ಇಲಿ ದೇವರ ಚೌತಿ
Team Udayavani, Sep 7, 2019, 1:59 PM IST
ಚೌತಿಯಂದು ಎಲ್ಲೆಲ್ಲೂ ಗಣಪನ ಹಾಜರಿ ಇರುವಾಗ, ಇಲ್ಲಿ ದರುಶನ ನೀಡುವುದು ಮಾತ್ರ “ಇಲಿ’. ವಿಘ್ನ ನಿವಾರಕನ ವಾಹನವನ್ನು ಹೀಗೆ ಪೂಜಿಸುವುದು, ಬಳ್ಳಾರಿ, ಹಾವೇರಿ, ಚಿತ್ರದುರ್ಗ ಮುಂತಾದೆಡೆ ಹೆಚ್ಚಾಗಿ ವಾಸಿಸುವ ನೇಕಾರರು. ಮಣ್ಣಿನಿಂದ ಇಲಿಯ ಮೂರ್ತಿ ಮಾಡಿ, ಮೂರು ದಿನಗಳ ಕಾಲ ವಿಶೇಷವಾಗಿ ಪೂಜಿಸಿ, ನೀರಿನಲ್ಲಿ ಬಿಡುವ ಈ ಆಚರಣೆಗೆ ಪರಂಪರಾಗತ ನಡೆದುಬಂದಿದೆ.
ನೇಕಾರರು ತಮ್ಮ ಕುಲಕಸುಬಾದ ಬಟ್ಟೆ ನೇಯ್ಗೆಗೆ ತೊಂದರೆ ಬಾರದಿರಲಿ ಎಂಬ ನಂಬಿಕೆಯಿಂದ, ಗಣೇಶನ ಬದಲು ಇಲಿರಾಯನ ಮೂರ್ತಿಯನ್ನು ಕೂರಿಸುತ್ತಾರೆ. ಸಹಕಾರ ಸಂಘಗಳಿಂದ ನೂಲುಗಳನ್ನು ತಂದು ತಮ್ಮ ಕೈಮಗ್ಗದಲ್ಲಿ ಕಾಟನ್ ಬಟ್ಟೆಯಿಂದ ಹಿಡಿದು ರೇಷ್ಮೆ ಸೀರೆಯವರೆಗೂ ವೈವಿಧ್ಯಮಯ ಬಟ್ಟೆಗಳನ್ನು ನೇಯುವುದು ಇವರ ಹೊಟ್ಟೆಪಾಡು. ಬಡತನದೊಂದಿಗೆ ನಿತ್ಯವೂ ಹೋರಾಡುತ್ತಾ, ನಾಡಿಗೆಲ್ಲ ಬಟ್ಟೆ ಸಿದ್ಧಪಡಿಸುವ ಇವರ ಕಾಯಕದಲ್ಲಿ ಇಲಿಯ ಕಾಟ ಸಾಮಾನ್ಯ. ಇಲಿಯು ನೂಲುಗಳನ್ನು ಕಡಿದುಬಿಟ್ಟರೆ, ಸಹಸ್ರಾರು ರೂಪಾಯಿ ನಷ್ಟವನ್ನು ನೇಕಾರರೇ ಹೊರಬೇಕಾಗುತ್ತದೆ. ಹಾಗಾಗಿ, ತಮ್ಮ ಕಸುಬಿಗೆ ಆಪತ್ತು ತರುವ ಇಲಿಯನ್ನೇ, ಇಲಿಚಪ್ಪ ಎಂದು ನಂಬಿ, ಚೌತಿಯಲ್ಲಿ ಅದರ ಮೂರ್ತಿಯನ್ನು ಕೂರಿಸುತ್ತಾರೆ.
ಕೂಡ್ಲಿಗಿ ತಾಲೂಕಿನ ಉಜ್ಜಿನಿ, ಬೆನಕನಹಳ್ಳಿ, ರಾಂಪುರ, ಹೊಸಹಳ್ಳಿ, ಹೂಡೇಂ ಸುತ್ತಮುತ್ತಲ ಗ್ರಾಮಗಳಲ್ಲಿ ಇಲಿಚಪ್ಪನೇ ಚೌತಿಗೆ ಅತಿಥಿ. “ಇಲಿಚಪ್ಪ, ನಮ್ಮ ಶ್ರೇಷ್ಠ ದೇವ್ರು. ಇಲಿಯ ಮೂರ್ತಿಯನ್ನು ಮೂರು ದಿನ ಮನೆಯಲ್ಲಿ ಕೂರಿಸಿ, ಕಡುಬಿನ ನೈವೇದ್ಯ ಮಾಡಿ, ಅದರ ಜೊತೆಗೇ ನೀರಿನಲ್ಲಿ ಬಿಡ್ತೀವಿ’ ಎನ್ನುತ್ತಾರೆ, ಉಜ್ಜಿನಿ ಗ್ರಾಮದ ನೇಕಾರ ಸಮಾಜದ ಹಿರಿಯರಾದ ವೀರಣ್ಣ.
– ಬಾರಿಕರ ಭೀಮಪ್ಪ