ಎಂಬಿಎ ಭಯಾಗ್ರಫಿ


Team Udayavani, Dec 5, 2017, 1:39 PM IST

mba-biography.jpg

“ಒಳ್ಳೇ ಕೆಲಸ, ಕೈ ತುಂಬಾ ಸಂಬಳ’ ಎಂಬ ಟ್ಯಾಗ್‌ಲೈನ್‌ ಈಗ ಎಂ.ಬಿ.ಎ. ಜತೆಗಿಲ್ಲ! “ಮಾಸ್ಟರ್‌ ಆಫ್ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌’ ಕೋರ್ಸ್‌ ಮಾಡಿದ ಲಕ್ಷಾಂತರ ಉದ್ಯೋಗಿಗಳಲ್ಲಿ ಶೇ. 53ರಷ್ಟು ವಿದ್ಯಾರ್ಥಿಗಳು ಇಂದು ನಿರುದ್ಯೋಗಿಗಳು! ದೇಶದಲ್ಲಿ ಸಾವಿರಾರು ಎಂಬಿಎ ಕಾಲೇಜುಗಳಿಗೆ ಮಾನ್ಯತೆ ನೀಡಿರುವ ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌ (ಎಐಸಿಟಿಇ) ಈ ಅಂಶವನ್ನು ಹೊರಗೆಡವಿರುವುದು, ಲಕ್ಷಾಂತರ ವಿದ್ಯಾರ್ಥಿಗಳ ಚಿಂತೆಗೆ ಕಾರಣವಾಗಿದೆ…

ಹತ್ತನ್ನೆರಡು ವರ್ಷದ ಹಿಂದಿನ ಕತೆ. ಒಬ್ಬಳು ಹುಡುಗಿಗೆ ಎರಡು ಮದುವೆ ಸಂಬಂಧಗಳು ಬಂದಿದ್ದವು. ಒಬ್ಬ ಸಾಫ್ಟ್ವೇರ್‌ ಎಂಜಿನಿಯರ್‌. ಇನ್ನೊಬ್ಬ ಎಂಬಿಎ ಪದವೀಧರ. ಆ ಹುಡುಗಿ, ದೊಡ್ಡ ಕನ್‌ಫ್ಯೂಶನ್‌ನಿಂದ ರಾತ್ರಿಯಿಡೀ ನಿದ್ದೆಗೆಟ್ಟು ಯೋಚಿಸಿದ್ದಳು. ಇಬ್ಬರಲ್ಲಿ ಯಾರನ್ನು ಆರಿಸ್ಕೊಳ್ಳೋದು? ಯಾರು ಹೆಚ್ಚು ಪಗಾರಕ್ಕೆ ಬಾಳುವ ರಾಜಕುಮಾರ? ಅನ್ನೋ ಲೆಕ್ಕಾಚಾರ ಆಕೆಯ ತಲೆಯಲ್ಲಿ.

ಅಂದರೆ, ಒಬ್ಬ ಟೆಕ್ಕಿ ದುಡಿದಷ್ಟೇ ಸಂಬಳವನ್ನು ಎಂಬಿಎ ಪದವೀಧರ ದುಡಿಯುತ್ತಿದ್ದ ಕಾಲ ಅದಾಗಿತ್ತು. ಭಾರತದಲ್ಲಿ ಸಾಫ್ಟ್ವೇರ್‌ ಕ್ಷೇತ್ರಕ್ಕೆ ಸಡ್ಡು ಹೊಡೆದ ಮಧ್ಯಮವರ್ಗದ ಮೊದಲ ಕೋರ್ಸ್‌ ಎಂಬಿಎ! ನೋಡ್ತಾ ನೋಡ್ತಾ ಎಂಜಿನಿಯರಿಂಗ್‌ ಕಾಲೇಜಿನ ಕ್ಯೂ ಕರಗಿ, ಎಂಬಿಎದತ್ತ ಮುಖಮಾಡುವವರ ಸಂಖ್ಯೆ ದುಪ್ಪಟ್ಟಾಗಿದ್ದು ಒಂದೇ ದಶಕದ ಅಂತರದಲ್ಲಿ.

