ಪ್ರವಾಸವೂ ಪ್ರಯಾಸವೂ
Team Udayavani, Apr 12, 2019, 6:00 AM IST
ಅದೊಂದು ದಿನ ಕಾಲೇಜು ಮುಗಿಸಿ ಮನೆಯತ್ತ ತೆರಳುತ್ತಿದ್ದೆ. ಬಸ್ಸಿನ ಸೀಟಿನಲ್ಲಿ ಮೊಬೈಲ್ ನೋಡುತ್ತ ಪಯಣಿಸುತ್ತಿದ್ದಾಗ ಗಡಾಯಿಕಲ್ಲು ಸ್ಥಳದ ಹೆಸರು ಗೋಚರಿಸಿತು. ತಕ್ಷಣವೇ ಅಂದು ಶಾಲೆಯಿಂದ ಗಡಾಯಿಕಲ್ಲಿಗೆ ಪ್ರವಾಸ ಹೋದ ಘಟನೆಯನ್ನು ನೆನಪಿಸುವಂತೆ ಮನಸ್ಸು ಪ್ರೇರೇಪಿಸಿತು.
ಅದು ನಾನು ಏಳನೆಯ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭ. ಈ ಭಾರಿ ಗಡಾಯಿ ಕಲ್ಲಿನತ್ತ ಪ್ರವಾಸ ಹೋಗಲಿದ್ದೇವೆ ಎಂಬ ಮಾಹಿತಿಯ ಮೇರೆಗೆ ಸ್ನೇಹಿತರೊಂದಿಗೆ ಸೇರಿ ಹೆಸರು ನೋಂದಾಯಿಸಿದೆ. ಪ್ರವಾಸ ಹೋಗುವ ದಿನ ಬೆಳಗಿನ ಜಾವ ಶಾಲೆಯಿಂದ ಎಲ್ಲರೂ ಒಟ್ಟಾಗಿ ಬಸ್ಸನ್ನು ಏರಿದೆವು. ಬೇರೆ ಸ್ಥಳಗಳನ್ನು ಸಂದರ್ಶಿಸಿ ಸಂಜೆಯ ವೇಳೆಗೆ ಗಡಾಯಿಕಲ್ಲು ತಲುಪಿ ಬೆಟ್ಟವನ್ನೇರಿದೆವು. ಮೊದಲೇ ಬಳಲಿದ್ದರಿಂದಲೋ ಸಂಜೆಯ ಬಿಸಿಲಿನ ಕಾವಳದಿಂದಲೋ ಬೆಟ್ಟವನ್ನು ಅರ್ಧಭಾಗ ಕ್ರಮಿಸುವ ಹೊತ್ತಿಗೆ ನಿಶ್ಶಕ್ತಿಯಿಂದ ಕುಳಿತವರೆಷ್ಟೋ ಮಂದಿ. ತಿರುಗಿ ಕೆಳಗಿಳಿಯಲಾರಂಭಿಸಿದವರೆಷ್ಟೋ ! ಆದರೆ, ಅಧ್ಯಾಪಕರು ಧೈರ್ಯ ತುಂಬಿದ ಕಾರಣ ಎಲ್ಲರೂ ಜೊತೆಯಾಗಿ ಬೆಟ್ಟವನ್ನು ಏರಿದೆವು. ಬೆಟ್ಟವನ್ನು ತಲುಪಿದ ತತ್ಕ್ಷಣ “ಅಬ್ಟಾ’ ಎಂಬ ಉದ್ಗಾರ ಹಲವರ ಬಾಯಿಯಿಂದ ಬಂದಿತ್ತು. ನಮ್ಮ ಅಧ್ಯಾಪಕರು ಗಡಾಯಿಕಲ್ಲಿನ ಬಗೆಗೆ ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ಈ ಬೆಟ್ಟವನ್ನು ಪ್ರತಿದಿನವೂ ಏರುತ್ತಿದ್ದರೋ ಹೇಗೆ ಎಂಬ ಅಲೋಚನೆಯು ತಲೆಯಲ್ಲಿ ಬಂದಾಗಿತ್ತು. ಅಂದು ಅಧ್ಯಾಪಕರು ತೋರಿದ ಉತ್ಸಾಹ ನಮಗೆ ಆಶ್ಚರ್ಯವನ್ನುಂಟು ಮಾಡಿತ್ತು. ಆ ಸಮಯದಲ್ಲಿ ಇನ್ನೂ ಸೆಲ್ಫಿ ಮುಂತಾದ ಉಪಕರಣಗಳು ಬಂದಿರದ ಕಾರಣ ಕೆಲ ಸಮಯದಲ್ಲಿ ಬೆಟ್ಟವನ್ನಿಳಿದು ಬಂದಿ¨ªೆವು.
ಯೋಚನಾ ಲಹರಿಯಿಂದ ಹೊರಬಂದಾಗ ನಾನಿಳಿಯಬೇಕಿದ್ದ ಸ್ಥಳವು ಆಗಲೇ ಬಂದಿತ್ತು.
ಅಕ್ಷಯಕೃಷ್ಣ ಪಳ್ಳತ್ತಡ್ಕ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮಂಗಳೂರು ವಿ. ವಿ.