ಪ್ಯಾಡ್‌ಮ್ಯಾನ್‌ ಅರುಣಾ”ಛಲ’


Team Udayavani, Jan 24, 2018, 3:27 PM IST

27-36.jpg

ಎಲ್ಲ ಮಹಿಳೆಯರ ಕಷ್ಟವನ್ನೂ ಕಡಿಮೆ ಮಾಡಬೇಕು ಎಂಬುದಷ್ಟೇ ನನ್ನ ಮಹದಾಸೆಯಾಗಿತ್ತು. ಆದರೆ ಅದನ್ನು ನನ್ನ ಹೆಂಡತಿ, ತಾಯಿ, ಸೋದರಿಯರು, ಊರಿನ ಜನ…ಈ ಯಾರೊಬ್ಬರೂ ಅರ್ಥ ಮಾಡಿಕೊಳ್ಳಲಿಲ್ಲ. ಹುಚ್ಚ ಎಂದರು, ಮಂತ್ರವಾದಿ ಎಂದರು. ನಂತರ ಅವನನ್ನು ಹೀಯಾಳಿಸಿದವರೇ ಕರೆದು ಸನ್ಮಾನಿಸಿದರು. ಈಗ ಆತನ ಯಶೋಗಾಥೆ Padman ಹೆಸರಿನಲ್ಲಿ ಸಿನಿಮಾ ಆಗುತ್ತಿದೆ. 

ಅವನ್ಯಾರೋ ಅರುಣಾಚಲಂ ಅಂತೆ. ಕೊಯಮತ್ತೂರಿನವನಂತೆ. ಹೈಸ್ಕೂಲಿಗೇ ಓದು ನಿಲ್ಲಿಸಿದವನಂತೆ. ಅಂಥವನು ತುಂಬಾ ಕಡಿಮೆ ಬೆಲೆಯ, ಅತ್ಯುತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್‌ ತಯಾರಿಸಿದ್ದಾನಂತೆ…ಹೀಗೊಂದು ಸುದ್ದಿ ಐದು ವರ್ಷಗಳ ಹಿಂದೆ ಎಲ್ಲ ಪತ್ರಿಕೆಗಳ ಹೆಡ್‌ಲೈನ್‌ ಆಗಿತ್ತು. ಅವತ್ತು ಅರುಣಾಚಲಂನನ್ನು ಈ ಲೋಕ, ಕುತೂಹಲ ಮತ್ತು ಬೆರಗಿನಿಂದ ನೋಡಿತ್ತು. ಇದೀಗ, ಅರುಣಾಚಲಂನ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಈತನ ಯಶೋಗಾಥೆ Padman ಹೆಸರಿನಲ್ಲಿ ಸಿನಿಮಾವೂ ಆಗುತ್ತಿದೆ. ಅರುಣಾಚಲಂನ ಪಾತ್ರವನ್ನು ನಟ ಅಕ್ಷಯ್‌ಕುಮಾರ್‌ ನಿರ್ವಹಿಸಲಿದ್ದಾರೆ. ಸಹಜವಾಗಿಯೇ ಈ ಸಿನಿಮಾದ ಕುರಿತು ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಪ್ಯಾಡ್‌ನ‌ ವಿಸ್ತಾರ ಮತ್ತು ವಿನ್ಯಾಸ ಹೇಗಿರಬೇಕು? ಅದನ್ನು ಧರಿಸುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂದು ತಿಳಿಯಲು, ಅರುಣಾಚಲಂ ತಾನೇ ಪ್ಯಾಡ್‌ ಧರಿಸಿಕೊಂಡು ಓಡಾಡಿದ್ದನಂತೆ ಎಂದ ಸುದ್ದಿ ತಿಳಿದಾಗಲಂತೂ- “ಇಶ್ಶೀ.. ಹೀಗೂ ಉಂಟೇನ್ರೀ…’ ಎಂದು ಹಲವರು ಮುಖ ಕಿವುಚಿದ್ದರು. ಪ್ಯಾಡ್‌ ಧರಿಸಿ ಓಡಾಡಿದ್ದನೆಂಬ ಕಾರಣಕ್ಕೇ, ಅರುಣಾಚಲಂನನ್ನು “ಪ್ಯಾಡ್‌ಮ್ಯಾನ್‌’ ಎಂದು ಕರೆದಿದ್ದರು. ನಂತರದ ದಿನಗಳಲ್ಲಿ ಪ್ಯಾಡ್‌ ಸಂಶೋಧನೆಯ ಕಾರಣಕ್ಕೆ “ಪದ್ಮಶ್ರೀ’ ಪ್ರಶಸ್ತಿಯೂ ಅರುಣಾಚಲಂನನ್ನು ಹುಡುಕಿಕೊಂಡು ಬಂತು. ಅರುಣಾಚಲಂನ ಯಶೋಗಾಥೆ, ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಪಠ್ಯವೂ ಆಯಿತು. 

ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳ ಸಂಶೋಧನೆ ಮತ್ತು ಉತ್ಪಾದನೆಗೆ ಅರುಣಾಚಲಂ ಮುಂದಾಗಿದ್ದೇಕೆ? ಈ ಸಂದರ್ಭದಲ್ಲಿ ಅವನಿಗೆ ಎದುರಾದ ಸವಾಲುಗಳೇನು? ಅವನ ಹಿನ್ನೆಲೆ ಎಂಥಾದ್ದು? ಒಂದು ಯಶಸ್ಸನ್ನು ಪಡೆದುಕೊಳ್ಳುವ ಮೊದಲು ಆತ ಏನೇನು ಕಷ್ಟಗಳನ್ನು ಎದುರಿಸಬೇಕಾಯಿತು? ಯಾರ್ಯಾರ ನಿಷ್ಠುರ ಕಟ್ಟಿಕೊಳ್ಳಬೇಕಾಯಿತು ಎಂಬುದನ್ನು ತಿಳಿಯುವ ಪ್ರಯತ್ನದ ಫ‌ಲವೇ ಈ ಬರಹ.

ಕೊಯಮತ್ತೂರಿಗೆ ಸಮೀಪದ ಒಂದು ಪುಟ್ಟ ಹಳ್ಳಿಯವನು ಅರುಣಾಚಲಂ. ಅವರದ್ದು ನೇಕಾರರ ಕುಟುಂಬ. ಅಪ್ಪ-ಅಮ್ಮ, ಇಬ್ಬರು ತಂಗಿಯರು.. ಹೀಗೆ ಐದು ಮಂದಿಯಿದ್ದ ಸುಖೀ ಕುಟುಂಬ ಇವರದಾಗಿತ್ತು. ಕಾನ್ವೆಂಟ್‌ ಓದುತ್ತಿದ್ದಾಗಲೇ ತಂದೆ ತೀರಿಹೋದರು. ಹಾಗಾಗಿ, ಚಿಕ್ಕಂದಿನಿಂದಲೇ ಒಂದೊಂದೇ ಜವಾಬ್ದಾರಿಗಳು ಅರುಣಾಚಲಂನ ಹೆಗಲಿಗೇರಿದವು. 9ನೇ ತರಗತಿಗೇ ಸ್ಕೂಲ್‌ಗೆ ಗುಡ್‌ಬೈ ಹೇಳಿದ ಈತ ಆಫೀಸ್‌ಬಾಯ್‌, ಎಲೆಕ್ಟ್ರಿಶಿಯನ್‌, ವೆಲ್ಡರ್‌, ಸೆಕ್ಯೂರಿಟಿ ಗಾರ್ಡ್‌, ಮೆಶಿನ್‌ ಆಪರೇಟರ್‌…ಹೀಗೆ ಹಲವು ಕೆಲಸಗಳನ್ನು ನಿರ್ವಹಿಸಿದ. ದುಡಿಮೆಯಿಂದ, ಮೂರು ಹೊತ್ತಿನ ಅನ್ನ ಸಿಕ್ಕಿದರೆ ಸಾಕು ಎಂಬುದೇ ಗುರಿಯಾಗಿದ್ದರಿಂದ ಬದುಕು “ಹೇಗೋ’ ನಡೆಯುತ್ತಿತ್ತು. 

