“ಸೋರಿಯಾಸಿಸ್’ ಬಿ ಸೀರಿಯಸ್
Team Udayavani, Jul 31, 2019, 5:00 AM IST
ಸೋರಿಯಾಸಿಸ್ ಎಂಬುದು ಸಾಮಾನ್ಯವಾದ ಹಾಗೂ ದೀರ್ಘ ಕಾಲ ಕಾಡುವ ಚರ್ಮದ ಸಮಸ್ಯೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ಜಗತ್ತಿನಲ್ಲಿ ಶೇ.10 ರಷ್ಟು ಜನ ಇದರಿಂದ ಬಳಲುತ್ತಿದ್ದಾರೆ. ಸೋರಿಯಾಸಿಸ್ಗೆ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲವಾದರೂ, ಸಮಸ್ಯೆಯನ್ನು ತಕ್ಷಣ ಗುರುತಿಸಿದರೆ, ಅದನ್ನು ಹತೋಟಿಯಲ್ಲಿಡಬಹುದು.
ಪ್ರಮುಖ ಕಾರಣಗಳು-
– ಸ್ನಾನದ ಸಾಬೂನು, ಚರ್ಮಕ್ಕೆ ಹಚ್ಚುವ ಮಾಯಿಶ್ಚರೈಸರ್ಗಳನ್ನು ಆಗಾಗ ಬದಲಾಯಿಸುವುದರಿಂದ ಚರ್ಮದ ಸಮಸ್ಯೆ ಕಾಡಬಹುದು.
– ಅತಿಯಾದ ಧೂಳು, ಮಾಲಿನ್ಯ ಪ್ರದೇಶಗಳಲ್ಲಿ ಓಡಾಡುವುದರಿಂದ.
– ಅನಿಮಿಯತ, ಅಕಾಲಿಕ ಹಾಗೂ ವಿರುದ್ಧ ಆಹಾರ ಸೇವನಾ ಕ್ರಮದಿಂದ.
– ಅನುವಂಶೀಯತೆಯಿಂದಲೂ ಈ ರೋಗ ಬರುವ ಸಾಧ್ಯತೆಯಿದೆ.
ಲಕ್ಷಣಗಳು:
-ಸೋರಿಯಾಸಿಸ್ ಸಾಂಕ್ರಾಮಿಕ ರೋಗವಲ್ಲದಿದ್ದರೂ, ಅದು ಯಾರಿಗೆ ಇದೆಯೋ, ಅವರ ದೇಹದಲ್ಲಿ ಅದು ಹರಡುತ್ತಾ ಹೋಗುತ್ತದೆ.
-ಇದು ದೇಹದ ಯಾವ ಭಾಗದಲ್ಲೂ ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ತಲೆ, ಕಾಲುಗಳು, ಬೆನ್ನು, ಹೊಟ್ಟೆ, ಮೊಣಕೈ, ಕೈ ಬೆರಳುಗಳ ಸಂದುಗಳಲ್ಲಿ ಕಂಡುಬರುತ್ತದೆ.
– ಸಣ್ಣ ಗಾಯ ಅಥವಾ ಬಿರುಕು ಬಿಟ್ಟಂತೆ ಪ್ರಾರಂಭವಾಗಿ ಕ್ರಮೇಣ ಇಡೀ ದೇಹದ ಮೇಲೆ ಹಬ್ಬುತ್ತದೆ. ಜೊತೆಗೆ ತುರಿಕೆಯೂ ಇರುತ್ತದೆ.
– ಕೆಲವೊಮ್ಮೆ ಅದರಿಂದ ಹುಡಿ ಉದುರಬಹುದು. ಕಡೆಗಣಿಸಿದರೆ, ಅದು ದೇಹದಲೆಲ್ಲಾ ಹಬ್ಬಬಹುದು.
ಆದ್ದರಿಂದ ಈ ಲಕ್ಷಣಗಳು ಕಂಡುಬಂದ ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳಿ. ಚಿಕಿತ್ಸೆಯ ಜೊತೆಗೆ, ಆಹಾರದಲ್ಲಿ ಪಥ್ಯ ಮಾಡಬೇಕು.
ಯಾವುದನ್ನು ತಿನ್ನಬಾರದು?
