ಚಿಮಣಿಯೇ ಬದುಕಿನ ದೀಪಾವಳಿ
Team Udayavani, Oct 17, 2017, 8:45 AM IST
ಚಿಮಣಿಯ ಮುಂದೆ ಓದಿ, ಈಗ ಕಂಪ್ಯೂಟರ್ನ ಬೆಳಕಿಗೆ ಮುಖವೊಡ್ಡಿ ಕೆಲಸದಲ್ಲಿ ಮುಳುಗಿದ ಪೀಳಿಗೆಗೆ ಬಾಲ್ಯದಲ್ಲಿ ಕಳೆದ “ಆ ಪುಟ್ಟ ಬೆಳಕಿನ ಧ್ಯಾನ’ ಇನ್ನೂ ಕಣ್ಣಲೇ ಜೀಕುತ್ತಿದೆ. ಕರೆಂಟಿಲ್ಲದಿದ್ದರೆ, ಆ ದಿನದ ಓದನ್ನೇ ಕೈಬಿಡುವ ಇಂದಿನ ವಿದ್ಯಾರ್ಥಿಗಳ ಮುಂದೆ ಆಚಿಮಣಿಯ ನೆನಪು ಏನೇನೋ ಸಂದೇಶ ಹೇಳಲು ಹೊರಟಿದೆ…
ಮೊನ್ನೆ ಊರಿಗೆ ಹೋಗಿದ್ದೆ. ನಮ್ಮೂರಲ್ಲಿ ಈ ಬೆಂಗಳೂರ ಹಾಗೆ ಅಪರೂಪಕ್ಕೆ ಕರೆಂಟು ಹೋಗಲ್ಲ. ಬದಲಾಗಿ, ಅಪರೂಪಕ್ಕೆ ಕರೆಂಟು ಇರುತ್ತೆ! ಅದೇನೋ ಪವರ್ ಕಟ… ಅಂತ ಹೇಳಿ ದಿನದ 12 ಗಂಟೆ ಕರೆಂಟ್ ತೆಗೀತಾರಪ್ಪ. ಮೊನ್ನೆಯೂ ನಾನು ಊರಿಗೆ ಹೋಗಿದ್ದಾಗ ಕರೆಂಟ್ ಇರಲಿಲ್ಲ. ಸಂಜೆ ಬರಬಹುದೇನೋ ಅನ್ಕೊಂಡಿದ್ವಿ. ಸಂಜೆನೂ ಬರಲಿಲ್ಲ. ರಾತ್ರಿ ಆಯ್ತು, ಊಹೂ… ಮಾರನೇ ದಿನವೂ ಇಲ್ಲ! ಕರೆಂಟು ಇಲ್ಲವೆಂದರೆ ನಮ್ಮೂರಿನ ಜನ ಅಡುಗೆಯನ್ನು ಹೇಗೋ ರುಬ್ಬು ಕಲ್ಲಲ್ಲಿ ರುಬ್ಬಿ ಮಾಡಿಯಾರು. ಆದರೆ, ಧಾರಾವಾಹಿ ನೋಡಲು ಆಗುವುದಿಲ್ಲ ಎಂಬುದೇ ಅವರ ಬಹು ದೊಡ್ಡ ಅಳಲು!
ಮಾರನೇ ದಿನವೂ ಕರೆಂಟು ಬರದಿದ್ದನ್ನು ನೋಡಿ ಪಕ್ಕದ ಮನೆಯವರು ಕೆ.ಇ.ಬಿ.ಗೂ ಫೋನು ಮಾಡಿ ವಿಚಾರಿಸಿದ್ದಾಯಿತು.ಊರವರ ಕಾಟ ತಡೆಯಲಾರದೇ ಕೆ.ಇ.ಬಿ.ಯ ಫೋನು ದುರಸ್ತಿಯಲ್ಲಿರುವುದೇ ಹೆಚ್ಚು. ಅ ದೃ ಷ್ಟವಶಾತ್ ಫೋನು ತೆಗೆದ ಕೆ. ಇ . ಬಿ. ಸಿಬ್ಬಂದಿ, ದಾರಿಯಲ್ಲೆಲ್ಲೋ ಮರ ಬಿದ್ದು ಲೈನು ಹೋಗಿರುವುದಾಗಿಯೂ ಹಾಗೂ ಅದನ್ನು ಸರಿಪಡಿಸಲು ಇನ್ನೂ ಒಂದು ದಿನ ತಗುಲುತ್ತದೆಂದು ಹೇಳಿದ್ದಾಯಿತು.