1998ರಲ್ಲಿ ಅರುಣಾಚಲಂಗೆ ಮದುವೆಯಾಯಿತು. ಈತನ ಪತ್ನಿಯಾಗಿ ಬಂದಾಕೆ ಶಾಂತಿ. ಆ ದಿನಗಳನ್ನು ನೆನಪಿಸಿಕೊಂಡು ಅರುಣಾಚಲಂ  ಹೇಳುತ್ತಾರೆ: ” ನನಗೆ ಆಗಷ್ಟೇ ಮದುವೆಯಾಗಿತ್ತು. ಅಂದಮೇಲೆ ಕೇಳಬೇಕೆ? ಸದಾ ಹೆಂಡತಿಯ ಜೊತೆಯೇ ಇರಬೇಕು. ಅವಳನ್ನು ಮತ್ತೆ ಮತ್ತೆ ಇಂಪ್ರಸ್‌ ಮಾಡಬೇಕು. ಅವಳಿಗೆ ಅಂಟಿಕೊಂಡೇ ಕೂತಿರಬೇಕು ಎಂದೆಲ್ಲಾ ಆಸೆಯಾಗುತ್ತಿತ್ತು. ಅವತ್ತೂಂದು ದಿನ, ನನ್ನ ಹೆಂಡತಿ ಅದೇನನ್ನೋ ಅಡಗಿಸಿಕೊಂಡು ಹೊರಗೆ ಹೋಗುತ್ತಿದ್ದಾಳೆ ಅನ್ನಿಸಿತು. ನನ್ನಿಂದ ಗುಟ್ಟು ಮಾಡುವಂಥ ವಿಚಾರ ಏನಿರಬಹುದು ಎಂಬ ಕುತೂಹಲದಿಂದಲೇ, ಚೂರೂ ಸುಳಿವು ಕೊಡದೆ ಅವಳನ್ನು ಸಮೀಪಿಸಿ ಅವಳ ಬಳಿಯಿದ್ದ ವಸ್ತುವನ್ನು ಕಿತ್ತುಕೊಂಡೆ. ಮೆತ್ತಗಿದ್ದ ಆ ವಸ್ತುವಿನಿಂದ ಸಹಿಸಲಾಗದಂಥ ಗಬ್ಬು ವಾಸನೆ ಬಂತು. ನೋಡುತ್ತೇನೆ: ಅದು ಮುಟ್ಟಲೂ ಯೋಗ್ಯವಲ್ಲದ ಕೊಳೆಬಟ್ಟೆಯಾಗಿತ್ತು. ಅಲ್ಲಲ್ಲಿ ಹರಿದಿತ್ತು. ಸ್ಕೂಟರ್‌ ಒರೆಸಲೂ ಯೋಗ್ಯವಲ್ಲದ ಬಟ್ಟೆಯದು. ನಾನು ಇನ್ನೇನೋ ಯೋಚಿಸುವ ಮೊದಲೇ, -“ಪೀರಿಯೆಡ್ಸ್‌ ಆಗಿದೆ ಕಣ್ರೀ. ಈ ಬಟ್ಟೇನ ನೀವು ಮುಟ್ಟಬಾರ್ಧು. ಅದನ್ನಿಲ್ಲಿ ಕೊಡಿ’ ಎಂದು ಹೆಂಡತಿ ರೇಗಿದಳು. “ಅಂಥಾ ಕೊಳಕು ಬಟ್ಟೇನ ಬಳಸೋದಾ? ಬೆಸ್ಟ್‌ ಕ್ವಾಲಿಟಿಯ ಬಟ್ಟೆ ಬಳಸಬಾರದಾ?’ ಎಂದೆ. “ನಾಳೆ ಮೆಡಿಕಲ್‌ ಶಾಪ್‌ಗೆ ಹೋಗಿ ತಂದುಕೊಡಿ’ ಅಂದಳು. 

ಮರುದಿನ ಮೆಡಿಕಲ್‌ ಶಾಪ್‌ಗೆ ಹೋದರೆ, ಒಂದು ಪ್ಯಾಡ್‌ಗೆ 50 ರೂಪಾಯಿ ಅಂದರು. ಅವತ್ತಿಗೆ ನಮ್ಮ ಕುಟುಂಬದ ಸಂಪಾದನೆ ತಿಂಗಳಿಗೆ 1000 ರೂ. ದಾಟುತ್ತಿರಲಿಲ್ಲ. ಹೀಗಿರುವಾಗ, ಪೀರಿಯೆಡ್ಸ್‌ನ ಸಂದರ್ಭದಲ್ಲಿ ಬಳಸುವ ಪ್ಯಾಡ್‌ಗೆ 50 ರೂ. ಕೊಡಲು ಸಾಧ್ಯವೇ? ಪ್ಯಾಡ್‌ ಖರೀದಿಸಲು ಶಕ್ತಿಯಿಲ್ಲದ ನೂರಾರು ಮಂದಿ ನನ್ನ ಸುತ್ತಲೂ ಇದ್ದಾರೆ. ಅವರೆಲ್ಲಾ ಹೇಗೆ ಬದುಕುತ್ತಿದ್ದಾರೆ ಎಂದು ತಿಳಿಯುವ ಆಸೆಯಾಯಿತು. ಹರಿದುಹೋದ ಬಟ್ಟೆಯೊಳಗೆ ಒಣಗಿದ ಎಲೆ, ನುಣುಪಾದ ಮಣ್ಣು, ಬೂದಿಯನ್ನು ತುಂಬಿಕೊಂಡು ಪೀರಿಯೆಡ್ಸ್‌ ಸಂದರ್ಭದ ಕಷ್ಟಗಳನ್ನು ಜನ ಎದುರಿಸ್ತಿದ್ರು ಎಂಬ ಕರಾಳಸತ್ಯ ನನಗೆ ಗೊತ್ತಾಗಿದ್ದೇ ಆಗ. 

