ಝೀರೋ ಮತ್ತು ಹೀರೋ

ಉಳಿತಾಯ ಬಲ್ಲವನಿಗೆ ಅಪಾಯವಿಲ್ಲ

Team Udayavani, Jul 15, 2019, 5:53 AM IST

zero

ಪ್ರಪಂಚಕ್ಕೆ ಝೀರೋವನ್ನು ಕೊಡುಗೆಯಾಗಿ ಕೊಟ್ಟವರು ಭಾರತೀಯರು. ನಮಗೆ ಉಳಿತಾಯ ಮಾಡುವುದನ್ನು ಹೇಳಿಕೊಡಬೇಕಾಗಿಲ್ಲ. ಇತ್ತೀಚಿಗೆ ಕೇಂದ್ರ ವಿತ್ತಸಚಿವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ “ಝೀರೋ ಬಜೆಟ್‌ ಫಾರ್ಮಿಂಗ್‌’, ಕೃಷಿಯಲ್ಲಿ ಹೆಚ್ಚು ಹಣ ವಿನಿಯೋಗಿಸದೆ ಲಾಭ ತೆಗೆಯುವ ಕುರಿತ ಚರ್ಚೆಯನ್ನು ಹುಟ್ಟು ಹಾಕಿದೆ. ನಾವಿಂದು ಪಾರಂಪರಿಕ ಕೃಷಿ ಪದ್ಧತಿಗಳಿಂದ ದೂರವಾಗುತ್ತಿರುವ ಹೊತ್ತಿನಲ್ಲಿ, ಗುರುತು, ಪರಿಚಯವಿಲ್ಲದ ಹಾದಿಯಲ್ಲಿ ನಡೆದು ತಮ್ಮದೇ ಹೆಜ್ಜೆಗುರುತು ಮೂಡಿಸಿರುವ ರೈತರೇ ನಿಜವಾದ ಹೀರೋಗಳು! ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ಇವರ ಪರಿಚಯ- ಪ್ರಯೋಗ-ಪಯಣ, ಮರಳಿ ಬೇರುಗಳತ್ತ ಸಾಗಲು ಇನ್ನೊಬ್ಬರಿಗೆ ಸ್ಫೂರ್ತಿಯಾಗಲಿ…

