ಭೂಮಿ ಮೇಲೆಯೇ ಇದೆ ನರಕದ ಬಾಗಿಲು!
Team Udayavani, Jul 27, 2017, 7:25 AM IST
“ಒಳ್ಳೆಯವರು ಸ್ವರ್ಗಕ್ಕೆ ಹೋಗುತ್ತಾರೆ. ಕೆಟ್ಟವರು ನರಕಕ್ಕೆ’- ಮನೆಯಲ್ಲಿ ಗುರುಹಿರಿಯರಿದ್ದರೆ ಖಂಡಿತವಾಗಿ ಒಮ್ಮೆಯಾದರೂ ಈ ಮಾತನ್ನು ಅವರಿಂದ ಮಕ್ಕಳು ಹೇಳಿಸಿಕೊಂಡಿರುತ್ತಾರೆ. ನಿಜಕ್ಕೂ ಸ್ವರ್ಗ ಮತ್ತು ನರಕ ಇದೆಯೇ ಎಂಬುದನ್ನು ಖಡಾಖಂಡಿತವಾಗಿ ಹೇಳಬಲ್ಲವರು ಸಿಗಲಿಕ್ಕಿಲ್ಲ. ಆದರೆ ಹಾಗೊಂದು ನಂಬಿಕೆಯಂತೂ ನಮ್ಮ ನಡುವೆ ಇದೆ. ರಷ್ಯಾದ ಕಾರಕಂ ಮರುಬೂಮಿಯ ಮಧ್ಯೆ ಒಂದು ಭೂಮಿಯಾಳಕ್ಕೆ ಕೊರೆದ ಗುಂಡಿಯಿದೆ. ಅದನ್ನು ನರಕದ ಬಾಗಿಲು ಎಂದೇ ಕರೆಯಲಾಗುತ್ತದೆ. ಕಳೆದ 45 ವರ್ಷಗಳಿಂದ ಅಲ್ಲಿ ಹೊತ್ತಿರುವ ಬೆಂಕಿ ಉರಿಯುತ್ತಲೇ ಇದೆ.
ಇದು ಹೇಗಾಯ್ತು?
1971ರಲ್ಲಿ ದರ್ವಾಜ ಗ್ರಾಮದ ಸಮೀಪದ ಕಾರಕಂ ಜಿಲ್ಲೆಯಲ್ಲಿ ಸೋವಿಯತ್ ಭೂವಿಜ್ಞಾನಿಗಳು ನೈಸರ್ಗಿಕ ಅನಿಲದಿಂದ ತುಂಬಿದ್ದ ಗುಹೆಯನ್ನು ಕೊರೆಯಲು ಆರಂಭಿಸಿದರು. ಹೀಗೆ ಕೊರೆಯುತ್ತಿರುವ ಸಂದರ್ಭದಲ್ಲಿ ಅವರು ಬಳಸುತ್ತಿದ್ದ ಉಪಕರಣಗಳು ಒಂದು ದೊಡ್ಡ ಹೊಂಡಕ್ಕೆ ಬಂದು ಬಿತ್ತು. ಇಲ್ಲಿ ಯಾರಿಗೂ ಗಾಯವಾಗಿರಲಿಲ್ಲ. ಆದರೆ ಆ ಹೊಂಡದಿಂದ ಅನಿಲ ಹೊರಬರಲು ಶುರುವಾಗಿತ್ತು. ಅದು ವಿಷಕಾರಿ ಅನಿಲವಾಗಿರಬಹುದು ಎಂಬ ಭೀತಿ ವಿಜ್ಞಾನಿಗಳಲ್ಲಿ ಮನೆ ಮಾಡಿತ್ತು. ಸಾಮಾನ್ಯವಾಗಿ ಈ ರೀತಿಯ ಪರಿಸ್ಥಿತಿ ಎದುರಾದಾಗ, ಪರಿಹಾರವಾಗಿ ಅಂಥ ಗುಂಡಿಗೆ ಬೆಂಕಿ ಹಾಕಿಬಿಡುತ್ತಾರೆ. ಇಲ್ಲೂ ವಿಜ್ಞಾನಿಗಳು ಮಾಡಿದ್ದು ಅದನ್ನೇ. ಕೆಲ ದಿನಗಳಲ್ಲೇ ಬೆಂಕಿ ನಂದಿ ವಿಷಕಾರಿ ಅನಿಲ ಹೊರಬರುವುದು ನಿಲ್ಲುತ್ತದೆ ಎಂದುಕೊಂಡರೆ ಇಲ್ಲಾಗಿದ್ದೇ ಬೇರೆ. ಭೂವಿಜ್ಞಾನಿಗಳು ಎಷ್ಟೇ ಹರಸಾಹಸಪಟ್ಟರೂ ಬೆಂಕಿ ನಂದಲೇ ಇಲ್ಲ. ಅವರ ನಿರೀಕ್ಷೆ ಸುಳ್ಳಾಗಿತ್ತು. ವಾರಗಳು, ತಿಂಗಳುಗಳು, ವರುಷಗಳು ಕಳೆದರೂ ಅದು ಇಂದಿನವರೆಗೂ ಉರಿಯುತ್ತಲೇ ಇದೆ.