ಹೆಣ್ಣು ಅನ್ನಿಸಿಕೊಂಡ ಜೀವ, ಪೀರಿಯೆಡ್ಸ್‌ನ ಬಾಧೆಯಿಂದ ಪಾರಾಗಲು ಸಾಧ್ಯವೇ ಇಲ್ಲ. ಪ್ಯಾಡ್‌ನ‌ಲ್ಲಿ ಹತ್ತಿಯಂಥ ಮೆತ್ತಗಿನ ಬಟ್ಟೆ ಇರುತ್ತದೆ ಎಂದು ಹೆಂಡತಿಯೇ ಹೇಳಿದ್ದಳು. ಹಳೇ ಬಟ್ಟೆಗೆ ಹತ್ತಿಯನ್ನು ತುಂಬಿ ಅದನ್ನೇ ಪ್ಯಾಡ್‌ ಥರಾ ಬಳಸಿದರೆ ಹೇಗೆ ಅನ್ನಿಸಿತು. ಇದೊಂದು ಪ್ರಯೋಗ ಯಶಸ್ವಿಯಾದರೆ ಪ್ರತಿ ಮನೆಯ ಹೆಂಗಸರೂ ತಾವೇ ಪ್ಯಾಡ್‌ಗಳನ್ನು ತಯಾರಿಸಿಕೊಳ್ಳಬಹುದಲ್ಲವೆ ಅನ್ನಿಸಿತು. ಅದನ್ನೇ ಹೆಂಡತಿಗೂ ಹೇಳಿದೆ. ಹಳೇಬಟ್ಟೆಗೆ ಹತ್ತಿಯನ್ನು ತುಂಬಿ, “ಮೊದಲಿಗೆ ನೀನೇ ಇದನ್ನು ಬಳಸಿನೋಡು. ಇದರಲ್ಲಿ ಏನಾದ್ರೂ ತೊಂದರೆ ಇದೆ ಅನ್ನಿಸಿದ್ರೂ ತಿಳಿಸು’ ಅಂದೆ. “ನನ್ನ ಪೀರಿಯೆಡ್ಸ್‌ ಟೈಂ ಮುಗೀತು. ಇನ್ನೇನಿದ್ರೂ ಮುಂದಿನ ತಿಂಗಳೇ…!’ ಅಂದಳು ಹೆಂಡತಿ. ಅರ್ಜೆಂಟಾಗಿ ಹೊಸದೊಂದು ಸಂಶೋಧನೆ ಮಾಡಬೇಕೆಂಬ ಹುಮ್ಮಸ್ಸಿನಲ್ಲಿದ್ದ ನನಗೆ ಹೆಂಡತಿಯ ಮಾತಿಂದ ನಿರಾಸೆಯಾಯಿತು. ತಕ್ಷಣವೇ ತಂಗಿಯರ ಎದುರು ನಿಂತು ಮನವಿ ಮಾಡಿಕೊಂಡೆ : “ಪೀರಿಯೆಡ್ಸ್‌ ಟೈಂನಲ್ಲಿ ಬಳಸುವ ಪ್ಯಾಡ್‌ಗೆ 50 ರೂಪಾಯಿ ಕೊಡುವ ಬದಲು, ಫ್ರೀಯಾಗಿ ಸಿಗುವುದನ್ನೇ ಬಳಸಿ’ ಎಂದೆ. ಈ ಮಾತು ಕೇಳಿ ತಂಗಿಯರಿಬ್ಬರೂ  ಹೌಹಾರಿದರು. ಇಂಥಾ ಸಂಶೋಧನೆಗೆ ಬೆಂಕಿ ಬೀಳಲಿ. ಇಂಥದ್ದನ್ನೆಲ್ಲ ಮಾಡಲು ಹೋಗ್ಬೇಡ ಎಂದು ಬುದ್ಧಿ ಹೇಳಿದರು.   