ಮದುವೆಯಾಗಲು ಹೊರಟ ಹುಡುಗಿಯರು, ಟೆಕ್ಕಿಗಳ ಅರ್ಜಿಯನ್ನು ಕೆಳಕ್ಕೆ ತಳ್ಳಿ, ಎಂಬಿಎ ಅರ್ಜಿಯನ್ನು ಮೇಲಕ್ಕೆತ್ತಿ, ತಂದೆ- ತಾಯಿಯ ಕೈಗಿಡುತ್ತಿದ್ದರು. “ಲೋಕ ನಿಂತಿರೋದೇ ಲೆಕ್ಕಾಚಾರದ ಮೇಲೆ. ದುಡ್ಡು ಇರೋ ತನಕ ಬ್ಯಾಂಕಿಂಗ್‌ ಕ್ಷೇತ್ರ ಇರುತ್ತೆ. ಬ್ಯಾಂಕ್‌ಗಳು ಇರೋ ತನಕ ಎಂಬಿಎಗೆ ವ್ಯಾಲ್ಯೂ ಇರುತ್ತೆ’ ಅಂತೆಲ್ಲ ಡೈಲಾಗ್‌ಗಳು ಡೆಲ್ಲಿಯಿಂದ ದಾವಣಗೆರೆಯಂಥ ಶೈಕ್ಷಣಿಕ ನಗರಿಯ ತನಕ ಕೇಳಿಬಂದಿದ್ದು ಸುಳ್ಳಲ್ಲ.

ನಂತರ ನಡೆದಿದ್ದೆಲ್ಲ ಎಂಬಿಎ ಕ್ರಾಂತಿ. ಎಂಬಿಎ ಕಾಲೇಜುಗಳು ಹೆಚ್ಚಾದವು. ಸಂಭಾವನೆ ಏರಿಸಿಕೊಂಡ ಉಪನ್ಯಾಸಕರು ಕಾಸ್ಟಿಯಾದರು. ವಿದ್ಯಾರ್ಥಿಗಳು ಕಂತೆಕಂತೆ ನೋಟುಗಳನ್ನು ಇಟ್ಟುಕೊಂಡು ಕಾಲೇಜಿನ ಕ್ಯಾಶ್‌ ಕೌಂಟರ್‌ ಮುಂದೆ ಬಂದರು. ಎಂ.ಕಾಂ. ಎಂಬ ಸೀರೆಯುಟ್ಟ ನಾರಿಗೆ ಪರ್ಯಾಯವಾಗಿ, ಸಖತ್‌ ಪೋಶ್‌ ಆಗಿ ಬಂದ ಕೋರ್ಸ್‌ ಎಂಬಿಎ ಆಗಿದ್ದರಿಂದ, ಈ ಕೋರ್ಸ್‌ ಬಗೆಗಿನ ಆಕರ್ಷಣೆ ಹೆಚ್ಚಾಯಿತು.

ಬಾಯಿ ಮಾತಿನ ಜಾಹೀರಾತೇ, ಖಾಸಗಿ ಕಾಲೇಜುಗಳ ಸೀಟುಗಳನ್ನು ತುಂಬಿಸಿಬಿಟ್ಟಿದ್ದೂ ಇದೆ. ಈಗಿನ ಪರಿಸ್ಥಿತಿ ಹಾಗಿಲ್ಲ. ಈಗತಾನೆ ಎಂಬಿಎ ಮುಗಿಸಿದವರೆಲ್ಲ ದೊಡ್ಡ ದೊಡ್ಡ ಕಂಪನಿಗಳಲ್ಲಿಲ್ಲ. ಆರಂಕಿ ಸಂಬಳವೆಲ್ಲ ಕನಸಾಗಿದೆ. ಡೋರ್‌ಮ್ಯಾಟ್‌ ಕಂಪನಿಗಳಲ್ಲಿ 7 ಸಾವಿರ ರೂ. ಸಂಬಳಕ್ಕೆ ಮ್ಯಾನೇಜರ್‌ ಆಗಿ, 9 ಸಾವಿರಕ್ಕೆ ಕಾಲ್‌ ಸೆಂಟರ್‌ಗಳಲ್ಲಿ ಫೋನ್‌ ರಿಸೀವ್‌ ಮಾಡುತ್ತಾ,