1. ಗೊಬ್ಬರಕ್ಕೆ ನಯಾಪೈಸೆ ಖರ್ಚಿಲ್ಲ

ರೈತ: ಅಜ್ಜಪ್ಪ ಕುಲಗೋಡ
ಸ್ಥಳ: ಸುನ್ನಾಳ, ಬೆಳಗಾವಿ
ಝೀರೋ ಬಜೆಟ್‌ ಪಾರ್ಮಿಂಗ್‌ since 2008

ಅಜ್ಜಪ್ಪನವರದು ಕೃಷಿ ಕುಟುಂಬ. ಬಾಲ್ಯದಲ್ಲಿ ಶಾಲೆಗೆ ಚಕ್ಕರ್‌ ಹಾಕಿ ಹೊಲದಲ್ಲಿ ಅಡ್ಡಾಡುತ್ತಿದ್ದ ಅಜ್ಜಪ್ಪ ಮುಂದೊಮ್ಮೆ ಗ್ರಾಮಸ್ಥರೆಲ್ಲರೂ ಗುರುತಿಸುವಂಥ ಸಾಧನೆ ಮಾಡುತ್ತಾರೆಂದು ಯಾರೂ ಎಣಿಸಿರಲಿಲ್ಲ. ಸಂಗಮೇಶ್ವರ ಐ.ಟಿ.ಐ.ಕಾಲೇಜಿನಿಂದ ಎಲೆಕ್ಟ್ರಿಕಲ್ಸ್‌ ಪಾಸಾಗಿ ಪೂನಾದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿ ಅಲ್ಲೇ ನೆಲೆಸಿದ್ದರೂ ಈ ಮಟ್ಟಿಗಿನ ಹೆಸರು ಬರುತ್ತಿರಲಿಲ್ಲ. ಪೂನಾದಿಂದ ಹುಟ್ಟೂರಿಗೆ ವಾಪಸ್‌ ಬಂದ ಅಜ್ಜಪ್ಪ “ಜೈ ಹನುಮಾನ್‌ ಎಲೆಕ್ಟ್ರಿಕಲ್ಸ್‌’ ಅಂಗಡಿಯನ್ನು ಪ್ರಾರಂಭಿಸಿದರು. ರೈತರಿದ್ದಲ್ಲಿಗೇ ಹೋಗಿ ಹೊಲದಲ್ಲಿರುವ ಮೋಟಾರ್‌ ಪಂಪ್‌ ಸೆಟ್‌ ರಿಪೇರಿ ಮಾಡುತ್ತಿದ್ದುದರಿಂದ ಅವರ ಬವಣೆಗಳನ್ನು ಕಂಡಿದ್ದರು. ಬಾಲ್ಯದಿಂದಲೇ ಕೃಷಿಯ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಇವರು, ಸಾವಯವ ಕೃಷಿಯ ಹರಿಕಾರ ಸುಭಾಷ್‌ ಪಾಳೇಕರ ಅವರ ಲೇಖನ ಓದಿ ಪ್ರಭಾವಿತರಾಗಿದ್ದರು.

ಅದುವರೆಗೂ ಅಜ್ಜಪ್ಪನವರ ತಂದೆ ಹನಮಂತಪ್ಪ ಹಾಗೂ ತಾಯಿ ಪಾರೆÌತೆವ್ವ 6.25 ಎಕರೆ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ ಉಪಯೋಗಿಸಿ ಇಳುವರಿ ತೆಗೆಯುತ್ತಿದ್ದರು. ಅಜ್ಜಪ್ಪ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಕೃಷಿ ಮಾಡುವ ಬಗ್ಗೆ ಹೇಳಿದಾಗ ಶುರುವಿನಲ್ಲಿ ವಿರೋಧ ಮಾಡಿದರು. ಅವರಿಗೂ ಆ ಬಗ್ಗೆ ಅನುಮಾನಗಳಿದ್ದವು. ಆದರೆ ಕೊನೆಗೂ ಹಠ ಬಿಡದ ಅಜ್ಜಪ್ಪ, 2008ರಲ್ಲಿ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡರು. ಇವತ್ತು ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಮೂರು ಎಕರೆಯಲ್ಲಿ ಕಬ್ಬು, ಒಂದು ಎಕರೆ ಅರಿಶಿನ, ಅರ್ಧ ಎಕರೆಯಲ್ಲಿ ಬಾಳೆ, ಒಂದು ಎಕರೆ ತರಕಾರಿ ಹಾಗೂ ಒಂದು ಎಕರೆ ಸಿರಿಧಾನ್ಯ ಬೆಳೆಯುತ್ತಿದ್ದಾರೆ.

