ಕೋವಿಡ್ ಲಸಿಕೆಗಳ ದಾಸ್ತಾನು ಇದೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ : ಸಿದ್ದರಾಮಯ್ಯ ಆಕ್ರೋಶ
Team Udayavani, Jul 2, 2021, 6:03 PM IST
ದಾವಣಗೆರೆ : ಸರ್ಕಾರದ ಬಳಿ ಕೋವಿಡ್ ಲಸಿಕೆಯೇ ಇಲ್ಲ. ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದೆ ಎಂದು ವಿಧಾನ ಸಭೆ ವಿರೋಧ ಪಕ್ಷ ದ ನಾಯಕ ಸಿದ್ದರಾಮಯ್ಯ ದೂರಿದ್ದಾರೆ.
ಶುಕ್ರವಾರ ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಪ್ರಸಾದ ನಿಲಯದಲ್ಲಿ ಏರ್ಪಡಿಸಿದ್ದ ಉಚಿತ ಲಸಿಕಾ ಶಿಬಿರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಬಳಿ ಲಸಿಕೆಯೇ ಇಲ್ಲ. ದಾಸ್ತಾನು ಇದೆ ಎಂದು ಸರ್ಕಾರ ಹೇಳುತ್ತಿದೆ. ಎಲ್ಲರಿಗೂ ಲಸಿಕೆ ಕೊಡಲಿಕ್ಕೆ ಆಗುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ : ಉ.ಪ್ರ : ಜುಲೈ 5ರಿಂದ ಸಿನೆಮಾ ಮಂದಿರ, ಮಲ್ಟಿಫ್ಲೆಕ್ಸ್, ಸ್ಟೇಡಿಯಂಗಳಿಗೆ ತೆರೆಯಲು ಅನುಮತಿ
ಪ್ರಾರಂಭದಿಂದಲೂ ಸರಿಯಾಗಿ ಲಸಿಕೆ ನೀಡುವ ಕೆಲಸವಾಗಿದ್ದರೆ ಇಷ್ಟೊಂದು ಸಮಸ್ಯೆಯೇ ಆಗುತ್ತಿರಲಿಲ್ಲ. ಲಸಿಕೆ ದಾಸ್ತಾನು, ವಿತರಣೆ ಸರಿಯಾಗಿ ಇಲ್ಲ. ಇಂತಹ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡುವ ಮೂಲಕ ಜನರ ಜೀವ ಉಳಿಸುವ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಲಸಿಕೆ ನೀಡಬೇಕಾಗಿರುವುದು ಸರ್ಕಾರದ ಕೆಲಸ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕೆಲಸ ಅಲ್ಲ. ಸರ್ಕಾರ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಹೇಳುತ್ತಿದೆ. ಲಸಿಕೆಯೇ ಇಲ್ಲ. ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದೆ ಎಂದು ಪುನರುಚ್ಚರಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಶುಕ್ರವಾರ ಬೆಳಗ್ಗೆ ಭೇಟಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಆಗಲೇ ಹೇಳಿದ್ದೇನೆ. ಎಲ್ಲವೂ ಆದಷ್ಟು ಬೇಗ ಬಗೆಹರಿಯಲಿದೆ ಎಂದು ಉತ್ತರಿಸಿದರು.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಆ ಬಗ್ಗೆ ಚರ್ಚಿಸುವುದಿಲ್ಲ ಎಂದರು.
ಇದನ್ನೂ ಓದಿ : ರಾಜ್ಯಕ್ಕೆ ಸಿಗಬೇಕಾದ ಲಸಿಕೆ ಸಿಕ್ಕೆ ಸಿಗುತ್ತೆ: ನಿರ್ಮಲಾ