ಕಹಿಬೇವಿನ ಸವಿ
Team Udayavani, Jan 12, 2018, 2:22 PM IST
ಇತ್ತೀಚಿನ ದಿನಗಳಲ್ಲಿ ಜೀವನ ವಿಧಾನ ಬದಲಾದಂತೆಲ್ಲ ಆಹಾರ ವಿಧಾನವೂ ಬದಲಾಗುತ್ತಿದೆ. ರಾಸಾಯನಿಕಯುಕ್ತ ಆಹಾರ ಸೇವನೆಯಿಂದ ಹೆಜ್ಜೆ ಹೆಜ್ಜೆಗೂ ರೋಗಗಳು ಆವರಿಸುತ್ತವೆ. ಅಷ್ಟೇ ಅಲ್ಲ, ಸಣ್ಣಪುಟ್ಟ ಕಾಯಿಲೆಗಳಿಗೂ ವೈದ್ಯರ ಮೊರೆ ಹೋಗುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಆದರೆ ನೈಸರ್ಗಿಕವಾಗಿ ಸಿಗುವ ಅದೆಷ್ಟೋ ಸಸ್ಯಮೂಲಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಕಡಿಮೆ ಖರ್ಚಿನಲ್ಲಿ ಹಲವು ಕಾಯಿಲೆಗಳನ್ನು ವಾಸಿ ಮಾಡುತ್ತವೆ. ಅಂತಹವುಗಳಲ್ಲಿ ಕಹಿ ಸಂಜೀವಿನಿ ಅಂತಲೇ ಹೆಸರುವಾಸಿಯಾದ ಬೇವಿನ ಮರವೂ ಕೂಡ ಒಂದು. ಆರೋಗ್ಯದ ದೃಷ್ಟಿಯಿಂದ ಬೇವು ಹೇಗೆಲ್ಲ ಉಪಯುಕ್ತವಾಗಿದೆ ಎಂಬುದರ ಕುರಿತ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.
.ಬೇವಿನ ಎಲೆಗಳನ್ನು ದಿನನಿತ್ಯ ಸೇವಿಸುತ್ತಿದ್ದರೆ ದೇಹದಲ್ಲಿ ಅಧಿಕ ರೋಗನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ಆಗ ವಿಷಪೂರಿತ ಕೀಟಗಳು ಕಡಿದರೂ ದೇಹಕ್ಕೆ ಯಾವುದೇ ಅಪಾಯವಿಲ್ಲ. ಹಾಗೆಯೇ ಎಳೆಬೇವಿನ ಕಾಂಡದಿಂದ ಪ್ರತಿದಿನ ಹಲ್ಲುಜ್ಜಿದರೆ ದಂತಕ್ಷಯ, ಒಸಡು, ಹುಣ್ಣು, ಬಾಯಿ ದುರ್ಗಂಧ ನಿವಾರಣೆಯಾಗಿ ದಂತಗಳು ಹಲವು ದಿನಗಳವರೆಗೆ ಗಟ್ಟಿಮುಟ್ಟಾಗಿರಲು ಸಾಧ್ಯವಾಗುತ್ತದೆ.
.ಹಳೆಬೆಲ್ಲದೊಂದಿಗೆ ಬೇವಿನ ರಸವನ್ನು ಮಿಶ್ರಣ ಮಾಡಿ ಆಗಾಗ ಸೇವಿಸುತ್ತಿದ್ದರೆ ಕುಷ್ಠರೋಗ, ಕ್ಷಯ, ಕ್ಯಾನ್ಸರ್ ಗಳಂತಹ ಗಂಭೀರ ಕಾಯಿಲೆಗಳು ವಾಸಿಯಾಗುತ್ತವೆ.
.ಬೇವಿನ ಮರದ ಮೂಲಕ ಬಂದ ಗಾಳಿಯ ಉಸಿರಾಟದಿಂದ ಹಲವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಅಲ್ಲದೇ, ಈ ಗಾಳಿಯು ದೇಹಕ್ಕೆ ಸೋಕಿದರೆ ಚರ್ಮಕಾಯಿಲೆ ನಿವಾರಣೆಯಾಗುತ್ತದೆ.
.ಬೇವಿನ ರಸದೊಂದಿಗೆ ಅರಸಿನ ಪುಡಿಯನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುತ್ತಿದ್ದರೆ ಮೊಡವೆಗಳೆಲ್ಲ ಹೆಸರೇಳದಂತೆ ಮಾಯವಾಗಿಬಿಡುತ್ತವೆ. ಮುಖ ಕಾಂತಿಯುತವಾಗಿಯೂ ಕಾಣುತ್ತದೆ.
.ಬೇವು ಎನ್ನುವುದು ಚರ್ಮರೋಗಕ್ಕೆ ರಾಮಬಾಣವಾಗಿದ್ದು, ಬೇವಿನ ರಸ, ಉಪ್ಪು$, ಲಿಂಬೆರಸ ಮಿಶ್ರಣ ಮಾಡಿ ತುರಿಕೆ ಇರುವ ಜಾಗದಲ್ಲಿ ಹಚ್ಚುತ್ತಿದ್ದರೆ ಮೈ ತುರಿಕೆ, ಅಲರ್ಜಿ ವಾಸಿಯಾಗುತ್ತವೆ.
.ಬೇವಿನೆಣ್ಣೆ, ಸೀಗೆಕಾಯಿ ಮಿಶ್ರಣವನ್ನು ಪುಡಿ ರಾತ್ರಿ ತಲೆಗೆ ಮೆತ್ತಿಕೊಂಡು ಬೆಳಿಗ್ಗೆ ಸ್ನಾನ ಮಾಡಿದರೆ ತಲೆಹೊಟ್ಟು, ಶೀರು, ಹೇನು ದೂರವಾಗುತ್ತವೆ.
.ಬೇವಿನ ರಸ, ಶ್ರೀಗಂಧದ ಪುಡಿಯಿಂದ ಮುಲಾಮು ಮಾಡಿ ಲೇಪಿಸಿಕೊಂಡರೆ ಹುಣ್ಣುಗಳು ಮಾಯವಾಗುತ್ತವೆ. ಬೇವಿನ ಎಲೆಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡುವುದರಿಂದ ತಲೆಹೊಟ್ಟು ದೂರವಾಗುತ್ತದೆ.
.ಮನೆಯಲ್ಲಿ ಕೀಟಗಳ ಕಾಟ ಜಾಸ್ತಿಯಾಗಿದ್ದಾಗ ಹಸಿ ಬೇವಿನೆಲೆಯಿಂದ ಹೊಗೆ ಹಾಕಿದರೆ ಕೀಟಗಳು ಜಾಗ ಖಾಲಿ ಮಾಡುತ್ತವೆ.
.ಒಂದು ಸಂಶೋಧನೆಯ ಪ್ರಕಾರ ಬೇವಿನ ಚಿಗುರನ್ನು ಇತರೆ ತರಕಾರಿಗಳ ಜೊತೆ ಬೇಯಿಸಿ ತಿಂದರೆ ಸಿಡುಬು ರೋಗ ನಿಯಂತ್ರಣವಾಗುವುದೆಂದು ಹೇಳಲಾಗುತ್ತಿದೆ. ಬೇವಿನಲ್ಲಿರುವ ಅಲ್ಕಲಾಯ್ಡ ಎಂಬ ರಾಸಾಯನಿಕವು ಸಿಡುಬು ಹರಡುವ ಸೂಕ್ಷ್ಮ ಜೀವಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ.
ಇಷ್ಟೇ ಅಲ್ಲ, ಬೇವು ಎನ್ನುವುದು ಹಲವು ಧಾರ್ಮಿಕ ವಿಧಿವಿಧಾನಗಳಲ್ಲಿ ಒಂದು ಪ್ರಮುಖ ಸಸ್ಯಮೂಲವಾಗಿ ಪರಿಗಣನೆಯಾಗುತ್ತದೆ. ಒಟ್ಟಾರೆ ಹಲವು ರೋಗರುಜಿನಗಳ ಗೂಡಾದ ಈ ದೇಹಕ್ಕೆ ಬೇವಿನ ಬಳಕೆಯಿಂದ ಪದೇ ಪದೇ ವೈದ್ಯರಲ್ಲಿಗೆ ಹೋಗುವುದನ್ನು ತಪ್ಪಿಸಬಹುದು.
ಸೋಮಲಿಂಗಪ್ಪ ಬೆಣ್ಣಿ ಸಾ. ಗುಳದಳ್ಳಿ