ಇದೀಗ ಒಲೆ ಉರಿಸುವ ಸಮಯ
Team Udayavani, Aug 10, 2018, 6:00 AM IST
ಕಾಲ ಯಾವುದಾದರೇನು, ಒಲೆ ಉರಿಯಲೇಬೇಕು ತಾನೆ? ಮಳೆಗಾಲಕ್ಕೆಂದು ಸೌದೆ, ತೆಂಗಿನ ಗರಿಗಳನ್ನೆಲ್ಲಾ ಸಂಗ್ರಹಿಸಿ ಇಟ್ಟದ್ದು ಆಯ್ತು, ಅದು ಅದರಷ್ಟಕ್ಕೆ ಅತಿಯಾದ ಗಾಳಿ-ಮಳೆಗೆ ಥಂಡಿ ಹಿಡಿದದ್ದು ಆಯ್ತು. ಅದನ್ನುರಿಸಿ ಅಡುಗೆ ಮಾಡುವ ಮಹಿಳೆಯರ ಪಾಡು, ಅವಳಿಗಷ್ಟೇ ತಿಳಿದ ಹಾಡು. ಮಳೆಗಾಲದ ಸುಂದರವಾದ ಹಿತವಾದ ಬೆಳಗನ್ನು ಆಸ್ವಾದಿಸುತ್ತ ಒಂದು ನಿಮಿಷ ನಿಲ್ಲೋಣವೆಂದರೆ ಒಲೆಗೆ ಬೆಂಕಿ ಹಿಡಿಸುವ ಕಸುಬು ನಮ್ಮನ್ನು ಸೆಳೆದು ಬಿಡುತ್ತದೆ. ಹೌದು, ಬೆಂಕಿ ಮಾಡುವುದು ಸಹ ಒಂದು ರೀತಿಯ ತಲ್ಲೀನತೆ. ತುಂಬಾ ನಿಧಾನ ವಿಧಾನದಲ್ಲಿ ಚಾಕಚಕ್ಯತೆಯಿಂದ ಒಲೆ ಉರಿಸಬೇಕು. ಇಲ್ಲವೆಂದರೆ ಒಂದೇ ಸಮನೆ ಹೊಗೆ ಹೊರಗೆ ಬಂದು ಅವಾಂತರ ಆಗಿ ಬಿಡುತ್ತದೆ. ಮತ್ತೆ ತಿರುಗಿ ಉರುಗಿ ಹೊತ್ತಿಸುವ ಹೊತ್ತಿಗೆ ಸಾಕಾಗಿ ಹೋಗುತ್ತದೆ. ಒಬ್ಬೊಬ್ಬರು ಒಂದೊಂದು ತೆರನಾದ ವಿಧಾನದಲ್ಲಿ ಒಲೆ ಉರಿಸುವ ಕಲೆಯನ್ನು ತಿಳಿದಿರುತ್ತಾರೆ.
ನಾಡಿನ ಮೂಲೆಮೂಲೆಯಲ್ಲಿರುವ ಅದೆಷ್ಟೋ ಗೃಹಿಣಿಯರು ಹಳ್ಳಿಮನೆಯಲ್ಲಿ ತಮ್ಮ ಒಲೆ ಉರಿಸುವ ಕಾಯಕವನ್ನು ತಪಸ್ಸಿನಂತೆ ನಿರ್ವಹಿಸುತ್ತ ಬಂದಿದ್ದಾರೆ. ಅಡುಗೆಯ ವಿಚಾರದಲ್ಲಿ ವಿದ್ಯುತ್ ಓವನ್ ವರೆಗೆ ಅಥವಾ ಅದಕ್ಕೂ ಮೀರಿ ಆಧುನಿಕತೆ ಧಾವಿಸಿದರೂ ನಮ್ಮ ಮನೆಯ ಅಮ್ಮ ಪ್ರತಿದಿನ ರೊಟ್ಟಿ ಮಾಡುವುದು ಬೆಂಕಿ ಒಲೆಯಲ್ಲಿ ಮಾತ್ರ. ಹೀಗೆ ಬೆಳಗ್ಗೆ ಮಾಡಿದ ಒಲೆಯಲ್ಲಿ ಮತ್ತೆ ಅಡುಗೆ ಕೆಲಸ ಬಿಗಡಾಯಿಸುತ್ತಲೇ ಹೋಗುತ್ತದೆ. ಕೆಲವೊಮ್ಮೆ ಸಂಜೆಯವರೆಗೂ ಒಲೆ ಉರಿಯುತ್ತಲೇ ಇರುತ್ತದೆ. ನಮ್ಮಂಥ ಕೃಷಿಕರಿಗೆ ಇದು ತೀರಾ ಸಾಮಾನ್ಯ ವಿಚಾರ. ಬೆಳ್ಳಂಬೆಳಗೆ ಉರಿಸಿದ ಒಲೆಯಲ್ಲಿ ರೊಟ್ಟಿ, ಗಂಜಿಯಿಂದ ಶುರುಹಚ್ಚಿ , ಇನ್ನು ಇತರ ಪ್ರಾಣಿಗಳನ್ನು