ಬದುಕು ಬದಲಿಸುವ ಜಾದೂ
Team Udayavani, Oct 3, 2018, 1:14 PM IST
ಎಲ್ಲರಿಗೂ ಮನಸ್ಸಿನಲ್ಲಿ ನಾನೂ ಜಾದೂಗಾರನಾಗಬೇಕು ಎಂಬ ಹಂಬಲ ಇರುತ್ತದೆ. ಈ ಕಣ್ಣುಕಟ್ಟು ವಿದ್ಯೆಗೆ ಬೇಗನೆ ಮರುಳಾಗುವುದು ಸಹಜ. ಈ ವೃತ್ತಿಯಲ್ಲಿನ ವೈಶಿಷ್ಟ್ಯವೇ ಕ್ರಿಯಾಶೀಲತೆ. ಪ್ರತಿ ಸೆಕೆಂಡು ಕೂಡ ಬಹಳ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ಜಾದೂ ವಿದ್ಯೆಯನ್ನು ಒಲಿಸಿದರೆ ಸಮಾಜವನ್ನು ಈ ಮಂತ್ರ ಲೋಕದಲ್ಲಿಟ್ಟುಕೊಳ್ಳಬಹುದು.
ಪ್ರಖ್ಯಾತ ಮಾಂತ್ರಿಕರಾದ ಕುದ್ರೋಳಿ ಗಣೇಶ್, ರಾಜೇಶ್ ಮಳಿ, ರಮೇಶ್ ಬಾಬು ಹೆಸರು ಕೇಳಿದಾಕ್ಷಣ ಅವರ ಜಾದೂ ಶೋ ನೋಡಲು ಹೋಗುವ ಎನ್ನುವ ತವಕವಾಗುವುದು ಸಹಜ. ಸಮಯ ಹಾಗೂ ಕೆಲವೊಂದು ಕಣ್ಣುಕಟ್ಟು ವಿದ್ಯೆಯಿಂದ ಮಂತ್ರಗಳಿಂದ ನೆರೆದವರ ಸುಲಭವಾಗಿ ಮೋಸ ಮಾಡುವುದು ಇಲ್ಲಿ ಬಂಡವಾಳ. ಮಾತ್ರವಲ್ಲದೆ ಸಮಯ ಹಾಗೂ ಕ್ರಿಯಾಶೀಲತೆ ಇಲ್ಲಿನ ಮುಖ್ಯ ಅಂಶವಾಗಿರುತ್ತದೆ.
ಶಿಕ್ಷಣದ ಜತೆಜತೆಗೆ ಈ ವಿದ್ಯೆಯನ್ನು ಕಲಿತರೆ ಮುಂದೆ ವೇದಿಕೆಯ ಮೇಲೆ ಚೂಮಂತರ್ ಮಾಡುತ್ತಾ ಎಲ್ಲರ ಗಮನವನ್ನು ನಮ್ಮ ಮೇಲೆ ಇಡುವಂತೆ ಮಾಡಬಹುದು. ಶಿಕ್ಷಣದ ಜತೆಗೆ ಆಸಕ್ತಿ ಇದ್ದಲ್ಲಿ ಈ ಜಾದೂ ವಿದ್ಯೆಯನ್ನು ಕಲಿಯಬಹುದು. ಇದರಲ್ಲಿ ಸಾಕಷ್ಟು ಅವಕಾಶಗಳಿವೆ.
ಜಾದೂ ತರಗತಿಗಳು
ಜಾದೂ ತರಗತಿಯನ್ನು ಎಲ್ಲೆಡೆಯೂ ನೀಡುವುದಿಲ್ಲ. ಆದರೆ ಕೆಲವೆಡೆ ಇದನ್ನು ಕಲಿಸುತ್ತಾರೆ. ಕಾಲೇಜು ಶಿಕ್ಷಣದ ರೀತಿ ಇದರ ಅಭ್ಯಾಸ ಅಲ್ಲದಿದ್ದರೂ ಇದರಲ್ಲಿ ಕಲಿಯುವಂತಹ ಹಲವಾರು ಅಂಶಗಳು ನಮ್ಮ ಪಠ್ಯ ಕಲಿಕೆಗಿಂತಲೂ ಹೆಚ್ಚು ಆಸಕ್ತಿದಾಯಕವಾಗಿರುತ್ತದೆ. ಈ ಜಾದೂವಿನಲ್ಲಿ ಸಣ್ಣ ವಯಸ್ಸಿನವರಿಗೆ ಒಳ್ಳೆಯ ಭವಿಷ್ಯವಿದೆ.
ಸದಾ ಅವಕಾಶಗಳು
ಜಾದೂಗಾರನಿಗೆ ಅವಕಾಶಗಳು ಹಲವಾರು ಇವೆ. ಕೇವಲ ಹಣ ಸಂಪಾದನೆಯೊಂದೇ ಅಲ್ಲದೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಳ್ಳಬಹುದು. ಉದಾಹರಣೆಗೆ ಈಗ ನಡೆಯತ್ತಿರುವ ಡ್ರಗ್ಸ್ ವಿರೋಧಿ ಜಾದೂ ಶೋಗಳನ್ನು ಮಾಡುವುದು, ಸಾಮಾಜಿಕ ಜಾಗೃತಿಗಳನ್ನು ಮೂಡಿಸುವ ಮೂಲಕ ಕೆಲವೊಂದು ಕಾರ್ಯಕ್ರಮಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಕೂಡ ಆಗಬಹುದು. ಒಟ್ಟಿನಲ್ಲಿ ಕಲಿಯುವ ಆಸಕ್ತಿಯಿದ್ದರೆ ಏನನ್ನೂ ಬೇಕಾದರೂ ಕಲಿಯಬಹುದು ಹಾಗೂ ಶಿಕ್ಷಣದ ಜತೆಗೆ ಇಂತಹ ಹಲವು ವಿದ್ಯೆಗಳನ್ನು ಕಲಿತರೆ ಭವಿಷ್ಯದಲ್ಲಿ ಇದರಲ್ಲೂ ಫುಲ್ಟೈಮ್ ಅಥವಾ ಪಾರ್ಟ್ ಟೈಮ್ ತೊಡಗಿಸಿಕೊಳ್ಳಬಹುದು.
ಮಾಂತ್ರಿಕನ ವಿಶೇಷತೆ
ಒಳ್ಳೆಯ ಗುರುವಿನ ಜತೆಗೆ ಒಳ್ಳೆಯ ವಾಕ್ಚಾತುರ್ಯ, ಕೆಲವು ಕಣ್ಣುಕಟ್ಟು ವಿದ್ಯೆಗಳು, ಸಮಯ ಪ್ರಜ್ಞೆ, ಜಾದೂ ಸಂಬಂಧಿ ವಸ್ತುಗಳು ಹಾಗೂ ಜನರನ್ನು ತನ್ನತ್ತ ಸೆಳೆಯುವ ನೈಪುಣ್ಯತೆ, ಕ್ರಿಯಾಶೀಲತೆ ಜತೆಗೆ ಕೆಲವು ವಿಜ್ಞಾನದ ಪ್ರಯೋಗಗಳನ್ನು ತಿಳಿದರೆ ಜಾದೂಗಾರನಾಗುವುದು ಸುಲಭ.
ಭರತ್ರಾಜ್ ಕರ್ತಡ್ಕ