ಸರ್ವರಿಗೂ ಸಮಪಾಲು ದೊರೆಯುವ ನಿರೀಕ್ಷೆ
Team Udayavani, Mar 5, 2020, 6:51 AM IST
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಭಾಷಣಗಳಲ್ಲಿ ಸಾಮಾನ್ಯವಾಗಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ವಾಕ್ಯವನ್ನು ಹೇಳುತ್ತಿರುತ್ತಾರೆ. ಅವರು ಇಂದು(ಗುರುವಾರ) ಮಂಡಿಸುತ್ತಿರುವ ಬಜೆಟ್ ಬಗ್ಗೆಯೂ ರಾಜ್ಯದ ಆರೂವರೆ ಕೋಟಿ ಜನರು ಎಲ್ಲರಿಗೂ ಸಮಪಾಲಿನ ನ್ಯಾಯ ಸಿಗುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಹಾಗೂ ಹಣಕಾಸು ಸಚಿವರೂ ಆಗಿ ಬಜೆಟ್ ಮಂಡನೆ ಮಾಡುತ್ತಿದ್ದು, ಅವರ ಬಜೆಟ್ ಮೇಲೆ ಸಹಜವಾಗಿಯೇ ರಾಜ್ಯದ ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಭಾಷಣಗಳಲ್ಲಿ ಸಾಮಾನ್ಯವಾಗಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ವಾಕ್ಯವನ್ನು ಹೇಳುತ್ತಿರುತ್ತಾರೆ. ಅವರು ಇಂದು(ಗುರುವಾರ) ಮಂಡಿಸುತ್ತಿರುವ ಬಜೆಟ್ ಬಗ್ಗೆಯೂ ರಾಜ್ಯದ ಆರೂವರೆ ಕೋಟಿ ಜನರು ಎಲ್ಲರಿಗೂ ಸಮಪಾಲಿನ ನ್ಯಾಯ ಸಿಗುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದಾರೆ.
ಯಡಿಯೂರಪ್ಪ ಅವರು ಪ್ರತಿ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ರೈತರನ್ನು ನೆನೆಯುತ್ತಾರೆ. ಅಲ್ಲದೇ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿ ದಾಖಲೆಯನ್ನೂ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೃಷಿ ತೊರೆಯುವವರು ಹಾಗೂ ನಗರ ವಲಸೆ ಪ್ರಮಾಣ ಹೆಚ್ಚಾಗಿರುವುದರಿಂದ ಈ ಬಾರಿಯೂ ಅವರ ಬಜೆಟ್ನಲ್ಲಿ ರೈತ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆಯುವ ವಿಶ್ವಾಸದಲ್ಲಿ ರಾಜ್ಯದ ಅನ್ನದಾತರಿದ್ದಾರೆ.
ರಾಜ್ಯದಲ್ಲಿ ಶತಮಾನದಲ್ಲಿ ಕಂಡರಿಯದ ಪ್ರವಾಹ ಬಂದು ಸುಮಾರು 35 ಸಾವಿರ ಕೋಟಿ ನಷ್ಟ ಸಂಭವಿಸಿದ್ದು, ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಹಣಕಾಸಿನ ನೆರವು ದೊರೆಯದಿರುವುದು ಹಾಗೂ 14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯದ ಪಾಲಿನಲ್ಲಿ ಸುಮಾರು ನಿಗದಿತ ಮೊತ್ತ ಬಾರದಿರುವುದು, ಜಿಎಸ್ಟಿ ಪಾಲಿನಲ್ಲಿಯೂ ಪೂರ್ಣ ಹಣ ಬಾರದಿರುವುದು ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತೆ ಮಾಡಿದೆ.
ಈಗಾಗಲೇ ಪ್ರವಾಹ ಪರಿಹಾರಕ್ಕಾಗಿ ಉದಾರವಾಗಿ ನೆರವು ಘೋಷಣೆ ಮಾಡಿದ್ದು, ಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ, ಬೆಳೆ ಹಾನಿಗೆ ಎನ್ಡಿಆರ್ಎಫ್ ನಿಯಮಕ್ಕಿಂತ ಪ್ರತಿ ಎಕರೆಗೆ 10 ಸಾವಿರ ರೂ. ಹೆಚ್ಚುವರಿಯಾಗಿ ನೀಡುವ ಭರವಸೆ ನೀಡಿದ್ದು, ಅದಕ್ಕಾಗಿ ಈ ಬಜೆಟ್ನಲ್ಲಿ ಅಗತ್ಯ ಅನುದಾನ ಮೀಸಲಿಡಬೇಕಿದೆ. ಇದರ ಪರಿಣಾಮ ಬೇರೆ ಯೋಜನೆಗಳ ಮೇಲೆ ಆಗುವ ಸಾಧ್ಯತೆ ಇದೆ.
2019-20ನೇ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದ್ದರೂ, ಆರ್ಥಿಕ ಹಿಂಜರಿತ, ಕೇಂದ್ರದ ಅನುದಾನದ ಕೊರತೆಯಿಂದ ಬಜೆಟ್ನಲ್ಲಿ ಇಲಾಖೆಗಳಿಗೆ ಹಾಗೂ ಹೊಸ ಯೋಜನೆಗಳಿಗೆ ಹಣ ಹೊಂದಿಸುವ ಸವಾಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದಿದ್ದು, ಬೃಹತ್ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸುವ ಜವಾಬ್ದಾರಿ ಯೂ ಅವರ ಮೇಲಿದೆ. ಮಹದಾಯಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು, ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಕಾಮಗಾರಿಗಳಿಗೆ ಅಗತ್ಯ ಅನುದಾನ ಮೀಸಲಿಡುವುದು. ಕಲ್ಯಾಣ ಕರ್ನಾಟಕ ಭಾಗಕ್ಕೆ 2 ಸಾವಿರ ಕೋಟಿ ಬೇಡಿಕೆ. ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಅಗತ್ಯ ಹಣ ಮೀಸಲಿಡಬೇಕೆಂಬ ಬೇಡಿಕೆ ಇದೆ.
ಅಲ್ಲದೇ ಹಿಂದಿನ ಸರ್ಕಾರದಲ್ಲಿ ಜಾರಿಗೊಳಿಸಿರುವ ಅನ್ನಭಾಗ್ಯ, ಬಡವರ ಬಂಧುವಂತಹ ಜನಪ್ರಿಯ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗಲು ಹೆಚ್ಚಿನ ಅನುದಾನ ನೀಡಬೇಕಿದೆ. ಇದರೊಂದಿಗೆ ತಮ್ಮ ಸರ್ಕಾರದ ಭಾಗ್ಯಲಕ್ಷ್ಮೀ, ಸೈಕಲ್ ವಿತರಣೆಯಂತಹ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರೆಸಲು ಹೆಚ್ಚಿನ ಅನುದಾನ ಮೀಸಲಿಡಲು ತೀರ್ಮಾನಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಮಧ್ಯೆ ಮಕ್ಕಳಿಗಾಗಿ ವಿಶೇಷ ಬಜೆಟ್ ಮಂಡನೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂಬ ನಿರೀಕ್ಷೆ ರಾಜ್ಯದ ಜನತೆಯಲ್ಲಿದೆ.
ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದ್ದರೂ, ಆರ್ಥಿಕ ಹಿಂಜರಿತ, ಕೇಂದ್ರದ ಅನುದಾನದ ಕೊರತೆಯಿಂದ ಹೊಸ ಯೋಜನೆಗಳಿಗೆ ಹಣ ಹೊಂದಿಸುವ ಸವಾಲು ಮುಖ್ಯಮಂತ್ರಿಗಳ ಮುಂದಿದೆ.