ಭಾರತ ವಿರುದ್ಧ ಸೋಲಿನ ನಂತರ ಆತ್ಮಹತ್ಯೆಗೆ ಯೋಚಿಸಿದ್ದೆ: ಪಾಕ್ ಕೋಚ್
Team Udayavani, Jun 25, 2019, 4:26 PM IST
ಲಂಡನ್: ಭಾರತ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಸೋತ ನಂತರ ತುಂಬಾ ಹತಾಶನಾಗಿದ್ದೆ. ಆ ಸೋಲಿನಿಂದಾಗಿ ನಾನು ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡಿದ್ದೆ ಎಂದು ಪಾಕಿಸ್ಥಾನ ಕ್ರಿಕೆಟ್ ತಂಡದ ಕೋಚ್ ಮಿಕ್ಕಿ ಆರ್ಥರ್ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಪಾಕಿಸ್ಥಾನದ ತರಬೇತುದಾರ ಈ ಮಾತನ್ನು ಹೇಳಿದ್ದಾರೆ. ಸಾಂಪ್ರದಾಯಿಕ ಎದುರಾಳಿಗಳ ವಿರುದ್ಧ ಸೋತ ನಂತರ ನಾಯಕ ಸರ್ಫರಾಜ್ ಅಹಮದ್ ಸೇರಿದಂತೆ ತಂಡದ ಇತರ ಆಟಗಾರರು ಕೂಡಾ ತುಂಬಾ ಹತಾಶರಾಗಿದ್ದರು. ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮಾಡುತ್ತಿದ್ದ ವಿಪರೀತ ಟೀಕೆಗಳಿಂದ ನಾವು ಕುಗ್ಗಿಹೋಗಿದ್ದೆವು ಎಂದು ಮಿಕ್ಕಿ ಆರ್ಥರ್ ಹೇಳಿದ್ದಾರೆ.
ಜೂನ್ 16ರಂದು ಮ್ಯಾಂಚೆಸ್ಟರ್ ನಲ್ಲಿ ಪಾಕ್ ತಂಡ ಭಾರತದ ವಿರುದ್ಧ89 ರನ್ ಗಳ ಅಂತರದಿಂದ ಹೀನಾಯ ಸೋಲನುಭವಿಸಿತ್ತು. ಈ ಸೋಲಿನ ನಂತರ ಪಾಕ್ ತಂಡ ಭಾರಿ ಟೀಕೆಗೆ ಒಳಗಾಗಿತ್ತು. ಮಾಜಿ ಆಟಗಾರರು ಕೂಡಾ ಸರ್ಫರಾಜ್ ಬಳಗದ ಪ್ರದರ್ಶನದ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು. ಪಾಕ್ ವಿರುದ್ಧ ಭಾರತ ವಿಶ್ವಕಪ್ ಕೂಟಗಳಲ್ಲಿ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದುಕೊಂಡಿದೆ.