ಕತ್ತೆ ಸಿಂಹವನ್ನು ಯಾಮಾರಿಸಿದ್ದು ಹೇಗೆ?
Team Udayavani, Apr 26, 2018, 6:00 AM IST
ದಟ್ಟವಾದ ಅರಣ್ಯದಲ್ಲಿ ಒಂದು ಸಿಂಹ ವಾಸವಾಗಿತ್ತು. ಅದಕ್ಕೆ ತುಂಬಾ ಬಾಯಾರಿಕೆಯಾಯಿತು. ನೀರನ್ನು ಹುಡುಕುತ್ತ ಕಾಡಿನಲ್ಲಿ ಅಲೆಯುತ್ತ ಒಂದು ನದಿಯ ಬಳಿಗೆ ಬಂದು ತಲುಪಿತು. ಅದೇ ನದಿಯ ಇನ್ನೊಂದ ದಡಕ್ಕೆ ನೀರು ಕುಡಿಯಲೆಂದು ಒಂದು ಕತ್ತೆಯೂ ಬಂದಿತ್ತು. ಸಿಂಹವು ಕತ್ತೆಯನ್ನು ನೋಡಿತು. ಏನಾದರು ಮಾಡಿ ಕತ್ತೆಯನ್ನು ತಿನ್ನಬೇಕೆಂದು ಉಪಾಯ ಮಾಡತೊಡಗಿತು. ಸಿಂಹವು ಕತ್ತೆಯನ್ನು ನಯವಾಗಿ ಮಾತನಾಡಿಸಲಾರಂಭಿಸಿತು.
“ಕತ್ತೆಯೇ, ನೀನು ಚೆನ್ನಾಗಿ ಹಾಡುತ್ತೀಯೆಂದು ಕಾಡೆಲ್ಲಾ ಮಾತಾಡಿಕೊಳ್ಳುತ್ತಿತ್ತು. ನಿನ್ನ ಹಾಡನ್ನು ಕೇಳಬೇಕೆನ್ನುವ ಆಸೆ ತುಂಬಾ ದಿನಗಳಿಂದ ನನಗೂ ಇತ್ತು. ನನಗಾಗಿ ಒಂದು ಹಾಡನ್ನು ಹಾಡುವೆಯಾ’ ಎಂದು ಸಿಂಹ ಕೇಳಿತು. ಕಾಡಿನ ರಾಜ ಸಿಂಹ ತನ್ನ ಹಾಡನ್ನು ಕೇಳಲು ಬಯಸಿದ್ದು ತನ್ನ ಅದೃಷ್ಟ ಎಂದು ಬೀಗಿತು ಕತ್ತೆ. ಆ ಉತ್ಸಾಹದಲ್ಲಿ ಕತ್ತೆ ಸಿಂಹವನ್ನು ತಾನಿದ್ದ ದಡಕ್ಕೆ ಬರಲು ಆಹ್ವಾನಿಸಿತು. ಇದೇ ಅವಕಾಶವೆಂದು ಸಿಂಹ ತೆಪ್ಪವೊಂದರಲ್ಲಿ ಕತ್ತೆಯಿದ್ದಲ್ಲಿಗೆ ಬಂದಿತು.
ಕತ್ತೆ ಕಣ್ಮುಚ್ಚಿ ತನ್ಮಯತೆಯಿಂದ ಒಂದೇ ಸಮನೆ ಆರಚಲು ಪ್ರಾರಂಭ ಮಾಡಿತು. ಸಿಂಹ ಕತ್ತೆಯ ಮೇಲೆ ಎಗರಿತು. ಪ್ರಾಣಭಯದಿಂದ ಕತ್ತೆಯು ತತ್ತರಿಸಿಹೋಯಿತು. ಕೂಡಲೆ ಎಚ್ಚೆತ್ತುಕೊಂಡಿತು. ಅದಕ್ಕೆ ಸಿಂಹ ಮಾಡಿದ ಉಪಾಯವೆಲ್ಲಾ ಗೊತ್ತಾಗಿಹೋಯಿತು. “ಒಂದು ನಿಮಿಷ ತಾಳು. ಬೇಟೆಯನ್ನು ತಿನ್ನುವುದಕ್ಕೆ ಮುನ್ನ ಎಲ್ಲಾ ಸುಸಂಸ್ಕೃತ ಸಿಂಹಗಳು ದೇವರನ್ನು ಪ್ರಾರ್ಥಿಸುವುದೆಂದು ಕೇಳಿದ್ದೇನೆ. ನೀನು ಸುಸಂಕೃತನಲ್ಲವೆ?’ ಎಂದು ಕೇಳಿತು. ಕತ್ತೆಯ ಪ್ರಶ್ನೆಯಿಂದ ಸಿಂಹಕ್ಕೆ ಅವಮಾನವಾದಂತಾಯಿತು. ಅದು “ಓಹ್ ಹೌದು. ನಾನು ಮರೆತೇಬಿಟ್ಟಿದ್ದೆ.’ ಎಂದು ಕಣ್ಮುಚ್ಚಿ ದೇವರನ್ನು ಸ್ತುತಿಸತೊಡಗಿತು. ಅದೇ ಸಮಯವನ್ನು ಕಾಯುತ್ತಿದ್ದ ಕತ್ತೆ ಆ ಜಾಗದಿಂದ ಓಡಿ ಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿತು.
ವೇದಾವತಿ ಎಚ್.ಎಸ್.