ಮತ್ತೆ ಕೆಲವರು ವರ್ಷಕ್ಕೆ ಐದಾರು ಸಲ ರೆಸ್ಯೂಮ್‌ ಡೇಟ್‌ ಅನ್ನು ಅಪ್‌ಡೇಟ್‌ ಮಾಡುತ್ತಾ, ಕೆಲಸಕ್ಕಾಗಿ ಕಾದು ಕುಳಿತಿರುವ ಎಂಬಿಎ ಪದವೀಧರರಿಗೆ  ಬೆಲೆ ಇಲ್ಲದಂತಾಗಿದೆ. “ಒಳ್ಳೇ ಕೆಲಸ, ಕೈ ತುಂಬಾ ಸಂಬಳ’ ಎಂಬ ಟ್ಯಾಗ್‌ಲೈನ್‌ ಈಗ ಎಂ.ಬಿ.ಎ. ಜತೆಗಿಲ್ಲ! “ಮಾಸ್ಟರ್‌ ಆಫ್ ಬ್ಯುಸಿನೆಸ್‌ ಅಡ್ಮಿನಿಸ್ಟ್ರೇಷನ್‌’ ಕೋರ್ಸ್‌ ಮಾಡಿದ ಲಕ್ಷಾಂತರ ಉದ್ಯೋಗಿಗಳಲ್ಲಿ ಶೇ. 53ರಷ್ಟು ವಿದ್ಯಾರ್ಥಿಗಳು ಇಂದು ನಿರುದ್ಯೋಗಿಗಳು!

ದೇಶದಲ್ಲಿ ಸಾವಿರಾರು ಎಂಬಿಎ ಕಾಲೇಜುಗಳಿಗೆ ಮಾನ್ಯತೆ ನೀಡಿರುವ ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜುಕೇಷನ್‌ (ಎಐಸಿಟಿಇ) ಈ ಅಂಶವನ್ನು ಹೊರಗೆಡವಿರುವುದು, ಲಕ್ಷಾಂತರ ವಿದ್ಯಾರ್ಥಿಗಳ ಚಿಂತೆಗೆ ಕಾರಣವಾಗಿದೆ. 1990- 2000ದ ದಶಕದಲ್ಲಿ ಉದಾರ ನೀತಿಯಿಂದ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಲಗ್ಗೆಯಿಡುತ್ತಿದ್ದರಿಂದ ಸಹಜವಾಗಿಯೇ ಉದ್ಯೋಗಾವಕಾಶಗಳೂ ಹೆಚ್ಚಾಗಿದ್ದವು.

ಎಂಬಿಎ ಮುಗಿಸಿದ ವಿದ್ಯಾರ್ಥಿಗಳಿಗೆ ಅದರಲ್ಲೂ ಮಾರ್ಕೆಟಿಂಗ್‌, ಫೈನಾನ್ಸ್‌, ಎಚ್‌ಆರ್‌ಗಳಲ್ಲಿ ಪರಿಣತಿ ಪಡೆದವರಿಗೆ ಕಾರ್ಪೊರೇಟ್‌ ವಲಯದಲ್ಲಿ ದೊಡ್ಡ ಹುದ್ದೆಗಳು, ಕೈ ತುಂಬಾ ಸಂಬಳಗಳು ಸಿಗುವಂತಾಗಿತ್ತು. ಅದರಲ್ಲೂ “ಮಾರ್ಕೆಟಿಂಗ್‌’ ಅನೇಕ ಉದ್ಯೋಗಾವಕಾಶಗಳನ್ನು ತೆರೆದಿಟ್ಟಿತು. ಹಾಗಾಗಿಯೇ, ಇದು ಮಧ್ಯಮ ವರ್ಗದ ಫೇವರಿಟ್‌ ಕಾಮರ್ಸ್‌ ಕೋರ್ಸ್‌ ಆಗಿ ಪರಿವರ್ತನೆಯಾಗಿದ್ದು.

ಇದರ ಪರಿಣಾಮ, “ಕುರಿಗಳು ಸಾರ್‌ ಕುರಿಗಳು’ ಎಂಬಂತೆ ಸಾಲುಸಾಲಾಗಿ ಎಂಬಿಎ ಕಾಲೇಜುಗಳಿಗೆ ವಿದ್ಯಾರ್ಥಿಗಳು ದೌಡಾಯಿಸಲು ಶುರುವಾದರು. ಇದು ಮುಂದೆ, ಎಂಬಿಎ ಕಾಲೇಜುಗಳು ಅಣಬೆಗಳಂತೆ ಹುಟ್ಟಿಕೊಳ್ಳಲೂ ಕಾರಣವಾಯಿತು. ಅನೇಕ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳು ತಮ್ಮಲ್ಲೇ ಎಂಬಿಎ ಆರಂಭಿಸಿದವು. 

ಈಗ, ಈ ಎಂಬಿಎ ಸ್ಯಾಚುರೇಷನ್‌ ಲೆವೆಲ್‌ ಮೀರಿ, ಅಲ್ಟ್ರಾ ಸ್ಯಾಚುರೇಷನ್‌ ಲೆವೆಲ್‌ಗೆ ಬಂದು, ಹೆಚ್ಚಾ ಕಡಿಮೆ ಫ್ರೀಜ್‌ ಆಗುವ ಮಟ್ಟಕ್ಕೆ ಬಂದು ನಿಂತಿದೆಯೆಂದರೆ ಖಂಡಿತವಾಗಿಯೂ ಇದು ಅಸೂಯೆಯ ಮಾತಲ್ಲ. ಏಕೆಂದರೆ, ವಾಣಿಜ್ಯ ಕ್ಷೇತ್ರದ “ಪೂರೈಕೆ ಹೆಚ್ಚಾದಾಗ ಬೇಡಿಕೆ ಕುಸಿಯುತ್ತದೆ’ ಎಂಬ ನೀತಿಗೆ ಇದಕ್ಕೂ ಅನ್ವಯಿಸುತ್ತದೆ.

ಅದನ್ನು ಓಧ್ದೋರು ಹೇಳ್ಳೋದು…: ಈಗಾಗಲೇ ಫೀಲ್ಡ್‌ನಲ್ಲಿ ತೊಡಗಿಸಿಕೊಂಡು ಹತ್ತಾರು ವರ್ಷಗಳ ಅನುಭವ ಗಳಿಸಿ ಈಗೊಳ್ಳೊಳ್ಳೆ ಕಡೆ ಕೆಲಸದಲ್ಲಿರುವ ತುಸು ಸೀನಿಯರ್‌ಗಳು ಹೇಳ್ಳೋದೇ ಬೇರೆ. ಅವರ ಪ್ರಕಾರ, ಎಂಬಿಎನಲ್ಲಿ ಅವಕಾಶಗಳು ಸ್ಯಾಚುರೇಷನ್‌ ಹಂತಕ್ಕೆ ಬಂದಿರುವುದು ಕೊಂಚ ನಿಜ. ಆದರೆ, ಅವಕಾಶಗಳು ಸಂಪೂರ್ಣವಾಗಿ ಇಲ್ಲವಾಗಿಲ್ಲ. ಆದರೆ, ಎಂಬಿಎ ಮುಗಿಸಿದ ವಿದ್ಯಾರ್ಥಿಗಳ ಧೋರಣೆ ಇಂದು ಬದಲಾಗಿದೆ.

