ಆಸ್ತಿ ತೆರಿಗೆ ಶೀಘ್ರವಾಗಿ ಪಾವತಿಸಿ: ಶ್ರೀಕಾಂತ್
ಮಳೆಗಾಲದಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯಲು ತೊಡಕಾಗಿದೆ.
Team Udayavani, Jun 2, 2022, 5:50 PM IST
ಶಿಡ್ಲಘಟ್ಟ: ಶಿಡ್ಲಘಟ್ಟ ನಗರಭೆಯ ವ್ಯಾಪ್ತಿಯಲ್ಲಿ ಮನೆ ಕಂದಾಯ ಮತ್ತು ನೀರು ಕಂದಾಯ ಸಹಿತ ಆಸ್ತಿ ತೆರಿಗೆಯನ್ನು ಪಾವತಿಸಿ ನಗರಾಭಿವೃದ್ಧಿಗೆ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತ ಆರ್. ಶ್ರೀಕಾಂತ್ ತಿಳಿಸಿದರು.
ನಗರಸಭೆಯ ವ್ಯಾಪ್ತಿಯಲ್ಲಿ ತೆರಿಗೆ ವಸೂಲಿ ಅಭಿಯಾನದ ಬಳಿಕ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿ ಬರುವ ಮನೆಗಳ ಕಂದಾಯ ನೀರು ಕಂದಾಯ ಸಹಿತ ಆಸ್ತಿ ತೆರಿಗೆಯನ್ನು ಹಲವರು ಬಾಕಿ ಉಳಿಸಿಕೊಂಡಿದ್ದು ಈಗಾಗಲೇ ನಗರಸಭೆ ಮೂಲಕ ಪ್ರತಿಯೊಂದು ವಾರ್ಡ್ನಲ್ಲಿ ತೆರಿಗೆ ವಸೂಲಿ ಮಾಡುವ ಅಭಿಯಾನವನ್ನು ನಡೆಸಲಾಗುತ್ತಿದೆ. ನಾಗರಿಕರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಇನ್ನೂ ಹಲವರು ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು ಅದನ್ನು ಕೂಡಲೇ ಪಾವತಿಸಿ ಎಂದ ಹೇಳಿದರು.
ತ್ಯಾಜ್ಯ ವಿಂಗಡಿಸಿ ಕೊಡಿ ರೇಷ್ಮೆ ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಪೌರಕಾರ್ಮಿಕರು ಪ್ರಯತ್ನ ಮಾಡುತ್ತಿದ್ದರೂ ನಾಗರಿಕರು ಹಲವೆಡೆ ಎಲ್ಲಂದರಲ್ಲೇ ಕಸವನ್ನು ಸುರಿದು ಹಾಳುಮಾಡುತ್ತಿದ್ದಾರೆ. ಸಾರ್ವಜನಿಕರು ಮನೆಯಲ್ಲಿ ಒಣ ಮತ್ತು ಹಸಿ ತ್ಯಾಜ್ಯವನ್ನು ಪ್ರತ್ಯೇಕಗೊಳಿಸಿ ಪೌರಕಾರ್ಮಿಕರಿಗೆ ನೀಡುವ ಮೂಲಕ ನಗರವನ್ನು ಸುಂದರವಾಗಿಡಲು ಶ್ರಮಿಸಬೇಕು ಎಂದರು.
ಪ್ಲಾಸ್ಟಿಕ್ ನಿಷೇಧ: ನಗರಸಭೆಯ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಆದರೂ ಕೆಲ ಅಂಗಡಿ ಮಾಲೀಕರು ಕದ್ದು ಮುಚ್ಚಿ ಪ್ಲಾಸ್ಟಿಕ್ ಮಾರುತ್ತಿರುವ ದೂರು ಕೇಳಿ ಬಂದಿದೆ. ನಾಗರಿಕರೂ ಪ್ಲಾಸ್ಟಿಕ್ ಬಳಕೆಗೆ ಒತ್ತು ನೀಡುತ್ತಿದ್ದು, ಅದು ಸಮರ್ಪಕವಾಗಿ ವಿಲೇವಾರಿ ಯಾಗದೇ ಚರಂಡಿ ಇನ್ನಿತರೆ ಪ್ರದೇಶಗಳಲ್ಲಿ ಸಿಲುಕಿ ಮಳೆಗಾಲದಲ್ಲಿ ಕೊಳಚೆ ನೀರು ಸರಾಗವಾಗಿ ಹರಿಯಲು ತೊಡಕಾಗಿದೆ. ಈಗಾಗಲೇ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗಿದೆ. ಪ್ಲಾಸ್ಟಿಕ್
ಮಾರಾಟ ಕಂಡು ಬಂದರೆ ಕಠಿಣ ಕ್ರಮ ಜರುಗಿಸ ಲಾಗುವುದು ಎಂದರು. ಶಿಡ್ಲಘಟ್ಟದಲ್ಲಿ ಅಭಿವೃದ್ಧಿ ಕಾಮ ಗಾರಿ ಅವ್ಯಾಹತವಾಗಿದ್ದು, ಕಾಮಗಾರಿಗಳಲ್ಲಿ ಗುಣ ಮಟ್ಟ ಕಾಪಾಡುವಂತೆ ಈಗಾಗಲೇ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಎಲ್ಲಾದರೂ ಕಳಪೆ ಕಾಮಗಾರಿ ನಡೆಯುತ್ತಿದ್ದರೆ ನಗರಸಭೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೆ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದರು.
ಬಾಕಿ ವಸೂಲಿಗೆ ಬಿಗಿ ಕ್ರಮ
ನಗರದಲ್ಲಿ ವಿವಿಧ ಯೋಜನೆಯಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳಲ್ಲಿ ಬಾಡಿಗೆ ಪಾವತಿಸಲು ಕೆಲವರು ವಿಳಂಭ ಮಾಡುತ್ತಿದ್ದಾರೆ ಎಂದ ಪೌರಾಯುಕ್ತರು ವ್ಯಾಪಾರ ವಹಿವಾಟು ಮಾಡಿಕೊಳ್ಳಲು ಅಂಗಡಿ ಮುಗ್ಗಟ್ಟುಗಳ ಬಾಡಿಗೆದಾರರು ಸಕಾಲದಲ್ಲಿ ಬಾಡಿಗೆ ಪಾವತಿಸಲು ಸಹಕರಿಸ ಬೇಕು ನಗರಸಭೆಯ ವ್ಯಾಪ್ತಿಯಲ್ಲಿ ಈಗಾಗಲೇ ಎಷ್ಟು ಜನ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಪಟ್ಟಿಯನ್ನು ಸಿದ್ಧಪಡಿಸಿದ್ದು ಮುಂದಿನ ದಿನಗಳಲ್ಲಿ ಬಾಕಿ ವಸೂಲಿಗೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದರು.