ಮಮತೆಯ ಚಿತ್ರಕಲೆ
ಮರಳುಗಾಡಿನಲ್ಲಿ ಅರಳಿದ ಕಲಾಕುಸುಮ
Team Udayavani, Jul 24, 2019, 5:00 AM IST
ಮನಸ್ಸಿನ ಎಲ್ಲ ಭಾವನೆಗಳಿಗೂ ಬಣ್ಣ ನೀಡಿ, ಚಿತ್ರವಾಗಿಸಲು ಕಲಾಕಾರನಿಗೆ ಮಾತ್ರ ಸಾಧ್ಯ. ಕಲೆ, ಕೆಲವರಿಗೆ ರಕ್ತಗತವಾಗಿ ಒಲಿದರೆ, ಇನ್ನೂ ಕೆಲವರು ಅದನ್ನು ಪರಿಶ್ರಮದಿಂದ ಸಿದ್ಧಿಸಿಕೊಳ್ಳುತ್ತಾರೆ. ಹಾಗೆ, ಸಂಪೂರ್ಣ ಸಮರ್ಪಣಾ ಭಾವದಿಂದ ಕಲೆಗೆ ಶರಣಾಗಿರುವವರು ದುಬೈನ ಮಮತಾ ಕೋಟ್ಯಾನ್.
ಮೂಲತಃ ಮಂಗಳೂರಿನವರಾದ ಮಮತಾ, ಎಳವೆಯಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ಶಾಲಾದಿನಗಳಲ್ಲಿ ಬಹುಮಾನಗಳನ್ನೂ ಗಳಿಸಿದ್ದರು. ಆದರೆ, ಹೆಚ್ಚಿನ ಮಾರ್ಗದರ್ಶನ, ತರಬೇತಿಗೆ ಪೂರಕ ವಾತಾವರಣವಿರಲಿಲ್ಲ. ಆದರೂ, ದೊಡ್ಡ ಚಿತ್ರಗಾರಳಾಗಬೇಕೆಂಬ ಮಹದಾಸೆ ಮಮತಾರ ಮನದಲ್ಲಿತ್ತು.
ಮದುವೆಯಾಗಿ ದುಬೈಗೆ ಹಾರಿದ ನಂತರ, ಮಮತಾರ ಕನಸಿಗೆ ಮತ್ತೆ ರೆಕ್ಕೆಪುಕ್ಕ ಮೂಡಿತು. ಅಲ್ಲಿನ ಮಕ್ಕಳಿಗೆ ಅವರದೇ ಶೈಲಿಯಲ್ಲಿ, ಚಿತ್ರಕಲೆ ಕಲಿಸತೊಡಗಿದರು. ಕಲಿಸುತ್ತಾ, ತಾವೂ ಕಲಿತರು. ಇವರ ಕಲಾ ನೈಪುಣ್ಯವನ್ನು ಕಂಡವರು, ಬಾವಿಯೊಗಿನ ಕಪ್ಪೆಯಂತೆ ಇರಬೇಡ. ನಿನ್ನ ಕಲೆಗೆ ಹೊರ ಪ್ರಪಂಚದಲ್ಲಿ ಮನ್ನಣೆ ಸಿಗುತ್ತದೆ ಎಂದು ಹುರಿದುಂಬಿಸಿದರು. ಆ ಮಾತುಗಳಿಂದ ಸ್ಫೂರ್ತಿ ಪಡೆದ ಮಮತಾ, ಹೆಚ್ಚಿನ ತರಬೇತಿಗಾಗಿ ಚಿತ್ರಕಲಾ ಕ್ಲಾಸ್ಗೆ ಸೇರಿದರು.