ಅಲ್ಲಿ ಈ ಕರೆಂಟನ್ನು ನಂಬಿ ಯಾರೂ ಬದುಕೋದಿಲ್ಲ. ಎಲ್ಲರ ಮನೆಯಲ್ಲೂ ಇನ್ವೆರ್ಟರ್ ಇದ್ದೇ ಇರುತ್ತೆ. ಆದರೆ, ಎರಡು ದಿನದಿಂದ ಕರೆಂಟ್ ಬಾರದ ಕಾರಣ ನಮ್ಮನೆಯ ಇನ್ವೆರ್ಟ ಜೀವ ಕಳಕೊಂಡಿತ್ತು. ಸಂಜೆಯಾಯ್ತು, ಬೆಳಕು ಬರಿದಾಗಿ, ಕಪ್ಪಾಯಿತು. ಅಮ್ಮ ಎಲ್ಲೋ ಮೂಲೆಯಲ್ಲಿ ಧೂಳು ಹಿಡಿದು ಕೂತಿದ್ದ ಚಿಮಣಿ ದೀಪ ಹೊರ ತಂದಳು. ಇದಕ್ಕೆ ಸ್ವಲ್ಪ ಸೀಮೆಎಣ್ಣೆ ಹಾಕಿ ಹಚ್ಚಿಸೋಣ, “ಇವತ್ತಿಗೆ ಇದೇ ಗತಿ ಬಾ’ ಎಂಬ ಆಹ್ವಾನ ಅವಳದ್ದು. ಆ ಚಿಮಣಿ ದೀಪವನ್ನು ಶುಚಿ ಮಾಡಿ, ಅದಕ್ಕೆ ಎಣ್ಣೆ ಹಾಕಿ ಹೊತ್ತಿಸುವಾಗ ನನ್ನ ಹಳೇ ನೆನಪಿನ ಬುತ್ತಿ ತೆರೆದುಕೊಂಡಿತ್ತು.
ನಾವೆಲ್ಲಾ ಶಾಲೆಗೆ ಹೋಗುವಾಗ ಇನ್ವೆರ್ಟರ್ ಎನ್ನುವ ಶಬ್ದವನ್ನೇ ಕೇಳಿರಲಿಲ್ಲ. ಕರೆಂಟು ಹೋದಾಗಿನ ಮಜವೇ ಬೇರೆ. ಒಂದೇ ಚಿಮಣಿ ದೀಪದ ಸುತ್ತ ಮನೆಯ ಮಕ್ಕಳೆಲ್ಲರೂ ಓದಲು ಕುಳಿತುಕೊಳ್ಳುತ್ತಿದ್ದೆವು. ಚಿಮಣಿ ಯ ಬೆಳಕಲ್ಲಿ ಮನೆಯವರೆಲ್ಲಾ ಕುಳಿ ತು, ಭಜನೆ ಮಾಡುತ್ತಿದ್ದೆ ವು. ಮಕ್ಕಳೆಲ್ಲ ಒಬ್ಬೊಬ್ಬರಾಗಿ ಬಾಯಿಪಾಠ ಹೇಳುತ್ತಿದ್ದೆವು.ಆ ಚಿಮಣಿಯ ಹೊಗೆಗೆ ಕೈಯೊಡ್ಡಿ ಕೈಯೆಲ್ಲ ಕಪ್ಪು ಮಾಡಿಕೊಂಡು ನಿಧಾನವಾಗಿ ಪಕ್ಕದವರ ಬಟ್ಟೆಗೆ ಒರೆಸುತ್ತಿದ್ದೆವು! ಬಚ್ಚಲ ಮನೆಯ ಹಲಗೆಯ ಮೇಲೆ ಇಟ್ಟ ಚಿಮಣಿಯ ದೀಪವನ್ನ ಆರಿಸಿ ಓಡಿ ಬರುತ್ತಿ¨ªೆವು.
ಮಳೆಗಾಲ ಬಂದರಂತೂ ಇನ್ನೂ ಮಜ. ಚಿಮಣಿಯನ್ನು ನೀರಿನ ತಟ್ಟೆಯ ಮಧ್ಯವಿಟ್ಟು, ದೀಪದ ಸುತ್ತ ಬರುವ ಮಳೆಹುಳಗಳನ್ನು ನೀರಿಗೆ ಬೀಳಿಸುವುದೇ ಏನೋ ಖುಷಿ. ಚಿಮಣಿಯ ನೆರಳಲ್ಲಿ ಬೆರಳುಗಳ ಆಟ ಆಡಿ ಗೋಡೆಯ ಮೇಲೆ ಚಿತ್ರಗಳನ್ನು ಮೂಡಿಸುತ್ತಿದ್ದಾಗಿನ ಖುಷಿ ಇಂದಿನ ಯಾವ ಖುಷಿಗೂ ಸಮನಾಗದು. ಎಷ್ಟೋ ಸಲ ಚಿಮಣಿಯ ದೀಪದಿಂದ ಬಟ್ಟೆ ಸುಟ್ಟುಕೊಂಡಿದ್ದೇವೆ, ಬೇರೆ ಬೇರೆ ಅವಾಂತರ ಮಾಡಿಕೊಂಡಿದ್ದೇವೆ. ಆದರೂ ಈ ಚಿಮಣಿಯ ಬೆಳಕು ನಮ್ಮೆಲ್ಲರನ್ನೂ ಒಂದೆಡೆ ಸೇರಿಸುತಿತ್ತು. ಮನೆಯವರೆಲ್ಲಾ ಒಟ್ಟಿಗೆ ಕೂತು ಹರಟುವ ಸದಾವಕಾಶವನ್ನು ಅದು ಕಲ್ಪಿಸುತಿತ್ತು.
ಒಂದು ನಿಮಿಷ ಕರೆಂಟು ಇಲ್ಲದಿದ್ದರೂ ಓದಲಾಗುವುದಿಲ್ಲ ಎನ್ನುವ ಈಗಿನ ಪೀಳಿಗೆಯ ಮಕ್ಕಳ ನಡುವೆ ಎಷ್ಟೋ ಪರೀಕ್ಷೆಗಳನ್ನು ದೀಪದ ಬೆಳಕಲ್ಲೇ ಓದಿ ಬರೆದು ಪಾಸು ಮಾಡಿರುವ ಹೆಮ್ಮೆ ನನಗಿದೆ. ಚಿಮಣಿ ದೀಪದ ಕಲ್ಪನೆಯೇ ಇಲ್ಲದ ಜನರಿಗಿಂತ ಚಿಮಣಿ ಯ ಬೆಳಕಲ್ಲೇ ಬಾಲ್ಯದ ಸಂಜೆಗಳನ್ನು ಕಳೆದು ಬದುಕಿದರೂ, ಇಂದು ಎ.ಸಿ. ರೂಮಿನಲ್ಲಿ ಕೂತು ಕೆಲಸ ಮಾಡುವ ನಾವುಗಳು, ಎರಡು ಪೀಳಿಗೆಯ ಕೊಂಡಿಯಾಗಿದ್ದೇವೆಂದರೆ ತಪ್ಪಾಗಲಾರದು.
ಮೊನ್ನೆಯೂ ಚಿಮಣಿಯ ದೀಪ ಮತ್ತೆ ನಮ್ಮೆಲ್ಲರನ್ನು ಒಟ್ಟಿಗೆ ಸೇರಿಸಿತ್ತು. ಧಾರಾವಾಹಿ- ಕ್ರಿಕೆಟ್ಟುಗಳ ಗಲಾಟೆಯಿಲ್ಲದೆ ಸಂಜೆ ಶಾಂತವಾಗಿತ್ತು. ವಿದ್ಯುದ್ದೀಪಗಳಿಂದ ಕತ್ತಲೆಯ ಬೆಲೆಯನ್ನೇ ಮರೆತ ನಮಗೆ ಮತ್ತೆ ಕತ್ತಲೆಯ ಹಿತಾನುಭವವನ್ನು ನೀಡಿತ್ತು. ಆ ಕತ್ತಲ ಆಕಾಶ ದ ಕೆಳಗೆ ನಮ್ಮ ಮನೆ ದೀಪ ಹೊತ್ತ ಪುಟ್ಟ ಗುಡಿಸಲಂತೆ ಕಾಣುತಿತ್ತು. ದೀಪದ ಹೊಗೆಯು ಬತ್ತಿ ಉರಿದು ಬೆಳಕು ಕೊಟ್ಟ ಸಾರ್ಥಕತೆಯಲ್ಲಿ ನಗುತಿತ್ತು. ಮನೆಯವರೆಲ್ಲಾ ಒಟ್ಟಿಗೆ ಕೂತು ನಗುವಾಗ ಮತ್ತೆ ನನ್ನ ಬಾಲ್ಯ ನನಗೆ ಸಿಕ್ಕಿತ್ತು. ಎಣ್ಣೆ ತೀರಿ ದೀಪ ಚಿಕ್ಕದಾಗುತ್ತಿದ್ದಂತೆ ಮತ್ತೆ ನನ್ನ ಈ ಜಗತ್ತಿಗೆ ವಾಪಸು ದೂಡುತಿತ್ತು.
ಮಂದಾರ ಕೆ.ಆರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Brahmavara-ಉಡುಪಿ ಟ್ರಾಫಿಕ್ ಜಾಮ್ ಸಮಸ್ಯೆ: ಸವಾರರು ಸುಸ್ತೋ ಸುಸ್ತು
Gangster ಗೋಲ್ಡಿ ಬ್ರಾರ್ ಸತ್ತಿಲ್ಲ… ಶೂಟೌಟ್ ಬಗ್ಗೆ ಸ್ಪಷ್ಟನೆ ನೀಡಿದ ಅಮೆರಿಕ ಪೊಲೀಸರು
Pens: ಬಹುರೂಪದಲ್ಲಿ ಲಭ್ಯವಿರುವ ಬಹುಪಯೋಗಿ ಲೇಖನಿ
70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ; ನಿರ್ವಹಣೆಯಿಲ್ಲದೆ ಸೊರಗಿದ ಮಲ್ಲಿಕಟ್ಟೆ ಪಾರ್ಕ್
Rajinikanth ಬಯೋಪಿಕ್ಗೆ ಭರ್ಜರಿ ತಯಾರಿ; ಬಾಲಿವುಡ್ ನಿರ್ಮಾಪಕನಿಂದ ಸಿನಿಮಾ ನಿರ್ಮಾಣ