ಮೊಬೈಲ್‌ ಗೀಳು ಬಿಡಿಸಬೇಡಿ, ಬಿಡಿ…


Team Udayavani, Feb 26, 2020, 6:13 AM IST

cha-15

ಮಕ್ಕಳ ಪರೀಕ್ಷೆಗಳು ಮುಗಿಯುತ್ತಾ ಬಂದವು. ಮುಂದಿನ ಎರಡು ತಿಂಗಳು ಅವರನ್ನು ಹಿಡಿಯುವುದೇ ಕಷ್ಟ. ಎಷ್ಟು ಹೇಳಿದರೂ ಕೇಳುವುದಿಲ್ಲ, ಮೊಬೈಲ್‌-ಕಂಪ್ಯೂಟರ್‌ ಮುಂದೆ ಕುಳಿತು ಬಿಡುತ್ತಾರೆ… ಇದು ಬಹುತೇಕ ಅಮ್ಮಂದಿರು ಹೇಳುವ ಮಾತು. ಈಗಿನ ಕಾಲದ ಮಕ್ಕಳು ಮೊಬೈಲ್‌ಗೆ ಈ ಪರಿ ಅಂಟಿಕೊಳ್ಳಲು ನೀವೇ ಕಾರಣ ಅಂತ ಅಮ್ಮಂದಿರತ್ತ ಬೊಟ್ಟು ಮಾಡಿದರೆ… ಖಂಡಿತಾ ಅವರದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ, ಮಕ್ಕಳ ಮೊಬೈಲ್‌ ಗೀಳಿಗೆ ಹೆತ್ತವರೇ ನೇರ ಕಾರಣ ಅನ್ನುತ್ತಿವೆ ಅನೇಕ ಸಂಶೋಧನೆಗಳು…

“ನನ್ನ ಮಗಳಿಗೆ ಮೊಬೈಲ್‌ ಕೈಗೆ ಕೊಡದೆ ಊಟ ಮಾಡಿಸೋಕೆ ಸಾಧ್ಯವೇ ಇಲ್ಲ’, “ನನ್ನ ಮಗ ಎಂಥ ಮೊಬೈಲ್‌ ಕೊಟ್ಟರೂ ಎರಡು ನಿಮಿಷದಲ್ಲಿ ಎಲ್ಲಾ ಕಲಿತು ಬಿಡುತ್ತಾನೆ’, “ಎಷ್ಟು ಕೊಡಲ್ಲ ಅಂದರೂ ಹಠ ಮಾಡಿ ಮೊಬೈಲ್‌ ಕಿತ್ತುಕೊಳ್ತಾರೆ’… ಈ ರೀತಿಯ ಮಾತುಗಳನ್ನು ನೀವೂ ಕೇಳಿರುತ್ತೀರಿ. ಊಟಕ್ಕೂ, ಆಟ-ಪಾಠಕ್ಕೂ ಮೊಬೈಲ್‌ ಜೊತೆಗಿರದಿದ್ದರೆ ಆಗುವುದಿಲ್ಲ ಎನ್ನುವಷ್ಟರ ಮಟ್ಟಿಗೆ ಮಕ್ಕಳು ಅದಕ್ಕೆ ಅಂಟಿಕೊಂಡಿದ್ದಾರೆ. ಮಗು ಊಟ ಮಾಡಲು ಹಠ ಮಾಡಿದಾಗ, ಹೇಳಿದ ಮಾತನ್ನು ಕೇಳದೇ ಇದ್ದಾಗ ಮೊಬೈಲ್‌ನ ಆಮಿಷ ತೋರಿಸಿ ಪುಸಲಾಯಿಸುತ್ತಿದ್ದ ಹೆತ್ತವರು, ದಿನಗಳೆದಂತೆ ಮಕ್ಕಳ ಮೊಬೈಲ್‌ ಗೀಳಿನಿಂದ ರೋಸಿ ಹೋಗಿದ್ದಾರೆ. ಹೇಗಾದರೂ ಮಾಡಿ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬೇಕು ಎಂಬುದು ಅವರ ನಿಲುವು- ಹಠ. ಆದರೆ, ತಾವು ದಿನಕ್ಕೆ ಎಷ್ಟು ಗಂಟೆ ಮೊಬೈಲ್‌ ಬಳಸುತ್ತಿದ್ದೇವೆ, ನಮ್ಮನ್ನು ನೋಡಿ ಮಕ್ಕಳು ಏನನ್ನು ಕಲಿಯುತ್ತಿದ್ದಾರೆ ಅಂತ ಗಮನಿಸದೇ ಇರುವುದು ವಿಪರ್ಯಾಸ.

