು ಬದುಕಿದೆ. ನಿಂಗೂ ಅಪ್ಪ ಅಮ್ಮ ಇದ್ದಾರೆ. ಅವರ ಕಣ್ಣ ಮುಂದೆ ನಿನ್ನ ಬದುಕು ಬಂಗಾರವಾಗಬೇಕೇ ಹೊರತು ಮಣ್ಣಾಗಬಾರದು. ಹೆತ್ತವರ ಕಣ್ಣಲ್ಲಿ ಖುಷಿ ಕಾಣುವುದಕ್ಕಿಂತ ಮತ್ತೂಂದು ಖುಷಿಯಿದೆಯಾ ಹೇಳು? ನಾಳೆ ನಿಂಗೆ ಹೊಸ ಮುಂಜಾವು ಕಣ್ತೆರೆಯಲಿ. ಬದುಕಿಗೊಂದು ಚಂದದ ತಿರುವು ಸಿಗಲಿ. ಹೊಸ ಕನಸುಗಳು ಕೈ ಹಿಡಿದು ನಡೆಸಲಿ.
ಪ್ರೀತಿಯಿಂದ
ಅಮ್ಮು ಮಲ್ಲಿಗೆಹಳ್ಳಿ