ಆ ನಂತರ ಮಮತಾ ಹಿಂತಿರುಗಿ ನೋಡಲಿಲ್ಲ, ಆಯಿಲ್ ಪೇಂಟಿಂಗ್, ಎಕ್ರಿಲಿಕ್,ವಾಟರ್ ಪೇಂಟಿಂಗ್ನಲ್ಲಿ ಸಾಧನೆ ಮಾಡಿದರು. 2013ರಲ್ಲಿ, ದುಬೈನಲ್ಲಿ ನಡೆದ ಮಮತಾರ ಮೊದಲ ಕಲಾ ಪ್ರದರ್ಶನ, ಅಪಾರ ಪ್ರಶಂಸೆಗೆ ಪಾತ್ರವಾಯಿತು.
ಮುಂದೆ, ದುಬೈನ ಕನ್ನಡ ಹಾಗೂ ತುಳು ಸಂಘಟನೆಗಳ ಕಾರ್ಯಕ್ರಮಗಳಲ್ಲಿ, ವಿಶ್ವ ತುಳು ಸಮ್ಮೇಳನದಲ್ಲಿಯೂ ಇವರು ಕಲಾ ಪ್ರದರ್ಶನ ನಡೆಸಿದ್ದರು.
ಸಕಲ ಕಲಾವಲ್ಲಭೆ
ಮಕ್ಕಳ ಚಿತ್ರಕಲಾ ಗುರುವಾಗಿ, ಅವರಿಂದಲೂ ಕಲಾಪ್ರದರ್ಶನ ನಡೆಸಿದ ಖ್ಯಾತಿ ಇವರದ್ದು. ಹೆಂಗಸರಿಗೆ ಉಚಿತವಾಗಿ ಎಂಬ್ರಾಯಿಡರಿ ತರಬೇತಿ ನೀಡುವ ಮಮತಾ, ಚಿತ್ರಕಲೆ ಮಾತ್ರವಲ್ಲದೆ, ಎಂಬ್ರಾಯxರಿ, ರಂಗೋಲಿ, ಅಡಿಕೆ ಹಾಳೆಯಿಂದ, ಭತ್ತದ ಪೈರಿನಿಂದ ಕಲಾಕೃತಿಗಳ ರಚನೆ, ಸುಲಭವಾಗಿ ಸಿಗುವ ವಸ್ತುಗಳಿಂದ ಕ್ರಾಫ್ಟ್, 3ಡಿ ಮಾಡೆಲಿಂಗ್ ಆರ್ಟ್, ಪೇಪರ್ ಫ್ಲವರಿಂಗ್ ,ಕ್ವಿಲ್ಲಿಂಗ್ ಕಲೆಯಲ್ಲೂ ಸಿದ್ಧ ಹಸ್ತರು. ಅಷ್ಟೇ ಅಲ್ಲದೆ, ಉಚಿತವಾಗಿ ಭಜನಾ ತರಗತಿ, ಶ್ಲೋಕ ಕ್ಲಾಸ್ಗಳನ್ನೂ ನಡೆಸುತ್ತಾರೆ.
ಈಕೆ, ಕದ್ರಿಯ ದೇವೇಂದ್ರ ಅಂಚನ್- ರೋಹಿಣಿ ಅಂಚನ್ರ ಮಗಳು. ಪತಿ ರವಿ ಕೋಟ್ಯಾನ್, ಭಾವಿಕ್, ದಕ್ಷ ಎಂಬ ಇಬ್ಬರು ಮಕ್ಕಳ ಸುಖೀ ಕುಟುಂಬ ಇವರದ್ದು. ಭವಿಷ್ಯದಲ್ಲಿ ಆರ್ಟ್ ಗ್ಯಾಲರಿ ಆರಂಭಿಸುವ ಕನಸು ಹೊಂದಿರುವ ಮಮತಾರ ಕುಂಚಕ್ಕೆ, ಬದುಕಿಗೆ ಇನ್ನಷ್ಟು ಬಣ್ಣಗಳು ತುಂಬಲಿ.
-ರಜನಿ ಭಟ್ ಕಲ್ಮಡ್ಕ