ಈ ಹೊತ್ತಿಗೆ, ಏನಾದರೂ ಸರಿ; ಕಡಿಮೆ ಬೆಲೆಯ ನ್ಯಾಪ್‌ಕಿನ್‌ಗಳನ್ನು ತಯಾರಿಸಲೇಬೇಕು ಎಂಬ ಹಠ ಬಂದುಬಿಟ್ಟಿತ್ತು. ಆದರೆ, ಪ್ಯಾಡ್‌ನೊಳಗೆ ಏನಿರುತ್ತದೆ? ಆ ಕಚ್ಚಾವಸ್ತು ಎಲ್ಲಿಂದ ಸಿಗುತ್ತದೆ ಎಂಬುದನ್ನು ತಿಳಿಯಬೇಕಿತ್ತು. ಹಾಗೆಯೇ, ಪ್ಯಾಡ್‌ ಧರಿಸಿದಾಗ ಎಂಥಾ ಫೀಲ್‌ ಆಗುತ್ತದೆ ಎಂಬುದನ್ನೂ ತಿಳಿಯಬೇಕಿತ್ತು. ನಾನು ತಯಾರಿಸಿದ ವಸ್ತುವನ್ನು ಧರಿಸಲು ಯಾರೂ ಒಪ್ಪದಿದ್ದಾಗ ನನ್ನ ಮೇಲೆಯೇ ಒಂದು ಪ್ರಯೋಗ ಮಾಡಿಕೊಳ್ಳಲು ಸಿದ್ಧನಾದೆ. ಫ‌ುಟ್‌ಬಾಲ್‌ ಬ್ಲಾಡರ್‌ಗೆ ಅಲ್ಲಲ್ಲಿ ತೂತು ಮಾಡಿ ಅದಕ್ಕೆ ಮೇಕೆಯ ರಕ್ತ ತುಂಬಿದೆ. ಅದನ್ನು ಬಟ್ಟೆಯಿಂದ ಸುತ್ತಿ, ಅದನ್ನೇ ಐದು ದಿನಗಳ ಕಾಲ ಧರಿಸಿಕೊಂಡು ಬದುಕಿದೆ. ಸ್ಯಾನಿಟರಿ ಪ್ಯಾಡ್‌ ಹಾಕಿಕೊಂಡು ಕುಳಿತಾಗ, ನಿಂತಾಗ, ಓಡಿದಾಗ, ಮಲಗಿದಾಗ ಬ್ಲೀಡಿಂಗ್‌ ಆದಾಗ ಆಗುವ ಸಂಕಟ ಹೇಗಿರುತ್ತೆ ಎಂಬುದು ನನಗೂ ಸ್ವಲ್ಪ ಅರ್ಥವಾಗಿದ್ದೇ ಆಗ. ನನ್ನ ಈ ವರ್ತನೆ ಕಂಡು ಹೆಂಡತಿ ಗಾಬರಿಯಾದಳು. ಇವನಿಗೆಲ್ಲೋ ಹುಚ್ಚು ಹಿಡಿದಿದೆ ಅಥವಾ ಇನ್ನೊಂದು ಮದುವೆಯಾಗುವ ಹುಕಿ ಬಂದಿದೆ. ಹಾಗಾಗಿಯೇ ಯಾವ್ಯಾವುದೋ ನೆಪ ಮಾಡಿಕೊಂಡು ಕಂಡಕಂಡ ಹೆಂಗಸರ ಎದುರು ನಿಲ್ಲುತ್ತಾನೆ ಅಂದುಕೊಂಡಳು. ಅಷ್ಟೇ ಅಲ್ಲ, ಇದೇ ಕಾರಣ ಮುಂದಿಟ್ಟು ಜಗಳ ಮಾಡಿ, ಡೈವೋರ್ಸ್‌ಗೆ ಒತ್ತಾಯಿಸಿ, ತವರಿಗೂ ಹೋಗಿಬಿಟ್ಟಳು. 

ಈ ವೇಳೆಗೆ, ಪ್ಯಾಡ್‌ ಧರಿಸುವುದರಿಂದ ಆಗುವ ಸಂಕಟವೇನು ಎಂದು ಅರ್ಥವಾಗಿತ್ತು. ಆದರೆ, ಪ್ಯಾಡ್‌ನ‌ ಒಳಭಾಗದಲ್ಲಿರುವ ಮೆತ್ತಗಿನ ವಸ್ತು ಯಾವುದು? ರಕ್ತವನ್ನು ಹೀರಿಕೊಂಡ ನಂತರ ಅದು ಹೇಗಿರುತ್ತದೆ ಎಂಬುದೇ ಅರ್ಥವಾಗಿರಲಿಲ್ಲ. ನಾನಾಗ ನೇರವಾಗಿ ಮೆಡಿಕಲ್‌ ವಿದ್ಯಾರ್ಥಿನಿಯರ ಮುಂದೆ ನಿಂತೆ. ನನ್ನ ಉದ್ದೇಶ ವಿವರಿಸಿದೆ. “ನಿಮಗೊಂದು ಬಾಕ್ಸ್‌ ಕೊಡುತ್ತೇನೆ. ನೀವು ಬಳಸಿದ ಪ್ಯಾಡ್‌ಗಳನ್ನು ಅದರಲ್ಲಿ ಹಾಕಿಡಿ. ನಾನು ಅದನ್ನು ತಗೊಂಡು ಹೋಗ್ತೀನೆ’ ಎಂದೆ. ಅವರು ಒಪ್ಪಿದರು. ಕಡೆಗೊಂದು ದಿನ, ಆ ಬಾಕ್ಸ್‌ನ್ನು ಮನೆಗೆ ತಂದು, ಒಂದೊಂದೇ ಪ್ಯಾಡ್‌ಗಳನ್ನು ಬಿಚ್ಚಿ ನೋಡುತ್ತಿದ್ದೆ. ಅದನ್ನೆಲ್ಲ ಅಮ್ಮ ನೋಡಿಬಿಟ್ಟಳು. ಮಗ, ವಾಮಾಚಾರದ ಹಿಂದೆ ಬಿದ್ದಿದ್ದಾನೆ. ಈ ಕಾರಣದಿಂದಲೇ ಹೆಂಗಸರ ಒಳಉಡುಪುಗಳ ಸಂಗ್ರಹಕ್ಕೆ ನಿಂತಿದ್ದಾನೆ ಎಂಬುದು ಅವಳ ನಂಬಿಕೆಯಾಗಿತ್ತು. ಅಮ್ಮ ಅವತ್ತು ರಂಪ ಮಾಡಿದಳು. ಊರವರನ್ನೆಲ್ಲ ಕರೆಸಿ ಪಂಚಾಯ್ತಿ ಮಾಡಿಸಿದಳು. ನಾನಂತೂ ನಿನ್ನ ಜೊತೆ ಇರೋದಿಲ್ಲ ಎಂದು ಘೋಷಿಸಿ ತಂಗಿಯರ ಮನೆಗೆ ಹೋಗಿಬಿಟ್ಟಳು. ಇದಾಗಿ ಕೆಲವೇ ಸಮಯದ ನಂತರ, ಊರಿನ ಜನರೂ ನನಗೆ ಸಾಮೂಹಿಕ ಬಹಿಷ್ಕಾರ ಹಾಕಿದರು. 

