ನಾಳೆ ಕುದ್ಕನ ಮದ್ಮೆ; 10ರಿಂದ ರಡ್ಡ್ ಎಕ್ರೆ ಸೇಲ್!
Team Udayavani, Jan 2, 2020, 4:31 AM IST
2020ರ ಜನವರಿ ಎರಡು ಮಹತ್ವದ ತುಳು ಸಿನೆಮಾಗಳಿಗೆ ವೇದಿಕೆಯಾಗಲಿದೆ. ಕೋಸ್ಟಲ್ವುಡ್ನ ಎಲ್ಲ ಪ್ರಮುಖ ಕಲಾವಿದರ ಮೂಲಕ ನಡೆಯುತ್ತಿರುವ ಎರಡೂ ಸಿನೆಮಾಗಳು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಪೈಕಿ “ಕುದ್ಕನ ಮದ್ಮೆ’ ನಾಳೆ ರಿಲೀಸ್ ಆದರೆ 7 ದಿನಗಳ ಬಳಿಕ ಅಂದರೆ ಜ. 10ರಂದು “ರಡ್ಡ್ ಎಕ್ರೆ’ ಬಿಡುಗಡೆಯಾಗಲಿದೆ.
ಜಿಆರ್ಕೆ ನಿರ್ಮಾಣದ, ಎ.ವಿ. ಜಯರಾಜ್ ನಿರ್ದೇಶನದ ಗೌರಿ ಆರ್. ಹೊಳ್ಳ ಮತ್ತು ಸುಹಾಸ್ ಹೊಳ್ಳ ನಿರ್ಮಾಣದ “ಕುದ್ಕನ ಮದ್ಮೆ’ ಸಿನೆಮಾ ಕರಾವಳಿಯಾದ್ಯಂತ ತೆರೆ ಕಾಣಲಿದೆ. ಇದೊಂದು ಸಂಪೂರ್ಣ ಕಾಮಿಡಿ-ಫ್ಯಾಮಿಲಿ ಓರಿಯೆಂಟೆಡ್ ಸಬ್ಜೆಕ್ಟ್. ಕುಟುಂಬ ಸಮೇತ ನೋಡುವ ಸಿನೆಮಾ. ನಾಯಕನಾಗಿ ಪೃಥ್ವಿ ಅಂಬಾರ್ ಹಾಗೂ ನಾಯಕಿಯಾಗಿ ಶೀತಲ್ ನಾಯಕ್ ಅಭಿನಯಿಸಿದ್ದಾರೆ. ದೇವಿಪ್ರಕಾಶ್ ಉರ್ವ, ಶ್ರೀಷಾ ಭಂಡಾರಿ, ಕಾರ್ತಿಕ್ ರಾವ್ ಮತ್ತು ಮುಂಬಯಿ ರಂಗ ಕಲಾವಿದೆ ಚಂದ್ರಾವತಿ ವಸಂತ್ ಮುಖ್ಯ ಪಾತ್ರದಲ್ಲಿದ್ದಾರೆ.
ಅರವಿಂದ ಬೋಳಾರ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ದೀಪಕ್ ರೈ ಪಾಣಾಜೆ, ಪಿಂಕಿರಾಣಿ, ಶೋಭಾ ಶೆಟ್ಟಿ, ಜೀವನ್ ಉಳ್ಳಾಲ್, ಸೂರಜ್ ಸಾಲ್ಯಾನ್, ಮೋಹನ್ ಕೊಪ್ಪಳ, ಚೇತನ್ ಕದ್ರಿ ಸುಮತಿ ಹಂದೆ, ಉದಯ್ ಆಳ್ವ ಸುರತ್ಕಲ್, ಯಶವಂತ್ ಶೆಟ್ಟಿ ಕೃಷ್ಣಾಪುರ, ಸುನಿಲ್ ಪಡುಬಿದ್ರೆ, ಕೃಷ್ಣ ಸುರತ್ಕಲ್, ರವೀಶ್ ಜೋಗಿ, ಯೋಗೀಶ್, ಅರುಣ್ ಶೆಟ್ಟಿ, ಸುಮಿತ್ರಾ ರೈ, ಕಿಶೋರ್ ಡಿ. ಶೆಟ್ಟಿ ತಾರಾಗಣದಲ್ಲಿದ್ದಾರೆ.
