ಹೆಣ್ಣು ಮನುಷ್ಯಳಾಗುವುದು ಯಾವಾಗ?
Team Udayavani, Aug 25, 2017, 6:10 AM IST
ಹಬ್ಬಗಳ ಮೆರವಣಿಗೆ ಶುರುವಾಗಿದೆ. ಇದು ಮನೆಯ ಹೆಣ್ಣು¡ಮಕ್ಕಳೆಲ್ಲ ಚೆಂದವಾಗಿ ಅಲಂಕರಿಸಿಕೊಂಡು ತಿರುಗುವ ಕಾಲ! ಎಲ್ಲರೂ ಸಂತೋಷವಾಗಿರುವ ಈ ಕಾಲದಲ್ಲಿ ಇದೇನು ಅಡ್ಡಮಾತು ಅಂದುಕೊಂಡಿರೇನು? ಹಾಗೇನೂ ಇಲ್ಲ. ಸಣ್ಣದೊಂದು ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಸಾಮಾನ್ಯವಾಗಿ ಗಂಡಸಿನ ಪೂಜೆ, ಜಪ-ತಪಗಳೆಲ್ಲ ಆತನ ಆತ್ಮಾನಂದಕ್ಕಿರಬಹುದು; ಆದರೆ, ಹೆಣ್ಣಿನ ಪೂಜೆ ಜಪ-ತಪಗಳೆಲ್ಲ ಯಾವ ಉದ್ದೇಶಕ್ಕೆ? ಅದು ಗಂಡನಿಗಾಗಿ, ಮಕ್ಕಳಿಗಾಗಿ, ಮನೆಯ ಒಳಿತಿಗಾಗಿ; ಮಾತ್ರವಷ್ಟೆ ! ಪಾರಮಾರ್ಥಿಕವಾದದ್ದೆಲ್ಲ ಗಂಡಸರದ್ದು, ಹೆಂಗಸರ ವ್ಯವಹಾರವೆಲ್ಲ ಕೇವಲ ಲೌಕಿಕಕ್ಕೆ ಸೀಮಿತ ಎಂದು ಇದರರ್ಥವೆ?
ಹಿಂದೆ ಪುರಾಣದ ಕಾಲದಲ್ಲಿ ಆತ್ಮಜ್ಞಾನ ಪಡೆದವರ ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು. ಗಂಡಸರಲ್ಲಿ ಮದುವೆ ಆದವರಿದ್ದಾರೆ, ಸನ್ಯಾಸತ್ವ ಸ್ವೀಕರಿಸಿದವರಿದ್ದಾರೆ. ಎಲ್ಲಾ ತರಹದವರಿದ್ದಾರೆ. ಆದರೆ, ಈ ಪುರಾಣಗಳಲ್ಲಿಯೇ ಸನ್ಯಾಸಿನಿಯಾಗಿರುವ, ಆತ್ಮಜ್ಞಾನದ ಸಲುವಾಗಿ ತಪಸ್ಸು, ಪೂಜೆ ನಡೆಸಿದ ಎಷ್ಟು ಮಂದಿ ಹೆಂಗಸರಿದ್ದಾರೆ? ಇದ್ದರೂ ಬೆರಳೆಣಿಕೆಯ ಮಂದಿಯಷ್ಟೇ ಇರಬಹುದು. ಹೆಚ್ಚಿನವರು ಪೂಜೆಯನ್ನು , ತಪವನ್ನು ಮಾಡಿದ್ದು ತನ್ನ ವರಿಸಬೇಕಾದ ಅಥವಾ ಈಗಾಗಲೇ ವರಿಸಿದ ಪತಿಗಾಗಿ ಅಥವಾ ಪತಿಯ ವಂಶದ ಉದ್ಧಾರಕ್ಕಾಗಿ. ದೇವಿಯರಲ್ಲಿ ಗಟ್ಟಿಗಿತ್ತಿಯಾದ ಪಾರ್ವತಿಯೂ ತಪಸ್ಸು ಮಾಡಿದ್ದಾಳೆ, ಅದು ಆತೊ¾àದ್ಧಾರಕ್ಕಾಗಿ ಅಲ್ಲ , ಪತಿಯಾಗುವವನನ್ನು ಒಲಿಸಿಕೊಳ್ಳುವ ಲೌಕಿಕ ಉದ್ದೇಶದಿಂದ!
ಸ್ವಂತ ಸಂಸಾರದ ಒಳಿತಿಗಾಗಿ ನಡೆಸುವ ಪೂಜೆ, ತಪಗಳಲ್ಲಿ ತಪ್ಪನ್ನು ಹುಡುಕುವುದು ನನ್ನ ಉದ್ದೇಶವಲ್ಲ. ಆದರೆ, ಆತ್ಮಜ್ಞಾನ, ಆತ್ಮಚಿಂತನೆ, ಆತೊ¾àದ್ಧಾರ ಮುಂತಾದ ಸಂಗತಿಗಳು ಉಚ್ಚಮಟ್ಟದ ಸಂಗತಿಯಾಗಿರುವುದರಿಂದ ಅದರಲ್ಲಿ ಹೆಂಗಸರಿಗೆ ಪ್ರವೇಶ ನಿರಾಕರಿಸಿರುವುದು ಎಷ್ಟು ಸರಿ? ಕೆಲವೊಮ್ಮೆ ಹೆಂಗಸರು ಮನುಷ್ಯರೇ ಅಲ್ಲ ಎಂಬ ಭಾವನೆ ಸಮಾಜದಲ್ಲಿ ಇರುವಂತಿದೆ. ಹೆಂಗಸರನ್ನು ಒಂದು ವಸ್ತುವಿನಂತೆ ಗ್ರಹಿಸುವ ಅಭ್ಯಾಸ ಮೊದಲಿನಿಂದಲೂ ಇದೆ. ಒಂದೋ ಹೆಂಗಸು ವಸ್ತು ಮಾತ್ರಳಾಗುತ್ತಾಳೆ; ಇಲ್ಲವೇ ದೇವಿಯಾಗುತ್ತಾಳೆ. ಇವೆರಡರ ನಡುವೆ ಮನುಷ್ಯ ಸಹಜ ಭಾವನೆಗಳಿಂದ, ಆಶಯಗಳಿಂದ, ಚಿಂತನೆಗಳಿಂದ ಆಕೆಯನ್ನು° ದೂರವಿರಿಸುವುದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.
ಮನೆಯಲ್ಲಿ ಮತ್ತು ಹೊರಗಿನ ಜಗತ್ತಿನಲ್ಲಿ ಪೂಜೆ ಮಾಡುವ ಅಧಿಕಾರವಿರುವುದು ಗಂಡಿಗೆೆಯೇ ಹೊರತು ಹೆಣ್ಣಿಗಲ್ಲ. ಹೆಣ್ಣು ಕೇವಲ ಗಂಡಸನ್ನು ಅನುಸರಿಸುವುದಕ್ಕಷ್ಟೇ ಯೋಗ್ಯಳು! ಈಗ ಕೊಂಚ ಬದಲಾವಣೆಯಾಗಿದೆ ಎನ್ನಿ. ಆದರೂ ಬಹಳ ಮಟ್ಟಿಗಲ್ಲ. ಪೂಜಾಕಾರ್ಯಗಳಲ್ಲಿ ಈಗ ಮಹಿಳೆಯರೂ ಭಾಗವಹಿಸತೊಡಗಿದ್ದಾರೆ; ತಾವೂ ಪೂಜೆ ಮಾಡಲು, ಮಂತ್ರ ಹೇಳಲು ಕಲಿತುಕೊಂಡಿದ್ದಾರೆ. ಬದಲಾವಣೆಯ ಗಾಳಿ ಬೀಸುತ್ತಿರುವುದು ಸ್ವೀಕಾರಾರ್ಹ ಸಂಗತಿಯೇ.
ನಮ್ಮ ಸಂಪ್ರದಾಯದ ಆವರಣದೊಳಗೂ ಹೊಸ ಗಾಳಿ ಬೀಸಬೇಕಾಗಿದೆ. ಹಬ್ಬ-ಹರಿದಿನಗಳಲ್ಲಿ ಮಹಿಳೆಯರೂ ಸಕ್ರಿಯವಾಗಿ ಭಾಗವಹಿಸಿ ತಮ್ಮ ಉನ್ನತಿಯನ್ನು ಹಾರೈಸುವ ಕಾಲ ಬರಬೇಕಾಗಿದೆ. ಕರ್ವಾ ಚೌತ್, ಭೀಮನ ಅಮಾವಾಸ್ಯೆ, ರûಾ ಬಂಧನ ಮುಂತಾದ ಹಬ್ಬಗಳಲ್ಲಿ ಗಂಡಿಗೆ ಮುಖ್ಯಸ್ಥಾನವಿದೆ. ತಪ್ಪಲ್ಲ , ಹಾಗೆಯೇ ನವರಾತ್ರಿ, ಗೌರೀ ಹಬ್ಬ , ಲಕ್ಷ್ಮೀ ಹಬ್ಬಗಳಲ್ಲಿ ಪೂಜಾಧಿಕಾರವನ್ನು ಹೆಣ್ಣಿಗೆ ಮೀಸಲಾಗಿರಿಸಬೇಕೆಂದು ಬಯಸಿದರೆ ತಪ್ಪೆ? ಹೆಣ್ಣುಮಕ್ಕಳನ್ನು ಪ್ರಾಮುಖ್ಯವಾಗಿ ಪರಿಗಣಿಸುವ ಹಬ್ಬಗಳೂ ಆಚರಿಸಲ್ಪಡಬೇಕು ಅಥವಾ ಕೆಲವು ಹಬ್ಬಗಳಲ್ಲಾದರೂ ಹೆಣ್ಣನ್ನು ಪ್ರಾಮುಖ್ಯದ ಸ್ಥಾನದಲ್ಲಿರಿಸಬೇಕು. ಹೆಂಡತಿಯು ಗಂಡನಿಗಾಗಿ, ಗಂಡನ ಒಳಿತಿಗಾಗಿ ಶ್ರಾವಣ ಶುಕ್ರವಾರಗಳಂಥ ಹಬ್ಬಗಳನ್ನು ಆಚರಿಸು ತ್ತಾಳೆ; ಅದೇ ರೀತಿ ಗಂಡನೂ ತನ್ನ ಹೆಂಡತಿಗಾಗಿ ಮತ್ತು ಹೆಂಡತಿಗೆ ಒಳಿತನ್ನು ಬಯಸುವ ಉದ್ದೇಶದಿಂದಲೇ ಯಾವುದಾದರೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಆರಂಭವಾಗಬೇಕೆಂದು ನನ್ನ ಆಸೆ.
ಪೂಜಾದಿ ಆಚರಣೆಗಳು ನಡೆಯುವಾಗ ಮನೆಯ ಯಜಮಾನನನ್ನು ಯಜಮಾನಿ¤ ಮುಟ್ಟಿ ಕುಳಿತುಕೊಳ್ಳುತ್ತಾಳೆ. ಅವಳು, ಆ ಅಚರಣೆಯಲ್ಲಿ ಭಾಗವಹಿಸುವುದು ನೇರವಾಗಿ ಅಲ್ಲ , ಗಂಡನ ಮೂಲಕ. ಗಂಡನಿಗಾದರೆ ನೇರವಾಗಿ ಭಾಗವಹಿಸುವ ಅಧಿಕಾರವಿದೆ. ಹೆಂಗಸು ಬರಿದೇ ಗಂಡನ ಸಹಾಯಕ್ಕೆಂದು ಪೂಜೆಗೆ ಕೂಡ್ರದೆ ನಿಜವಾದ ಸಹ- ಧರ್ಮಿಣಿಯಾಗಿ ಪೂಜಾಕೈಂಕರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತಾಗಬೇಕು.
ಒಬ್ಬರಿಗೆ ಪರಮಾತ್ಮ ಜ್ಞಾನ, ಮಂತ್ರದ ಪಠಣದಿಂದ ಮುಕ್ತಿ ಸಿಕ್ಕಿದರೆ, ಇನ್ನೊಬ್ಬರಿಗೆ ಕರ್ತವ್ಯದಿಂದ ಮಾತ್ರ ಅದು ಸಾಧ್ಯ ಎಂಬ ದ್ವಂದ್ವ ನೀತಿ ಸರಿಯಲ್ಲ. ಕೆಲವರು ತಣ್ತೀ ಮೀಮಾಂಸೆಗಳ ತಿಕ್ಕಾಟಗಳಲ್ಲಿ ತೊಡಗಿಕೊಳ್ಳಬಹುದು; ಇನ್ನು ಕೆಲವರು ವೈಜ್ಞಾನಿಕ ಮನೋಭಾವದ ಮೂಲಕ ಸಂಪ್ರದಾಯಗಳನ್ನು ನಿರಾಕರಿಸಬಹುದು. ಅದು ಅವರವರ ಸ್ವಂತದ ವಿಚಾರ. ಆದರೆ, ಆಚರಣಾತ್ಮಕ ಸಂಪ್ರದಾಯಗಳಲ್ಲಿ, ಹಬ್ಬಗಳಂಥ ಪಾರಂಪರಿಕ ಸಂಭ್ರಮ ಗಳಲ್ಲಿ, ಪೂಜೆ-ಜಪತಪಗಳಲ್ಲಿ ಹೆಣ್ಣಿಗೆ ಗಂಡಿನಷ್ಟೇ ಸಮಾನ ವಾದ ಸ್ಥಾನಮಾನವನ್ನು ಬಯಸಿದರೆ ತಪ್ಪೇನೂ ಇಲ್ಲ.
(ಲೇಖಕಿ ಎಂ. ಡಿ. ಪದವೀಧರೆ. ಮಂಗಳೂರಿನ
ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್)
– ರಶ್ಮಿ ಕುಂದಾಪುರ