ಅತ್ಯಂತ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಬೇಕು. ಆ ಮೂಲಕ ಎಲ್ಲ ಮಹಿಳೆಯರ ಕಷ್ಟವನ್ನೂ ಕಡಿಮೆ ಮಾಡಬೇಕು ಎಂಬುದಷ್ಟೇ ನನ್ನ ಮಹದಾಸೆಯಾಗಿತ್ತು. ಆದರೆ ಅದನ್ನು ನನ್ನ ಹೆಂಡತಿ, ತಾಯಿ, ಸೋದರಿಯರು, ಊರಿನ ಜನ…ಈ ಯಾರೊಬ್ಬರೂ ಅರ್ಥ ಮಾಡಿಕೊಳ್ಳಲಿಲ್ಲ. ಇದಕ್ಕಾಗಿ ಚಿಂತಿಸುವ ಬದಲು, ನನ್ನ ಸಂಶೋಧನೆಯನ್ನು ಮುಂದುವರಿಸಲೇಬೇಕು ಅನ್ನಿಸಿತು. ಈ ವೇಳೆಗೆ, ಸ್ಯಾನಿಟರಿ ಪ್ಯಾಡ್‌ನ‌ ಒಳಗೆ ಮೆತ್ತಗಿರುವುದು ಹತ್ತಿಯಲ್ಲ. ಬಗೆಬಗೆಯ ನಾರುಗಳಿಂದ ತಯಾರಾದ ಸಮ್ಮಿಶ್ರ ಉತ್ಪನ್ನ. ಅದು ತೀರಾ ಕಡಿಮೆ ಬೆಲೆಗೇ ಸಿಗುತ್ತದೆ ಎಂಬ ಸಂಗತಿಯೂ ನನಗೆ ಅರ್ಥವಾಗಿತ್ತು. ಮೊದಲಿಗೆ ನಾರಿನಂಥ ಕಚ್ಚಾ ವಸ್ತುಗಳನ್ನು ಮಿಕ್ಸ್‌ ಮಾಡಿ, ಅದನ್ನು ಪ್ಯಾಡ್‌ನ‌ ಆಕಾರಕ್ಕೆ ತಂದು, ಅದರ ಮೇಲೆ ಮೆತ್ತಗಿನ ಉದ್ದದ ಬಟ್ಟೆಯನ್ನು ಎರಡೂ ಬದಿಗೆ ಹಾಕಿ ಪ್ಯಾಡ್‌ ತಯಾರಿಸಬೇಕು ಎಂಬುದೂ ಗೊತ್ತಾಗಿತ್ತು. ಆದರೆ, ಈ ಕೆಲಸಕ್ಕೆ ಮಲ್ಟಿನ್ಯಾಷನಲ್‌ ಕಂಪನಿಗಳು ಬಳಸುತ್ತಿದ್ದ ಮೆಶಿನ್‌ನ ಬೆಲೆ ಕೋಟಿಗಳ ಲೆಕ್ಕದಲ್ಲಿತ್ತು. ಮೂರು ಹೊತ್ತಿನ ಊಟಕ್ಕೇ ಚಡಪಡಿಸುತ್ತಿದ್ದ ನಾನು ಅಷ್ಟು ಹಣ ಹೊಂದಿಸಲು ಸಾಧ್ಯವೇ ಇರಲಿಲ್ಲ. ಆಗಲೇ, ನನ್ನ ತಂದೆಯೂ ಸೇರಿದಂತೆ ಹಿರಿಯರು ಮಾಡುತ್ತಿದ್ದ ನೇಕಾರಿಕೆಯ ಯಂತ್ರಗಳು ನೆನಪಿಗೆ ಬಂದವು. ದೇಶೀ ಯಂತ್ರ ಬಳಸಿ, ನೂರು ನೂಲುಗಳನ್ನು ಸೇರಿಸಿಕೊಂಡು ಒಂದು ಸೀರೆ ತಯಾರಿಸಲು ಸಾಧ್ಯವಾಗುವುದಾದರೆ, ಅದೇ ಮಾದರಿಯಲ್ಲಿ ಪ್ಯಾಡ್‌ನ‌ ಒಳಭಾಗದಲ್ಲಿ ಬಳಕೆಯಾಗುವ ನಾರುಗಳ ಮಿಶ್ರಣದ ವಸ್ತುವನ್ನೂ ತಯಾರಿಸಬಹುದಲ್ಲವೆ ಅನ್ನಿಸಿತು. ಈ ಸಂದರ್ಭದಲ್ಲಿ ಕೆಲವು ಉದ್ಯಮಿಗಳು ನನ್ನ ನೆರವಿಗೆ ಬಂದರು. ಪರಿಣಾಮ, ಹೋಲ್‌ಸೇಲ್‌ ದರದಲ್ಲಿ ಕಚ್ಚಾ ವಸ್ತುಗಳೂ ದೊರೆತವು. ನೋಡ ನೋಡುತ್ತಿದ್ದಂತೆಯೇ ದೇಸೀ ಯಂತ್ರಗಳನ್ನು ಬಳಸಿಯೇ ಸ್ಯಾನಿಟರಿ ಪ್ಯಾಡ್‌ಗಳನ್ನೂ ತಯಾರಿಸಿದ್ದಾಯಿತು.’ ಬ್ರ್ಯಾಂಡೆಡ್‌ ಕಂಪನಿಗಳು, ಒಂದು ಪ್ಯಾಡ್‌ಗೆ 10 ರೂಪಾಯಿ ಬೆಲೆ ಇಟ್ಟರೆ, ಅದೇ ಉತ್ಪನ್ನವನ್ನು ಕೇವಲ 2 ರೂಪಾಯಿಗೆ ಮಾರಲು ಸಾಧ್ಯ ಎಂದೂ ಅರುಣಾಚಲಂ ಸಾಧಿಸಿ ತೋರಿಸಿಬಿಟ್ಟರು. 

ಆನಂತರ ನಡೆದಿದ್ದಲ್ಲ ಪವಾಡವೇ. ಐಐಟಿಯವರು ನಡೆಸಿದ ವರ್ಷದ ಶ್ರೇಷ್ಠ ಸಂಶೋಧನೆ ಸ್ಪರ್ಧೆಯಲ್ಲಿ ಅರುಣಾಚಲಂ ತಯಾರಿಸಿದ ಸ್ಯಾನಿಟರಿ ಪ್ಯಾಡ್‌ ಉತ್ಪಾದನಾ ಯಂತ್ರಕ್ಕೆ ಮೊದಲ ಬಹುಮಾನ ಬಂತು. ಮರುಕ್ಷಣದಿಂದಲೇ ಈ ಹೈಸ್ಕೂಲ್‌ ಡ್ರಾಪ್‌ ಔಟ್‌ ಮನುಷ್ಯನ ಖ್ಯಾತಿ ಜಗತ್ತಿನ ಮೂಲೆ ಮೂಲೆಗೂ ಹಬ್ಬಿತು. ರಾಷ್ಟ್ರಪತಿಗಳಿಂದ, ಪ್ರಶಂಸೆಯೊಂದಿಗೆ ಪದ್ಮಶ್ರೀ ಪ್ರಶಸ್ತಿಯೂ ಸಿಕ್ಕಿತು. ಎಲ್ಲಕ್ಕಿಂತ ಮಿಗಿಲಾಗಿ, ಬಿಟ್ಟು ಹೋಗಿದ್ದ ತಾಯಿ ಮತ್ತು ಮಡದಿ ವಾಪಸ್‌ ಬಂದರು. ಬಹಿಷ್ಕಾರ ಹಾಕಿದ್ದ ಊರಮಂದಿ ಮೆರವಣಿಗೆ ಮಾಡಿ ಸನ್ಮಾನಿಸಿದರು. 

ಈಗ, ತಾಯಿ, ಹೆಂಡತಿ ಹಾಗೂ ಮಗಳೊಂದಿಗೆ ಸುಖೀಜೀವನ ನಡೆಸುತ್ತಿದ್ದಾರೆ ಅರುಣಾಚಲಂ. ಕೊಯಮತ್ತೂರಿನಲ್ಲಿ ಅವರ ಮಾಲೀಕತ್ವದ ಜಯಶ್ರೀ ಇಂಡಸ್ಟ್ರೀಸ್‌ ಹೆಸರಿನ ಸ್ಯಾನಿಟರಿ ಪ್ಯಾಡ್‌ ಉತ್ಪಾದಿಸುವ ಫ್ಯಾಕ್ಟರಿಯಿದೆ. ದೇಶದ 24ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಾತ್ರವಲ್ಲ, ಕೀನ್ಯಾ, ನೈಜೀರಿಯಾ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಕೂಡ ಅರುಣಾಚಲಂ ಅವರ ಟೆಕ್ನಾಲಜಿಯನ್ನು ಆಧರಿಸಿಯೇ ಸ್ಯಾನಿಟರಿ ಪ್ಯಾಡ್‌ಗಳನ್ನೂ ತಯಾರಿಸಲಾಗುತ್ತಿದೆ. 

ಬೀ ಕೂಲ್‌, ರಿಲ್ಯಾಕ್ಸ್‌, ಟಚ್‌ ಫ್ರೀ..
ಇವು ಅರುಣಾಚಲಂ ಅವರ ಜಯಶ್ರೀ ಇಂಡಸ್ಟ್ರೀಸ್‌ನಲ್ಲಿ ತಯಾರಾಗುತ್ತಿರುವ ಸ್ಯಾನಿಟರಿ ಪ್ಯಾಡ್‌ನ‌ ಹೆಸರುಗಳು. ಪ್ರತಿಯೊಂದು ಪ್ಯಾಡ್‌, ಕೇವಲ 2 ರೂಪಾಯಿಗೆ ಸಿಗುತ್ತದೆ. ಈ ಅತ್ಯಲ್ಪ ಬೆಲೆಯ ಪ್ಯಾಡ್‌ಗಳನ್ನು ಉತ್ಪಾದಿಸುತ್ತಲೇ ದೇಶಾದ್ಯಂತ 30,000ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ!

ಇವರ ಪ್ರಯೋಗ ಕಂಡವರು “ಇಶ್ಶೀ.. ಹೀಗೂ ಉಂಟೇನ್ರೀ…’ ಎಂದು ಮುಖ ಕಿವುಚಿದ್ದರು
ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ ತಯಾರಿಸಬೇಕೆಂಬುದೇ ಇವರ ಗುರಿಯಾಯಿತು
ಮಗ ವಾಮಾಚಾರದ ಹಿಂದೆ ಬಿದ್ದಿದ್ದಾನೆ ಎಂದುಕೊಂಡಳು ಅಮ್ಮ

– ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.