ಮನೆಯೇ ಶಾಲೆ, ಹೆತ್ತವರೇ ಗುರು
ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಅಪ್ಪ-ಅಮ್ಮನೇ ಗುರುಗಳು. ಮನೋ ವಿಜ್ಞಾನದ ಅಧ್ಯಯನವೊಂದು ಹೇಳುವ ಪ್ರಕಾರ- ಹೆತ್ತವರು ಏನು ಹೇಳುತ್ತಿದ್ದಾರೆ ಅನ್ನುವುದಕ್ಕಿಂತ, ಅವರು ಮಾಡುವುದನ್ನು ನೋಡಿಯೇ ಮಕ್ಕಳು ಕಲಿಯುತ್ತವೆ. ಅಂದರೆ, ಬಾಲ್ಯದ ಆರಂಭಿಕ ಹಂತದಲ್ಲಿ ಅಪ್ಪ-ಅಮ್ಮನ ವರ್ತನೆಯನ್ನೇ ಮಕ್ಕಳು ನಕಲು ಮಾಡುತ್ತವೆ. ನೀವು ಆಗಾಗ್ಗೆ ಮೊಬೈಲ್‌ ಕೈಗೆತ್ತಿಕೊಳ್ಳುತ್ತಿದ್ದರೆ, ಊಟದ ಸಮಯದಲ್ಲಿ ಇ ಮೇಲ್‌ ನೋಡುತ್ತಿದ್ದರೆ, ದಿನದ ಬಹುಪಾಲು ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದರೆ ಮಕ್ಕಳು, ತಮಗೂ ಅದನ್ನು ಬಳಸಲು ಕೊಡಿ ಅಂತ ಪೀಡಿಸುತ್ತವೆ. ನೀವು ಬೈದು-ಗದರಿ ಏನು ಮಾಡಿದರೂ ಉಹೂಂ, ಅವರ ಹಠ ನಿಲ್ಲುವುದಿಲ್ಲ. ಇದನ್ನೇ “ಸೆಕೆಂಡ್‌ಹ್ಯಾಂಡ್‌ ಸ್ಕ್ರೀನ್‌ಟೈಮ್‌’ ಎನ್ನುವುದು.