ತಾಳ್ಮೆ ಬಹಳ ಮುಖ್ಯ
ಹತ್ತು ಕೆ.ಜಿ. ಜವಾರಿ ಜಾನುವಾರುಗಳ ಸೆಗಣಿ, 10 ಲೀಟರ್‌ ಗೋಮೂತ್ರ, 2 ಕೆ.ಜಿ. ಬೆಲ್ಲ, ಒಂದು ಹಿಡಿ ಭೂಮಿಯ (ಅದೇ ಹೊಲದ್ದು) ಮಣ್ಣು, 2 ಕೆ.ಜಿ. ದ್ವಿದಳ ಧಾನ್ಯಗಳ ಹಿಟ್ಟನ್ನು 200 ಲೀಟರ್‌ ನೀರಿನಲ್ಲಿ ಕಲಸಿದರೆ ನೈಸರ್ಗಿಕ ಗೊಬ್ಬರ ರೆಡಿ. ಇದನ್ನು ಜೀವಾಮೃತ ಎಂದು ಕರೆಯುವರು. ಇದರಿಂದ ರಾಸಾಯನಿಕ ಗೊಬ್ಬರದ ಖರ್ಚೂ ಉಳಿಯುತ್ತದೆ, ನೆಲ ಹಾಗೂ ಬೆಳೆ ಕಲುಷಿತಗೊಳ್ಳುವುದೂ ತಪ್ಪುತ್ತದೆ. ಜೀವಾಮೃತದ ಮಿಶ್ರಣವನ್ನು 1ರಿಂದ 10 ಎಕರೆ ಪ್ರದೇಶಕ್ಕೆ ಹಾಕಬಹುದು. ಇದರಿಂದ ಭೂಮಿಯ ಫ‌ಲವತ್ತತೆಯೂ ಹೆಚ್ಚುತ್ತದೆ.
ನೈಸರ್ಗಿಕ ಕೃಷಿಯಿಂದ ಒಂದೇ ಸಲಕ್ಕೆ ಲಾಭ ದೊರಕುವುದಿಲ್ಲ. ಸ್ವಲ್ಪ ಕಾಯಬೇಕಾಗುತ್ತದೆ ಎನ್ನುವುದು ಅಜ್ಜಪ್ಪನವರ ಅನುಭವದ ನುಡಿ.

2008ರಿಂದ ನೈಸರ್ಗಿಕ ಕೃಷಿಯಲ್ಲಿ ತೊಡಗಿದ್ದ ಅಜ್ಜಪ್ಪನವರಿಗೆ, 2011ರವರೆಗೆ ಹೊಲದಲ್ಲಿ ಇಳುವರಿ ಸಾಧಾರಣವಾಗಿತ್ತು. ಆದರೆ 2011ರ ನಂತರ, ಸಾಕಷ್ಟು ಇಳುವರಿ ದೊರೆಯಲಾರಂಭಿಸಿತು. ಜೀವಾಮೃತವಲ್ಲದೆ, ತರಕಾರಿ ತ್ಯಾಜ್ಯ ಇನ್ನಿತರೆ ಸಾವಯವ ಪದಾರ್ಥಗಳನ್ನೂ ಭೂಮಿಗೆ ಹಾಯಿಸುತ್ತಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯ ಅವರ ಸಾಧನೆಯನ್ನು ಗುರುತಿಸಿ ಅಭಿನಂದಿಸಿದೆ.

-ಸುರೇಶ ಗುದಗನ‌ವರ
—————–
2.ಪ್ರಯೋಗ ಮಾಡಿ ಕಲಿಯಬೇಕು

ರೈತ: ಧರೆಪ್ಪ ಪರಪ್ಪ ಕಿತ್ತೂರ
ಸ್ಥಳ: ತೇರದಾಳ, ಬಾಗಲಕೋಟೆ
ಝೀರೋ ಬಜೆಟ್‌ ಫಾರ್ಮಿಂಗ್‌ since 1991