ಚಿತ್ರದ ಕಥೆ-ಚಿತ್ರಕಥೆ: ಸುಧನ್ ಶ್ರೀಧರ್, ಛಾಯಾಗ್ರಹಣ: ಮಹಾಬಲೇಶ್ವರ ಹೊಳ್ಳ, ಸಂಕಲನ: ಸುಬ್ರಹ್ಮಣ್ಯ ಹೊಳ್ಳ, ಸಂಗೀತ: ರಾಹುಲ್ ವಸಿಷ್ಠ, ಮೆಲ್ರಾಯ್, ಪ್ರವೀಣ್, ಕಲೆ: ಡಿ.ಕೆ ಆಚಾರ್ಯ ಕುಂಬ್ಳೆ, ನೃತ್ಯ: ಅಕುಲ್ ಮಾಸ್ಟರ್, ಸಾಹಸ ಕೌರವ ವೆಂಕಟೇಶ್, ಸಹಾಯಕ ನಿರ್ದೇಶಕರು: ರಾಕೇಶ್, ನವೀನ್ ಶೆಟ್ಟಿ, ಅನಿರುದ್ಧ್ ಉಳ್ಳಾಲ್, ಕರುಣ್ ಶೆಟ್ಟಿ, ರೋಶನಿ, ಕಾವ್ಯಾ ಶರತ್, ಸಾಹಿತ್ಯ ಸಂಭಾಷಣೆ, ಸಹ ನಿರ್ದೇಶನ : ಜೀವನ್ ಉಳ್ಳಾಲ್.
ಜ. 10: ರಡ್ಡ್ ಎಕ್ರೆ ರಿಲೀಸ್
ಕೋಸ್ಟಲ್ವುಡ್ನ ಬಹು ನಿರೀಕ್ಷಿತ ಸಿನೆಮಾ “ರಡ್ಡ್ ಎಕ್ರೆ’ ಜ. 10ರಂದು ರಿಲೀಸ್ ಆಗಲಿದೆ. ವನ್ಲೈನ್ ಸಿನೆಮಾ ಲಾಂಛನದಲ್ಲಿ ಸಂದೇಶ್ ರಾಜ್ ಬಂಗೇರ, ರೋಹನ್ ಕೋಡಿಕಲ್ ನಿರ್ಮಾಣದಲ್ಲಿ ವಿಸ್ಮಯ ವಿನಾಯಕ ನಿರ್ದೇಶನದಲ್ಲಿ ಚಿತ್ರ ಮೂಡಿಬರುತ್ತಿದೆ. ನಟ ನವೀನ್ ಡಿ. ಪಡೀಲ್ – ವಿಸ್ಮಯ ವಿನಾಯಕ್ ಅಣ್ಣ ತಮ್ಮಂದಿರು. ಅವರಿಗೆ ತಂದೆಯ ಪಾಲಿನ ಆಸ್ತಿ ಸಿಕ್ಕಿರುತ್ತದೆ. ಅದನ್ನು ಡೀಲ್ ಮಾಡುವ ಹಾಸ್ಯ ಕಥಾನಕವೇ “ರಡ್ಡ್ ಎಕ್ರೆ’. ಈಗಾಗಲೇ ಇದರ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. “ಜಾಗೆ ರಡ್ಡ್ ಎಕ್ರೆ… ಬೈದೆರ್ ಲಪ್ಪೆರೆ… ಜಾಗೆದಕುಲು ಬನ್ನಗ ಮಾತ ಒತ್ತರೆ’ ಎಂಬ ಟೈಟಲ್ ಸಾಂಗ್ ಸಾಕಷ್ಟು ಹೆಸರು ಪಡೆದಿದೆ. ಇದೇ ಮೊದಲು ಪೃಥ್ವಿ ಅಂಬರ್ ಈ ಸಿನೆಮಾದಲ್ಲಿ ಹಾಡಿದ್ದಾರೆ. ದೀಪಕ್ ಕೋಡಿಕಲ್ ಕೂಡ ಸ್ವರ ನೀಡಿದ್ದಾರೆ. ಕಿಶೋರ್ ಕುಮಾರ್ ಶೆಟ್ಟಿ ಅವರ ಸಂಗೀತವಿದೆ. ಪೃಥ್ವಿ ಅಂಬರ್, ನಿರೀಕ್ಷಾ ಶೆಟ್ಟಿ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ, ಮಂಜು ರೈ ಮೂಳೂರು ಸೇರಿದಂತೆ ಪ್ರಮುಖರು ಸಿನೆಮಾದಲ್ಲಿದ್ದಾರೆ.
“2 ಎಕ್ರೆ’ ಹೆಸರು ಕೇಳುವಾಗ ಇದು ಜಾಗದ ಬಗ್ಗೆ ಅನಿಸಬಹುದು. ಆದರೆ, ಇಲ್ಲಿ ಕಥೆ ಆರಂಭ ಆಗುವುದು ಹಾಗೂ ಮುಕ್ತಾಯ ಆಗುವುದು 2 ಎಕ್ರೆ ಜಾಗದಲ್ಲಿ ಮಾತ್ರ. ಉಳಿದಂತೆ ಇನ್ನೂ ಅನೇಕತೆ ಇದರಲ್ಲಿದೆ. ಅಂದರೆ, 2 ಎಕ್ರೆ ಜಾಗದಲ್ಲಿ ಒಬ್ಬ ಸಂಜೀವಣ್ಣ ಎನ್ನುವವರಿದ್ದಾರೆ. ಅದೇ ಊರಲ್ಲಿ ಮನೆ ಮನೆಗೆ ಬಟ್ಟೆ ಮಾರುವ ಇನ್ನೊಬ್ಬ ಸಂಜೀವ ಇದ್ದಾನೆ. ಎರಡು ಸಂಜೀವರು ಬೇರೆ ಬೇರೆ ಆರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ. ಹೀಗಾಗಿ ಇವರ ಒಂದೇ ಹೆಸರಿನಿಂದಾಗಿ ಸೃಷ್ಟಿಯಾಗುವ ಅವಾಂತರವೇ ಸಿನೆಮಾ. ಸಂಜೀವನ ಜೀವನ ಆಗುವ ಒಟ್ಟು ಪರಿಸ್ಥಿತಿಯೇ 2 ಎಕ್ರೆ. ಜಾಗದಿಂದ ಹಿಡಿದು ಆಸ್ಪತ್ರೆಯಲ್ಲಿ ದಾಖಲಾಗಿ ಹೆಸರು ಬದಲಾಗಿ ಆಗುವ ಎಡವಟ್ಟಿನವರೆಗೆ ಇಲ್ಲಿ ಎಲ್ಲವೂ ಉಲ್ಟಾಪಲ್ಟಾ. ಹಾಸ್ಯವನ್ನೇ ಆಧಾರವಾಗಿಟ್ಟುಕೊಂಡು ಮಾಡಿದ ಸಿನೆಮಾ ಇದು. 2 ಎಕ್ರೆಯ ಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಿಸ್ಮಯ ವಿನಾಯಕ್ ಅವರದ್ದು. ಸಂದೇಶ್ ಬಂಗೇರ, ರೋಹನ್ ಕೋಡಿಕಲ್ ಚಿತ್ರ ನಿರ್ಮಾಪಕರು. ಒಟ್ಟು 2 ಗಂಟೆ ಎಂಟರ್ಟೈನ್ಮೆಂಟ್ ಮಾಡುವ ಸಿನೆಮಾ. ಗಿರಿಗಿಟ್ ಸಿನೆಮಾದ ಸಹಾಯಕ ನಿರ್ದೇಶಕ ರಾಕೇಶ್ ಕದ್ರಿ ಸಹನಿರ್ದೇಶಕ. ಪ್ರದೀಪ್ ಕೋಡಿಕಲ್, ರಾಕೇಶ್ ದೇವಾಡಿಗ, ಸಂತೋಷ್ ಸುಳ್ಯ ಸಹಾಯಕ ನಿರ್ದೇಶಕರಾಗಿದ್ದಾರೆ.
– ದಿನೇಶ್ ಇರಾ