ಸಂಗೀತ ಉತ್ಸವದಲ್ಲಿ ಕಿಶನ್ ಗಾಯನ
Team Udayavani, Jan 10, 2020, 6:33 PM IST
ಮಂಗಳೂರಿನ ಧ್ಯಾನಸಂಗೀತ ಅಕಾಡೆಮಿ ಕಾಲ ಟ್ರಸ್ಟ್ನ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತೋತ್ಸವದಲ್ಲಿ ಛತ್ತೀಸ್ಗಢದ ಕಿಶನ್ ಕುಮಾರ್ ದೇವಾಂಗನ್ ಗಾಯನ ಕಛೇರಿಯು ನಡೆಯಿತು. ಡಾ| ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ, ಗುರು-ಶಿಷ್ಯ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ಪಡೆದ ಯುವಕ ಕಿಶನ್.
ರಾಗ ಮುಲ್ತಾನಿಯಲ್ಲಿ ತಮ್ಮ ಕಚೇರಿಯನ್ನು ಪ್ರಾರಂಭಿಸಿ ಗೋಕುಲ ಗಾಂವ್ ಕೆ ಛೊರ ವಿಲಂಬಿತ ಏಕ್ ತಾಲ್ ಖ್ಯಾಲ್ ಪ್ರಸ್ತುತ ಪಡಿಸಿದರು. ಧೃತ್ ಏಕ್ ತಾಲ್ನಲ್ಲಿ ನೈನನಮೆ ಆನಬಾನ ಬಂದಿಶ್ ಹಾಡಿ, ಸುಲಲಿತ ಸ್ವರಸಂಚಾರ ಮತ್ತು ನಿರರ್ಗಳ ತಾನ್ಗಳ ಮೂಲಕ ಮನಗೆದ್ದರು. ಗುರುಗಳಾದ ಪಂ.ಕೈವಲ್ಯ ಕುಮಾರ್ ಗುರವ್ರಿಂದ ಬಳುವಳಿಯಾಗಿ ಬಂದ ಕಿರಾಣಾ ಘರಾಣೆಯ ನಿಧಾನಗತಿಯ ಆಲಾಪ್ ಮತ್ತು ದೀರ್ಘ ತಾನ್ ವಿಶೇಷತೆಗಳಿಂದ ರಂಜಿಸಿದರು. ಅಂತ್ಯದಲ್ಲಿ ಮಾಲಕಂಸ ರಾಗದಲ್ಲಿ “ಕಾನಡಾ ರಾಜಾ ಪಂಢರೀಚಾ’ ಮತ್ತು ಪಟ್ ದೀಪ್ ರಾಗದಲ್ಲಿ “ಬಾಜೇರೆ ಮುರಲೀಯ ಬಾಜೇ’ ಪ್ರಸ್ತುತಿಯಿಂದ ಲಘು ಸಂಗೀತದಲ್ಲೂ ತಮ್ಮ ಪರಿಣತಿಯನ್ನು ಪ್ರದರ್ಶಿಸಿದರು. ತಬಲಾದಲ್ಲಿ ಸುಮನ್ ದೇವಾಡಿಗ ಮತ್ತು ಸಂವಾದಿನಿಯಲ್ಲಿ ಅಮಿತ್ ಕುಮಾರ್, ತಾನ್ ಪುರದಲ್ಲಿ ಪ್ರತಾಪ್ ಕುಮಾರ್ ಸಹಕರಿಸಿದರು.
ಸಂದೇಶ್ ಕಾಮತ್