– ಅತಿಯಾದ ಮಾಂಸಾಹಾರ ಸೇವನೆ, ಎಣ್ಣೆಯಲ್ಲಿ ಕರಿದ ಪದಾರ್ಥಗಳು.
– ಅತಿಯಾದ ಮಸಾಲೆ ಸೇವನೆ, ಬೇಕರಿ ತಿನಿಸುಗಳು, ಉಪ್ಪು.
-ಬದನೆ, ಆಲೂಗಡ್ಡೆ, ಮೂಲಂಗಿಯಂಥ ನಂಜಿನ ತರಕಾರಿಗಳು.
– ರಾತ್ರಿ ಸಮಯದಲ್ಲಿ ಕಫ ವೃದ್ಧಿಸುವಂಥ ಮೊಸರು, ಬೆಣ್ಣೆ, ಉದ್ದು, ತಂಪಾದ ಪಾನೀಯಗಳು.
ಆಹಾರ ಕ್ರಮ ಹೀಗಿರಲಿ
– ಹೊತ್ತೂತ್ತಿಗೆ ಸರಿಯಾಗಿ, ಹಿತಮಿತವಾಗಿ ಆಹಾರ ಸೇವಿಸಿ.
– ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗಿ ಆಹಾರ ವಿಷವಸ್ತುವಾಗಿ ಪರಿಣಮಿಸುತ್ತದೆ.
– ವಾರದಲ್ಲಿ ಒಂದು ಬಾರಿಯಾದರೂ ಉಪವಾಸ ಮಾಡಿದರೆ ಒಳ್ಳೆಯದು.
– ತಾಜಾ ಹಣ್ಣು-ತರಕಾರಿಗಳು, ಒಂದೆಲಗ, ಸಾಂಬ್ರಾಣಿ ಸೊಪ್ಪು ಮುಂತಾದ ಸೊಪ್ಪಿನ ಸೇವನೆಯಿಂದ ದೇಹದ ವಿಷಕಾರಿ ಅಂಶಗಳು ಹೊರ ಹೋಗುತ್ತವೆ.
– ಆಹಾರದಲ್ಲಿ ತೆಂಗಿನೆಣ್ಣೆಯ ಬಳಕೆ ಉತ್ತಮ.
– ಗೋಧಿ, ಹೆಸರುಕಾಳು ಮುಂತಾದ ಕಾಳುಗಳು ಹಾಗೂ ಬೀಜಗಳ ಸೇವನೆ ಒಳ್ಳೆಯದು.
– ಅರಿಶಿನ, ಬೆಳ್ಳುಳ್ಳಿ, ಜೇನುತುಪ್ಪ ಚರ್ಮವ್ಯಾಧಿಗಳಿಗೆ ಪರಿಹಾರ ನೀಡುವುದು.
ಜೀವನಶೈಲಿ ಹೀಗಿರಲಿ
– ಸ್ನಾನದ ನೀರಿಗೆ ಬೇವಿನ ಸೊಪ್ಪನ್ನು ಹಾಕಿ, ಬೇವಿನೆಣ್ಣೆ ಹಚ್ಚಿ ಸ್ನಾನ ಮಾಡಬಹುದು.
– ಬಿಸಿಲಿನಲ್ಲಿ ಹೆಚ್ಚಾಗಿ ಅಡ್ಡಾಡಬೇಡಿ.
– ದಿನವೂ ಮೈಗೆ ತೈಲ ಅಥವಾ ಚಂದನವನ್ನು ಲೇಪಿಸುವುದರಿಂದ ಚರ್ಮ ಆರೋಗ್ಯವಾಗಿರುತ್ತದೆ.
-ವಾರಕ್ಕೊಮ್ಮೆ ಅಭ್ಯಂಗ ಸ್ನಾನ ಹಾಗೂ ಹಬೆ ಸ್ನಾನ ಮಾಡಿದರೆ, ಚರ್ಮದ ಮೂಲಕ ವಿಷ ವಸ್ತುಗಳು ದೇಹದಿಂದ ಹೊರ ಹೋಗಲು ಸಾಧ್ಯ.
-ಡಾ. ಶ್ರೀಲತಾ ಪದ್ಯಾಣ, ಪ್ರಕೃತಿ ಚಿಕಿತ್ಸಾ ತಜ್ಞೆ