ನೀರಿನ ಹರಿವು ಹೆಚ್ಚಿಸಿದ ಗೌರಿ ಹೊಳೆ, ಅಪಾಯದಲ್ಲಿ ಕುಂಡಡ್ಕ ಸೇತುವೆ
Team Udayavani, Jun 9, 2018, 12:07 PM IST
ಸವಣೂರು : ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಬೆಳ್ಳಾರೆಯಿಂದ ಪೆರುವಾಜೆ-ಕುಂಡಡ್ಕ -ನಾಡೋಳಿ-ಸಾರಕರೆ-ಸರ್ವೆ-ಮೂಲಕ ವೀರಮಂಗಲ ಮೂಲಕ ಕುಮಾರಧಾರ ತಲುಪುವ ಗೌರಿ ಹೊಳೆ ತನ್ನ ಹರಿವು ಹೆಚ್ಚಿಸಿಕೊಂಡಿದೆ.
ಹೀಗೆಯೇ ನಿರಂತರವಾಗಿ ಮಳೆ ಸುರಿದರೆ ಹೊಳೆತಟದ ಕೃಷಿತೋಟಗಳು ಮುಳುಗಡೆಯಾಗಲಿದೆ. ಅಲ್ಲದೆ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮ ಹಾಗೂ ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮವನ್ನು ಜೋಡಿಸುವಲ್ಲಿ ಗೌರಿಹೊಳೆಗೆ ಅಡ್ಡಲಾಗಿರುವ ಕುಂಡಡ್ಕ ಕಿರು ಸೇತುವೆ ಮುಳುಗಡೆಯಾಗಲಿದೆ. ಆಲ್ಲದೆ ತೀರಾ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತಕ್ಕೆ ಬಂದಿರುವ ಸೇತುವರಯೂ ಕೊಚ್ಚಿಹೋಗುವ ಭೀತಿಯನ್ನು ಜನತೆ ಎದುರಿಸುತ್ತಿದ್ದಾರೆ.
ಸೇತುವೆಯ ಎರಡೂ ಬದಿಯಲ್ಲೂ ಸರಿಯಾದ ತಡೆಗೋಡೆ ಇಲ್ಲದೇ ಇರುವುದರಿಂದ ಮಳೆಗಾಲದಲ್ಲಿ ವಾಹನ ಸವಾರರಿಗೆ, ಮಕ್ಕಳಿಗೆ ಅಪಾಯಕಾರಿ ಸ್ಥಿತಿಯನ್ನು ತಂದೊಡ್ಡಿದೆ. ಈಗ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿರುವುದರಿಂದ ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಅಪಾಯ ಇದೆ.
ಇದು ಕಿರು ಸೇತುವೆಯಾದ ಕಾರಣ ಘನ ವಾಹನಗಳು ಹೋಗುವಂತಿಲ್ಲ .ಈ ಸೇತುವೆ ಕುಸಿದು ಸಂಪರ್ಕ ಕಡಿತವಾದರೆ ಪಾಲ್ತಾಡಿ ಭಾಗದಿಂದ ಸವಣೂರು, ಕಾಣಿಯೂರು, ಪೆರುವಾಜೆಗೆ ಹೋಗಲು ಪುತ್ತೂರು ಅಥವಾ ಬೆಳ್ಳಾರೆ ಮೂಲಕ ಸುತ್ತಿ ಬಳಸಿ ಹೋಗಬೇಕಾದ ಪರಿಸ್ಥಿತಿ ಬರಲಿದೆ.