ಹಾಗೆಂದರೆ ಏನು?
ಮೊಬೈಲ್‌, ಕಂಪ್ಯೂಟರ್‌ ಎದುರು ನಾವು ಕಳೆಯುವ ಸಮಯವನ್ನು “ಸ್ಕ್ರೀನ್‌ ಟೈಮ್‌’ ಎನ್ನುತ್ತೇವೆ. ಹೆತ್ತವರು ಮೊಬೈಲ್‌ನಲ್ಲಿ ಮುಳುಗಿದ್ದಾಗ, ಅವರಿಂದ ಪ್ರೇರೇಪಿತರಾಗಿ ಮಕ್ಕಳು ಮೊಬೈಲ್‌ ಕಡೆಗೆ ಆಕರ್ಷಿತರಾಗುವುದಕ್ಕೆ “ಸೆಕೆಂಡ್‌ಹ್ಯಾಂಡ್‌ ಸ್ಕ್ರೀನ್‌ ಟೈಮ್‌’ ಎನ್ನುತ್ತಾರೆ. ಧೂಮಪಾನದಲ್ಲಿ ಹೇಗೆ ಆ್ಯಕ್ಟಿವ್‌ ಸ್ಮೋಕಿಂಗ್‌ನಷ್ಟೇ (ವ್ಯಕ್ತಿ ನೇರವಾಗಿ ಧೂಮಪಾನ ಮಾಡುವುದು) ಪ್ಯಾಸಿವ್‌ ಸ್ಮೋಕಿಂಗ್‌ (ಧೂಮಪಾನ ಮಾಡುವಾಗ ಆ ಪರಿಸರದಲ್ಲಿ ಇರುವುದು) ಕೂಡಾ ಹಾನಿಕಾರಕ ಎನ್ನುತ್ತಾರೋ, ಹಾಗೆಯೇ “ಸೆಕೆಂಡ್‌ ಹ್ಯಾಂಡ್‌ ಸ್ಕ್ರೀನ್‌ ಟೈಮ್‌’ ಕೂಡಾ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಪ್ಪ-ಅಮ್ಮನ ಗಮನವನ್ನು ಸದಾ ಸೆಳೆಯುವ, ನೀಲಿ ಬೆಳಕನ್ನು ಸೂಸುತ್ತಾ, ದೃಶ್ಯ-ಧ್ವನಿಗಳನ್ನು ಹೊಮ್ಮಿಸುವ ಆ ಪುಟ್ಟ ಮಾಯಾ ಪೆಟ್ಟಿಗೆಯತ್ತ ಸಣ್ಣ ಕಂದಮ್ಮಗಳು ಆಕರ್ಷಿತರಾಗುವುದರಲ್ಲಿ, ಅದನ್ನು ಬಳಸಬೇಕೆಂದು ಹಠ ಹಿಡಿಯುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಎನ್ನುತ್ತಾರೆ ಮನೋವಿಜ್ಞಾನಿಗಳು.

ಒಂದು ಗಂಟೆಗಿಂತ ಕಡಿಮೆ
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಓ) ವರದಿಯ ಪ್ರಕಾರ, ಐದು ವರ್ಷದೊಳಗಿನ ಮಕ್ಕಳ “ಸ್ಕ್ರೀನ್‌ ಟೈಮ್‌’ ದಿನಕ್ಕೆ ಒಂದು ಗಂಟೆಗಿಂತ ಕಡಿಮೆ ಇರಬೇಕು. ಆ ವಯಸ್ಸಿನ ಮಕ್ಕಳು ಹೆಚ್ಚೆಚ್ಚು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು ಮೊಬೈಲ್‌, ಕಂಪ್ಯೂಟರ್‌ ಗೇಮ್‌ಗಳಲ್ಲಿ ಅಲ್ಲ. ಅವರನ್ನು ಹೆಚ್ಚು ಸಮಯ ಒಂದೆಡೆ ಕೂರುವಂತೆ ಮಾಡುವುದು ಕೂಡಾ ಸರಿಯಲ್ಲ. ಸಕ್ರಿಯವಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮಕ್ಕಳು ದೈಹಿಕ, ಮಾನಸಿಕ, ಭಾವನಾತ್ಮಕವಾಗಿ ಸದೃಢರಾಗುತ್ತಾರೆ. ಅದರಿಂದ ಮಗುವಿನ ನಿದ್ರೆಯ ಗುಣಮಟ್ಟವೂ ಹೆಚ್ಚುತ್ತದೆ ಎನ್ನುತ್ತದೆ ಡಬ್ಲ್ಯುಎಚ್‌ಓ ವರದಿ.

ರಾಮಕೃಷ್ಣ ಪರಮಹಂಸರು ಹುಡುಗನೊಬ್ಬನ ಬೆಲ್ಲ ತಿನ್ನುವ ಚಟವನ್ನು ಬಿಡಿಸಲೆಂದು, ತಾವೂ ಆ ಚಟದಿಂದ ಮುಕ್ತರಾದ ಕಥೆ ಕೇಳಿದ್ದೀರಲ್ಲ? ಹಾಗೆಯೇ, ಮಕ್ಕಳ ಮೊಬೈಲ್‌ ಗೀಳನ್ನು ದೂರವಾಗಿಸುವ ಮುನ್ನ ನಾವು-ನೀವು ಆ ಗೀಳಿನಿಂದ ಹೊರ ಬರಬೇಕಲ್ಲವೇ? ಹೆತ್ತವರೇ ಮೊಬೈಲ್‌ಗೆ ದಾಸರಾಗಿರುವಾಗ ಮಕ್ಕಳನ್ನು ಅದರಿಂದ ದೂರವಿಡಲು ಸಾಧ್ಯವೇ?

ನೀವೆಷ್ಟು ಅಡಿಕ್ಟ್ ಆಗಿದ್ದೀರಿ?
ವಿವೊ ಮೊಬೈಲ್‌ ಬ್ರ್ಯಾಂಡ್‌ ಹಾಗೂ ಸೈಬರ್‌ ಮೀಡಿಯಾ ರಿಸರ್ಚ್‌ (ಸಿಎಮ…ಆರ್‌) ಸಹಯೋಗದಲ್ಲಿ ಇತ್ತೀಚೆಗೆ, ಸ್ಮಾರ್ಟ್‌ ಫೋನ್‌ ಕುರಿತಾಗಿ ಅಧ್ಯಯನವೊಂದು ನಡೆದಿತ್ತು. ಆ ಅಧ್ಯಯನದಲ್ಲಿ ತಿಳಿದ ವಿಷಯವೇನೆಂದರೆ, ಇತ್ತೀಚಿನ ವರ್ಷಗಳಲ್ಲಿ ಜನರು ತಾವು ಎಚ್ಚರವಿರುವ 1/3 ಭಾಗವನ್ನು ಅಥವಾ ವರ್ಷದಲ್ಲಿ 1800 ಗಂಟೆಗಳನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರಂತೆ. 28% ಮೊಬೈಲ್‌ ಬಳಕೆದಾರರು ದಿನದಲ್ಲಿ 11-25 ಬಾರಿ, 22% ಜನ 26-50 ಬಾರಿ ತಮ್ಮ ಮೊಬೈಲ್‌ ಚೆಕ್‌ ಮಾಡುತ್ತಿರುತ್ತಾರಂತೆ. ನೀವು ಮೊಬೈಲ್‌ಗೆ ಎಷ್ಟು ಅಡಿಕ್ಟ್ ಆಗಿದ್ದೀರಿ ಅಂತ ಗಮನಿಸಿ ನೋಡಿ. ನಿಮ್ಮ ವರ್ತನೆ ನೋಡಿ, ಮಕ್ಕಳು ಕೂಡಾ ಮೊಬೈಲ್‌ಗೆ ದಾಸರಾಗುತ್ತಿದ್ದಾರೆ ಅಂತಾದರೆ, ಏನು ಮಾಡಬಹುದು ಅಂತ ನೀವೇ ಯೋಚಿಸಿ.

ಊಟದ ವೇಳೆ ಮೊಬೈಲ್‌ ಬ್ಯಾನ್‌
ಯೂಟ್ಯೂಬ್‌ನಲ್ಲಿ ವಿಡಿಯೋ ನೋಡದೆ ಮಗು ಊಟಾನೇ ಮಾಡೋದಿಲ್ಲ ಅಂತ ಅಮ್ಮಂದಿರು ಒಂಥರಾ ಹೆಮ್ಮೆಯಿಂದ ಹೇಳುತ್ತಿರುತ್ತಾರೆ. ಆದರೆ, “ಊಟದ ಸಮಯದಲ್ಲಿ ಮಕ್ಕಳು ಮೊಬೈಲ್‌ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದೇನೆ. ನಮ್ಮ ಮನೆಯಲ್ಲಿ ಡಿನ್ನರ್‌ ಟೇಬಲ್‌ ಬಳಿಗೆ ಮೊಬೈಲ್‌ ತರುವಂತೆಯೇ ಇಲ್ಲ’ ಅನ್ನುತ್ತಾರೆ ಸುಸಾನ್‌ ವೋಜಿಕ್ಸಿ. ಈಕೆ ಯಾರು ಗೊತ್ತಾ? ಯೂಟ್ಯೂಬ್‌ನ ಸಿಇಒ! ಸುಸಾನ್‌ ಹೇಳುವಂತೆ, ಮಕ್ಕಳಿಗೆ ಹನ್ನೊಂದು ವರ್ಷವಾಗುವವರೆಗೆ ಅವರ ಕೈಗೆ ಮೊಬೈಲ್‌ ಕೊಡಲೇಬಾರದಂತೆ. ಅದರಲ್ಲೂ, ಹೊರಗೆ ಸುತ್ತಾಡಲು ಹೋದಾಗ, ಕುಟುಂಬದೊಂದಿಗೆ ಸಮಯ ಕಳೆಯುವಾಗ ಮಕ್ಕಳು ಮೊಬೈಲ್‌ನಲ್ಲಿ ಮುಳುಗುವುದನ್ನು ಸುಸಾನ್‌ ಸಹಿಸುವುದಿಲ್ಲ. ಇದರಿಂದ ಮಕ್ಕಳು ಸಮಾಜದಿಂದ, ಸಂಬಂಧಗಳಿಂದ ವಿಮುಖರಾಗುತ್ತಾ ಹೋಗುತ್ತಾರೆ ಎಂಬುದು ಅವರ ಅಭಿಪ್ರಾಯ. ಪ್ರಾಥಮಿಕ ಶಾಲೆಯಲ್ಲಿರುವಾಗಲೇ ಮಕ್ಕಳಿಗೆ ಆನ್‌ಲೈನ್‌ ಶಿಷ್ಟಾಚಾರ, ಮೊಬೈಲ್‌ ಬಳಕೆಯ ಇತಿಮಿತಿಯನ್ನು ತಿಳಿಸಿಕೊಡಬೇಕು. ಹೆತ್ತವರು ಕೂಡಾ ಮೊಬೈಲ್‌ನಿಂದ ದೂರವಿದ್ದು, ಮಕ್ಕಳೊಡನೆ ಹೆಚ್ಚೆಚ್ಚು ಸಮಯ ಕಳೆಯಬೇಕು ಅಂತಾರೆ ಸುಸಾನ್‌. ಅಷ್ಟೇ ಅಲ್ಲ, ಆ್ಯಪಲ್‌ ಕಂಪನಿ ಸ್ಥಾಪಕ ಸ್ಟೀವ್‌ ಜಾಬ್ಸ್, ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಝುಕರ್‌ಬರ್ಗ್‌ ಕೂಡಾ ತಮ್ಮ ಮಕ್ಕಳನ್ನು ಗ್ಯಾಜೆಟ್‌ಗಳಿಂದ ದೂರವಿಟ್ಟಿದ್ದರು.

ದುಷ್ಪರಿಣಾಮಗಳು
ಆರಂಭಿಕ ವರ್ಷಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್‌ ಬಳಸುವುದರಿಂದ ಆಗುವ ಕೆಟ್ಟ ಪರಿಣಾಮಗಳು
-ಜಡ ಜೀವನಶೈಲಿಗೆ ಮಕ್ಕಳು ಒಗ್ಗಿಕೊಳ್ಳುತ್ತಾರೆ.
-ಮೆದುಳಿನ ಬೆಳವಣಿಗೆ ಕುಂಠಿತವಾಗುತ್ತದೆ.
-ನಿದ್ರಾಹೀನತೆ
-ದೈಹಿಕ ಚಟುವಟಿಕೆಗಳಿಲ್ಲದೆ ಸ್ಥೂಲಕಾಯರಾಗುತ್ತಾರೆ.
-ಏಕಾಗ್ರತೆಯಲ್ಲಿ ತೊಂದರೆ
-ದೃಷ್ಟಿ ಮಂದವಾಗುವುದು
-ಮಾನಸಿಕ ಕಿರಿಕಿರಿ ಮತ್ತು ಉದ್ವೇಗ

ಏನೇನು ಮಾಡಬಹುದು?
-ಮಕ್ಕಳು ಹಠ ಮಾಡಿದಾಗೆಲ್ಲಾ ಮೊಬೈಲ್‌ ಕೊಟ್ಟು ಸುಮ್ಮನಾಗಿಸುವ ಪರಿಪಾಠ ಸರಿಯಲ್ಲ.
-5 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್‌ ಮುಟ್ಟಲು ಬಿಡದಿರುವುದೇ ವಾಸಿ.
-ಮಕ್ಕಳಿಗಷ್ಟೇ ಅಲ್ಲ, ನೀವೂ ಕೂಡಾ ಮೊಬೈಲ್‌ ಬಳಕೆಯ ನಿಯಂತ್ರಣಕ್ಕೆ ಕೆಲವಷ್ಟು ನಿಯಮಗಳನ್ನು ಪಾಲಿಸಿ.
-ಊಟಕ್ಕೆ ಕುಳಿತಾಗ, ಸುತ್ತಾಟಕ್ಕೆಂದು ಹೊರಗೆ ಹೋದಾಗ, ಮಕ್ಕಳೊಂದಿಗೆ ಮಾತನಾಡುವಾಗ ಮೊಬೈಲ್‌ನಲ್ಲಿ ಮುಳುಗಿ ಹೋಗಬೇಡಿ.
-ಹೈಸ್ಕೂಲ್‌ ಒಳಗಿನ ಮಕ್ಕಳಿಗೆ ಪ್ರತ್ಯೇಕ ಮೊಬೈಲ್‌ ಕೊಡಿಸುವ ಅಗತ್ಯವಿಲ್ಲ. ತರಗತಿಯ ಪ್ರಾಜೆಕ್ಟ್ಗಳಿಗೆ ಇಂಟರ್‌ನೆಟ್‌ ಬಳಕೆ ಅಗತ್ಯವಿದ್ದರೆ, ನಿಗದಿತ ಸಮಯದವರೆಗೆ ನಿಮ್ಮ ಮೊಬೈಲ್‌ ಬಳಸಲು ಬಿಡಬಹುದು.
-ಮಕ್ಕಳಿಗೆ ಪ್ರತ್ಯೇಕ ಮೊಬೈಲ್‌, ಐಪ್ಯಾಡ್‌, ಲ್ಯಾಪ್‌ಟಾಪ್‌ ಕೊಡಿಸುವ ಬದಲು, ಎಲ್ಲರ ಬಳಕೆಗೆ ತಕ್ಕಂತೆ ಮನೆಯಲ್ಲೊಂದು ಕಂಪ್ಯೂಟರ್‌ ಇಡಿ.
-ಪೇರೆಂಟ್‌ ಕಂಟ್ರೋಲ್‌ ಆ್ಯಪ್‌ಗ್ಳ ಮೂಲಕ ಮಕ್ಕಳ ಮೊಬೈಲ್‌ ಬಳಕೆಯನ್ನು, ಅವರು ಯಾವ ಯಾವ ಆ್ಯಪ್‌ಗ್ಳನ್ನು ಎಷ್ಟೆಷ್ಟು ಸಮಯ ಬಳಸುತ್ತಿದ್ದಾರೆ ಎಂಬುದನ್ನು ಕೂಡಾ ನಿಯಂತ್ರಿಸಬಹುದು. ನಿಗದಿತ ಅವಧಿಯ ನಂತರ ಮಕ್ಕಳ ಮೊಬೈಲ್‌ ಆ್ಯಪ್‌ಗ್ಳನ್ನು ನಿಷ್ಕ್ರಿಯಗೊಳಿಸಬಹುದು.

ರೋಹಿಣಿ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.