ಸವಾರಿ ಶೂರರ ಕತೆ
ರೈಡರ್ ಜೋಡಿ, ಜಗತ್ತು ನೋಡಿ
Team Udayavani, Jun 25, 2019, 6:00 AM IST
76 ದಿನಗಳಲ್ಲಿ 23 ಸಾವಿರ ಕಿ.ಮೀ. ಕ್ರಮಿಸಿ, 21 ದೇಶಗಳನ್ನು ನೋಡಿಬಂದ ಈ ಜೋಡಿಗೆ, ಬೈಕ್ ರೈಡಿಂಗೇ ಜೀವ. ಮಂಡ್ಯದ ಮಂಜುನಾಥ್, ಬೆಂಗಳೂರಿನ ರಿಚರ್ಡ್ ಹೇಳುವ ಅನುಭವದ ಕತೆಯೇ ಒಂದು ಥ್ರಿಲ್ಲಿಂಗ್…
“ಬೆಸ್ಟ್ ಫ್ರೆಂಡ್ ನಿಮ್ಮ ಜತೆಗಿದ್ದರೆ, ಯಾವ ರಸ್ತೆಯೂ ಸುದೀರ್ಘವಲ್ಲ’ ಎಂಬ ಮಾತು ಬೈಕ್ ರೈಡರ್ಗಳ ಲೋಕದ ಸುಭಾಷಿತ. ಮಂಡ್ಯದ ಮಂಜುನಾಥ್ಗೂ, ಬೆಂಗಳೂರಿನ ರಿಚರ್ಡ್ಗೂ ಜಗತ್ತು ಬಹಳ ಚಿಕ್ಕದಾಗಿ ಕಾಣೋದು ಇದೇ ಕಾರಣಕ್ಕೋ, ಏನೋ. 76 ದಿನಗಳಲ್ಲಿ 23 ಸಾವಿರ ಕಿ.ಮೀ. ಕ್ರಮಿಸಿ, 21 ದೇಶಗಳನ್ನು ನೋಡಿಬಂದ ಈ ಜೋಡಿಗೆ, ಬೈಕ್ ರೈಡಿಂಗೇ ಜೀವ.
ಒಮ್ಮೆ ಇವರಿಬ್ಬರೂ ಬೆಂಗಳೂರಿನಿಂದ ಸಿಂಗಾಪುರಕ್ಕೆ ಕಾರಿನಲ್ಲಿ ಪಯಣಿಸಿದ್ದರಂತೆ. ಒಂದು ಎಸಿ ರೂಮ್ನಲ್ಲಿ ಕುಳಿತು, ಸ್ಥಳಗಳನ್ನು ಟಿವಿಯಲ್ಲಿ ನೋಡಿದಂತೆ ಭಾಸವಾಗುತ್ತಿತ್ತೇ ವಿನಃ, ಯಾವುದೇ ರೀತಿಯ ಥ್ರಿಲ್ಲಿಂಗ್ ಸಿಕ್ಕಿರಲಿಲ್ಲವಂತೆ. ಮತ್ತೆ ಈ ಇಬ್ಬರೂ, ಆ ತಪ್ಪನ್ನು ಮಾಡಲೇ ಇಲ್ಲ. ಜಗತ್ತು ನೋಡೋದಾದ್ರೆ, ಬೈಕ್ನಲ್ಲೇ ಹೋಗ್ಬೇಕು, ಕಣ್ಣು ಹಾಯಿಸುವಷ್ಟು ದೂರ ಲೋಕ ಕಾಣಬೇಕು ಎನ್ನುವ ತತ್ವದಲ್ಲಿ ಪ್ರಪಂಚ ಪರ್ಯಟನೆಗೆ ಹೊರಟುಬಿಟ್ಟರು.
ತಯಾರಿ ಹೇಗಿತ್ತು?