ಸಾಕಿದವರಿಗೆ ಅದಕ್ಕಿರುವ ಆಹಾರ ಬೆಂದಾಗುವ ಹೊತ್ತಿಗೆ ಮಧ್ಯಾಹ್ನ ದಾಟಿರುತ್ತದೆ. ಕೆಲವು ದಿನಗಳಲ್ಲಿ ಎರಡೆರಡು ಒಲೆ ಉರಿಯುತ್ತದೆ. ನಮ್ಮ ಒಲೆ ಉರಿಸುವ ಅಡುಗೆ ಕೋಣೆಯಲ್ಲಿ ನಾಲ್ಕುಒಲೆಗಳಿವೆ. ಒಂದಂತೂ ಪ್ರತಿದಿನ ಉರಿಯುತ್ತದೆ. ತೋಟದ ಕೆಲಸಕ್ಕೆ ಬರುವವರು ಜಾಸ್ತಿ ಇ¨ªಾಗ ಎರಡು ಒಲೆ ಕಡ್ಡಾಯ. ಪರ್ವದಿನಗಳಿದ್ದಾಗ ನಾಲ್ಕು ಒಲೆಗಳು ಉರಿಯುವುದೂ ಇದೆ. ಮಾಡಿದ ಬೆಂಕಿಯನ್ನು ಆಗಾಗ ಮುಂದಕ್ಕೆ ದೂಡಿ ಸರಿಪಡಿಸುತ್ತಲೇ ಇರಬೇಕು. ಇಲ್ಲವೆಂದರೆ ಸೌದೆ ಹೊರಗಡೆ ಬಂದು ಉರಿಯತೊಡಗುತ್ತದೆ. ತಪ್ಪಿಯೂ ಕಾಲಲ್ಲಿ ದೂಡಬಾರದು ಅಂತ ಹಿರಿಯರು ಹೇಳುತ್ತಾರೆ. ನಾಗರೀಕತೆಯಲ್ಲಿ ಅಗ್ನಿಗೆ ದೇವರ ಸ್ಥಾನವಿದ್ದು ಅದನ್ನು ಪೂಜಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಸೀಮೆಎಣ್ಣೆಯನ್ನು ಬಳಸಿಯೂ ಬೆಂಕಿ ಮಾಡುವಂತಿಲ್ಲ. ಅದು ಅಗ್ನಿಯ ಮೇಲಿರುವ ಪೂಜನೀಯ ಭಾವಕ್ಕೆ ಲೋಪ ಉಂಟು ಮಾಡುತ್ತದೆ ಎಂಬುದು ಕೇಳಿದ ನೆನಪು. ಸೌದೆಯನ್ನು ಒಲೆಗೆ ಇರಿಸುವ ತುದಿಗಳು ಕ್ರಮ ಪ್ರಕಾರವಾಗಿರಬೇಕು. ಒಲೆಗಿಡುವ ಸೌದೆಗಳ ಸಂಖ್ಯೆಗಳಿಗೂ ಲೆಕ್ಕಾಚಾರವಿದೆ. ಮುಂಜಾನೆ ಮುಖ ತೊಳೆಯದೆ ಒಲೆ ಉರಿಸಬಾರದು ಎಂಬ ನಿಯಮವಿದೆ. ಒಲೆಯ ಹತ್ತಿರವೇ ಕುಳಿತು ಮಾಡುವ ಅಡುಗೆ ಗೃಹಿಣಿಗೆ ತುಂಬ ತೊಂದರೆಯನ್ನುಂಟು ಮಾಡುತ್ತದೆ. ಆಕೆಗೆ ಹೊಗೆಯಿಂದ ರಕ್ಷಿಸಿಕೊಳ್ಳುವ ಜಾಣತನವು ತಿಳಿದಿರುತ್ತದೆಯೆನ್ನಿ. ಊದುಕೊಳವೆಯಿಂದ ಊದಿ ನಿಪುಣತೆಯಿಂದ ಬೆಂಕಿ ಸರಿಪಡಿಸುತ್ತ ಇರುತ್ತಾಳೆ. ನನ್ನ ಮದುವೆಯಾದಾಗ ತಂದೆ ಹೇಳಿದ ಮಾತು ಹನ್ನೆರಡು ವರುಷಗಳ ತರುವಾಯವೂ ಪ್ರತಿದಿನ ಬೆಳಗ್ಗೆ ಒಲೆ ಉರಿಸುವಾಗ ನೆನಪಾಗದೆ ಇರುವುದಿಲ್ಲ. ತಪ್ಪಿಯು ಕೊಳವೆಯಲ್ಲಿ ಊದುವಾಗ ಹಿಂದಕ್ಕೆ ಎಳೆದುಕೊಳ್ಳಬೇಡ, ಕೆಮ್ಮು ಬರುತ್ತದೆ, ದಮ್ಮು ಕಟ್ಟುತ್ತದೆ!
