ಗಾವಸ್ಕರ್ಗೆ ಪದ್ಮಭೂಷಣ, ನಂಗೆ ಮಾತ್ರ ಪದ್ಮಶ್ರೀ!
Team Udayavani, Nov 2, 2019, 4:01 AM IST
ಹಾಕಿ ಮಾಂತ್ರಿಕ, ಹಾಕಿ ದೇವರು ಹೀಗೆ ಏನು ಬೇಕಾದರೂ ಕರೆಯಿರಿ, ಅದಕ್ಕೆಲ್ಲ ಮೇಜರ್ ಧ್ಯಾನ್ಚಂದ್ ಅರ್ಹವ್ಯಕ್ತಿ. ಅಂತಹ ಮಹಾತ್ಮನ ಜನ್ಮವಾದ ಆಗಸ್ಟ್ 29ರಂದು ಪ್ರತೀವರ್ಷ ರಾಷ್ಟ್ರೀಯ ಕ್ರೀಡಾಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ. ಗಮನಾರ್ಹ ಸಂಗತಿಯೆಂದರೆ, ಪ್ರತೀಬಾರಿ ಒಂದಲ್ಲ ಒಂದು ವಿವಾದವಿಲ್ಲದೇ ಪ್ರಶಸ್ತಿ ನೀಡುವುದು ಸಾಧ್ಯವೇ ಆಗಿಲ್ಲ. ವಿವಾದಗಳಿಲ್ಲದ ವರ್ಷಗಳೇ ಅಪೂರ್ವ. ಒಬ್ಬರಲ್ಲ ಒಬ್ಬರು ತಗಾದೆ ತೆಗೆದೇ ತೆಗೆಯುತ್ತಾರೆ. ಅವರಿಗೆ ಕೊಟ್ಟಿದ್ದು ಸರಿಯಾಗಲಿಲ್ಲ, ತನಗೆ ನೀಡಬೇಕಿತ್ತು. ತಾನು ಅವರಿಗಿಂತ ಮೇಲಿನ ಗೌರವಕ್ಕೆ ಅರ್ಹನಾಗಿದ್ದೇ ಹೀಗೆ.
ಈಗ ಹೇಳುತ್ತಿರುವುದು ಕ್ರೀಡಾ ಪ್ರಶಸ್ತಿಗೆ ಸಂಬಂಧಪಟ್ಟಿದ್ದಲ್ಲ ಪದ್ಮಗೌರವಕ್ಕೆ ಸಂಬಂಧಪಟ್ಟಿದ್ದು. 1981ರಲ್ಲಿ 2 ಬಾರಿ ಬಿಲಿಯರ್ಡ್ಸ್ ವಿಶ್ವಚಾಂಪಿಯನ್ ಆಗಿದ್ದ ಮೈಕೆಲ್ ಫೆರೆರಾಗೆ ಪದ್ಮಶ್ರೀ ಗೌರವ ನೀಡಲಾಯಿತು. ಆದರೆ ಅವರು ತನಗೆ ಈ ಗೌರವವೇ ಬೇಡವೆಂದು ಬಿಟ್ಟರು. ಇದಕ್ಕೆ ಕಾರಣ, ಆ ಕಾಲಕ್ಕೆ ಕ್ರಿಕೆಟ್ ಮಾಂತ್ರಿಕ ಎನಿಸಿಕೊಂಡಿದ್ದ ಸುನೀಲ್ ಗಾವಸ್ಕರ್ಗೆ ಕೇಂದ್ರಸರ್ಕಾರ ಪದ್ಮಭೂಷಣ ನೀಡಿದ್ದು, ಗಾವಸ್ಕರ್ಗೆ ಪದ್ಮಶ್ರೀಗಿಂತ ಮೇಲಿನ ಗೌರವ ನೀಡಲಾಗಿದೆ. ತಾನೂ ಆ ಗೌರವಕ್ಕೆ ಅರ್ಹನಾಗಿದ್ದೆ, ತನಗೂ ಸಮಾನ ಗೌರವ ಬೇಕು ಎನ್ನುವುದು ಅವರ ಆಗ್ರಹ. 1983ರಲ್ಲಿ ಅವರಿಗೆ ಪದ್ಮಭೂಷಣ ಲಭಿಸಿತು!