ಯಶೋದೆಗೆ ಶರಣೆನ್ನುವಾ…ಕೂಲಿ ಹೆಂಗಸಿಗೆ ಕೋಟಿ ನಮಸ್ಕಾರ
Team Udayavani, Mar 22, 2017, 3:50 AM IST
ಆಕೆ ಯಶೋಧ. ಆಫೀಸ್ ರೂಂನಲ್ಲಿ ಏನನ್ನೋ ಬರೆಯುತ್ತಾ ಪುಸ್ತಕದಲ್ಲಿ ಮುಳುಗಿ ಹೋಗಿದ್ದ ನನಗೆ ಬಾಗಿಲ ಬಳಿ ನಿಂತು “ಸರ್ರಾ, ಒಳಗೆ ಬರ್ಲಿ!?’ ಅಂದಿತು ಜೀವ. ಕತ್ತೆತ್ತಿ ನೋಡಿದ ನನಗೆ ಆಶ್ಚರ್ಯ! ಆರು ವರ್ಷಗಳಿಂದ ಕಣ್ಣಿಗೂ ಕಾಣಸಿಕೊಳ್ಳದಿದ್ದ ಆಕೆ ದಿಢೀರನೆ ಕಣ್ ಮುಂದೆ ನಿಂತಾಗ ಖುಷಿ ಆಯಿತು. 45 ಮುಟ್ಟದ ವಯಸ್ಸು, ಸೋತ ಮುಖ, ಬಡವಾದ ದೇಹ, ಬಿಸಿಲಿನಲ್ಲಿ ಬೆಂದ ಬಾಳು ಎಂದು ಹೇಳಲು ಅವಳನ್ನು ನೋಡಿದ ನನಗೆ ಅವಳಿಂದ ಬೇರೆ ವಿವರಣೆಗಳು ಬೇಕಿರಲಿಲ್ಲ. ಆಕೆ ಇದೇ ಶಾಲೆಯಲ್ಲಿ ಆರು ವರ್ಷಗಳಿಂದ ನಾಲ್ಕಾರು ವರ್ಷಗಳ ಕಾಲ ಕೆಲಸ ಮಾಡಿದವಳು. ಸಹಾಯಕ ಅಡುಗೆಯವಳು. ಆದರೆ ಅವಳಿಗೆ ಈಗ ಕೆಲಸವಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ನಾಡಿನ ಶಾಲೆಗಳ ಸತ್ಯವೇ ಆಗಿರುವಾಗ ನನ್ನ ಶಾಲೆಯೂ ಅಂಥ ಸುದ್ದಿಯಿಂದ ಹೊರತಾಗಿರಲಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಬ್ಬರು ಅಡುಗೆಯವರಿದ್ದ ಕಾಲವದು. ನಂತರ ಮಕ್ಕಳ ಸಂಖ್ಯೆ ಕಡಿಮೆಯಾಗಿ ಇವಳನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಅವತ್ತು ಹೋದವಳು ಇವತ್ತು ಬಂದು ಮುಂದೆ ನಿಂತಿದ್ದಾಳೆ.
ತುಂಬಾ ದಿನದ ನಂತರ ಶಾಲೆಗೆ ಬಂದ ಖುಷಿಯನ್ನು ಅವಳ ಮುಖದಲ್ಲಿ ಗಮನಿಸಿದೆ. “ಏನವ್ವ, ಚೆನ್ನಾಗಿದ್ದೀರಾ? ಏನ್ ಅಪರೂಪಕ್ಕೆ ಶಾಲೆಗೆ ಬಂದಿರಲ್ಲಾ?’ ಅಂದಿದ್ದಕ್ಕೆ “ಸಂದಾಗಿವ್ನಿ ಸರಾ, ಕೂಲಿ ನಾಲಿ ಮಾಡ್ತ, ಊರೂರಂತ ತಿರಗ್ತಾ. ಇಬ್ರು ಮಕ್ಳ ಹೊಟ್ಟಿ ತುಂಬ್ಸಬೇಕಲವಾ!?’ ಅಂದು ಮೌನಿಯಾದಳು. ನನಗೆ ಮಾತು ಬರಲಿಲ್ಲ. ಅವಳೇ ಮುಂದುವರೆದು ಮಾತಿಗೆ ಶುರುವಿಟ್ಟುಕೊಂಡಳು. “ಸರಾ, ನಾ ಅವಾಗ ಅಡುಗಿ ಕೆಲ್ಸ ಮಾಡ್ವಾಗ 650 ರುಪಾಯಿ ರೊಕ್ಕ ಬಳಸಿಕೊಂಡಿದ್ದೆ ಮಗಿಗೆ ಹುಷಾರಿಲ್ಲಾಂತ, ಕೆಲ್ಸ ಬಿಟ್ ಹೊಗ್ವಾಗ ನನ್ನತ್ರ ರೊಕ್ಕ ಇರಲಿಲಿ. ಊರೂರಿಗೆ ಅಂತ ಕೂಲಿಗೆ ಹೋಗ್ತಿದ್ನಲ್ಲ, ನಂಗ ಮರೆ¤ ಹೋಗಿತ್ತು. ಮೊನ್ನೆ ಇದ್ದಕ್ಕಿದ್ದ ಹಾಗೆ ನೆಂಪಾಯ್ತು, ಹಾವಿನ ಮೇಲೆ ಕಾಲಿಟ್ಟ ಹಾಗಾಯ್ತು ನೋಡ್ರಿ. ಸಾಲಿ ಮಕ್ಳ ದುಡ್ಡು ತಿಂದು, ತೀರಸೆª ಸುಮ್ನೆ ಇದೀನಲ್ಲ? ನಂದೆಂಥ ಬಾಳು! ಮೊದು ಹೋಗಿ ಒಪ್ಸಬೇಕು ಅಂತ ಬಂದಿವ್ನಿ’ ಅಂದರು.
ಅಬ್ಟಾ! ನನಗೆ ಒಮ್ಮೆಲೆ ಕಣ್ ಮಂಜಾದಂತಾದವು. ಜನರ ದುಡ್ಡಿಗೆ, ಸಾರ್ವಜನಿಕರ ಹಣಕ್ಕೆ, ಅಧಿಕಾರಕ್ಕೆ ಸದಾ ಬಾಯಿ ತೆರೆದುಕೊಂಡು ಕೂತವರ ನಡುವೆ, ಜನ, ಸಾರ್ವಜನಿಕರ ಹಣವಿರುವುದೇ ಕೊಳ್ಳೆ ಹೊಡೆಯುವುದಕ್ಕೆ ಅಂತ ಬಾಚಿ ಬಾಚಿ ನುಂಗುವವರ ಮಧ್ಯೆ, ಈ ಹಳ್ಳಿಯ ಹೆಣ್ಣು ಮಗಳ ಮನಸ್ಸಿದೆಯಲ್ಲಾ… ಅದು ದೇವರನ್ನು ಸೋಲಿಸುವಂತದ್ದು. ನನಗೆ ಏನು ಮಾತನಾಡಬೇಕೋ ತೋಚದಾಯಿತು.
“ಏನವ್ವ 650 ರುಪಾಯಿಗೆಲ್ಲಾ ಇಷ್ಟೊಂದು ಯಾಕೆ ಬೇಜಾರು ಮಾಡಿಕೊಳ್ಳುತ್ತೀರಿ? ಅದೆಲ್ಲಾ ನಾನೇ ಕಟ್ಟಿಬಿಟ್ಟಿದ್ದೀನಿ ಬಿಡಿ. ಅದೆಲ್ಲಾ ಏನು ಬೇಡ, ನೀವು ಅರಾಮಾಗಿರಿ ತಾಯಿ. ನೀವು ಅಷ್ಟು ಹೇಳಿದ್ರಲ್ಲಾ, ಅಷ್ಟೇ ಸಾಕು, ಅಂತಹ ಒಂದು ಮನಸ್ಸಿದೆಯಲ್ಲಾ ನಿಜಕ್ಕೂ ನಿಮ್ಮೊಂದಿಗೆ ದೇವರಿದ್ದಾನೆ’ ಅಂದೆ.
“ಮಕ್ಳ ದುಡ್ರೀ ಸರಾ… ಮಕ್ಳ ಹಣ ತಿಂದ್ರೆ ಒಳ್ಳೆದಾಗಕ್ಕಿಲ್ಲ. ಇದು ನಾನು ದುಡª ದುಡ್ರಿ, ಬೇಜಾರು ಮಾಡ್ಕೊಬ್ಯಾಡ್ರಿ ಇಸ್ಕೊಳಿ. 1000 ರುಪಾಯಿ ತಂದಿದೀನಿ. 650ಕ್ಕೆ ಇಷ್ಟು ದಿನಕ್ಕೆ ಬಡ್ಡಿ ಗಿಡ್ಡಿ ಏನು? ಎಷ್ಟು ಆಗುತ್ತೇ ನಂಗೆ ಗೊತ್ತಿಲ್ಲ ಸರಾ, ತಗೊಳಿ’ ಅಂದ್ರು.
ನಾನು ಎಷ್ಟು ಹೇಳಿದರೂ ಆ ತಾಯಿ ಹಣ ಹಿಂದಕ್ಕೆ ಪಡೆಯಲು ಒಪ್ಪಲಿಲ್ಲ. ಕಡೆಗೆ “ನಿಮ್ಮ ಮನಸ್ಸಿಗೆ ಸಮಾಧಾನವಾಗಬೇಕು ಅಂತಾಂದ್ರೆ ಶಾಲೆಗೆ ಏನಾದ್ರೂ ಒಂದು ವಸ್ತು ತಂದು ಕೊಡಿ, ನಿಮ್ಮ ಹೆಸರಲ್ಲಿ’ ಅಂತ ಅಂದೆ. “ಏನ್ ಬೇಕ್ರಿ ಸರಾ?’ ಅಂತ ಆಕೆ ಕೇಳಿದಾಗ ನನಗೆ ಏನು ಹೇಳಬೇಕೋ ಗೊತ್ತಾಗ್ಲಿಲ್ಲ. ಅವರೇ ಏನೋ ನಿರ್ಧಾರಕ್ಕೆ ಬಂದವರಂತೆ “ಸರಾ, ಪ್ರತಿ ತಿಂಗ್ಳು ನಾ ದುಡಿದ ದುಡ್ನಾಗ 100 ರುಪಾಯಿ ಸಾಲಿಗೆ ಕೊಡ್ತೀನಿ. ಮಕ್ಕಳಿಗೆ ತಂದು ಹಾಕ್ರಿ ಸರಾ, ಅಷ್ಟು ಸಾಕು! ನಾ ಬದುಕಿರುವವರೆಗೂ ಪ್ರತಿ ತಿಂಗಳು ನಿಮಗೆ ತಿಂಗಳು ತಿಂಗಳು ನೂರು ರೂಪಾಯಿ ತಪ್ಸಾಕಿಲಿ. ಬ್ಯಾಡ ಅನ್ಬ್ಯಾಡ್ರಿ ದೇವ್ರ, ಒಪ್ಪಿಕೊಳಿ. ಮಕ್ಳು ಖುಷಿಯಿಂದ ಊಟ ಮಾಡಿದ್ರೆ ಏನೋ ಮನಸ್ನಾಗ ಸಮಾಧಾನ ಆದೀತು ಅಂದ್ರು’
ನನ್ನ ಮನಸ್ಸು ಆದ್ರìಗೊಂಡಿತು. ಈ ಹಳ್ಳಿಯ ಮಣ್ಣಲ್ಲಿ, ಈ ಮಣ್ಣಿನ ಹೆಣ್ಣಲ್ಲಿ ಅದೆಂತಹ ಶಕ್ತಿಯನ್ನು ಅಡಗಿಸಿದ್ದೀಯೋ ದೇವರೆ! ಒಂದಕ್ಷರವೂ ಬಾರದ, ಶಾಲೆಯ ಮೆಟ್ಟಿಲನ್ನೇ ಹತ್ತದ ಆಕೆ ಬೇರೆಯವರ ಬಳಿ ಕೂಲಿ ಮಾಡುತ್ತಾ ಜೀವನ ಮಾಡುವ, ಕಡುಬಡವಳಾಗಿರುವ ಆಕೆಯಲ್ಲಿಯೂ ಅದೆಂತಹ ದೇವರ ಗುಣ. ಐವತ್ತು ರುಪಾಯಿ ದಾನ ಮಾಡಿದರೆ ನೂರು ರುಪಾಯಿಯಷ್ಟು ಪ್ರಚಾರ ಗಿಟ್ಟಿಸಿಕೊಳ್ಳುವವರೆಷ್ಟು ಮಂದಿಯಿದ್ದಾರೆ ನಮ್ಮ ಮುಂದೆ. ನಮ್ಮೆಲ್ಲಾ ಆಧುನಿಕ ಡಿಗ್ರಿಗಳು, ಶಿಕ್ಷಣ ಸೌಧಗಳು, ಶೋಷಣೆಯನ್ನೇ ಜೀವಾಳ ಮಾಡಿಕೊಂಡ ಡೋಂಗಿ ಅಭಿವೃದ್ದಿಗಳು ಇಂಥವರ ಮುಂದೆ ಮಂಡಿಯೂರಬೇಕು. ಇಂಥವರ ನಡುವೆ ಆ ತಾಯಿ ಜೀವ ತಣ್ಣಗಿರಲಿ ಎಂದು ಮನಸಲ್ಲಿ ಅಂದುಕೊಂಡು ಕಣ್ಣಂಚಿನಲಿ ಜಿನುಗಿದ ಒಂದು ಹನಿ ಕಣ್ಣೀರನ್ನು ಕಾಣದಂತೆ ಒರಸಿಕೊಂಡೆ. ಇಂಥ ನೂರಾರು ಯಶೋದೆಯರು ನಮ್ಮೊಂದಿಗೆ ಇದ್ದಾರೆ. ಅವರು ಇರುವವರೆಗೆ ಆ ಮಳೆ ಬೆಳೆಗಳು ಅವರಿಗಾಗಿಯಾದರೂ ಬೆಳೆಯುತ್ತವೆ.
ಸದಾಶಿವ್ ಸೊರಟೂರು, ಚಿಂತಾಮಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