ವಿಜೃಂಭಿಸಿದ ಸುನಾದ ಸಂಗೀತೋತ್ಸವ
Team Udayavani, Dec 7, 2018, 6:00 AM IST
ಸುನಾದ ಸಂಗೀತ ಶಾಲೆಯ ಬದಿಯಡ್ಕ ಶಾಖೆಯ ವಾರ್ಷಿಕೋತ್ಸವ ಶ್ರೀ ಭಾರತಿ ವಿದ್ಯಾ ಪೀಠ ಬದಿಯಡ್ಕದಲ್ಲಿ ಜರಗಿತು. ಸಂಜೆ ಪ್ರಧಾನ ಕಛೇರಿಯಾಗಿ ಚೆನ್ನೈಯ ವಿ| ಶ್ರೇಯಸ್ ನಾರಾಯಣ್ ಇವ ರಿಂದ ನವರಾಗ ಮಾಲಿಕಾ “ವಲಚ್ಚಿ’ ವರ್ಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ ನಾಟರಾಗದ “ಮಹಾಗಣಪತಿ’ ಕೃತಿಯನ್ನು ಪ್ರಸ್ತುತಪಡಿಸಿದರು. ಆಲಾಪನೆಯೊಂದಿಗೆ ರೂಪಕತಾಳದ ಸರಸ್ವತೀ ನಿಧಿಯುವತಿ ಕೃತಿಯನ್ನು ಹಾಡಿದರು. ಮುಂದೆ ಶಾಮವರ್ಧಿನಿಯ ಹೃದ್ಯವಾದ ಆಲಾಪನೆ ರಸಿಕರ ಮನ ತಣಿಸಿತು. ನಂತರ ಕಾನಡದ “ಮಾಮವ ಸದಾ ಜನನಿ’ ಚುಟುಕಾದ ರಾಗ ಸ್ವರ ಪೋಣಿಕೆಗಳೊಂದಿಗೆ ರಾಗದ ಭಾವಕ್ಕೆ ತಕ್ಕಂತೆ ಮೂಡಿಬಂತು.
ನಳಿನ ಕಾಂತಿಯ “ಮನವ್ಯಾಲಕಿಂಚರ’ ದ್ರುತಗತಿಯಲ್ಲಿ ಮೂಡಿಬಂತು. ಪ್ರಧಾನ ರಾಗವಾದ ಕಲ್ಯಾಣಿ ರಾಗವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಮನೋಜ್ಞವೆನಿಸಿತು. ದೃಢವಾದ ಶಾರೀರ, ನಿರರ್ಗಳವಾಗಿ ಹೊರಹೊಮ್ಮಿದ ಬಿರ್ಕಾಗಳು, ನೆರವಲ್, ಸ್ವರಪ್ರಸ್ತಾನದೊಂದಿಗೆ “ಏತಾವುನ್ನರ’ ಕೃತಿಯು ಆಪ್ತವೆನಿಸಿತು. ನರಹರಿದೇವ, ಭಕ್ತಜನ ವತ್ಸಲೇ, ಚೆಲಿನೇ ನೊಟ್ಟು ಮುಂತಾದ ರಚನೆಗಳು ಪ್ರೇಕ್ಷಕರ ಮನಮುಟ್ಟಿತು. ವಯಲಿನ್ನಲ್ಲಿ ವಿ| ಅಚ್ಚುತ ರಾವ್ ಬೆಂಗಳೂರು ಸಾಥ್ ನೀಡಿದರು .
ನಾದಮಯವಾದ ಮೃದಂಗವಾದನ ಕೇಳುಗರನ್ನು ಮಂತ್ರಮುಗªರನ್ನಾಗಿಸಿತು. ಉತ್ತಮ ಲಯವಿನ್ಯಾಸದೊಂದಿಗಿನ ತನಿ ಆವರ್ತನದ ಮೂಲಕ ಕಚೇರಿಯನ್ನು ಕಳೆಯೇರಿಸಿದ ಕೀರ್ತಿಲಯ ಕಲಾವಿದರುಗಳಾದ ವಿ| ಕಾಂಚನ ಎ.ಈಶ್ವರ ಭಟ್ ಹಾಗೂ ವಿ| ಉಡುಪಿ ಶ್ರೀಧರ್ ಅವರಿಗೆ ಸಲ್ಲಬೇಕು.
ಪ್ರಸಾದ್ ಮೈರ್ಕಳ