ಬೆಂಗಳೂರಿನಿಂದ ಹೊರಟು, ಹೇಗಾದರೂ ಲಂಡನ್ ಮುಟ್ಟಬೇಕೆಂದು, 2 ವರ್ಷಗಳಿಂದ ತಯಾರಿ ನಡೆಸಿದ ಜೋಡಿಗೆ ಜೋಶ್ ಹೆಗಲೇರಿತ್ತು. ವೀಸಾ, ಲಗ್ಗೇಜ, ಆಹಾರಗಳ ಪ್ಯಾಕೆಟ್ಟಿನೊಂದಿಗೆ, ಲಾಂಗ್ ರೈಡಿಂಗ್ಗೆ ಅಗತ್ಯವಾದ ಫಿಟೆ°ಸ್ ಕಡೆಯೂ ಗಮನ ಕೊಟ್ಟರು. ಹತ್ತಾರು ಮೈಲು ದೂರ ಕ್ರಮಿಸುವಾಗಲೇ ಬೆನ್ನು, ಕಾಲು ನೋಯುವಾಗ, 23 ಸಾವಿರ ಕಿ.ಮೀ. ಸವಾರಿ ಸುಲಭದ ಮಾತಾಗಿರಲಿಲ್ಲ. ಅಲ್ಲದೇ, ಬಾಡಿ ಎಷ್ಟು ಫಿಟ್ ಇರಬೇಕೋ, ಗಾಡಿಯೂ ಅಷ್ಟೇ ಗಟ್ಟಿಮುಟ್ಟಾಗಿರಬೇಕೆಂದು ಅಂದುಕೊಂಡಿದ್ದವರಿಗೆ ಕಂಡಿದ್ದೇ “ಟ್ರಿಂಪ್ ಟೈಗರ್’ ಎಂಬ ದೈತ್ಯ ಬೈಕ್. ಜುನೈನ್ ಎನ್ನುವವರಿಂದ ಟೂರಿಂಗ್ ಬೈಕ್ನ ಟ್ರೈನಿಂಗ್ ಪಡೆದರು. ಪ್ರಯಾಣದ ಹಾದಿಯಲ್ಲಿ ಪಂಕ್ಚರ್ ಹಾಕುವುದು, ವ್ಹೀಲ್ ಬದಲಿಸುವುದು, ಆಯಿಲ್ ಚೇಂಜ್ ಮಾಡುವುದು- ಇಂಥ ಸಣ್ಣಪುಟ್ಟ ಮಾಹಿತಿ ಅರಿತರು. ದೂರದ ಬೈಕ್ ಟ್ರಿಪ್ ಆಗಿದ್ದರಿಂದ, ಬ್ರೆಡ್, ಗುಲ್ಬರ್ಗ ಶೈಲಿಯ ಚಟ್ನಿಪುಡಿಯಂಥ ಬೇಗ ಹಾಳಾಗದ ಆಹಾರಗಳು ಬ್ಯಾಗ್ ಅನ್ನು ಸೇರಿದವು.
ಭಾರತದಿಂದ ಹೊರಗೆ ಹೊರಟವರಿಗೆ ಮೊದಲು ಸ್ವಾಗತಿಸಿದ್ದೇ, ಭೂತಾನ್ ಮತ್ತು ಮ್ಯಾನ್ಮಾರ್ನ ಪ್ರಾಕೃತಿಕ ಸೌಂದರ್ಯ. ಅಲ್ಲಿನ ಜನರ ಸಂಸ್ಕೃತಿ ಹಾಗೂ ಹಸಿರು ವಾತಾವರಣವು ಬೈಕ್ಗೆ ಮತ್ತೆ ಮತ್ತೆ ಬ್ರೇಕ್ ಹಾಕಲು ಪ್ರೇರೇಪಿಸಿತಂತೆ. ಲಾವೋಸ್ನದ್ದೂ ಅಷ್ಟೇ ರಮ್ಯ ತಾಣ. ಅಭಿವೃದ್ಧಿ ಕಾಣದಿದ್ದರೂ ಅಲ್ಲಿನ ಸ್ವಾಭಾವಿಕ ಪರಿಸರದ ಚೆಲುವಿಗೆ ಯಾರಾದರೂ ಮನಸೊಪ್ಪಿಸಲೇಬೇಕು. ಅದೇ ಮಾರ್ಗವಾಗಿ ಥಾಯ್ಲೆಂಡ್ ಇದ್ದಿದ್ದರಿಂದ, ಅಲ್ಲಿಗೂ ಹೋಗಿ, ಅಲ್ಲಿನ ಪ್ರಸಿದ್ಧ ತಾಣಗಳನ್ನು ನೋಡಿ, ಮುಂದುವರಿದರು.