ರೈತರಿಗೆ ರಾಸಾಯನಿಕ ಗೊಬ್ಬರವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೇ ಆ ವ್ಯಾಪಾರ ಬಿಟ್ಟು ಸಾವಯವ ಕೃಷಿಗೆ ಇಳಿದ ಅಪರೂಪದ ಕತೆ ಇಲ್ಲಿದೆ. “ಭೂಮಿಯ ಫ‌ಲವತ್ತತೆ ಉಳಿಯಬೇಕು. ನಮಗೆಲ್ಲರಿಗೂ ಅನ್ನ ನೀಡುವ ನೆಲಕ್ಕೆ ವಿಷ ಹಾಕಬಾರದು’ ಎಂಬ ಉದ್ದೇಶದಿಂದಲೇ ಸಾವಯವ ಕೃಷಿಯಲ್ಲಿ ತೊಡಗಿಕೊಂಡವರು ಧರೆಪ್ಪ ಕಿತ್ತೂರ. 1991ರಿಂದಲೇ ನೈಸರ್ಗಿಕ ಪದ್ಧತಿ ಅನುಸರಿಸುತ್ತಿರುವ ಅವರು ಯಶಸ್ಸು ಕಾಣುತ್ತಾ ಬಂದಿದ್ದಾರೆ. ಓದಿದ್ದು 8ನೇ ತರಗತಿಯಾದರೂ ಕೃಷಿಯಲ್ಲಿನ ಅವರ ಪಾಂಡಿತ್ಯ ಹಾಗೂ ನಡೆಸಿದ ಪ್ರಯೋಗಗಳು ಅನನ್ಯವಾದುದು. ಸಾವಯವ ಕೃಷಿಯಿಂದ ಅತಿ ಕಡಿಮೆ ವೆಚ್ಚದಲ್ಲಿ ಲಾಭ ಗಳಿಸಬಹುದು ಎನ್ನುವುದು ಅವರ ಅನುಭವದ ಮಾತು.

ಸುಮಾರು 18 ಎಕರೆ ಜಮೀನು ಹೊಂದಿರುವ ಧರೆಪ್ಪ ಕಿತ್ತೂರ ಅವರು ವಾಣಿಜ್ಯ ಬೆಳೆಯಾಗಿ ಕಬ್ಬು, ಮಿಶ್ರ ಬೆಳೆಗಳಾಗಿ ಚೆಂಡು ಹೂ, ಹೂಕೋಸು (ಗೋಬಿ), ಎಲೆಕೋಸು (ಗೋಬಿ ಗಡ್ಡೆ), ಪಾಲಕ್‌, ಮೆಂತ್ಯೆ, ಕೊತ್ತಂಬರಿ, ಮೆಣಸಿನಕಾಯಿ, ಸಬ್ಬಸಿಗೆ ಸೊಪ್ಪು, ಶೇಂಗಾ, ಉಳ್ಳಾಗಡ್ಡಿ, ಸೌತೆಕಾಯಿ ಸೇರಿದಂತೆ ತೋಟಗಾರಿಕಾ ಬೆಳೆಗಳನ್ನೂ ಬೆಳೆದಿದ್ದಾರೆ. ಜೊತೆಗೆ ಔಷಧೀಯ ಸಸ್ಯಗಳನ್ನೂ ಬೆಳೆಯುತ್ತಿರುವುದು ವಿಶೇಷ.

ಹೈನುಗಾರಿಕೆಯಿಂದ ಗೊಬ್ಬರದ ಲಾಭ
ಧರೆಪ್ಪನವರ ಸಾವಯವ ಕೃಷಿಗೆ ಹೆ„ನುಗಾರಿಕೆಯೇ ಮೂಲಾಧಾರವಾಗಿದೆ. ಅವರು 6 ಎಮ್ಮೆ, 4 ಆಕಳು, 4 ಆಡುಗಳನ್ನು ಸಾಕುತ್ತಿದ್ದಾರೆ. ಇದರಿಂದ ಹಾಲು ಉತ್ಪಾದನೆ ಒಂದು ಕಡೆ ಆದರೆ ಆಕಳ ಸಗಣಿ, ಗೋಮೂತ್ರ (ಗಂಜಲ) ಸಾವಯವ ಗೊಬ್ಬರಕ್ಕೆ ಬಳಕೆಯಾಗುತ್ತಿದೆ. ಹಸುಗಳಿಗೆ ಹಸಿರು ಪಾಚಿ (ಅಜೋಲ್‌)ಯನ್ನು ಬೆಳೆಸಿ ತಿನ್ನಿಸುತ್ತಿದ್ದಾರೆ. ಅದರಿಂದ ಹಾಲು ಹೆಚ್ಚಿಗೆ ದೊರೆಯುತ್ತದೆ ಎನ್ನುತ್ತಾರವರು. ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಪದ್ದತಿ ಅಳವಡಿಸಿಕೊಂಡಿದ್ದಾರೆ. ಕೋಳಿ ಹಿಕ್ಕೆ, ಎರೆಹುಳು ಗೊಬ್ಬರ, ಹಾಗೂ ತಿಪ್ಪೆ ಗೊಬ್ಬರವನ್ನೂ ಜಮೀನಿನ ಫ‌ಲವತ್ತತೆ ಹೆಚ್ಚಿಸಲು ಬಳಸಿದ್ದಾರೆ. ಇನ್ನೊಂದು ವಿಶೇಷ ಎಂದರೆ ಪ್ರತಿವಾರ ಜೀವಸಾರ ಘಟಕದಿಂದ (ಬಯೋಡೆ„ಜೆಸ್ಟ್‌) ಸಾವಯವ ಗೊಬ್ಬರವನ್ನು ಹನಿ ನೀರಾವರಿ ಮೂಲಕ ಜಮೀನಿಗೆ ಹಾಯಿಸುತ್ತಾರೆ.

– ಕಿರಣ ಶ್ರೀಶೈಲ ಆಳಗಿ
—————–
3. ಸಂಪನ್ಮೂಲಗಳ ಮಿತವಾದ ಬಳಕೆ

ರೈತ: ರುದ್ರಪ್ಪ ಮಲ್ಲಪ್ಪ ಜುಲುಪಿ
ಸ್ಥಳ: ಹುಲ್ಯಾಳ, ಜಮಖಂಡಿ
ಝೀರೋ ಬಜೆಟ್‌ ಫಾರ್ಮಿಂಗ್‌ since 1999

ಕೃತಕವಾಗಿ ತಯಾರಿಸಲ್ಪಡುವ ಕೀಟನಾಶಕ ಮತ್ತು ರಾಸಾಯನಿಕ ಗೊಬ್ಬರಗಳಲ್ಲಿ ಇರುವ ಅಗತ್ಯ ಪೋಷಕಾಂಶಗಳನ್ನು ನೈಸರ್ಗಿಕವಾಗಿಯೂ ಪಡೆದುಕೊಳ್ಳಬಹುದಾಗಿದೆ. ಅನೇಕ ಮಂದಿ ಮಹನೀಯರು ಈ ಕುರಿತು ಬಹಳ ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ರೈತರು ಈ ಕುರಿತು ಗಮನ ಹರಿಸಿ, ಪ್ರಯೋಗಗಳನ್ನು ಕೈಗೊಳ್ಳುವುದರ ಮೂಲಕ ಝೀರೋ ಬಜೆಟ್‌ ಫಾರ್ಮಿಂಗ್‌ಅನ್ನು ಸಾಕಾರಗೊಳಿಸಬಹುದು ಎನ್ನುತ್ತಾರೆ ರೈತ ರುದ್ರಪ್ಪ ಮಲ್ಲಪ್ಪ. ಇವರು ತಮ್ಮ 10 ಎಕರೆ ಭೂಮಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಶೂನ್ಯ ಬಂಡವಾಳ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.

ತೋಟದ ಬೀಜಗಳನ್ನೇ ನಾಟಿ ಮಾಡ್ತಾರೆ
ಮೂಲ ಬೆಳೆಗಳಿಂದ ಲಭ್ಯವಾಗುವ ರವದಿ, ಕಳೆ ಸೇರಿದಂತೆ ಕೃಷಿ ತ್ಯಾಜ್ಯಗಳನ್ನು ಬೆಳೆಗಳ ಮಧ್ಯದ ಸಾಲುಗಳಲ್ಲಿ ಹಾಯಿಸುತ್ತಾರೆ. ಅಂತರ್‌ಬೇಸಾಯ ಕೈಗೊಂಡು, ಮಣ್ಣಿನಲ್ಲಿ ತೇವಾಂಶ ಕಾಪಾಡಿಕೊಂಡು ಸಿಗುವಷ್ಟು ನೀರನ್ನು ಮಿತವಾಗಿ ಬಳಸುತ್ತಾ ಬಂದಿದ್ದಾರೆ. ಇವರ ಭೂಮಿಯಲ್ಲಿ ಬೆಳೆಯುವ ಕರಿಬದನೆಯೊಂದಿಗೆ ಸಕಲ ಕಾಯಿಪಲ್ಲೆಗಳು ಉತ್ತರ ಕರ್ನಾಟಕದಲ್ಲಿ ಬೇಡಿಕೆ ಪಡೆದಿವೆ. ಇಂದಿಗೂ ರುದ್ರಪ್ಪನವರು, ತೋಟದಲ್ಲಿ ತಾವೇ ಬೆಳೆದ ಬೀಜಗಳನ್ನೇ ನಾಟಿಗಾಗಿ ಉಪಯೋಗಿಸುತ್ತಿದ್ದಾರೆ.

