ಹರಿಕತೆ ದಾಸಯ್ಯ ಮತ್ತು ಕೆಂಡದ ಮರ!
Team Udayavani, Apr 20, 2017, 3:45 AM IST
ಒಂದೂರಿನಲ್ಲಿ ವೆಂಕಟದಾಸರೆಂಬ ಹರಿಕಥೆ ದಾಸರಿದ್ದರು. ಅವರ ಹರಿಕೀರ್ತನೆಯೆಂದರೆ ಬಹುಪ್ರಸಿದ್ಧ. ಬೇರೆಬೇರೆ ಊರುಗಳಲ್ಲಿ ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ಅವರದೇ ಹರಿಕೀರ್ತನೆ. ಅದೊಂದು ಏಕಾದಶಿಯ ದಿನ. ಪಕ್ಕದ ಊರಿನ ದೇವಾಲಯದ ಸಭಾಂಗಣದಲ್ಲಿ ವೆಂಕಟದಾಸರ ಹರಿಕೀರ್ತನೆ. ಯಾವಾಗಲೂ ಏನಾದರೊಂದು ಕಾರಣಕ್ಕೆ ಕೇಳಲಿಕ್ಕೆ ಆಗಿರಲಿಲ್ಲ. ಇಂದಾದರೂ ಕೇಳ್ಳೋಣ ಎಂದು ದಾಸರ ಹೆಂಡತಿಯೂ ಆ ದಿನ ಊಟಕ್ಕೆ ಅಡುಗೆಯನ್ನೆಲ್ಲ ಸಿದ್ಧ ಮಾಡಿಟ್ಟು ಹರಿಕೀರ್ತನೆ ಕೇಳಲು ಬಂದು ಕುಳಿತಿದ್ದಳು. ದಾಸರು ಏಕಾದಶಿ ದಿನದ ಮಹಾತ್ಮೆಯನ್ನು ವರ್ಣಿಸುತ್ತಾ ಹೇಳುತ್ತಿದ್ದರು… ಏಕಾದಶಿ ದಿನ ಉಪವಾಸ ಮಾಡಬೇಕು. ಬರೇ ನೀರು ಕುಡಿದುಕೊಂಡು ಇರಬೇಕು. ಉಪವಾಸ ಮಾಡಿದರೆ ಮಹಾಪುಣ್ಯ. ಅದರಿಂದ ಸ್ವರ್ಗಸುಖ ಲಭಿಸುತ್ತದೆ. ಈ ಪುಣ್ಯ ದಿನದಂದು ಊಟ ಮಾಡುವುದು, ಅದರಲ್ಲೂ ಭಕ್ಷ್ಯ ಬೋಜನಗಳನ್ನು ಸೇವಿಸುವುದು ಮಹಾಪಾಪ. ಅಂಥವರಿಗೆ ಘೋರ ನರಕ ಪ್ರಾಪ್ತಿಯಾಗುತ್ತದೆ. ಯಮದೂತರು ಉಗ್ರಶಿಕ್ಷೆಯನ್ನು ವಿಧಿಸುತ್ತಾರೆ. ನರಕದಲ್ಲಿ ಒಂದು ಅಗ್ನಿಯ ವೃಕ್ಷ ಇದೆ. ಅದು ನಿಗಿನಿಗಿ ಕೆಂಡದಂತೆ ಉರಿಯುತ್ತಾ ಇರುತ್ತದೆ. ಏಕಾದಶಿಯಂದು ಉಪವಾಸ ಮಾಡದವರು ಕೆಂಡದ ಮರವನ್ನು ಅಪ್ಪಿಕೊಳ್ಳಬೇಕು. ಅವರ ಎರಡೂ ಕೈಗಳನ್ನು ಇನ್ನೊಂದು ಬದಿಯಿಂದ ಹಿಡಿದುಕೊಂಡು ಯಮದೂತರು ಮಜ್ಜಿಗೆ ಕಡೆದಂತೆ ಕಡೆಯುತ್ತಾರೆ. ಆಗ ಪಾಪಿಗಳು ಬೆಂಕಿಯ ಉರಿಯನ್ನು ಸಹಿಸಲಾರದೆ ಆಕ್ರಂದನ ಮಾಡುತ್ತಾರೆ..’ ಎಂದು ಮುಂತಾಗಿ ವರ್ಣಿಸಿ ಮಂಗಳ ಹಾಡಿದರು ದಾಸರು. ಹರಿಕಥೆ ಮುಗಿಯಿತು. ಭಯಭಕ್ತಿಯಿಂದ ಜನರು ಕೈ ಮುಗಿದರು.
ದಾಸರ ಹೆಂಡತಿ ಲಗುಬಗೆಯಿಂದ ಮನೆಗೆ ಧಾವಿಸಿದರು. ಹಿಂದೆಯೇ ದಾಸರೂ ದಕ್ಷಿಣೆ ಸ್ವೀಕರಿಸಿ ಸ್ವಲ್ಪ ಹೊತ್ತಿನಲ್ಲಿಯೇ ಮನೆಗೆ ಮರಳಿದರು. ಬೆಳಗಿನಿಂದ ಉಪವಾಸ ಇದ್ದ ದಾಸರಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಹರಿಕಥೆ ಮಾಡುವಾಗಲೂ ಅವರಿಗೆ ಹೊಟ್ಟೆಯದ್ದೇ ಯೋಚನೆ. ಹಸಿವಿನಿಂದ ತುಂಬಾ ಬಳಲಿದ್ದ ಅವರು ಹೆಂಡತಿಗೆ ಹೇಳಿದರು “ಬೇಗ ತಟ್ಟೆ ಹಾಕು. ಕೈಕಾಲು ಮುಖ ತೊಳೆದುಕೊಂಡು ಬರುತ್ತೇನೆ..’ ಹೆಂಡತಿ ದೇವರ ಕೋಣೆಯಿಂದಲೇ ಕೂಗಿ ಹೇಳಿದಳು: “ನೀವು ಹೇಳಿದಂತೆ ಸಂಜೆ ಅಡುಗೆ ಮಾಡಿದ್ದೆ. ಉಪವಾಸಕ್ಕೆ ಶ್ಯಾವಿಗೆ ಪಾಯಸವನ್ನೂ ಮಾಡಿದ್ದೆ. ಆದರೆ ನಿಮ್ಮ ಹರಿಕಥೆ ಕೇಳಿದ ಮೇಲೆ ಭಯವಾಯಿತು. ಬೆಂಕಿ ಮರ ಅಪ್ಪುವ ಶಿಕ್ಷೆ ನನಗೆ ಬೇಡ, ನಿಮಗೂ ಬೇಡ. ಅದಕ್ಕೆ ಮಾಡಿಟ್ಟ ಭಕ್ಷಯ ಭೋಜನವನ್ನು ಹೊರಗೆ ಚೆಲ್ಲಿಬಿಟ್ಟೆ.’ ಎಂದಳು. ದಾಸರ ಜಂಘಾಬಲವೇ ಉಡುಗಿ ಹೋಯಿತು. ಕುಸಿದು ಕುಳಿತ ಅವರು ಹೇಳಿದರು “ಆ ಬೆಂಕಿಯ ಮರವನ್ನು ಎಲ್ಲರೂ ಅಪ್ಪಿ ತಣ್ಣಗಾಗಿ ಹೋಗಿರುತ್ತಿತ್ತು. ಆದ್ದರಿಂದ ನಾವು ಊಟ ಮಾಡಬಹುದಿತ್ತು. ಪಾಯಸ ಸವಿಯಬಹುದಿತ್ತು’ ಎಂದು ನಿಡುಸುಯ್ದರು. ಹೆಂಡತಿ ದಾಸರ ಮುಖವನ್ನೇ ಮಿಕಿ ಮಿಕಿ ನೋಡುತ್ತ ನಿಂತರು.
– ವನರಾಗ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…