ವಲಯ ಕಾಮಗಾರಿಗೆ ಒಂದು ಕೋಟಿ ರೂ. ಅನುದಾನ: ಕೃಷ್ಣ
Team Udayavani, Nov 13, 2021, 2:09 PM IST
ಚಿಂಚೋಳಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರಸ್ತೆ ಅಗಲೀಕರಣ ಮತ್ತು ಅಪಘಾತ ರಹಿತ ವಲಯ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಲೋಕೋಪಯೋಗಿ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ನೀಡಿದೆ ಎಂದು ಸೇಡಂ ಲೋಕೋಪಯೋಗಿ ಇಲಾಖೆ ವಿಭಾಗ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣ ಅಗ್ನಿಹೋತ್ರಿ ತಿಳಿಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತ ಮತ್ತು ಜಬ್ಟಾರ ಪೆಟ್ರೋಲ್ ಪಂಪ ಹತ್ತಿರ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವೇಶ್ವರ ವೃತ್ತದ ಹತ್ತಿರ ಅಪಘಾತ ವಲಯವೆಂದು ಗುರುತಿಸಲಾಗಿತ್ತು ಎಂದರು.
ಇನ್ನು ಮುಂದೆ ಅಪಘಾತ ರಹಿತ ವಲಯ ಮಾಡುವುದಕ್ಕಾಗಿ 2017-18ನೇ ಸಾಲಿನಲ್ಲಿ 78 ಲಕ್ಷ ರೂ. ನೀಡಲಾಗಿತ್ತು. ಆದರೆ ಟೆಂಡರ್ ಕಾಮಗಾರಿ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸದೇ ಇರುವು ದರಿಂದ ಮತ್ತೇ ಕಾಮಗಾರಿ ವಿಳಂಬ ಆಗಿತ್ತು. ಕಾಮಗಾರಿ ಪಾರಂಭಿಸುವುದಕ್ಕಾಗಿ ಸರಕಾರದಿಂದ ಒಂದು ಕೋಟಿ ರೂ. ಅನುದಾನ ನೀಡಲಾಗಿದೆ ಎಂದರು.
ರಸ್ತೆ ಅಗಲೀಕರಣ, ಚರಂಡಿ ನಿರ್ಮಾಣ, ವಿದ್ಯುತ್ ಸಂಪರ್ಕ ನೀಡುವುದು, ವಿದ್ಯುತ್ ಕಂಬ ಅಳವಡಿಸುವುದು ಮತ್ತು ರಸ್ತೆ ವಿಭಜಕ ಕಾಮಗಾರಿಗಳನ್ನು ಮಾಡಿ ಬಸವೇಶ್ವರ ವೃತ್ತವನ್ನು ಸೌಂದರೀಕರಣ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದರು. ಎಇಇ ಗುರುರಾಜ ಜೋಶಿ, ಜೆಇ ಗಿರಿರಾಜ ಸಜ್ಜನಶೆಟ್ಟಿ ಇನ್ನಿತರ ಸಿಬ್ಬಂದಿ ಇದ್ದರು.