ಅವರ ಮುಂದಿನ ಪಯಣ ಚೀನಾದತ್ತ. “ಸಾಮಾನ್ಯವಾಗಿ ನಾವೆಲ್ಲ ಭಾರತ- ಚೀನಾ ಅಂದ್ರೆ ಶತ್ರು ರಾಷ್ಟ್ರ ಅಂದುಕೊಂಡಿದ್ದೇವೆ. ಆದರೆ, ಚೀನಾದೊಳಗೆ ಸಜ್ಜನರೂ ಇದ್ದಾರೆ. ನಮ್ಮನ್ನು ಅವರು ಪ್ರೀತಿಯಿಂದ ಸ್ವಾಗತಿಸಿಕೊಂಡರು. ಅಧಿಕ ಬೆಲೆಬಾಳುವ ಬೈಕ್ಗಳಾಗಿದ್ದರಿಂದ, ಅವುಗಳನ್ನು ಮನೆ ಕಾಂಪೌಂಡೊಳಗೆ, ಶಟರ್ ಹಾಕಿ, ಹೋಟೆಲ್ ಒಳಗೆ ಇಟ್ಟುಕೊಂಡು ಕಾಳಜಿ ತೋರಿದರು’ ಎನ್ನುತ್ತಾ, ಚೀನಾದ ಇನ್ನೊಂದು ಮುಖವನ್ನು ಈ ಜೋಡಿ ಪರಿಚಯಿಸಿತು.
ಜೈಲಿಗೆ ಹೋದ ಕತೆ…
ಚೀನಾವನ್ನು ಒಂದು ಸುತ್ತು ಹಾಕಿ, ಗಡಿ ದಾಟಿ ಬರುತ್ತಿದ್ದ ವೇಳೆ, ಪೊಲೀಸರು ಮಂಜುನಾಥ್ರನ್ನು ತಡೆದು, ಮೊಬೈಲ್ ಕಿತ್ತುಕೊಂಡರಂತೆ. ಅದರಲ್ಲಿ ಏನು ನೋಡಿದರೋ ಏನೋ, 30 ಕಿ.ಮೀ. ದೂರದ ಜೈಲಿನಲ್ಲಿ ಕೂರಿಸಿದರಂತೆ. ಸಾಲದ್ದಕ್ಕೆ ಮಿಷನ್ ಗನ್ ಹಿಡಿದ ಇಬ್ಬರು ಕಾವಲುಗಾರರನ್ನೂ ಇಟ್ಟಿದ್ದರಂತೆ. ಕೊನೆಗೆ 3 ತಾಸು ಕಳೆದ ಮೇಲೆ, ಮತ್ತೆ ವಿಚಾರಣೆಗೊಳಪಡಿಸಿದರು. ಇವರಾಡುವ ಭಾಷೆ ಅವರಿಗೆ ತಿಳಿಯದ ಕಾರಣ, ನಂತರ ಬಿಡುಗಡೆ ಮಾಡಿದರಂತೆ.
ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ಕಝಕ್ಸ್ತಾನ್ಗಳು, ನಮಗೆ ಮುಸ್ಲಿಂ ರಾಷ್ಟ್ರಗಳು ಅಂತಲೇ ಅನ್ನಿಸಲಿಲ್ಲ. ಭಾರತದಂತೆಯೇ ಅಲ್ಲಿನ ಪರಿಸರವಿತ್ತು. ಅಲ್ಲಿನ ಜನರಿಗೆ ಬಾಲಿವುಡ್ ಸಿನಿಮಾಗಳೆಂದರೆ, ಬಲು ಇಷ್ಟ. ಮಿಥುನ್ ಚಕ್ರವರ್ತಿಯ “ಡಿಸ್ಕೋ ಡ್ಯಾನ್ಸರ್’ ಚಿತ್ರದ “ಜಿಮ್ಮಿ ಜಿಮ್ಮಿ ಆಜಾ’ ಎಂಬ ಹಾಡನ್ನು ಗುನುಗುತ್ತಿದ್ದ ವ್ಯಕ್ತಿಯನ್ನೂ ಅಲ್ಲಿ ಕಂಡೆವು.
ರಷ್ಯನ್ ಮಹಿಳೆಯ ಹೋಟೆಲ್
ರಷ್ಯಾದಲ್ಲಿ ನಡೆದ ಕತೆಯೇ ಬೇರೆ. ಅದು ಒಬ್ಬಳು ಹೆಂಗಸಿನ ಹೋಟೆಲ್. ಆಕೆ “ಅಮೆರಿಕನ್ ಡಾಲರ್ ಬೇಡ. ರಷ್ಯನ್ ಮನಿ ಕೊಡಿ’ ಅಂದಳಂತೆ. ಆದರೆ, ಇವರ ಬಳಿ ರಷ್ಯನ್ ಹಣ ಇರಲಿಲ್ಲ. ತೀವ್ರವಾಗಿ ಹಸಿದಿದ್ದ ಇವರನ್ನು ನೋಡಿ, ಆ ಹೆಂಗಸು “ಊಟ ಮಾಡಿ. ಹಣವೇನೂ ಬೇಡ’ ಎಂಬ ಔದಾರ್ಯ ತೋರಿದರು ಎನ್ನುವ ನೆನಪನ್ನು ಮಂಜುನಾಥ್ ಕಣ್ಣಿಗೆ ಕಟ್ಟುವ ಹಾಗೆ ಹೇಳಿದರು. ಯುರೋಪ್ನ ಪಯಣವಂತೂ, ಬಹಳ ಥ್ರಿಲ್ಲಿಂಗ್ ಅನುಭವಗಳನ್ನು ನೀಡಿತಂತೆ. ಅಂದುಕೊಂಡಂತೆ ಕೊನೆಗೂ 76ನೇ ದಿನಕ್ಕೆ ಲಂಡನ್ ಮುಟ್ಟಿದ್ದರು.
ಬೆಟ್ಟದ ಮೇಲೆ ಹಿಮದ ಅಟ್ಯಾಕ್
ಕಿರ್ಗಿಸ್ತಾನಕ್ಕೆ ಹೋದಾಗ, ಅಲ್ಲಿನ ಒಂದು ಪರ್ವತ ಏರುವ ಮನಸ್ಸಾಯಿತು. ಸಾಮಾನ್ಯವಾಗಿ ಆ ಋತುವಿನಲ್ಲಿ ಹಿಮ ಬೀಳುವುದಿಲ್ಲ. ಆದರೆ, ಮೂರು ಸಾವಿರ ಮೀಟರ್ ಹತ್ತಿದ ಮೇಲೆ, ಕಂಡ ಚಿತ್ರಣವೇ ಬೇರೆ. ಹಿಮ ಧೊಪಧೊಪನೆ ಬೀಳಲಾರಂಭಿಸಿತು. ಸುತ್ತಮುತ್ತ ಏನೂ ಕಾಣಿಸುತ್ತಿರಲಿಲ್ಲ. ಸುಮಾರು ಐದು ಗಂಟೆ ಕಾಲ ಹಿಮವು ದಿಕ್ಕು ಕಾಣದಂತೆ ಮಾಡಿತ್ತಂತೆ. ಅಷ್ಟೊತ್ತಿಗೆ ರಿಚರ್ಡ್ ಜಾರಿ ಬಿದ್ದು, ಗಾಯ ಮಾಡಿಕೊಂಡರಂತೆ. ಅಲ್ಲಿನ ಲೋಕಲ್ ಟ್ರಕ್ನವರು ಬಂದು ಇವರನ್ನು ರಕ್ಷಿಸಿದರು.
– ಉಮೇಶ್ ರೈತ ನಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ
Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!
PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್ ಸೇದಿದ ಆಟಗಾರನ ವಿಡಿಯೋ ವೈರಲ್
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು