ನೆರವು ನೀಡಲು ಜಯವರ್ಧನೆ ತಿರಸ್ಕಾರ
ಲಂಕಾ ವಿಶ್ವಕಪ್ ಅಭಿಯಾನ
Team Udayavani, May 28, 2019, 6:00 AM IST
ಕೊಲಂಬೊ: ಒಂದು ಕಾಲದಲ್ಲಿ ವಿಶ್ವ ಕ್ರಿಕೆಟಿನ ಶ್ರೇಷ್ಠ ತಂಡಗಳಲ್ಲೊಂದಾಗಿ ಮೆರೆದಾಡುತ್ತಿದ್ದ ಶ್ರೀಲಂಕಾ ಈಗ ತೀರಾ ದುರ್ಬಲವಾಗಿದೆ. ಈ ಬಾರಿ ವಿಶ್ವಕಪ್ನಲ್ಲಿ ಅದು ಲೀಗ್ ಹಂತದಲ್ಲಿ ಸಾಮಾನ್ಯ ತಂಡಗಳ ವಿರುದ್ಧವೇ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿಯಿದೆ.
ಹೀಗಾಗಿ ಲಂಕಾ ವಿಶ್ವಕಪ್ ಹೋರಾಟಕ್ಕೆ ನೆರವಾಗಿ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ, ಮಾಜಿ ನಾಯಕ ಮಾಹೇಲ ಜಯವರ್ಧನೆ ಅವರಲ್ಲಿ ಕೇಳಿಕೊಂಡಿದೆ. ಆದರೆ ಅವರು ಇದನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ.
ವ್ಯವಸ್ಥೆ ವಿರುದ್ಧ ಆಕ್ರೋಶ
ಕಳೆದ ವರ್ಷವೇ ಶ್ರೀಲಂಕಾದಲ್ಲಿನ ಕ್ರಿಕೆಟ್ ವ್ಯವಸ್ಥೆ ಸುಧಾರಣೆಗೆ ಕುಮಾರ ಸಂಗಕ್ಕರ, ಅರವಿಂದ ಡಿ ಸಿಲ್ವ, ಮಾಹೇಲ ಜಯವರ್ಧನೆ ಅವರಿದ್ದ ಸಮಿತಿ ಮಹತ್ವದ ಶಿಫಾರಸುಗಳನ್ನು ಮಾಡಿತ್ತು. ಅದನ್ನು ಲಂಕಾ ಕ್ರಿಕೆಟ್ ಮಂಡಳಿ ಸಂಪೂರ್ಣ ನಿರ್ಲಕ್ಷ್ಯ ಮಾಡಿತ್ತು. ಜಯವರ್ಧನೆಗೆ ಆ ಬೇಸರವೂ ಇದೆ. ಅದನ್ನು ಪರೋಕ್ಷವಾಗಿ ತಮ್ಮ ಮಾತುಗಳಲ್ಲಿ ತೋಡಿಕೊಂಡಿದ್ದಾರೆ.
ನನ್ನ ಪಾತ್ರವೇ ಗೊತ್ತಿಲ್ಲ!
“ಲಂಕಾ ಕ್ರಿಕೆಟ್ ಮಂಡಳಿ ಜವಾಬ್ದಾರಿ ಹೊತ್ತುಕೊಳ್ಳಿ ಎಂದು ಕರೆದಿದೆ. ಆದರೆ ಅಲ್ಲಿ ನನ್ನ ಪಾತ್ರವೇನು ಎಂಬುದೇ ಗೊತ್ತಿಲ್ಲ. ತಂತ್ರಗಾರಿಕೆ ದೃಷ್ಟಿಯಿಂದಾಗಲೀ, ಬೇರಾವುದೇ ದೃಷ್ಟಿಯಿಂದಾಗಲೀ ನನ್ನ ಅಭಿಪ್ರಾಯದ ಯಾವ ಅಗತ್ಯವೂ ಅಲ್ಲಿಲ್ಲ. ಈಗಾಗಲೇ ತಂಡ ಆಯ್ಕೆಯಾಗಿದೆ. ಎಲ್ಲವೂ ಮುಗಿದಿದೆ. ಈಗ ಅಲ್ಲಿ ನಾನು ಮಾಡುವ ಕೆಲಸ ಬಾಕಿಯಿಲ್ಲ. ಏನಾದರೊಂದನ್ನು ಸೇರಿಸುವ ಅಗತ್ಯವೂ ಕಾಣುತ್ತಿಲ್ಲ. ತಂಡದ ನಿರ್ವಹಣೆಯಲ್ಲಿ ಈಗಲೂ ಕಿರುಕಾಣಿಕೆ ನೀಡಲು ನನಗೆ ಸಂತೋಷವೇ ಇದೆ. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಜತೆ ನಾನು ಮಾಡುವ ಯಾವ ಕೆಲಸವೂ ಇಲ್ಲ’ ಎಂದು ಜಯವರ್ಧನೆ ಹೇಳಿದ್ದಾರೆ.