ಅವರಿಗೆ ನಾನು ಪ್ರತಿದಿನ ಒಲೆ ಉರಿಸುವ ಬಗ್ಗೆ ಅತೀವ ಕಾಳಜಿ ಇತ್ತು. ಏಕೆಂದರೆ, ಅಲ್ಲಿಯವರೆಗೆ ನನಗೆ ಒಲೆ ಉರಿಸುವ ಕೆಲಸವೇ ತಿಳಿದಿರಲಿಲ್ಲ. ಹೊಸ ಕೆಲಸ ಕಲಿತೆ. ಕಲಿತ ನಂತರ ನನಗದೀಗ ತುಂಬಾ ಸಲೀಸು. ಕೆಲಸಗಳು ಒಗ್ಗುವವರೆಗೆ ಮಾತ್ರ ನಮ್ಮನ್ನು ಸತಾಯಿಸುತ್ತವೆ ಎಂಬುದು ನಾನು ಕಂಡುಕೊಂಡ ಸತ್ಯ.
ಮಹಿಳೆಯರು ಬೆಂಕಿಯ ವಿಚಾರದಲ್ಲಿ ಇನ್ನು ತುಂಬಾ ಜಾಗರೂಕತೆ ಮಾಡುವ ಎರಡು ಅತಿ ಮುಖ್ಯ ವಿಚಾರಗಳಿವೆ. ಸೀರೆ ಅಥವಾ ತೊಟ್ಟ ಯಾವುದೇ ಬಟ್ಟೆಗಳನ್ನು ಒಲೆ ಬುಡದಲ್ಲಿದ್ದಾಗ ಆದಷ್ಟು ಜಾಗ್ರತೆ ವಹಿಸಬೇಕು. ಬೆಂಕಿ ತಗುಲಿಬಿಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಹೀಗೆ ಬೆಂಕಿ ತಗುಲಿ ಜೀವಕ್ಕೆ ಹಾನಿಯಾದ ಹಲವಾರು ಪ್ರಸಂಗಗಳು ನಮ್ಮ ಕಣ್ಣ ಮುಂದಿದೆ. ಚಿಕ್ಕಮಕ್ಕಳನ್ನು ಒಲೆ ಹತ್ತಿರ ಒಯ್ಯದೇ ಎಚ್ಚರವಹಿಸುವುದು ಕೂಡ ಅಲಿಖೀತ ಸಂವಿಧಾನವೇ.
ತಮ್ಮ ನೂರಾರು ಕೆಲಸ-ಕಾರ್ಯಗಳಿಂದ ಕಲ್ಲಿನಂತಾದ ಕೈಗಳಿಂದ ಒಲೆಯಿಂದ ಚಟ್ಟಿಗಳನ್ನು ಇಳಿಸುವ ಕೃಷಿಮಹಿಳೆಯರ ನಿತ್ಯಗಾಥೆ ಹೇಳಹೊರಟರೆ ಯಶೋಗಾಥೆ. ಈಗ ಕೃಷಿಯಲ್ಲೂ ಸಾಕಷ್ಟು ಸುಧಾರಣೆ ಕಂಡು, ನಾವು ಕೃಷಿ ಮಹಿಳೆಯರು ಮನೆಯೊಳಗಡೆ ಬಹಳಷ್ಟು ಸುಧಾರಿಸಿದ್ದೇವೆ ಎಂದರು ತಪ್ಪಲ್ಲ . ಕುಕ್ಕರಗಾಲಲ್ಲಿ ಕುಳಿತು ಬೆಂಕಿ ಮಾಡುತ್ತಿದ್ದ ಕಾಲ ಬದಲಾಗಿ ತಮ್ಮ ಆಧುನಿಕ ಅಡುಗೆ ಮನೆಯ ಮೂಲೆಯಲ್ಲಿ ಅಸ್ತ್ರ ಒಲೆ ಅಥವಾ ಸಾಮಾನ್ಯ ಒಲೆಯಾದರೂ ಎಲ್ಲ ಅನುಕೂಲತೆಗಳನ್ನು ಮಾಡಿ ನಿಂತೇ ಅಡುಗೆ ಮಾಡಿ ಮುಗಿಸುತ್ತಾರೆ. ಪ್ರತಿ ಹಳ್ಳಿ ಮನೆಯಲ್ಲಿಯೂ ಗ್ಯಾಸ್ ಸೌಲಭ್ಯವಿದ್ದರೂ, ತೋಟದಲ್ಲಿ ಬೇಕಾದಷ್ಟು ಸೌದೆಗಳು ಸಿಗುವಾಗ ಇದೇ ಉತ್ತಮವೆಂಬ ಅನಿಸಿಕೆ ಹಳ್ಳಿಯ ಹೆಣ್ಣುಮಕ್ಕಳಲ್ಲಿ ಇದೆ. ಕೃಷಿಯಲ್ಲಿ ಸಿಗುವ ಅಲ್ಪ ಲಾಭವನ್ನು ದುಬಾರಿ ಒಲೆಗೆ ತೆತ್ತು ಬಿಡುವ ಜಾಯಮಾನ ನಮ್ಮ ಹಳ್ಳಿ ಹೆಣ್ಮಕ್ಕಳಲ್ಲಿ ಇಲ್ಲ. ಹಾಗಾಗಿ, ಸೌದೆ ಒಲೆ ಉರಿಸುವುದಕ್ಕೆ ಎಲ್ಲರೂ ಒಗ್ಗಿ ಹೋಗಿದ್ದಾರೆ.
ಪಟ್ಟಣದಿಂದ ವರುಷಕೊಮ್ಮೆ ಬರುವ ಅಕ್ಕನಿಗೂ ತವರಲ್ಲಿ ಕೆಂಡದಲ್ಲಿ ಸುಟ್ಟ ಗೇರುಬೀಜ ತಿನ್ನಲೇಬೇಕು. ಧಾವಂತದ ಬದುಕಿನ ಸದ್ಯದ ಬದುಕಿನಲ್ಲಿ ಒಲೆಯಲ್ಲಿ ಅಡುಗೆ ಮಾಡುವುದನ್ನು ಮರೆತರೂ ಅದರಲ್ಲಿ ಮಾಡಿದ ತಿಂಡಿ ತಿನಿಸುಗಳ ರುಚಿಯನ್ನು ಮಾತ್ರ ಯಾರೂ ಮರೆತಿರಲಿಕ್ಕಿಲ್ಲ. ಮಣ್ಣಿನ ಪಾತ್ರೆಗಳಲ್ಲಿ, ಬಳಪದ ಕಾವಲಿಗಳಲ್ಲಿ ಮಾಡಿದ ತಿಂಡಿಯ ರುಚಿಯೇ ಹೆಚ್ಚು. ಇನ್ನು ಕೆಲವು ತಿಂಡಿ-ತಿನಿಸುಗಳು ಒಲೆಯಲ್ಲಿಯೇ ಕಡ್ಡಾಯವಾಗಿ ಮಾಡುವಂಥದ್ದು. ಏನೇ ಇರಲಿ, ಬದಲಾದ ಜಮಾನದಲ್ಲಿ ಇದನ್ನೆಲ್ಲ ಒಲೆಯಲ್ಲಿ ಮಾಡಿಕೊಟ್ಟರೆ ತಿಂದೇನು, ಮಾಡಿ ತಿನ್ನಲಾರೆನು ಎನ್ನುವವರೇ ಜಾಸ್ತಿ. ಹಳ್ಳಿಯ ಕೃಷಿಕ ಹುಡುಗನನ್ನು ಮದುವೆಯಾಗಲು ಈ ಕಾಲದಲ್ಲಿ ಯಾರೂ ತಯಾರಿಲ್ಲ. ಅಂಥಾದ್ದರಲ್ಲಿ ಒಲೆಯಲ್ಲಿ ಅಡುಗೆ ಮಾಡಲು ತಯಾರಿರುವರೆ?
ಒಮ್ಮೆ ಹೀಗಾಯಿತು. ನಾನು ಕೃಷಿ ಮನೆಗೆ ಹೋದೇನು, ಆದರೆ ಬೆಂಕಿ ಒಲೆಯಲ್ಲಿ ಮಾತ್ರ ಅಡುಗೆ ಮಾಡಲಾರೆ ಎಂದು ಪಟ್ಟು ಹಿಡಿದು ಕುಳಿತಿದ್ದಳು ಒಬ್ಬ ಹುಡುಗಿ. ಕೊನೆಗೂ ಪಟ್ಟಣದ ಪುಟ್ಟ ಸಿಗಲಿಲ್ಲ. ಹಳ್ಳಿ ಹೈದನನ್ನೇ ಕೈ ಹಿಡಿದು ಹೋದಾಗ ಅಲ್ಲಿ ಒಲೆ ಉರಿಸಲು ಇತ್ತೆನ್ನಿ. ಏನೇ ಆದರೂ ಹಠ ಬಿಡಲೊಲ್ಲದ ನೈಲ… ಪಾಲಿಶ್ ಹುಡುಗಿ ಗ್ಯಾಸ್ ಮತ್ತು ಮೈಕ್ರೋ ಓವನ್ನಲ್ಲೇ ಮಶ್ರೂಮ… ಮಂಚೂರಿ ಮಾಡುತ್ತಾಳಂತೆ. ಒಲೆಯ ಅಡುಗೆಗಳೆಲ್ಲ ಅತ್ತೆಯ ಪಾಲಿಗೆ ಎಂದು ಗತ್ತಿನಿಂದ ಹೇಳುತ್ತಾಳೆ. ಆಧುನೀಕತೆ ಬಂದರೂ ಕೆಲವು ವಿಚಾರಗಳಿಗೆ ಮತ್ತು ಪರಿಸ್ಥಿತಿಗಳಿಗೆ ನಾವು ರಾಜಿಯಾಗಲೇಬೇಕಾಗುತ್ತದೆ. ಇಲ್ಲದಿದ್ದರೆ ಇತರರ ಬಾಯಿಮಾತಿಗೂ ಗುರಿಯಾಗಬೇಕಾಗುತ್ತದೆ.
ನಮ್ಮ ಮಹಿಳೆಯರ ಸ್ಥಿತಿಗತಿ ಹೇಗಿದೆಯೆಂದರೆ ಒಲೆ ಹತ್ತಿರ ಕೂತು ಮನೆಮಂದಿಗೆಲ್ಲ ರೊಟ್ಟಿ ತಟ್ಟಿ ಕೊಡುವುದರಲ್ಲಿಯೇ ಮಗ್ನವಾಗಿದೆ. ಇಡೀ ಜಗತ್ತಿಗೆ ಅನ್ನ ನೀಡುವ ಕೃಷಿಕ ಕುಟುಂಬ ಒಂದು ತಕ್ಕಡಿಯಲ್ಲಾದರೆ ಇನ್ನೊಂದು ಕಡೆಯಲ್ಲಿ ಫ್ಲ್ಯಾಟ್ನಲ್ಲಿ ರೆಡಿಮೇಡ್ ರೊಟ್ಟಿ ತಂದು ತಿನ್ನುವ ಕುಟುಂಬ. ಯಾವಾಗ ಸಮತೋಲನ ಕಾಯ್ದುಕೊಳ್ಳುತ್ತದೆ ಎಂಬುದೇ ತಿಳಿಯದಾಗಿದೆ. ಬೆಳೆದ ಭತ್ತ ಅಕ್ಕಿಯಾಗಿ, ಅಕ್ಕಿ ಅನ್ನವಾಗುವ ಅಮೃತ ಘಳಿಗೆಯ ಮಧ್ಯದಲ್ಲಿ ಎಷ್ಟೊಂದು ವಿಚಾರಗಳಿವೆ. ಇದನ್ನೆಲ್ಲ ತಿಳಿದವರು ಒಲೆಯೂದುವ ಬಗ್ಗೆ ಖಂಡಿತ ಚಕಾರವೆತ್ತಲಾರರು. ಮಹಿಳೆಯರು ಮಾಡಬೇಕಾದದ್ದೇನೆಂದರೆ, ತಮ್ಮ ಕನಸು-ಕನವರಿಕೆಗಳನ್ನು ನಾವು ಮಾಡುವ ಬೆಂಕಿಯೊಂದಿಗೆ ಉರಿದು ಬೂದಿಯಾಗಲು ಬಿಡದೆ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿಯೂ ಯೋಚಿಸಬೇಕು. ಉರಿಸಿದ ಬೆಂಕಿ ಜ್ಯೋತಿಯಾಗಿ ಜೀವನವನ್ನು ಬೆಳಗುವ ದಾರಿದೀಪವಾಬೇಕು.
ಸಂಗೀತಾ ರವಿರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!