ಡಿಗ್ರಿ ಮುಗಿಸಿದವರಲ್ಲಿ ಹಲವಾರು ಮಂದಿ ಕಾಲಿಟ್ಟರೆ ಕಾರ್ಪೊರೇಟ್‌ ವಲಯಕ್ಕೇ ತಮ್ಮನ್ನು ಸೀಮಿತಗೊಳಿಸಿಕೊಂಡರೆ, ಹಲವಾರು ಮಂದಿ ಬ್ಯಾಂಕಿಂಗ್‌ ನೌಕರಿಗಳತ್ತ ಮನಸ್ಸು ಮಾಡಿ ಅಲ್ಲಿ ಪ್ರವೇಶ ಪರೀಕ್ಷೆಗಳನ್ನು ಬರೆಯುತ್ತಾ ಕಾಲಹರಣ ಮಾಡುತ್ತಿದ್ದಾರೆ. ಅಲ್ಲದೆ, ಒಂದು ಕಾಲದಲ್ಲಿ ಮಾರ್ಕೆಟಿಂಗ್‌ ಇಷ್ಟಪಡುತ್ತಿದ್ದ ಹುಡುಗರು ಈಗ ಕಂಪನಿಗಳ ಟಾರ್ಗೆಟ್‌ ದಾಹಕ್ಕೆ ಬಲಿಯಾಗಿ ಆಸಕ್ತಿ ಕಳೆದುಕೊಂಡಿದ್ದಾರೆ.

ಇದು ಗೊತ್ತಿದ್ದವರು ಫೈನಾನ್ಸ್‌, ಎಚ್‌ಆರ್‌ಗಳಲ್ಲಿ ಸ್ಪೆಷಲೈಸೇಷನ್‌ ಮಾಡಿಕೊಳ್ಳುತ್ತಾರೆ. ಆದರೆ, ಅವುಗಳಲ್ಲಿ ಓಪನಿಂಗ್ಸ್‌ (ಉದ್ಯೋಗವಕಾಶಗಳು) ಕಡಿಮೆಯಾಗಿವೆ. ಮಾರ್ಕೆಟಿಂಗ್‌ನಲ್ಲಿ ಅವಕಾಶವಿದ್ದರೂ ಕಂಪನಿಗಳ ಧೋರಣೆಗಳಿಗೆ ಹೆದರಿ ಅವರು ಇತ್ತ ತಲೆಹಾಕುತ್ತಿಲ್ಲ. ಈ ಎಲ್ಲದರ ಪರಿಣಾಮವಾಗಿ, ಎಂಬಿಎ ಮಾಡಿಯೂ ಉದ್ಯೋಗ ವಂಚಿತರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ. 

ನಿರುದ್ಯೋಗಿಗಳ ಗೋಳು: ಇನ್ನು, ಎಂಬಿಎ ಮುಗಿಸಿ ಒಂದೆರಡು ವರ್ಷಗಳಾದರೂ ಕೆಲಸ ಹುಡುಕುತ್ತಿರುವ ಪದವೀಧರರು ಹೇಳ್ಳೋದು ಬೇರೆ ಕತೆ. ಎಂಬಿಎ ಮಾಡಲು ಯಾವುದೇ ಡಿಗ್ರಿ ಇದ್ದರೆ ಸಾಕು. ಆದರೆ, ಇತ್ತೀಚೆಗೆ ಹಲವಾರು ಕಂಪನಿಗಳು, ವಿಚಿತ್ರ ಧೋರಣೆ ಅನುಸರಿಸುತ್ತಿವೆ. ಬಿಬಿಎಂ, ಬಿಕಾಂ ಓದಿರುವ ಎಂಬಿಎ ಗ್ಯಾಜುಯೇಟ್‌ಗಳನ್ನು ಮಾತ್ರವೇ ಕೆಲಸಕ್ಕೆ ತೆಗೆದುಕೊಳ್ಳುವ ಚಾಳಿ ಶುರುವಾಗಿದೆ.

ಅಂದರೆ, ವಿಜ್ಞಾನ, ಕಲಾ ವಿಭಾಗಗಳಲ್ಲಿ ಸ್ನಾತಕ ಪದವಿ ಪಡೆದು ಆನಂತರ ಎಂಬಿಎ ಮಾಡಿದವರು ಇವರಿಗೆ ಬೇಕಿಲ್ಲ. ಇದು ಎಂಬಿಎ ವಿದ್ಯಾರ್ಥಿಗಳಿಗೆ ದೊಡ್ಡ ಹೊಡೆತ. ಇನ್ನು, ಎಂಬಿಎಗೆ ಹೆಚ್ಚುವರಿಯಾಗಿ ಕೆಲವಾರು ಕೋರ್ಸ್‌ಗಳನ್ನು ಮಾಡಿರಬೇಕೆಂದು ಕೆಲ ಕಂಪನಿಗಳು ಆಶಿಸುತ್ತಿವೆ. ಇದೂ ಎಂಬಿಎ ವಿದ್ಯಾರ್ಥಿಗಳಿಗೆ ಸವಾಲಾಗಿದೆ ಎಂದು ಹೇಳುತ್ತಾರೆ ಅವರು.