ಋತುಮಾನಕ್ಕನುಗುಣವಾಗಿ, ಅವಶ್ಯತೆ ಇರುವಷ್ಟು ಮಾತ್ರ ಸಂಪನ್ಮೂಲಗಳನ್ನು ಬಳಸುವುದೇ ಶೂನ್ಯ ಬಂಡವಾಳ ಕೃಷಿಯ ಹಿಂದಿರುವ ಯಶಸ್ಸಿನ ಗುಟ್ಟು. ಪ್ರಕೃತ್ತಿಯಲ್ಲಿ ಸ್ವಾಭಾವಿಕವಾಗಿ ನಡೆಯುವ ಜೈವಿಕ ಕ್ರಿಯೆಗಳನ್ನೇ ನೆಚ್ಚಿಕೊಂಡಿದ್ದಾರೆ ರುದ್ರಪ್ಪ. ಅದರಲ್ಲಿ ಗೋವಿನ ಗಂಜಲ ಮತ್ತು ಸಗಣಿಯು ಅತಿಮುಖ್ಯವಾದ ಪಾಲನ್ನು ಪಡೆಯುತ್ತದೆ. ಅಲ್ಲದೆ ಹಸಿರು ಗೊಬ್ಬರ, ಮಿಶ್ರ ಗೊಬ್ಬರ, ಜೈವಿಕ ಕೀಟ ನಿಯಂತ್ರಣ ಮತ್ತು ಕೃಷಿ ತ್ಯಾಜ್ಯದ ಮರುಬಳಕೆಯಿಂದ ಮಣ್ಣಿನಲ್ಲಿ ರೈತಸ್ನೇಹಿ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ ಎಂಬುದನ್ನು ಅನುಭವದ ಮೂಲಕ ಕಂಡುಕೊಂಡು ಪಾಲಿಸುತ್ತಿದ್ದಾರೆ ಅವರು.

– ಬಸವರಾಜ ಶಿವಪ್ಪ

ಟಾಪ್ ನ್ಯೂಸ್

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

Prajwal Case ಬಳಿಕ ಜೆಡಿಎಸ್ 15 ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಆಸಕ್ತಿ: ಎಂ.ಬಿ.ಪಾಟೀಲ್

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

Election ಬಳಿಕ “ಹಿಂದ’ ಸಂಘಟನೆ ಆರಂಭ: ಈಶ್ವರಪ್ಪ

9-

Padubidri: ವ್ಯವಹಾರದಲ್ಲಿ ನಷ್ಟ: ಬಾವಿಗೆ ಹಾರಿ ಆತ್ಮಹತ್ಯೆ

8-

Charmadi ಘಾಟ್‌ನಲ್ಲಿ ಟಾಟಾ ಏಸ್‌ ಪಲ್ಟಿ

Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ

Prajadhwani 2; ಯಾದಗಿರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ಸಮಾವೇಶ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

State Government ದಿವಾಳಿ, ಬರ ಪರಿಹಾರ ನೀಡಲು ಹಣ ಇಲ್ಲ: ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.