ಕಾಡುವ ಕುತೂಹಲ
ಈ ಅಗ್ನಿಕುಳಿ ಇನ್ನೂ ಎಷ್ಟು ಕಾಲ ಉರಿಯಲಿದೆ, ಮುಂದೆ ಯಾವತ್ತಾದರೂ ಈ ಅಗ್ನಿಯ ಹೊಂಡವು ಮುಚ್ಚಿಹೋಗುವುದೇ? ಇಲ್ಲಿ ಹೊರಬರುತ್ತಿರುವ ಅನಿಲವನ್ನು ಸಂಪನ್ಮೂಲವಾಗಿ ಬಳಸಬಹುದೇ? ಇವ್ಯಾವ ಪ್ರಶ್ನೆಗಳಿಗೂ ಉತ್ತರ ಯಾರಿಗೂ ತಿಳಿದಿಲ್ಲ. ಆದರೆ ಈ ಪ್ರದೇಶ ಮಾತ್ರ ಅಂದಿನಿಂದಲೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಪ್ರವಾಸಿಗರು ಇಲ್ಲಿ ಭೇಟಿ ಕೊಟ್ಟು ನರಕದ ಬಾಗಿಲಿನ ದರ್ಶನ ಪಡೆಯುತ್ತಾರೆ. ಟರ್ಕ್ಮೆನಿಸ್ತಾನದ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ 2004ರಲ್ಲಿಯೇ ಕಾರಕಂ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸಿತ್ತು.
ನೀವು ಹಗಲಿನಲ್ಲಿ ಈ ಅಗ್ನಿಕುಳಿ ಮೈದಾನದ ರೀತಿಯಲ್ಲಿ ಗೋಚರಿಸುತ್ತದೆ. ಆದರೆ ಅದರ ಸಮೀಪಕ್ಕೆ ಬಂದಂತೆ ಸಾವಿರಾರು ಅಗ್ನಿಯ ಜ್ವಾಲೆಗಳು ಕುಳಿಯಲ್ಲಿ ಉರಿಯುತ್ತಿರುವುದನ್ನು ಕಾಣಬಹುದು. ಈ ಅನಿಲ ಹೊಂಡದಿಂದ ಹೊರ ಬರುವಾಗ ಭೂಮಿ ಉಬ್ಬುತ್ತದೆ. ಭೂಮಿಯನ್ನು ಸೀಳಿಕೊಂಡು ಅನಿಲ ಹೊರಹೊಮ್ಮುತ್ತದೆ. ಈ ಅಗ್ನಿಕುಳಿಯನ್ನು ನೋಡಲು ಸಂಜೆ ಸಮಯವೇ ಪ್ರಶಸ್ತ.
ಹೆಸರಿನ ಹಿನ್ನೆಲೆ
ಈ ಗುಂಡಿಗೆ “ನರಕದ ಬಾಗಿಲು’ ಎಂಬ ಹೆಸರು ಬರಲು ಕಾರಣ ಪುರಾಣ. ಚೀನೀ, ಗ್ರೀಕ್- ರೋಮನ್ ಪುರಾಣಗಳಲ್ಲಿ ಬರುವ ನರಕದ ವರ್ಣನೆಗೂ ಈ ಗುಂಡಿಯಲ್ಲಿ ಕಾಣಬರುವ ದೃಶ್ಯಕ್ಕೂ ಸಾಮ್ಯತೆ ಇರುವುದರಿಂದಲೇ ಆ ಹೆಸರು ಬಂದಿದೆ.
– ಸೌಮ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