ರಿಕ್ರೂಟರ್‌ಗಳು ಏನಂತಾರೆ?: ಬೆಂಗಳೂರಿನಂಥ ಊರುಗಳಲ್ಲಿ ಪದವೀಧರರಿಗೆ ಕೆಲಸ ಕೊಡಿಸಲೆಂದೇ ಕೆಲವಾರು ಏಜೆನ್ಸಿಗಳಿವೆ. ಅವರ ಪ್ರಕಾರ, ಹಲವಾರು ಕಾಲೇಜುಗಳಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಎಂಬಿಎ ವಿದ್ಯಾರ್ಥಿಗಳನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಸರಿದೂಗುವಂತೆ ಅವರನ್ನು ತಯಾರಿಸಲಾಗುತ್ತಿಲ್ಲ.

ನಮ್ಮನ್ನು ಸಂಪರ್ಕಿಸುವ ಅಭ್ಯರ್ಥಿಗಳಲ್ಲಿ ಪರವಾಗಿಲ್ಲ ಎಂಬಂಥ ಅಭ್ಯರ್ಥಿಗಳನ್ನು ಕೆಲವು ಕಂಪನಿಗಳಿಗೆ ಕಳುಹಿಸಿದರೂ, ಸ್ಪರ್ಧೆಯೆನ್ನುವುದು ತಾರಕಕ್ಕೇರಿರುವ ಈ ಕಾಲದಲ್ಲಿ ಕಂಪನಿಗಳು ಅಭ್ಯರ್ಥಿಗಳಲ್ಲಿ ಕೂದಲೆಳೆಯಷ್ಟು ಲೋಪ ಕಂಡರೂ ರಿಜೆಕ್ಟ್ ಮಾಡಿಬಿಡುತ್ತಾರೆ. ಹಲವಾರು ಕಾಲೇಜುಗಳು ಕಳಪೆ ಸೌಲಭ್ಯ ಹೊಂದಿರುವ ಹಿನ್ನೆಲೆಯಲ್ಲೇ ಇಂದು ಕ್ಯಾಂಪಸ್‌ ಸೆಲೆಕ್ಷನ್‌ಗೂ ಹೋಗಲು ಕಂಪನಿಗಳು ಹಿಂದೇಟು ಹಾಕುತ್ತಿವೆ ಎನ್ನುತ್ತಿವೆ ಈ ಏಜೆನ್ಸಿಗಳು.

ಶೇ.47 ಮಂದಿಗಷ್ಟೇ ಕೆಲಸ!: ಸಮೀಕ್ಷೆಯೊಂದರ ಪ್ರಕಾರ, ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಾದ ಐಐಎಂಗಳಿಂದ ಹೊರಬರುವ ವಿದ್ಯಾರ್ಥಿಗಳಿಗೆ ಈ ಸಮಸ್ಯೆ ಕಾಡುತ್ತಿಲ್ಲ. ಆದರೆ, ದೇಶದ ಇನ್ನುಳಿದ 5 ಸಾವಿರ ಎಂಬಿಎ ಕಾಲೇಜುಗಳಿಂದ ಸುಮಾರು 2 ಲಕ್ಷದಷ್ಟು ವಿದ್ಯಾರ್ಥಿಗಳು ಡಿಗ್ರಿ ಪ್ರಮಾಣ ಪತ್ರ ಹಿಡಿದುಕೊಂಡು ಹೊರಬರುತ್ತಿದ್ದಾರೆ.

ಇವರಲ್ಲಿ ಕೆಲಸಕ್ಕೆ ಹೋಗುವುದು ಸರಾಸರಿ ಶೇ. 47ರಷ್ಟು ಮಾತ್ರ. ಒಟ್ಟಾರೆಯಾಗಿ, ಕಳಪೆ ಸೌಲಭ್ಯಗಳ ಕಾಲೇಜುಗಳು, ಉಸಿರು ಬಿಗಿಹಿಡಿಸುವಂಥ ಸ್ಪರ್ಧೆ, ಇದೆಲ್ಲದರ ಜತೆ ಕುರಿಗಳಂತೆ ಹೋಗಿ ಬೀಳುತ್ತಿರುವ ವಿದ್ಯಾರ್ಥಿಗಳು… ಯಾರದ್ದು ತಪ್ಪು, ಯಾರದ್ದು ಸರಿ? ಹೀಗಿರುವ ಈ ವ್ಯವಸ್ಥೆಯಲ್ಲಿ ಯಾರನ್ನು ದೂರುವುದು?

ಅಥವಾ, ನೇಪಥ್ಯಕ್ಕೆ ಸರಿಯುವ ಕೆಲವು ಕೋರ್ಸುಗಳು ಪುನಃ ಕೆಲ ವರ್ಷಗಳ ತರುವಾಯ ಚಾಲ್ತಿಗೆ ಬರುವಂತೆ ಮುಂದೊಂದು ದಿನ ಮತ್ತೆ ಎಂಬಿಎಗೆ ಬೆಲೆ ಬರುತ್ತದೆಯೇ? ಗೊತ್ತಿಲ್ಲ. ಆದರೆ, ಹಾಗೊಂದು ಆಶಾವಾದವನ್ನಿಟ್ಟುಕೊಂಡು ಕಾದು ನೋಡಬೇಕಷ್ಟೇ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಇತರ ಆಯ್ಕೆಗಳತ್ತ ತಮ್ಮ ಮನಸ್ಸು ಹರಿಸುವುದೊಳಿತು. 

ಪಾಶ್ಚಿಮಾತ್ಯ ದೇಶಗಳಲ್ಲಿ ಕೇವಲ ಪಾರ್ಟ್‌ ಟೈಂ ಕೋರ್ಸ್‌ ಆಗಿದ್ದ ಎಂಬಿಎಯನ್ನು ಭಾರತದಲ್ಲಿ ಫ‌ುಲ್‌ ಟೈಂ ಕೋರ್ಸ್‌ ಆಗಿ ಪರಿಚಯಿಸಿದ ಹೊಸತರಲ್ಲಿ ಎಲ್ಲಾ ಚೆನ್ನಾಗಿತ್ತು. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ವಾಣಿಜ್ಯ ಕ್ಷೇತ್ರದ ಬದಲಾದ ನಿರೀಕ್ಷೆ ಮುಟ್ಟದಿರುವುದು ಅನೇಕ ಎಂಬಿಎ ಪದವೀಧರರು ಕೆಲಸವಿಲ್ಲದೆ ಅಲೆದಾಡುವಂತಾಗಿದೆ. 
-ವಿಶ್ವಪ್ರಭು ದೇವರು, ಉದ್ಯೋಗಿ

ಸಂದರ್ಶನಕ್ಕೆ ಬರುವ ಅನೇಕರಲ್ಲಿ ಇಂದು ಕೌಶಲ್ಯ ಕೊರತೆ ಕಾಣುತ್ತಿದ್ದೇವೆ. ಪರವಾಗಿಲ್ಲ. ಕೆಲಸಕ್ಕೆ ತೆಗೆದುಕೊಂಡು ಪಳಗಿಸಬಹುದು ಎಂಬಂಥವರನ್ನು ಆಯ್ಕೆ ಮಾಡುತ್ತೇವಾದರೂ, ನಮ್ಮ ಉನ್ನತಾಧಿಕಾರಿಗಳು ಅಂಥವರಲ್ಲೂ ಕೆಲವರನ್ನು ರಿಜೆಕ್ಟ್ ಮಾಡುತ್ತಿದ್ದಾರೆ. 
-ಗಿರೀಶ್‌ ಪಿಂಟು, ಎಚ್‌ಆರ್‌ ಮ್ಯಾನೇಜರ್‌, ಖಾಸಗಿ ಕಂಪನಿ

ಎಂಬಿಎ ಜೋಕುಗಳು
ಮಾರ್ಕೆಟಿಂಗ್‌ನಲ್ಲಿ ಎಂಬಿಎ ಮಾಡಿದ ಹುಡುಗ ಪಾರ್ಟಿಯಲ್ಲಿ ಸುಂದರಿಯೊಬ್ಬಳನ್ನು ಅಪ್ಪಿಕೊಳ್ಳಲು ಹೋಗುತ್ತಾನೆ. 
ಸುಂದರಿ: ಏಯ್‌ ಏನಿದು?
ಹುಡುಗ: ಡೈರೆಕ್ಟ್ ಮಾರ್ಕೆಟಿಂಗ್‌
ಹುಡುಗಿ ಆತನ ಕೆನ್ನೆಗೆ ಬಾರಿಸುತ್ತಾಳೆ.
ಹುಡುಗ: ಏನಿದು?
ಸುಂದರಿ: ಕಸ್ಟಮರ್‌ ಫೀಡ್‌ಬ್ಯಾಕ್‌!

ಎಂಬಿಎ ಎಕ್ಸಾಂನ ಕೊನೆಯ ದಿನ ಮಗರಾಯ ಹುಡುಗಿ ಜೊತೆ ಮನೆಗೆ ಹೋದ. ಅಪ್ಪ “ಯಾರೋ ಇವಳು?’ ಅಂತ ಕೇಳಿದ. ಹುಡುಗನ ಉತ್ತರ, “ಕ್ಯಾಂಪಸ್‌ ಸೆಲೆಕ್ಷನ್‌’!

ಎಂಜಿನಿಯರ್‌ ಹುಡುಗ, “ನೀನು ಆ ಹುಡುಗಿಗೆ ಮುತ್ತು ಕೊಟ್ಟರೆ ಸಾವಿರ ರೂ. ಕೊಡ್ತೀನಿ’ ಅಂತ ಚಾಲೆಂಜ್‌ ಹಾಕ್ತಾನೆ. ಎಂಬಿಎ ಹುಡುಗ, ಆ ಚಾಲೆಂಜನ್ನು ಸ್ವೀಕರಿಸಿ ಸೀದಾ, ಆ ಹುಡುಗಿಯ ಬಳಿ ಹೋದ. 
ಹುಡುಗ: ನಾನು ನಿಮ್ಮನ್ನು ಮುಟ್ಟದೆಯೇ ನಿಮಗೆ ಮುತ್ತು ಕೊಡಬಲ್ಲೆ.
ಹುಡುಗಿ: ಸಾಧ್ಯವೇ ಇಲ್ಲ.
ಹುಡುಗ: 500 ರೂ. ಬೆಟ್‌ ಕಟ್ಟೋಣವೇ?
ಹುಡುಗಿ: ಸರಿ.

ಎಂಬಿಎ ಹುಡುಗ ಆಕೆಯ ಕೆನ್ನೆಗೆ ಮುತ್ತು ಕೊಟ್ಟ
ಹುಡುಗಿ: ನೀನು ಮೋಸ ಮಾಡಿದೆ.
ಹುಡುಗ: ಅಳಬೇಡ, ತಗೋ 500 ರೂ.
ಎಂಜಿನಿಯರಿಂಗ್‌ ಹುಡುಗನಿಂದ 1000 ರೂ. ಪಡೆದುಕೊಂಡ. ಇದನ್ನೇ ಫೈನಾನ್ಷಿಯಲ್‌ ಮ್ಯಾನೇಜ್‌ಮೆಂಟ್‌ ಅನ್ನೋದು!

ಟಾಪ್ ನ್ಯೂಸ್

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

12

Karkala: ಹಿಮ್ಮುಖ ಚಲಿಸಿದ ಟಿಪ್ಪರ್‌; ಸ್ಕೂಟರ್‌ ಜಖಂ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

15-hunsur

Hunsur: ಕುಡಿತದ ಚಟಕ್ಕೆ ಯುವಕ ಬಲಿ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.